ಬೆಂಗಳೂರು, ಜ.08: ರಾಜ್ಯದೆಲ್ಲೆಡೆ ಸುದ್ದಿಯಾಗಿರುವಂತಹ ಮಾವೋವಾದಿ ಹೋರಾಟಗಾರರು ಇಂದು ಅಂದರೆ ಜನವರಿ 08 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕಛೇರಿಯಲ್ಲಿ ಶರಣಾಗುವುದಾಗಿ ತಿಳಿಸಿ ಚಿಕ್ಕಮಗಳೂರಿನಿಂದ ಹೊರಟು ಬಂದಿದ್ದರು.
ಈಗ ನಕ್ಸಲರಿಂದ ರಾಜ್ಯ ಸರ್ಕಾರಕ್ಕೆ 18 ಅಂಶಗಳನ್ನೊಳಗೊಂಡ ಹಕ್ಕೊತ್ತಾಯ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ. ವಿಕ್ರಂ ಗೌಡ ಎನ್ಕೌಂಟರ್ ಕುರಿತು ತನಿಖೆಯನ್ನು ಆಗ್ರಹಿಸಿರುವುದರ ಜೊತೆಗೆ ಬೂಮಿ ಇಲ್ಲದ ಪ್ರತಿಯೊಬ್ಬರಿಗೂ 5 ಎಕರೆ ಕೃಷಿ ಜಮೀನು ನೀಡುವುದು, ಆದಿವಾಸಿಗಳ ಹಕ್ಕು ರಕ್ಷಣೆ, ಕಸ್ತೂರಿ ರಂಗನ್ ವರದಿ ರದ್ದುಗೊಳಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಒಟ್ಟು 18 ಅಂಶಗಳ ಹಕ್ಕೊತ್ತಾಯವನ್ನು ಸರ್ಕಾರದ ಮುಂದೆ ಇರಿಸಲಿದ್ದಾರೆ.
ಅವರ 18 ಅಂಶಗಳು ಈ ಕೆಳಗಿನಂತಿವೆ.
1. ಮೂರು ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು.
. ಹಾಲಿ ಈಗ ಭೂಮಿ ಇರುವವರಿಗೆ ಶಾಶ್ವತ ಹಕ್ಕು ಪತ್ರ ಕೊಡಬೇಕು.
. ಅದರಲ್ಲೂ ಮುಖ್ಯವಾಗಿ ಎಲ್ಲ ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕು ಪತ್ರ ನೀಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸೇಕು.
. ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು.
2. ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರಿವಿರಬೇಕು. ಅವರಿಗೆ ಕಾಡುತ್ಪತ್ತಿ ಸಂಗ್ರಹಿಸಲು ಅರಣ್ಯ ಇಲಾಖೆಯ ಕಿರುಕುಳ ನಿಲ್ಲಬೇಕು.
3. ಆಹಾರ ಬೆಳೆ ಅದರಲ್ಲೂ ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ, ಸರ್ಕಾರ ಅವರಿಗೆ ಸಂಪೂರ್ಣ ಬೆಂಬಲವಾಗಿರಬೇಕು.
4. ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಸಬೇಕು.
5. ಪಶ್ಚಿಮ ಘಟ್ಟದಲ್ಲಿ ಟೂರಿಸಂ ಮಾಡುವ ಮೂಲಕ ಪರಿಸರ ನಾಶ ಮಾಡುವುದನ್ನು ನಿಲ್ಲಿಸಬೇಕು.
6. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಕೊಡಬೇಕು. ಅದರಲ್ಲೂ ದಲಿತ ಮತ್ತು ಆದಿವಾಸಿಗಳಿಗೆ ಆದ್ಯತೆ ಮೇರೆಗೆ ಕೊಡಬೇಕು.
- ಸಾಂಸ್ಕೃತಿಕವಾಗಿ ಬರುತ್ತಿರುವ ಬದಲಾವಣೆಗಳ ಪರಿಣಾಮದಿಂದ ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ಅದಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಮತ್ತು ನಾಮಕಾವಸ್ಥೆಗಾಗಿ ನಡೆಸುವ ಕ್ರಮಗಳನ್ನು ನಿಲ್ಲಿಸಬೇಕು.
- ಹವಾಮಾನ ಬದಲಾವಣೆಯಿಂದ ಬರುತ್ತಿರುವ ಕೃಷಿ ಬೆಳೆ, ಮನುಷ್ಯನ ಬದುಕಿನ ಮೇಲೆ ಮತ್ತು ಪ್ರಾಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಜನರಿಗೆ ವೈಜ್ಞಾನಿಕ ವಾಗಿ ಕಾರಣವನ್ನು ಅರ್ಥಪಡಿಸಬೇಕು. ಮತ್ತು ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಗಬೇಕು.
. ಇಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು
. ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಬೇಕು.
- ಮೂರು ರಾಜ್ಯಗಳಲ್ಲೂ ಒಕ್ಕಲೆಬ್ಬಿಸುವ ಎಲ್ಲ ಕ್ರಮಗಳನ್ನು ನಿಲ್ಲಿಸಬೇಕು.
- ಬಡ ಮತ್ತು ಮಧ್ಯಮ ವರ್ಗದ ರೈತರ ಒತ್ತುವರಿ ಭೂಮಿಯನ್ನು ತೆರವುಗೊಳಿಸಬಾರದು.
- ಅಡಿಕೆಗೆ ಬರುತ್ತಿರುವ ಚುಕ್ಕೆ ರೋಗ ಮತ್ತು ಇತರೆ ಬೆಳೆಗಳಿಗೆ ಬರುತ್ತಿರುವ ರೋಗಗಳ ಬಗ್ಗೆ ಸಂಶೋಧನೆ ನಡೆಸಿ, ರೋಗವನ್ನು ತಡೆಗಟ್ಟಲು ಸರ್ಕಾಯ ಪ್ರಯತ್ನಿಸಬೇಕು. ಹಾಗೂ, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರವನ್ನು ತಕ್ಷಣವೇ ಕೊಡಬೇಕು.
- ಆದಿವಾಸಿಗಳಲ್ಲಿ ಅಕಾಲಿಕವಾಗಿ ಮರಣ ಹೊಂದುತ್ತಿರುವ ಜನರ ಕುರಿತು ತಕ್ಷಣವೇ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ, ಚಿಕಿತ್ಸೆ ಒದಗಿಸಿ ಪರಿಹರಿಸಬೇಕು. ಮತ್ತು 2025ರ ನಂತರ ಮರಣ ಹೊಂದಿದ್ದವರ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರ ಕೊಡಬೇಕು. ಅಲ್ಲದೆ, ಮಹಿಳೆಯರಿಗೆ ಬರುತ್ತಿರುವ ಗರ್ಭಕೋಶ ಸಂಬಂಧಿತ ಕಾಯಿಲೆಗೆ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ ಪರಿಹರಿಸಬೇಕು. ಇದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಸಮಸ್ಯೆಯಾ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕು.
- ನಮ್ಮ ಪಕ್ಷದ ಡಿಸಿಎಂ ಸದಸ್ಯರಾದ ಕಾಮ್ರಡ್ ವಿಕ್ರಮ್ ಗೌಡ ಅವರನ್ನು ನವೆಂಬರ್ 18/2024ರಂದು ಸಂಜೆ 6:30 ಗಂಟೆಯ ಸಮಯದಲ್ಲಿ ಮನೆಯವರ ಸಹಾಯದಿಂದ ಮನೆ ಒಳಗೆ ಕೈಗೆಟಕುವ ಅಂತರದಲ್ಲಿ ಎಎನ್ಎಫ್ ಪಡೆ ಕ್ರೂರವಾಗಿ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ.ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಮೂರು ರಾಜ್ಯಗಳ ಜೈನಲ್ಲಿರುವ ನಮ್ಮ ಎಲ್ಲ ಕಾಮೆಡ್ಗಳ ಕೇಸುಗಳನ್ನು ಶೀಘ್ರವಾಗಿ ಮುಗಿಸಬೇಕು. ಅವರನ್ನು ಬಿಡುಗಡೆಗೊಳಿಸಬೇಕು.
- ಆದಿವಾಸಿ ಮುಗ್ಧ ಮಹಿಳೆಯರಾದ ಶೋಭಾ, ಕನ್ಯಾಕುಮಾರಿ, ಸಾವಿತ್ರಿ, ಶ್ರೀಮತಿ ಇವರ ಮೇಲಿನ ಕೇಸುಗಳನ್ನು ಶೀಘ್ರವೇ ಮುಗಿಸಿ ಅವರಿಗೂ ನಕ್ಸಲ್ ಪ್ಯಾಕೇಜಿನಡಿಯಲ್ಲಿ ಪುನರ್ವಸತಿ ಮತ್ತು ಸಹಾಯಧನವನ್ನು ಕಲಿಸಬೇಕು.
- ಆಯಾ ಪ್ರದೇಶಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತಿರುವ ಅಕ್ಕಿಯನ್ನು ರೇಷನ್ ಕಾರ್ಡಿನ ಅಕ್ಕಿಯಾಗಿ ವಿತರಿಸಬೇಕು.
- ಮುಖ್ಯವಾಹಿನಿಗೆ ಬಂದು 15 ದಿನಗಳೊಳಗೆ ನಮ್ಮ ಎಲ್ಲ ಕಾಮ್ರೆಡ್ ಗಳ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು.
ಈ ಹದಿನೆಂಟು ಹಕ್ಕೊತ್ತಾಯಗಳಿಗೆ ಸರ್ಕಾರದಿಂದ ಯಾವ ರೀತಿಯಾದ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಈ ಆರೂ ಜನ ನಕ್ಸಲರು ಶರಣಾಗಿತಿದ್ದು ತಕ್ಷಣವೇ ಇದಕ್ಕೆ ಉತ್ತರ ಸಿಗಬಹುದಾ ಎಂಬ ಕುತೂಹಲ ಈಗ ಎಲ್ಲರಲ್ಲೂ ಇದೆ.