ಥಾಣೆ: ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಶಿವಸೇನಾ ಬಣದ ಮುಖಂಡನ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ, ಶಾಸಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಉಲ್ಲಾಸನಗರ ಪ್ರದೇಶದ ಹಿಲ್ಲೈನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಇನ್ಸ್ಪೆಕ್ಟರ್ನ ಕೊಠಡಿಯೊಳಗೆ ಶಿವಸೇನಾ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ ಕಲ್ಯಾಣ್ನ ಬಿಜೆಪಿಯ ಶಾಸಕ ಗಣಪತ್ ಗಾಯಕ್ವಾಡ್ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರೇಯ ಶಿಂದೆ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದಲ್ಲಿ ಗೂಂಡಾಗಳ ಸಾಮ್ರಾಜ್ಯ ಸ್ಥಾಪಿಸಲು ಸಿಎಂ ಏಕನಾಥ ಶಿಂದೆ ಯತ್ನಿಸುತ್ತಾರೆ. ‘ಪುತ್ರನಿಗೆ ಥಳಿಸಿದ್ದರಿಂದ ಬಂದೂಕು ಬಳಸಿದ್ದೇನೆ. ಹೌದು, ನಾನೇ ಗುಂಡು ಹಾರಿಸಿದ್ದೇನೆ. ಯಾವುದೇ ವಿಷಾದವಿಲ್ಲ. ಠಾಣೆಯಲ್ಲಿ ಪೊಲೀಸರ ಮುಂದೆ ನನ್ನ ಮಗನನ್ನು ಥಳಿಸಿದರೆ ನಾನೇನು ಮಾಡಲಿ?’ ಎಂದು ಬಂಧನಕ್ಕೂ ಮುನ್ನ ಗಣಪತ್ ಗಾಯಕ್ವಾಡ್ ಆಕ್ರೋಶ ವ್ಯಕ್ತಪಡಿಸಿದರು.
ಮಹೇಶ್ ಅವರನ್ನು ಥಾಣೆಯ ಖಾಸಗಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಿಸಲಾಗಿದೆ ಎಂದು ಶಿವಸೇನಾ ಶಿಂದೆ ಬಣದ ನಾಯಕ ಗೋಪಾಲ್ ಲಂಡ್ಗೆ ಮಾಧ್ಯಮಗಳಿಗೆ ತಿಳಿಸಿದರು.
ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಗಣಪತ್ ಗಾಯಕ್ವಾಡ್ ಅವರು ತಮ್ಮ ಪುತ್ರನೊಂದಿಗೆ ಆಗಮಿಸಿದ್ದರು. ಮಹೇಶ್ ಗಾಯಕ್ವಾಡ್ ಸಹ ತನ್ನ ಬೆಂಬಲಿಗರೊಂದಿಗೆ ಬಂದಿದ್ದರು. ಈ ವೇಳೆ ನಡೆದ ವಾಗ್ವಾದದಲ್ಲಿ ಇನ್ಸ್ಪೆಕ್ಟರ್ ಕೊಠಡಿಯೊಳಗೆ ಮಹೇಶ್ ಮೇಲೆ ಗಣಪತ್ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.