Home ಇನ್ನಷ್ಟು ಕೋರ್ಟು - ಕಾನೂನು ಜೀವನಾಧಾರವನ್ನೇ ಕಸಿಯುತ್ತಿರುವ ʼಆಧಾರ್ʼ

ಜೀವನಾಧಾರವನ್ನೇ ಕಸಿಯುತ್ತಿರುವ ʼಆಧಾರ್ʼ

0

ಜನಪರವಾದ ಉದ್ಯೋಗ ಖಾತರಿ ಕಾನೂನನ್ನು ಹಿಂಪಡೆಯುವಂತಿಲ್ಲ. ಅದಕ್ಕೇ ಅದರ ನಾಲಿಗೆಯನ್ನು ಕತ್ತರಿಸಿ, ಕುತ್ತಿಗೆಯನ್ನು ಸ್ವಲ್ಪ ಸ್ವಲ್ಪವೇ ಹಿಸುಕುತ್ತ ಹೋಗಿ ಅದನ್ನು ಸಾಯಿಸುವುದು ಈಗಿನ ಕೇಂದ್ರ ಸರಕಾರದ ಗುರಿಯಾಗಿದೆ. ಹೊಸ ಹೊಸ ಮಸಲತ್ತು ಹೆಣೆದು ಹೊಸ ಹೊಸ ನಿಯಮಗಳನ್ನು ತಂದು ಕಾನೂನನ್ನು ಸತತವಾಗಿ ನಿರ್ಜೀವಗೊಳಿಸುತ್ತಲೇ ಹೊರಟಿದೆ ಅದು – ಶಾರದಾ ಗೋಪಾಲ, ಸಾಮಾಜಿಕ ಕಾರ್ಯಕರ್ತರು.

(ಕೆಲಸ ಮಾಡದಿದ್ದರೆ ಸಂಬಳ ಸಿಗದು ಎಂಬುದು ನ್ಯಾಯಕ್ಕೆ ಹತ್ತಿರದ ಮಾತು. ಆದರೆ ಉದ್ಯೋಗ ಖಾತರಿಯಲ್ಲಿ ಈ ಮಾತು ಇನ್ನು ಅನ್ವಯಿಸದು!)

ಉದ್ಯೋಗ ಖಾತರಿಯಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಸಿಗಬೇಕೆಂದರೆ ಅವರ ಉದ್ಯೋಗ ಚೀಟಿಗೆ ಆಧಾರ್ ಜೋಡಣೆ ಆಗಿರಬೇಕೆಂದು ಕೇಂದ್ರ ಸರಕಾರವು ಇದೇ ವರ್ಷದ ಜನವರಿಯಲ್ಲಿ ಆದೇಶ ಮಾಡಿತು. ಜನರು ಎದ್ನೋ ಬಿದ್ನೋ ಎಂದು ತಂತಮ್ಮ ಆಧಾರ್ ಕಾರ್ಡುಗಳನ್ನು ಲಿಂಕ್ ಮಾಡುವುದಕ್ಕಾಗಿ ಪಂಚಾಯತಿ, ಬ್ಯಾಂಕುಗಳಿಗೆ ಎಡತಾಕಿದ್ದೇ ತಾಕಿದ್ದು. ಆದಕ್ಕಾಗಿ ಇಟ್ಟಿದ್ದ ಕೊನೆಯ ತಾರೀಖನ್ನು ಮತ್ತೆ ಮತ್ತೆ ವಿಸ್ತರಿಸಿ, ನಾಲ್ಕನೆಯ ವಿಸ್ತರಣೆ ಮೊನ್ನೆ ಅಗಸ್ಟ್ 31ಕ್ಕೆ ಕೊನೆಗೊಂಡಿದ್ದು ಮತ್ತೆ ಡಿಸೆಂಬರ್ ತನಕ ಅವಧಿಯನ್ನು ವಿಸ್ತರಿಸಿದೆ. ಈಗಿರುವ ಲೆಕ್ಕದ ಪ್ರಕಾರ ದೇಶಾದ್ಯಂತ 26 ಕೋಟಿ ಉದ್ಯೋಗ ಚೀಟಿಗಳಲ್ಲಿ ಇನ್ನೂ 41 ಶತಾಂಶಗಳಷ್ಟು ಉದ್ಯೋಗ ಚೀಟಿಗಳು ಅವರ ಆಧಾರ್ ಜೊತೆಗೆ ಜೋಡಣೆ ಆಗಬೇಕಿದೆ. ಅದು ಆಗದೇ ಇದ್ದರೆ ಅವರು ದುಡಿದ ಹಣ ಅವರ ಖಾತೆಗೆ ಬರುವುದಿಲ್ಲ.

ಉದ್ಯೋಗ ಖಾತರಿಯನ್ನು ನಾಶಮಾಡುವ ಗುರಿಯನ್ನಿಟ್ಟುಕೊಂಡು ಕೇಂದ್ರ ಸರಕಾರವು ನಡೆಸುತ್ತಿರುವ ಅನೇಕ ಮಸಲತ್ತುಗಳಲ್ಲಿ ಇದು ಕಡೆಯದಿರಬಹುದು. ಪ್ರತಿ ಮಸಲತ್ತು ನಡೆದಾಗಲೂ ಹೀಗೇ ಅಂದುಕೊಳ್ಳುವುದು ನಮಗೆ ರೂಢಿಯಾಗಿ ಹೋಗಿದೆ ಬಿಡಿ.

ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್-ಎಬಿಪಿಎಸ್ ಎನ್ನುತ್ತಾರಿದಕ್ಕೆ. ಆಯಾ ಕೆಲಸಗಾರಳ ಆಧಾರ್ ಸಂಖ್ಯೆಯು ಆಕೆಯ ಬ್ಯಾಂಕ್ ಖಾತೆಗೆ ಜೋಡಣೆ ಆಗಿರಬೇಕು ಎಂದು ಸರಕಾರವು ಈ ಹಿಂದಿನ ಮಸಲತ್ತಿನಲ್ಲಿ ಆದೇಶ ಹೊರಡಿಸಿತ್ತು. ವರ್ಷಾನುಗಟ್ಟಲೆ ಓಡಿಯಾಡಿ ಕೆಲಸಗಾರರು ಅದನ್ನು ಮಾಡಿಸಿಕೊಂಡಿದ್ದರು. ಇದೀಗ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಆದರೆ ಸಾಲದು, ಮಾಡಿದ ಕೆಲಸಕ್ಕೆ ಸಂಬಳ ಸಿಗಬೇಕೆಂದರೆ ಅವರ ಉದ್ಯೋಗ ಚೀಟಿಯೂ, ಬ್ಯಾಂಕ್ ಖಾತೆಯೂ, ಆಧಾರ್ ಗೆ ಜೋಡಣೆ ಆಗಲೇಬೇಕಂತೆ. ಅಂದರೆ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ಡಾಟಾಬೇಸ್ ನೊಳಗೆ ಕೆಲಸಗಾರರೆಲ್ಲರ ಆಧಾರ್ ನಂಬರು ಸೇರಿಕೊಳ್ಳಬೇಕು. ಮತ್ತು ಬ್ಯಾಂಕಿನ ಇನ್ಸ್ಟಿಟ್ಯೂಶನಲ್ ಐಡೆಂಟಿಫಿಕೇಶನ್ ನಂಬರ್ ಕೂಡ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ಡಾಟಾಬೇಸ್ ನೊಳಗೆ ಸೇರಿಕೆಯಾಗಿರಬೇಕು. ಅರ್ಥವಾಯಿತೇ? ಅರ್ಥವಾಗುವ ಕತೆಯಲ್ಲ ಬಿಡಿ. ಯಾರಿಗೂ ಅರ್ಥವಾಗಬಾರದು, ಅಂತಹ ನಿಯಮಗಳು.

ಆಧಾರ್, ಉದ್ಯೋಗ ಚೀಟಿ, ಬ್ಯಾಂಕ್ ವಿವರಗಳನ್ನು ಜೋಡಣೆ ಮಾಡಬೇಕಾದವರು ಯಾರು? ಪಂಚಾಯತಿ ಮತ್ತು ಬ್ಯಾಂಕ್ ಗಳು ತಾನೇ? ಅವರು ಮಾಡದಿದ್ದರೆ, ಮಾಡುವಲ್ಲಿ ವಿಫಲರಾದರೆ ಸಮಸ್ಯೆ ಆಗುವುದು ಯಾರಿಗೆ? ಕೆಲಸಗಾರರಿಗೆ. ಏನೂ ಅರಿಯದ ಹಳ್ಳಿಯ ಅನಕ್ಷರಸ್ಥ ಕೆಲಸಗಾರರಿಗೆ. ಅದರಲ್ಲೂ ಉದ್ಯೋಗ ಖಾತರಿಯಲ್ಲಿ ಜೀವನ ಕಂಡುಕೊಂಡಿದ್ದ ಹೆಣ್ಣುಮಕ್ಕಳಿಗೆ. ಪಂಚಾಯತಿ, ಬ್ಯಾಂಕುಗಳು ಉಪೇಕ್ಷೆ ತೋರಿದ ಕಾರಣ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಕೆಲಸ ಕೇಳಿ ಹೋಗುತ್ತಿರುವ 1.2 ಕೋಟಿ ಕೆಲಸಗಾರರೇ ಇಂದು ಸಂಬಳ ಪಡೆಯಲು ಅನರ್ಹರಾಗಿದ್ದಾರೆ. ‌

 `ಸಂಬಳ ಹಾಕುವುದು ಸರಳವಾಗುತ್ತದೆ, ಹೆಚ್ಚು ಪಾರದರ್ಶಕತೆ ಬರುತ್ತದೆ, ತಡವಿಲ್ಲದೇ ಹಣ ಜಮಾವಣೆಯಾಗುತ್ತದೆ, ಬೇರೆ ಯಾರಿಗೋ ಹೋಗುವುದು ತಪ್ಪುತ್ತದೆ, ಸಂಬಳ ತಿರಸ್ಕೃತವಾಗುವುದು ತಪ್ಪುತ್ತದೆ’ ಎಂದು ಪ್ರತಿಯೊಂದು ಮಸಲತ್ತು ಮಾಡುವಾಗಲೂ ಸರಕಾರ ಕೊಡುವ ಸಮಜಾಯಿಶಿ. ಆದರೆ ತಂತ್ರಜ್ಞಾನದ ಅಳವಡಿಕೆ ಹೆಚ್ಚಿದಂತೆ ಒಳಗಡೆ ಏನು ನಡೆದಿದೆ ಎಂಬುದು ನಿಗೂಢವಾಗುತ್ತಲೇ ಹೋಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುತ್ತಲೇ ಕೆಲಸಗಾರರ ಸಂಬಳ ಎಲ್ಲಿಂದೆಲ್ಲಿಗೋ ಹೋಗಿದ್ದನ್ನು ನಾವು ನೋಡಿದ್ದೇವೆ. ಖಾನಾಪುರದ ಹಳ್ಳಿಯೊಂದರಲ್ಲಿ ಕೆಲಸ ಮಾಡಿದ ಹನುಮಂತನ ಹಣ ಸವದತ್ತಿ ತಾಲೂಕಿನ ಯಾವುದೋ ಹಳ್ಳಿಯ ಹನುಮಂತನ ಖಾತೆಗೆ ಜಮಾ ಆಗಿದ್ದು, ಅದನ್ನು ತರಿಸಿಕೊಳ್ಳಲು ಆ ಕೆಲಸಗಾರ ಪರದಾಡಿದ್ದು, ಕೆಲಸ ಮಾಡಿದ ರೈತನ ಹಣ ಸಾಲ ಮಾಡಿದ ಇನ್ನಾವುದೋ ಬ್ಯಾಂಕ್ ಖಾತೆಗೆ ಜಮಾ ಆಗಿ ಆತನ ಕೈಗೆ ಹಣ ಸಿಗದಂತಾಗಿದ್ದು ಇವೆಲ್ಲ ನಿತ್ಯ ನಡೆಯುತ್ತಿರುವ, ಆದರೆ ಸುದ್ದಿಯಾಗದ ಕತೆಗಳು. `ಲಿಬ್ ಟೆಕ್ ಇಂಡಿಯಾ’ ಎಂಬ ಸಂಸ್ಥೆಯೊಂದು ಅಧ್ಯಯನ ಮಾಡಿ ಸರಕಾರದ ಈ ಕ್ರಮಗಳು ಎಂದೂ ಪಾರ್ದರ್ಶಕತೆ ಮೂಡಿಸಿಲ್ಲ ಎಂದು ಅಂಕಿ ಅಂಶಗಳ ಸಮೇತ ತೋರಿಸಿದೆ.

2021-22 ರಲ್ಲಿ ಕೇಂದ್ರ ಸರಕಾರದ 10 ರಾಜ್ಯಗಳಿಗೆ ವಿತರಿಸಿದ 46.02 ಬಿಲಿಯನ್ ರೂಪಾಯಿಗಳ ಹಣ ಪಾವತಿಯನ್ನು ತೆಗೆದುಕೊಂಡು “ಲಿಬ್ ಟೆಕ್ ಇಂಡಿಯಾ’ ಅಧ್ಯಯನ ಮಾಡಿತು. ಅಧ್ಯಯನವು ತೋರಿಸಿದ್ದೇನೆಂದರೆ ಆಧಾರ್ ಜೋಡಣೆ ಇಲ್ಲದ ಖಾತೆಗೆ ಹಣ ಹೋಗುವುದು 36% ಇದ್ದರೆ, ಆಧಾರ್ ಜೋಡಣೆ ಆಗಿದ್ದ ಖಾತೆಗೆ 39 % ಆಗಿದೆ ಅಷ್ಟೇ. ಹೆಚ್ಚು ವ್ಯತ್ಯಾಸವಿಲ್ಲ. ಸಾದಾ ಖಾತೆಗೆ ಹಾಕಿದ ಹಣದಲ್ಲಿ2.85% ತಿರಸ್ಕೃತವಾದರೆ ಆಧಾರ್ ಜೋಡಣೆ ಆಗಿದ್ದರಲ್ಲೂ2.1 % ತಿರಸ್ಕೃತವಾಗಿಯೇ ಇದೆ! ಅಂದರೆ ತಿರಸ್ಕೃತವಾಗುವ ಸಾಧ್ಯತೆ ಕಡಿಮೆ ಎಂಬುದಕ್ಕೆ ಆಧಾರವೆಲ್ಲಿ?

ಇನ್ನು ಒಂದೂಕಾಲು ಕೋಟಿ ಜನರು ಕೆಲಸ ಮಾಡಿಯೂ ಅವರಿಗೆ ಸಂಬಳ ಸಿಗುವುದಿಲ್ಲವೆಂದರೆ ಅವರು ಮಾಡಬೇಕೇನು? ತಮ್ಮ ಊರಲ್ಲಿ ಕೆಲಸ ಸಿಗದಾದಾಗ ಉದ್ಯೋಗ ಅರಸಿಕೊಂಡು ವಲಸೆ ಹೋಗದೇ ಬೇರೆ ದಾರಿ ಉಂಟೇ? ವಲಸೆ ತಡೆಯಲೆಂದೇ ಬಂದ ಕಾನೂನು ಕಡೆಯಲ್ಲಿ ವಲಸೆಯತ್ತ ದಾರಿತೋರಿಸಿದ್ದಲ್ಲದೇ ಮತ್ತೇನು ಮಾಡಿದಂತಾಯಿತು?

ಕಾನೂನಾಗಿ ಬಂದಿದ್ದು ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ’. ಹಾಗೆಯೇ ‘ಪಂಚಾಯತ್ ರಾಜ್’ ಇನ್ನೊಂದು ಕಾನೂನು. ಇವೆರಡೂ ಕಾಯಿದೆಗಳು ಗ್ರಾಮೀಣ ಜನರ ದೇಹದಲ್ಲಿ ಉಸಿರಿನ ಸಂಚಲನೆಯನ್ನುಂಟು ಮಾಡಿದವುಗಳು. ಗ್ರಾಮೀಣ ಜನಕ್ಕೆ ಜೀವ ತಂದುಕೊಟ್ಟ ಕಾನೂನುಗಳಿವು. ಅದರಲ್ಲೂ ಜನರ ದನಿಗಳಿಗೆ ಗಟ್ಟಿ ಜೀವ ಕೊಟ್ಟಿದ್ದು ಪಂಚಾಯತ್ ರಾಜ್ ನ ಗ್ರಾಮ ಸಭೆ ಎಂಬ ಅಂಶ. ನಿಜವಾಗಿ ನಡೆಯುತ್ತೋ ಬಿಡುತ್ತೋ ಬೇರೆ ಮಾತು. ಪಟ್ಟು ಹಿಡಿದು ನಡೆಸಿದಲ್ಲಿ ನಿಜವಾಗಿ ಜನರ ಧ್ವನಿಯಾಗಿದ್ದು ಗ್ರಾಮಸಭೆ. ಉದ್ಯೋಗ ಖಾತರಿ ಕಾನೂನಿನಲ್ಲೂ ಕೂಡ ಗ್ರಾಮಸಭೆಗೆ ಬಹಳ ಮಹತ್ವ ಇದೆ. ಗ್ರಾಮಸಭೆಯಲ್ಲೇ ಯಾವ ಯಾವ ಕಾಮಗಾರಿ ಎಂದು ಜನರೇ ತೀರ್ಮಾನ ಮಾಡಬೇಕು. ಯಜಮಾನರಾಗಿ ಕಾಮಗಾರಿಗಳನ್ನು ನಿರ್ಧರಿಸಿ, ಕೆಲಸಗಾರರಾಗಿ ತಾವೇ ಹೋಗಿ ದುಡಿಯುವಂಥ ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಕೊಟ್ಟ ಕಾನೂನುಗಳಿವು.

ಜನಪರವಾದ ಈ ಕಾನೂನನ್ನು ಹಿಂಪಡೆಯುವಂತಿಲ್ಲ. ಅದಕ್ಕೇ ಅದರ ನಾಲಿಗೆಯನ್ನು ಕತ್ತರಿಸಿ, ಕುತ್ತಿಗೆಯನ್ನು ಸ್ವಲ್ಪ ಸ್ವಲ್ಪವೇ ಹಿಸುಕುತ್ತ ಹೋಗಿ ಅದನ್ನು ಸಾಯಿಸುವುದು ಈಗಿನ ಸರಕಾರದ ಗುರಿಯಾಗಿದೆ. ದಾಖಲೆಗಾಗಿಯಾದರೂ ಮಾಡುತ್ತಿದ್ದ ಗ್ರಾಮ ಸಭೆಗಳನ್ನು ಕರೋನಾ ಕಾಲದಲ್ಲಿ ನಿಲ್ಲಿಸಲಾಯಿತು. ಅಂದು ನಿಂತ ಗ್ರಾಮಸಭೆಗಳು ಮತ್ತೆ ಮರುಜೀವ ಪಡೆದೇ ಇಲ್ಲ. ಹೊಸ ಹೊಸ ಮಸಲತ್ತು ಹೆಣೆದು ಹೊಸ ಹೊಸ ನಿಯಮಗಳನ್ನು ತಂದು ಕಾನೂನನ್ನು ಸತತವಾಗಿ ನಿರ್ಜೀವಗೊಳಿಸುತ್ತಲೇ ಹೊರಟಿದೆ ಅದು. ಉದ್ಯೋಗ ಖಾತರಿಯ ಕಾನೂನಿನ ಜೊತೆಗೇ ಪಂಚಾಯತ್ ರಾಜ್ ಕಾನೂನಿನ ಕುತ್ತಿಗೆಯನ್ನೂ ಹಿಸುಕುತ್ತಿದೆ. ಕೂಗಬೇಕಾದ ನಾಲಿಗೆಗಳು ಕರೋನಾ ಕಾಲದಲ್ಲೇ ನಿರ್ಜೀವವಾಗಿದ್ದು ಮಾತ್ರ ಗ್ರಾಮೀಣ ಕೆಲಸಗಾರರ ಹಣೇಬರಹ ಎನ್ನೋಣವೇ? ದುರದೃಷ್ಟ ಎನ್ನೋಣವೇ? ಬೇರೇನಾದರೂ ಶಬ್ದವಿದ್ದರೆ ಹೇಳಿ.

ಶಾರದಾ ಗೋಪಾಲ

ಅಂಕಣಕಾರರು, ಸಾಮಾಜಿಕ ಹೋರಾಟಗಾರರು‌

ಇದನ್ನೂ ಓದಿ-ಬಿಜೆಪಿ ಆಡಳಿತ ಸರ್ವಾಧಿಕಾರದತ್ತ ಸಾಗಿದೆ: ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ

You cannot copy content of this page

Exit mobile version