Home ವಿಶೇಷ ಅಳುತಿಹಳು ಅಡವಿ ಮಾತೆ

ಅಳುತಿಹಳು ಅಡವಿ ಮಾತೆ

0

ಒಂದು ವಿಧಾನ ಸೌಧ ಬಿದ್ದರೆ ಅಂತಹ ನೂರಾರು ವಿಧಾನ ಸೌಧ ಕಟ್ಟಬಹುದು, ಆದರೆ ಪಶ್ಚಿಮ ಘಟ್ಟದ ನದೀ ಮೂಲ ಅಳಿದು ಹೋದರೆ ಮತ್ತೆ ಯಾವ ತಂತ್ರಗಾರಿಕೆಯಿಂದಲೂ ಅದನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ಅವರು ಪರಿಸರ ದಿನಕ್ಕಾಗಿ ಬರೆದ ವಿಶೇಷ ಲೇಖನ.

ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿಯಾಗಿರುವ ಹಾಗೂ ಪ್ರಪಂಚದ 18 ಸೂಕ್ಷ್ಮ ಜೀವ ವೈವಿಧ್ಯತಾ ತಾಣಗಳಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟದ ಅಸ್ತಿತ್ವ ಮತ್ತು ಸೌಂದರ್ಯ ದೂರದಿಂದ ನೋಡಲು ಮಾತ್ರ ಚಂದ. ಆದರೆ ಇದರ ಆಂತರಿಕ ನೋವು, ವೇದನೆ, ರೋಧನವನ್ನು ಕೇಳುವವರಾರು ? ಶೋಕೇಸ್ ನಲ್ಲಿ ಅಥವಾ ಪಂಜರದೊಳಗೆ ಇಟ್ಟ ವಸ್ತುವನ್ನು ನೋಡುವ ರೀತಿಯಲ್ಲಿ ಪಶ್ಚಿಮ ಘಟ್ಟದ ಪ್ರಾಕೃತಿಕ ಸೌಂದರ್ಯವನ್ನು ನೋಡಲು, ಅನುಭವಿಸಲು ಇರುವ ಸರಕು ಆಗಿ ಬಿಟ್ಟಿದೆಯೇ ಹೊರತು ಪಶ್ಚಿಮ ಘಟ್ಟದಿಂದ ನಾವೆಷ್ಟು ಉಪಯೋಗವನ್ನು ಪಡೆದಿದ್ದೇವೆ, ಪಶ್ಚಿಮ ಘಟ್ಟ ನಾಶ ಆದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಅರಿಯಲು ಇಚ್ಛಿಸದ ಫಲಾನುಭವಿಗಳ ಮನಸ್ಥಿತಿಯಿಂದ ಇಂದು ಪಶ್ಚಿಮ ಘಟ್ಟದ ನೋವಿಗೆ ಕಿವಿಯಾಗುವವರು ಇಲ್ಲದಂತಾಗಿದೆ. 

ನಮ್ಮ ರಾಜಕೀಯ ವ್ಯವಸ್ಥೆ ಒಂದು ಕಡೆ ಪಶ್ಚಿಮ ಘಟ್ಟ ಉಳಿಸಿ, ಕಾಡು ಉಳಿಸಿ ಎಂದು ಭಾಷಣ, ಘೋಷಣೆ ಮಾಡುತ್ತಾ ಇನ್ನೊಂದು ಕಡೆ ಪಶ್ಚಿಮ ಘಟ್ಟವನ್ನು ಹಂತ, ಹಂತವಾಗಿ ನಾಶ ಮಾಡುತ್ತಾ ಬಂದಿರುವ ಮಾಫಿಯಾಗಳಿಗೆ ಗಿರಿ ಬನವನ್ನು ಮುಕ್ಕಿ ತಿನ್ನಲು ಬಾಗಿಲು ತೆರೆಯುತ್ತಾ ಬಂದದ್ದೇ ದೊಡ್ಡ ಸಾಧನೆಯಾಗುತ್ತಿದೆ. ಅಭಿವೃದ್ಧಿ ಎಂಬ ನೆಪದಲ್ಲಿ, ವೋಟು, ನೋಟು, ಸೀಟು ಎಂಬ ಜಪದಲ್ಲಿ ಪಶ್ಚಿಮ ಘಟ್ಟದ ಧಾರಣಾಶಕ್ತಿಗೂ ಮೀರಿ ಅಸಂಬದ್ಧ ಯೋಜನೆಗಳನ್ನು ಮಾಡುತ್ತಾ ಗುತ್ತಿಗೆದಾರರ, ಅಡವಿ ಮಾಫಿಯಾಗಳ ಮತ್ತು ರಾಜಕಾರಣಿಗಳ ನಡುವಿನ ಸೂಟು ಕೇಸು ಸಂಬಂಧವೇ ಇಂದು ಪಶ್ಚಿಮ ಘಟ್ಟದ ನೆಮ್ಮದಿ ಹಾಳಾಗಲು ಮೂಲ ಕಾರಣ. 

ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಡ್ಗಿಚ್ಚು ಹಬ್ಬಿ ಒಂದಷ್ಟು ಹುಲ್ಲುಗಾವಲು, ಶೋಲಾರಣ್ಯ ಹೊತ್ತಿ ಉರಿಯುತ್ತದೆ. ಕಾಡ್ಗಿಚ್ಚು ಬಿದ್ದಿದೆ ಎಂದು ಸುದ್ದಿ ಆಗುತ್ತದೆ. ಕಾಡ್ಗಿಚ್ಚು ಬೀಳುವುದೆಲ್ಲಿಂದ? ಆಕಾಶದಿಂದವೇ? ಕಾಡ್ಗಿಚ್ಚು ಬೀಳುವುದಲ್ಲ, ಕಾಡ್ಗಿಚ್ಚು ಪ್ರಕೃತಿ ನಿರ್ಮಿತವಲ್ಲ ಎಲ್ಲಾ ಕಾಡ್ಗಿಚ್ಚು ಮಾನವ ನಿರ್ಮಿತ. ಪಶ್ಚಿಮ ಘಟ್ಟದ ಅಡವಿಯ ಒಳಗೆ ತಮ್ಮ ಸ್ವಾರ್ಥ ಹಿತಕ್ಕಾಗಿ ಅಗೋಚರವಾಗಿ ಇರುವ ಅಡವಿ ಮಾಫಿಯಾ ಬೆಟ್ಟಕ್ಕೆ ಕಿಚ್ಚು ಹಾಕಿ ಕಾಡ್ಗಿಚ್ಚು ಬಿದ್ದಿದೆ ಎಂದು ಸುದ್ದಿ ಹಬ್ಬಿಸುವುದು. ಕೆಲವು ಕಡೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲಿನ ದ್ವೇಷಕ್ಕೆ ಬೆಟ್ಟಕ್ಕೆ ಬೆಂಕಿ ಹಚ್ಚುವುದೂ ಇದೆ. ಇನ್ನೂ ಕೆಲವು ಕಡೆ  ಟಿಂಬರ್ ಮಾಫಿಯಾ ಎಂಬ ಸರಕಾರೀ ಕೃಪಾ ಪೋಷಿತ ನಾಟಕದ ಪಾತ್ರಧಾರಿಗಳು ಅಡವಿಗೆ ಕಿಚ್ಚು ಹಚ್ಚಿ ಯಾರದೋ ಮೇಲೆ ದೋಷಾರೋಪಣೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ನಾಲಿಗೆ ಚಪಲದ ಕೆಲವು ವನ್ಯ ಜೀವಿ ಬೇಟೆಗಾರರು ಕೂಡಾ ಕಾಡ್ಗಿಚ್ಚಿಗೆ ಅವಕಾಶ ಕಲ್ಪಿಸುತ್ತಾರೆ.

ಕಾಡಲ್ಲಿ ರಾಜಾರೋಷವಾಗಿ ಮರ ಕಡಿಯುವ ಮತ್ತು ಬೇಟೆಯಾಡುವ ಈ ರೀತಿಯ ಜನರಿಗೆ ರಾಜಕೀಯ ಪ್ರೇರಿತ ಅಡವಿ ಮಾಫಿಯಾಗಳ ರಕ್ಷಣೆ ಇರುವುದರಿಂದ ಅರಣ್ಯ ಇಲಾಖೆ ಕೂಡಾ ಅಸಹಾಯಕ ಪರಿಸ್ಥಿತಿಯಲ್ಲಿ ಮೌನವಾಗಿರ ಬೇಕಾಗುತ್ತದೆ. ಅರಣ್ಯ ಅತಿಕ್ರಮಣ ಮಾಡಿ ಎಸ್ಟೇಟ್, ಅಕ್ರಮ ರೆಸಾರ್ಟ್ ದಂಧೆಯ ಮಾಲಕರಿಂದಲೂ ಇಂದು ಪಶ್ಚಿಮ ಘಟ್ಟದ ಒಡಲಿಗೆ ಮಾರಣಾಂತಿಕ ಏಟು ಬೀಳುತ್ತಾ ಇದೆ. ಕಳೆದ 4 ವರುಷಗಳಿಂದ ಪಶ್ಚಿಮ ಘಟ್ಟದಲ್ಲಿ ಜಲ ಪ್ರವಾಹ, ಭೂಕುಸಿತ ಆಗುತ್ತಲೇ ಇದ್ದರೂ ಈ ಪ್ರಾಕೃತಿಕ ದುರಂತ ಯಾಕೆ ಆಯಿತು, ಇದಕ್ಕೆ ಮೂಲ ಕಾರಣವೇನು ಎಂಬ ಒಂದು ವೈಜ್ಞಾನಿಕ ವರದಿ ಮಾಡಲೂ ನಮ್ಮನ್ನಾಳುವ ದಿಗ್ಗಜರಿಗೆ ಆಗಲಿಲ್ಲವೆಂದರೆ ಇದಕ್ಕೆ ಮೂಲ ಕಾರಣ ಪಶ್ಚಿಮ ಘಟ್ಟವನ್ನು ತನ್ನ ಇಚ್ಛಾನುಸಾರ ಬಳಸಿಕೊಳ್ಳುವ ಮಾಫಿಯಾ ಸಾಮ್ರಾಜ್ಯ. ಎತ್ತಿನಹೊಳೆ ಯೋಜನೆಯಂಥ (ನದಿ ತಿರುವಿಗೆ ನಿರೀಕ್ಷಿತ ನೀರು ಲಭ್ಯವಿಲ್ಲ ಎಂದು ತಿಳಿದಿದ್ದರೂ ಹಠ ಪ್ರಯೋಗಿಸುವ) ಅದೆಷ್ಟೋ ಪಶ್ಚಿಮ ಘಟ್ಟದ ನದೀ ಮೂಲಗಳನ್ನು ನಾಶ ಮಾಡುವ ಯೋಜನೆಗಳು ಮತ್ತೆ ಮತ್ತೆ ಸರದಿಯಲ್ಲಿ ಕಾದು ಕುಳಿತಿವೆ ಎಂದರೆ ಇದು ಧನಮೂಲದ ಮಾಫಿಯಾ ಕೈವಾಡ ಅಲ್ಲದೇ ಇನ್ನೇನು ?

ಪಶ್ಚಿಮ ಘಟ್ಟದ ನದೀ ಮೂಲಗಳು ವರ್ಷದಿಂದ ವರ್ಷಕ್ಕೆ ಬಡಕಲಾಗುತ್ತಿವೆ, ಭೂಕುಸಿತ ಆಗಿ ನೀರು ಇಂಗುವುದಕ್ಕೆ ಅವಕಾಶ ಇಲ್ಲದೇ ಸಮಸ್ಯೆ ಹೆಚ್ಚಾಗುತ್ತಿದ್ದಾಗ ಪಶ್ಚಿಮ ಘಟ್ಟದ ಮೇಲ್ಮೈ ಭಾಗದಲ್ಲಿ 3000 ಚೆಕ್ ಡ್ಯಾಮ್ ನಿರ್ಮಾಣ ಮಾಡುವುದು ಎಂದರೆ ಇದೆಲ್ಲಾ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು ಎಂಬ ಧನ ದಾಹದ ಅಗೋಚರ ಮಾಫಿಯಾ ಶಕ್ತಿಯೇ ಹೊರತು ಇನ್ನಾವುದೂ ಅಲ್ಲ.  ಮತ ನೀಡಿ ಅಧಿಕಾರದ ಪಟ್ಟದಲ್ಲಿ ಕೂರಿಸಿದ ನಾವು, ನೀವು ಇದ್ಯಾವುದನ್ನೂ ಪ್ರಶ್ನಿಸದೇ ಮೌನವಾಗಿ ಇರುವುದೇ ಈ ಕಬಳಿಕೆ, ಕೋಟಿ ಹಣ ಲೂಟಿಯ ಮಾಫಿಯಾ ಶಕ್ತಿ ಬೆಳೆಯಲು ಕಾರಣ. ಒಂದು ವಿಧಾನ ಸೌಧ ಬಿದ್ದರೆ ಅಂತಹ ನೂರಾರು ವಿಧಾನ ಸೌಧ ಕಟ್ಟಬಹುದು, ಆದರೆ ಪಶ್ಚಿಮ ಘಟ್ಟದ ನದೀ ಮೂಲ ಅಳಿದು ಹೋದರೆ ಮತ್ತೆ ಯಾವ ತಂತ್ರಗಾರಿಕೆಯಿಂದಲೂ ಅದನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯತೆಯನ್ನು ರಸ್ತೆ, ಅಣೆಕಟ್ಟು, ಗಣಿಗಾರಿಕೆ, ಬೇಟೆ, ಕಾಡ್ಗಿಚ್ಚು, ಜಂಗಲ್ ರೆಸಾರ್ಟ್, ಜಲ ವಿದ್ಯುತ್ ಯೋಜನೆ ಅಂತ ಹೇಳಿ ಈಗಾಗಲೇ ಎಷ್ಟೊಂದು ಕಾಡು, ಬೆಟ್ಟ, ನದಿಗಳನ್ನು ನಾಶ ಮಾಡಿ ಆಯಿತು. ಹಾಗಿದ್ದರೆ ಅರಣ್ಯ ಖಾಯಿದೆ, ವನ್ಯಜೀವಿ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ ಕೇವಲ ಇಲಾಖೆಗಳ ಕಡತಗಳಿಗೆ ಮಾತ್ರ ಸೀಮಿತವೇ ? ಇಷ್ಟೆಲ್ಲಾ ಕಾಯಿದೆ, ಕಾನೂನು, ರೀತಿ, ನೀತಿಗಳು ಇದ್ದರೂ ಪಶ್ಚಿಮ ಘಟ್ಟಕ್ಕೆ ಯಾವ ಭದ್ರತೆಯೂ ಇಲ್ಲವೆಂದರೆ ಇದು ವ್ಯವಸ್ಥಿತ ‘ಅರ್ಥ’ ಗರ್ಭಿತ ಮಾಫಿಯಾ ಶಕ್ತಿ ಅಲ್ಲದೇ ಇನ್ನೇನು ? ಇದನ್ನು ಪ್ರಶ್ನಿಸಬೇಕಾದದ್ದು, ತಡೆಯಬೇಕಾದದ್ದು ನಾವು, ನೀವು, ಎಲ್ಲರೂ…ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಅದಲ್ಲದಿದ್ದರೂ…ನಮ್ಮ, ನಿಮ್ಮ ಮಕ್ಕಳ ಭವಿಷ್ಯದ ಭದ್ರತೆಗಾಗಿಯಾದರೂ….‌

ದಿನೇಶ್‌ ಹೊಳ್ಳ

ಪರಿಸರ ಹೋರಾಟಗಾರರು

ಇದನ್ನೂ ಓದಿ

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 3

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 2

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1

You cannot copy content of this page

Exit mobile version