ಶಹಾಪುರ: ಕಲ್ಬುರ್ಗಿ ಕಡೆ ಹೊರಟಿದ್ದ ಮಹಿಂದ್ರಾ ಪಿಕಪ್ ಮತ್ತು ಶಹಾಪುರದತ್ತ ಹೊರಟಿದ್ದ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟು ಹಲವು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ 8-30 ರ ಸುಮಾರಿಗೆ ತಾಲೂಕಿನ ಮದ್ರಿಕಿ ಕ್ರಾಸ್ ಬಳಿ ನಡೆದಿದೆ.
ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ ಒಂದುವರೆ ತಾಸು ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಾರ್ವಜನಿಕರ ಸಹಕಾರದಿಂದ ವಾಹನದಡಿ ಸಿಲುಕಿದ ಹಲವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ.
ವಾಹನ ಚಾಲಕ ಶರಣಪ್ಪ (26), ಸುನಿತಾ(30), ಸೋಮವ್ವ (45), ತಂಗವ್ವ (32) ಮೃತರು. 12 ಜನ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಳಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಘಟನೆ ಸಂಬಂಧ ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.