ಶಿವಮೊಗ್ಗ, ಫೆ.24: ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಕುರಿತು ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸೋಮವಾರ ನಗರದ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ “ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ವ್ಯವಸ್ಥೆಯು ಕವಲು ಒಡೆದ ದಾರಿಯಾಗಿದೆ. ಈ ಸಮಯದಲ್ಲಿ ಅಂಬೇಡ್ಕರ್ ಕುರಿತಾದ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ರಾಜ್ಯಾದ್ಯಂತ ವರ್ಷವಿಡಿ ನಡೆಯಬೇಕು. ಆ ಮೂಲಕ ಸಂವಿಧಾನದ ಪರಿಕಲ್ಪನೆ ಎಲ್ಲರಿಗೂ ಅರ್ಥವಾಗಬೇಕು ಎಂದರು.
ಗಣರಾಜ್ಯೋತ್ಸವ ದಿನವು ದೇಶಕ್ಕೆ ಮಹೋನ್ನತವಾಗಿದೆ. ಯಾಕೆಂದರೆ ಸಂವಿಧಾನವನ್ನು ಕೂಡ ಅದೇ ದಿವಸ ಸಮರ್ಪಿಸಲಾಗಿದೆ. ನಮ್ಮ ದೇಶಕ್ಕೆ ಸಂವಿಧಾನವನ್ನು ಸಿದ್ದಪಡಿಸಲು ಅಂಬೇಡ್ಕರ್ ಒಳಗೊಂಡಂತೆ ಅನೇಕ ಮಹಾನೀಯರು ಹಲವು ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ಅದರಿಂದ ಅನೇಕ ಮಾಹಿತಿ ಹೆಕ್ಕಿ ತೆಗೆದು ಈ ದೇಶಕ್ಕೆ ಬೃಹತ್ ಸಂವಿಧಾನ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಮ್ಮೆಲ್ಲರ ಬದುಕಿನ ಅಸ್ತಿತ್ವ ಸಂವಿಧಾನದ ಅಡಿಯಲ್ಲಿದೆ. ಈ ನಮ್ಮ ಸಂವಿಧಾನದಲ್ಲಿ ಶರಣರು, ತುಳಿತಕ್ಕೆ ಒಳಗಾದವರ ಸಮಾನತೆಯ ಆಶಯ ಇದೆ. ಆ ದಿಸೆಯಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಅರಿತುಕೊಳ್ಳಬೇಕು. ಅದರ ಗಂಭೀರತೆ ತಿಳಿಯಬೇಕು. ಈ ಮೂಲಕ ನಾವೆಲ್ಲ ದೇಶವನ್ನು ಮುನ್ನಡೆಸಬೇಕು. ಇದನ್ನು ಮರೆತರೆ ಸಮಾಜದಲ್ಲಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಎಂ.ಸಂಪತ್ಕುಮಾರ್ ವಿಶೇಷ ಉಪನ್ಯಾಸ ನೀಡಿ, “ಅಂಬೇಡ್ಕರ್ ಓದು” ಎನ್ನುವುದು ಅವರ ತತ್ವ, ಆದರ್ಶಗಳ ಮೂಲಕ ಅರ್ಥೈಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಮರೆತಿದ್ದಾರೆ. ಯುವಜನತೆ ಮೊಬೈಲ್ನ ಗೀಳಿಗೆ ಬಿದ್ದು ಓದುವುದನ್ನೆ ಕಡಿಮೆ ಮಾಡಿದ್ದಾರೆ ಎಂದರು.
ಧೈರ್ಯ, ಹಠ, ಛಲ ಇದ್ದರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವೆಂದು ಬ್ರಿಟನ್ ವಿದ್ವಾಂಸರು ಹೇಳಿದ್ದಾರೆ. ಅಂಬೇಡ್ಕರ್ ಅದರಂತೆ ಬಾಳಿ ಬದುಕಿದವರು. ಆ ಮೂಲಕ ದೇಶಕ್ಕೆ ಬೃಹತ್ ಸಂವಿಧಾನ ನೀಡಿದರು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳಾ ಸಮುದಾಯಕ್ಕೆ ಶಿಕ್ಷಣದ ಹಕ್ಕು ಕೊಟ್ಟು ಎಲ್ಲರಂತೆ ಸರಿಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟರು ಎಂದರು.
ಅಂಬೇಡ್ಕರ್ ಅವರೇ ಒಂದು ಪ್ರೇರಣಾ ಶಕ್ತಿ. ಇಂದಿನ ಯುವಜನತೆ ಅವರನ್ನು ಅರ್ಥೈಸಿಕೊಂಡು ಆ ದಾರಿಯಲ್ಲಿ ಸಾಗಬೇಕು. ಆಂಬೇಡ್ಕರ್ ಅವರ ನಾಯಕತ್ವ ಗುಣವನ್ನು ಬೆಳಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
“ಅಂಬೇಡ್ಕರ್ ಓದು” ಅಂಗವಾಗಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಬದುಕು ಮತ್ತು ಸಾಧನೆಗಳ ಪ್ರಬಂಧ, ರಸಪ್ರಶ್ನೆ, ಆಶುಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಿ.ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಪುಸ್ತಕ ಮನೆ ಪ್ರಕಾಶಕರಾದ ಸುಂದರ್ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.