ಆರ್ ಎಸ್ ಎಸ್ ಸ್ವಾವಲಂಬಿ, ಸ್ವತಂತ್ರ ಆಲೋಚನೆ ಹೊಂದಿರುವ ಹೆಣ್ಣುಮಕ್ಕಳನ್ನು ಇಷ್ಟಪಡುವುದಿಲ್ಲ. ಅವರ ಸಿದ್ಧಾಂತದ ಪ್ರಕಾರ ಹೆಣ್ಣು ಶಾಂತವಾಗಿರಬೇಕು, ವಿಧೇಯಳಾಗಿರಬೇಕು. ಪ್ರತಿಭಟನೆಯನ್ನಂತೂ ಮಾಡಲೇಬಾರದು. ಈ ಗೆರೆ ಮೀರುವವರಿಗೆ ಪಾಠ ಕಲಿಸಬೇಕು ಎನ್ನುವುದು ಅವರ ನಿಲುವು. ಈ ಪಾಠ ಕಲಿಸಹೊರಟು ಈಗ ಅವರು ಕೈ ಸುಟ್ಟುಕೊಂಡಿದ್ದಾರೆ – ಶ್ರೀನಿವಾಸ ಕಾರ್ಕಳ
- “ಫೋಟೋ ತೆಗೆಯುವಂತೆ ನಟಿಸುತ್ತಾ, ಆರೋಪಿಯು (ಬ್ರಿಜ್ ಭೂಷಣ್ ಶರಣ್ ಸಿಂಗ್) ತನ್ನೆಡೆಗೆ ನನ್ನನ್ನು ಒತ್ತಿಹಿಡಿದ. ಉದ್ದೇಶಪೂರ್ವಕವಾಗಿಯೇ ತನ್ನ ಕೈಗಳಿಂದ ನನ್ನ ಮೊಲೆಗಳನ್ನು ಸವರಿದ…
- ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ನಿನಗೆ ಈ ಹಿಂದೆಯೇ ಹೇಳಿದ್ದೆ. ನನ್ನನ್ನು ಹಿಂಬಾಲಿಸುವುದನ್ನು ನೀನು ನಿಲ್ಲಿಸಬೇಕು ಎಂದು ನಾನು ಅವನಿಗೆ ಸ್ಪಷ್ಟವಾಗಿ ಹೇಳಿದೆ…” (ಅಪ್ರಾಪ್ತ ಹರೆಯದ ಕುಸ್ತಿಪಟು).
- “ಆದಿನ ನಾನು ಒಂದು ಹೋಟೆಲ್ ಗೆ ಡಿನ್ನರ್ ಗೆ ಹೋಗಿದ್ದೆ. ಅಲ್ಲಿದ್ದ ಆರೋಪಿಯು ತನ್ನ ಡಿನ್ನರ್ ಟೇಬಲ್ ಗೆ ಬರುವಂತೆ ನನ್ನನ್ನು ಕರೆದ. ನಾನು ಅಲ್ಲಿ ಹೋದಾಗ ನನ್ನ ಸಮ್ಮತಿಯೇ ಇಲ್ಲದೆ ಆತ ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲೆ ಇರಿಸಿದ, ತಬ್ಬಿಕೊಂಡ. ನಾನು ಬೆಚ್ಚಿಬಿದ್ದೆ. ಆರೋಪಿಯು ಅಲ್ಲಿಗೇ ನಿಲ್ಲಿಸಲಿಲ್ಲ. ಮತ್ತೆ ನನ್ನ ಮೊಲೆಗಳನ್ನು ಅವಚಿ ಹಿಡಿದ. ಮತ್ತೆ ಕೈಗಳನ್ನು ಹೊಟ್ಟೆಯತ್ತ ಸರಿಸಿದ. ಹೀಗೆ ಮೂರು ನಾಲ್ಕು ಬಾರಿ ಮಾಡಿದ…!
- ಆರೋಪಿಯು ಕುಸ್ತಿ ಫೆಡರೇಶನ್ (WFI) ಕಚೇರಿಯಲ್ಲಿ ಅಸಭ್ಯ ರೀತಿಯಲ್ಲಿ ನನ್ನ ಅಂಗೈ, ಮೊಣಕಾಲು, ತೊಡೆ, ಭುಜಗಳನ್ನು ನನ್ನ ಸಮ್ಮತಿಯಿಲ್ಲದೆಯೇ ಮುಟ್ಟತೊಡಗಿದ. ನಾನು ನಿಂತಲ್ಲಿಯೇ ನಡುಗಲಾರಂಭಿಸಿದೆ. ಆತ ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲಿರಿಸಿದ.. ನನ್ನ ಉಸಿರನ್ನು ಪರೀಕ್ಷಿಸುವ ನೆಪದಲ್ಲಿ ಕೈಗಳನ್ನು ನನ್ನ ಹೊಟ್ಟೆಯತ್ತ ಸರಿಸಿದ. ನನ್ನ ಮಾನಭಂಗ ಮಾಡುವ ಉದ್ದೇಶದಿಂದ ಸಲ್ಲದ ರೀತಿಯಲ್ಲಿ ನನ್ನನ್ನು ಮುಟ್ಟುವುದು ಆತನ ಉದ್ದೇಶವಾಗಿತ್ತು…” (ಕುಸ್ತಿಪಟು 1)
- “ಮ್ಯಾಟ್ ಮೇಲೆ ನಾನು ಮಲಗಿದ್ದಾಗ ಆರೋಪಿಯು ನನ್ನ ಬಳಿಗೆ ಬಂದ. ನನ್ನತ್ತ ಬಾಗಿದ. ನನ್ನ ಕೋಚ್ ಇಲ್ಲದ ಆ ಹೊತ್ತಿನಲ್ಲಿ ನನ್ನ ಸಮ್ಮತಿಯಿಲ್ಲದೆ ನನ್ನ ಟಿ ಶರ್ಟ್ ಎಳೆದ, ತನ್ನ ಕೈಗಳನ್ನು ನನ್ನ ಮೊಲೆಗಳ ಮೇಲಿರಿಸಿದ. ಉಸಿರು ಪರೀಕ್ಷಿಸುವ ನೆಪದಲ್ಲಿ ತನ್ನ ಕೈಗಳನ್ನು ನನ್ನ ಹೊಟ್ಟೆಗಳತ್ತ ಸರಿಸಿದ…
- ಫೆಡರೇಶನ್ ಕಚೇರಿಗೆ ಹೋಗಿದ್ದಾಗ ಆತ ನನ್ನನ್ನು ತನ್ನ ಕೊಠಡಿಗೆ ಕರೆದ. ನನ್ನ ಜೊತೆ ಬಂದಿದ್ದ ನನ್ನ ಸಹೋದರನನ್ನು ಹೊರಗಿರಲು ಹೇಳಿದರು. ಇತರರು ಹೋದ ಬಳಿಕ ಆರೋಪಿಯು ಕೊಠಡಿಯ ಬಾಗಿಲು ಮುಚ್ಚಿ ನನ್ನನ್ನು ತನ್ನತ್ತ ಬರಸೆಳೆದು ಬಲವಂತವಾಗಿ ದೈಹಿಕ ಸಂಪರ್ಕ ಮಾಡಲು ಯತ್ನಿಸಿದ…” (ಕುಸ್ತಿಪಟು 2)
- ಆರೋಪಿಯು ಫೋನ್ ನಲ್ಲಿ ನನ್ನ ಹೆತ್ತವರೊಂದಿಗೆ ಮಾಡನಾಡಲು ಹೇಳಿದ. ಆಗ ನನ್ನಲ್ಲಿ ನನ್ನ ಫೋನ್ ಇರಲಿಲ್ಲ. ತಾನು ಕುಳಿತಿದ್ದ ತನ್ನ ಬೆಡ್ ನತ್ತ ಬರುವಂತೆ ನನ್ನನ್ನು ಕರೆದ. ಅಲ್ಲಿಗೆ ಹೋದಾಗ ಹಠಾತ್ತಾಗಿ ನನ್ನ ಸಮ್ಮತಿಯೇ ಇಲ್ಲದೆ ನನ್ನನ್ನು ಅಪ್ಪಿಕೊಂಡ…
- ತನ್ನ ಲೈಂಗಿಕ ಉದ್ದೇಶಗಳನ್ನು ಇನ್ನಷ್ಟು ಈಡೇರಿಸಿಕೊಳ್ಳಲು ಕೆಲವು ಆಮಿಷಗಳನ್ನು ಒಡ್ಡಿದ. ಅಂದರೆ, ಲೈಂಗಿಕವಾಗಿ ಸಹಕರಿಸಿದರೆ ನನ್ನ ಕ್ರೀಡಾ ಅಗತ್ಯದ ಸಾಧನ ಸಲಕರಣೆಗಳನ್ನು ಒದಗಿಸುವುದಾಗಿ ಹೇಳಿದ…” (ಕುಸ್ತಿಪಟು 3).
- “ಆರೋಪಿಯು ನನ್ನನ್ನು ತನ್ನ ಬಳಿಗೆ ಕರೆದು ನನ್ನ ಟಿ ಶರ್ಟ್ ಎಳೆದ. ಉಸಿರನ್ನು ತಪಾಸಣೆ ಮಾಡುವ ನೆಪದಲ್ಲಿ ನನ್ನ ಹೊಕ್ಕಳ ಮೇಲೆ ಕೈ ಇರಿಸಿದ…
- ಸಿಂಗ್ ಹುಡುಗಿಯರನ್ನು ಅಸಭ್ಯ ರೀತಿಯಲ್ಲಿ ಬಳಸಿಕೊಳ್ಳಲು ಯತ್ನಿಸುತ್ತಿದ್ದುದರಿಂದ, ನಾನೂ ಸೇರಿದಂತೆ ನಾವೆಲ್ಲರೂ ಬೆಳಗಿನ ತಿಂಡಿ, ಮಧ್ಯಾಹ್ನದೂಟ ಮತ್ತು ರಾತ್ರಿಯ ಊಟಕ್ಕೆ ಒಂಟಿಯಾಗಿ ಹೋಗಬಾರದು, ಗುಂಪಾಗಿ ಹೋಗಬೇಕು ಎಂದು ನಿರ್ಧರಿಸಿದೆವು…” (ಕುಸ್ತಿಪಟು 4).
- “ತಂಡದ ಫೋಟೋಗ್ರಾಫ್ ಗಾಗಿ ನಾನು ಕೊನೆಯ ಸಾಲಿನಲ್ಲಿ ನಿಂತಿದ್ದಾಗ ಆರೋಪಿ ಬಂದು ನನ್ನ ಜತೆ ನಿಂತ. ಕೆಲವೇ ಕ್ಷಣಗಳಲ್ಲಿ ಆತನ ಕೈಗಳು ನನ್ನ ಬಟಕ್ ಮೇಲಿರುವುದು ನನಗೆ ತಿಳಿಯಿತು. ನಾನು ಗಾಬರಿಬಿದ್ದೆ. ಆತನ ವರ್ತನೆ ಅಸಭ್ಯವಾಗಿತ್ತು, ಆಕ್ಷೇಪಾರ್ಹವಾಗಿತ್ತು. ನಾನು ದೂರ ಸರಿಯಲೆತ್ನಿಸಿದಾಗ ಆತ ಬಲವಂತವಾಗಿ ನನ್ನನ್ನು ಹಿಡಿದುಕೊಂಡ…” (ಕುಸ್ತಿಪಟು 5).
- “ನನ್ನ ಜತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಆತ ನನ್ನನ್ನು ತನ್ನೆಡೆಗೆ ಎಳೆದುಕೊಂಡ. ನನ್ನನ್ನು ನಾನು ರಕ್ಷಿಸಿಕೊಳ್ಳಲು ಆರೋಪಿಯಿಂದ ದೂರ ಸರಿಯಲು ಯತ್ನಿಸಿದೆ. ಆತನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮತ್ತೆ ಮತ್ತೆ ಆತನ ಯತ್ನವನ್ನು ಪ್ರತಿರೋಧಿಸಿದೆ. ಆತನನ್ನು ದೂರ ತಳ್ಳಲು ಯತ್ನಿಸಿದೆ. ‘ಏನು ಭಾರೀ ಸ್ಮಾರ್ಟ್ ಆಗಲು ಯತ್ನಿಸುತ್ತಿದ್ದಿ? ಮುಂದೆ ಯಾವುದೇ ಸ್ಪರ್ಧೆಯಲ್ಲಿ ಆಡುವ ಇಚ್ಚೆ ಇಲ್ಲವಾ?’ ಎಂದು ಗದರಿದ…” (ಕುಸ್ತಿಪಟು 6)
ಅಪರಾಧದ ಸೆಕ್ಷನ್ ಗಳು
ಇವು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ ಭಾರತದ ಮಹಿಳಾ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಶರಣ್ ಮೇಲೆ ದಾಖಲಿಸಿರುವ ದೂರುಗಳು. ಲೈಂಗಿಕ ಸಹಕಾರದ ಬೇಡಿಕೆಯ ಎರಡು ಪ್ರಕರಣಗಳು ಮತ್ತು ಕನಿಷ್ಠ 15 ಲೈಂಗಿಕ ಕಿರುಕುಳದ ಪ್ರಕರಣಗಳ ಉಲ್ಲೇಖವಿವೆ ಇಲ್ಲಿ. ಸಲ್ಲದ ರೀತಿಯಲ್ಲಿ ಸ್ಪರ್ಶ, ಮಾನಭಂಗ, ಕೈಗಳಿಂದ ಮೊಲೆ ಸವರುವುದು, ಹೊಕ್ಕಳು ಮುಟ್ಟುವುದು; ಹಿಂಬಾಲಿಸುವುದು ಸೇರಿದಂತೆ ಬೆದರಿಕೆಯ ಅನೇಕ ಘಟನೆಗಳು ಇವುಗಳಲ್ಲಿ ಸೇರಿವೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಈ ಎಫ್ ಐ ಆರ್ ಗಳನ್ನು ಎಪ್ರಿಲ್ 28, 2023 ರಂದು ದಿಲ್ಲಿ ಪೊಲೀಸರ ಮುಂದೆ ದಾಖಲಿಸಲಾಗಿತ್ತು.
ಎರಡೂ ಎಫ್ ಐ ಆರ್ ಗಳಲ್ಲಿ ಐಪಿಸಿ ಸೆಕ್ಷನ್ 354 (ಮಾನಭಂಗ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ), 354ಎ (ಲೈಂಗಿಕ ಕಿರುಕುಳ) ಮತ್ತು 34 (ಸಾಮಾನ್ಯ ಉದ್ದೇಶ) ಉಲ್ಲೇಖಿಸಲಾಗಿದ್ದು, ಇವಕ್ಕೆ ಒಂದರಿಂದ ಮೂರು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಬಹುದಾಗಿದೆ. ಮೊದಲನೆ ಎಫ್ ಐ ಆರ್ ನಲ್ಲಿ ಆರು ವಯಸ್ಕ ಕುಸ್ತಿಪಟುಗಳ ಆರೋಪಗಳಿವೆ.
ಎರಡನೆ ಎಫ್ ಐ ಆರ್ ಅಪ್ರಾಪ್ತ ವಯಸ್ಕಳ ತಂದೆಯ ದೂರನ್ನು ಆಧರಿಸಿದೆ. ಇಲ್ಲಿ ಪೋಕ್ಸೋ ಕಾಯಿದೆಯ ಸೆಕ್ಷನ್ 10 ನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಐದರಿಂದ ಏಳು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಬಹುದಾಗಿದೆ. ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾದ ಲೈಂಗಿಕ ಕಿರುಕುಳದ ಘಟನೆಗಳು ಭಾರತ ಮತ್ತು ಭಾರತದ ಹೊರಗೆ 2012 ರಿಂದ 2022 ರ ನಡುವೆ ನಡೆದಿವೆ.
2021 ರಲ್ಲಿಯೇ ಗಮನಕ್ಕೆ ತರಲಾಗಿತ್ತು

ಸಿಂಗ್ ಕುರಿತಂತೆ ಈ ಮಹಿಳಾ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದು ಈಗಲ್ಲ. 2021 ರಲ್ಲಿಯೇ ಪದಕ ವಿಜೇತರ ಸನ್ಮಾನ ಕಾರ್ಯಕ್ರಮದಲ್ಲಿ ಒಬ್ಬ ಸಂತ್ರಸ್ತೆ ಇದನ್ನು ದೇಶದ ಪ್ರಧಾನಿಯವರ ಗಮನಕ್ಕೆ ತಂದಿದ್ದರು. ಆದರೆ, ಕ್ರೀಡಾ ಇಲಾಖೆ ಇದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿ ಮೋದಿಯವರು ಸಾಗ ಹಾಕಿದ್ದರು.
ಯಾವ ನ್ಯಾಯವೂ ಸಿಗುವ ಸಾಧ್ಯತೆ ಇಲ್ಲ ಅನಿಸಿದಾಗ ಸುಮಾರು ಆರು ತಿಂಗಳ ಹಿಂದೆ ಕುಸ್ತಿಪಟುಗಳು ಬಹಿರಂಗವಾಗಿ ಪ್ರತಿಭಟನೆ ಆರಂಭಿಸಿದರು. ಅವರಿಗೆ ಕ್ರೀಡಾ ತಾರೆಗಳಾದ ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ, ಕಪಿಲ್ ದೇವ್, ಅನಿಲ್ ಕುಂಬ್ಳೆ, ವಿಜೇಂದ್ರ ಸಿಂಗ್, ಸುನಿಲ್ ಚೇತ್ರಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಸಹಿತ ದೇಶದಾದ್ಯಂತದ ಪ್ರಜ್ಞಾವಂತರ ಬೆಂಬಲ ದೊರೆಯಿತು.
ಆದರೆ ‘ಬೇಟಿ ಬಚಾವ್ ಬೇಟಿ ಪಡಾವ್’ ಸ್ಲೋಗನ್ ಪ್ರಿಯ ಪ್ರಧಾನಿ, ಮಹಿಳಾ ಮಂತ್ರಿಗಳು ಸೇರಿದಂತೆ ಅವರ ಸರಕಾರಕ್ಕೆ ಇದೊಂದು ಗಂಭೀರ ವಿಷಯ ಅನಿಸಲೇ ಇಲ್ಲ! ಸರಕಾರವೇ ಆರೋಪಿಯನ್ನು ರಕ್ಷಿಸಲು ನಿಂತುದರಿಂದ ಪೊಲೀಸರೂ ಅದೇ ದಾರಿ ಹಿಡಿದರು. ಅವರು ಎಫ್ ಐ ಆರ್ ಕೂಡಾ ದಾಖಲಿಸಲಿಲ್ಲ. ಎಫ್ ಐ ಆರ್ ದಾಖಲಿಸುವಂತೆ ಆಗ್ರಹಿಸಲು ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಕೊನೆಗೆ ಕೋರ್ಟ್ ನ ಆದೇಶಕ್ಕೆ ತಲೆಬಾಗಿ ಪೊಲೀಸರು ಎಫ್ ಐ ಆರ್ ದಾಖಲಿಸಿದರು. ಆದರೂ ತನಿಖೆ ವೇಗ ಪಡೆಯದಿದ್ದಾಗ ಹೊಸ ಸಂಸತ್ ಕಟ್ಟಡ ಉದ್ಘಾಟನೆಯ ದಿನ ಮಹಿಳಾ ಪಂಚಾಯತ್ ನಡೆಸಲು ಕುಸ್ತಿಪಟುಗಳು ಮುಂದುವರಿದರು.
ತಿರುಗುಬಾಣ
ಅವರಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲವೇನೋ. ಆದರೆ ಈ ಸರಕಾರಕ್ಕೆ ಎಲ್ಲ ಪ್ರತಿಭಟನೆಯನ್ನೂ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಸರ್ವಾಧಿಕಾರಿ ಬುದ್ಧಿ. ಪ್ರತಿಭಟನಾ ಮೆರವಣಿಗೆ ಹೊರಟ ಮಹಿಳಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಅಮಾನುಷವಾಗಿ ಎಳೆದಾಡಿದರು, ಬಂಧಿಸಿದರು, ಜಂತರ್ ಮಂತರ್ ನಿಂದ ಅವರನ್ನು ಖಾಲಿ ಮಾಡಿಸಿದರು.
ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳನ್ನು ಸರಕಾರದ ಪೊಲೀಸರು ನಡೆಸಿಕೊಂಡ ರೀತಿಯು ಸರಕಾರಕ್ಕೆ ತಿರುಗುಬಾಣವಾಯಿತು; ಪ್ರತಿಭಟನಾಕಾರರಿಗೆ ವರದಾನವಾಯಿತು. ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೋಗಟ್ ಭಾರತದ ಧ್ವಜ ಹಿಡಿದು ನೆಲದಲ್ಲಿ ಬಿದ್ದಿದ್ದ ದೃಶ್ಯ ಇಡೀ ಹೋರಾಟದ ಒಂದು ರೂಪಕವೆನಿಸಿತು.
ಈ ಪೈಲ್ವಾನರಿಗೆ ದೇಶದ ರೈತ ಸಂಘಟನೆಯ ಬೆಂಬಲವೂ ದೊರೆಯಿತು. ತಮ್ಮ ಮೇಲಿದ್ದ ದೌರ್ಜನ್ಯ ವಿರೋಧಿಸಿ ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ಎಸೆಯುವುದಾಗಿ ಕುಸ್ತಿಪಟುಗಳು ಘೋಷಿಸಿದಾಗ ಅಲ್ಲಿಗೆ ಧಾವಿಸಿದ ಟಿಕಾಯತ್ ಬಳಗ ಸಮಸ್ಯೆ ಪರಿಹರಿಸಲು ಕೆಲವು ದಿನಗಳ ಸಮಯ ನೀಡಬೇಕಾಗಿ ಕೋರಿತು. ಅದೇ ಹೊತ್ತಿನಲ್ಲಿ ಖಾಪ್ ಪಂಚಾಯತ್ ಬೃಹತ್ ಸಭೆ ನಡೆಸುವುದಾಗಿ ಘೋಷಿಸಿತು.
ದೇಶದ ಹೆಚ್ಚಿನ ಕುಸ್ತಿಪಟುಗಳನ್ನು ತಯಾರುಗೊಳಿಸುವುದು ಹರ್ಯಾಣಾ. ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹರ್ಯಾಣದ ಪ್ರತಿಯೊಬ್ಬರನ್ನೂ ಕೆರಳಿಸಿದೆ. ಅಲ್ಲಿನ ಪ್ರತಿಯೊಬ್ಬರೂ ಬಿಜೆಪಿ ಸರಕಾರ ನಡೆದುಕೊಂಡಿರುವ ರೀತಿಯ ಬಗ್ಗೆ ಆಕ್ರೋಶಿತರಾಗಿದ್ದಾರೆ, ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪರಿಸ್ಥಿತಿ ಬಿಜೆಪಿಗೆ ಪ್ರತಿಕೂಲವಾಗುವುದನ್ನು ಅರಿತೋ ಏನೋ, ನಿನ್ನೆಯಷ್ಟೇ (ಮೇ 4,) ಕುಸ್ತಿಪಟುಗಳನ್ನು ಅಮಿತ್ ಶಾ ಭೇಟಿಯಾಗಿರುವುದಾಗಿ ವರದಿಯಾಗಿದೆ.
ಸರಕಾರ ಆರೋಪಿಯನ್ನು ಯಾಕೆ ರಕ್ಷಿಸುತ್ತಿದೆ?
ಬಿಜೆಪಿ ಮತ್ತು ಮೋದಿ ಸರಕಾರ ಲೈಂಗಿಕ ಕಿರುಕುಳದ ಆರೋಪಿಯನ್ನು ಯಾಕೆ ಈ ರೀತಿ ರಕ್ಷಿಸುತ್ತಿದೆ ಎನ್ನುವುದಕ್ಕೆ ಎರಡು ಕಾರಣಗಳನ್ನು ನೀಡಲಾಗುತ್ತಿದೆ. ಮೊದಲನೆಯದಾಗಿ, ಕಳೆದ ಸುಮಾರು ಮುವ್ವತ್ತು ವರ್ಷಗಳಿಂದ ಚುನಾವಣೆಯಲ್ಲಿ ಗೆಲ್ಲುತ್ತಿರುವ ಈ ಬಿಜೆಪಿ ಸಂಸದ ತನ್ನ ಪ್ರದೇಶದ ಐದಾರು ಸಂಸದೀಯ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾನೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಇಂತಹ ಹೊತ್ತಿನಲ್ಲಿ ಆತನನ್ನು ಎದುರುಹಾಕಿಕೊಳ್ಳುವ ತಪ್ಪನ್ನು ಯಾವುದೇ ರಾಜಕೀಯ ಪಕ್ಷವೂ ಮಾಡದು.
ಎರಡನೆಯದು ಮತ್ತು ಬಹಳ ಮುಖ್ಯವಾದುದು ಲೇಖಕ ಮುಕುಲ್ ಕೇಶವನ್ ಹೇಳುವಂತೆ ಆರ್ ಎಸ್ ಎಸ್/ ಬಿಜೆಪಿಯ ಅಸ್ತಿತ್ವದ ವಿಷಯ. ಮೂಲತಃ ಈ ಸಂಘಟನೆ ಪಿತೃ ಪ್ರಧಾನ ಮತ್ತು ಸ್ತ್ರೀದ್ವೇಷಿ ಮನಸ್ಥಿತಿ ಹೊಂದಿರುವಂಥದ್ದು. ಅಲ್ಲಿ ಹೆಣ್ಣುಮಕ್ಕಳಿಗೆ ಜಾಗ ಇಲ್ಲ. ಇದ್ದರೂ ಅದು ಮೊನ್ನೆ ಹೊಸ ಸಂಸತ್ ಕಟ್ಟಡ ಉದ್ಘಾಟನೆಯ ಒಂದು ಗ್ರೂಪ್ ಫೋಟೋದಲ್ಲಿ ಪ್ರಧಾನಿಗಳು, ಪುರೋಹಿತರ ಕೊನೆಯಲ್ಲಿ ನಿರ್ಮಲಾ ಸೀತಾರಾಮನ್ ರನ್ನು ನಿಲ್ಲಿಸಲಾಗಿತ್ತಲ್ಲ, ಆ ಜಾಗ.
ಆರ್ ಎಸ್ ಎಸ್ ಸ್ವಾವಲಂಬಿ, ಸ್ವತಂತ್ರ ಆಲೋಚನೆ ಹೊಂದಿರುವ ಹೆಣ್ಣುಮಕ್ಕಳನ್ನು ಇಷ್ಟಪಡುವುದಿಲ್ಲ. ಅವರ ಸಿದ್ಧಾಂತದ ಪ್ರಕಾರ ಹೆಣ್ಣು ಶಾಂತವಾಗಿರಬೇಕು, ವಿಧೇಯಳಾಗಿರಬೇಕು. ಪ್ರತಿಭಟನೆಯನ್ನಂತೂ ಮಾಡಲೇಬಾರದು. ಈ ಗೆರೆ ಮೀರುವವರಿಗೆ ಪಾಠ ಕಲಿಸಬೇಕು ಎನ್ನುವುದು ಅವರ ನಿಲುವು. ಈ ಪಾಠ ಕಲಿಸಹೊರಟು ಈಗ ಅವರು ಕೈ ಸುಟ್ಟುಕೊಂಡಿದ್ದಾರೆ.
‘ಯತ್ರ ನಾರ್ಯಸ್ತು ಪೂಜ್ಯಂತೆ’ ಎಂದ ದೇಶದಲ್ಲಿ ಇಂದಿಗೂ, ಅಂದರೆ ಹೆಚ್ಚುಕಡಿಮೆ 21 ನೇ ಶತಮಾನದ ಕಾಲು ಭಾಗ ಕಳೆದ ಮೇಲೂ ಹೆಣ್ಣುಮಕ್ಕಳ ನಿಜ ಪರಿಸ್ಥಿತಿ ಹೇಗಿದೆ ಎಂಬುದನ್ನು ಕುಸ್ತಿಪಟುಗಳ ಪ್ರತಿಭಟನೆಯ ಈ ಪ್ರಕರಣ ತೋರಿಸಿಕೊಟ್ಟಿದೆ. ಒಂದೆಡೆಯಲ್ಲಿ, ಬದಲಾಗದ ಸಮಾಜದ ಸಂಪ್ರದಾಯಬದ್ಧ ಮನಸ್ಥಿತಿ, ಆಳುವವರ ಪುರುಷ ಪ್ರಧಾನ ಮನಸ್ಥಿತಿ, ಇನ್ನೊಂದೆಡೆ ಸಂತ್ರಸ್ತರ ನೆರವಿಗೆ ಬಾರದ ಕಾನೂನುಗಳು, ನ್ಯಾಯಾಲಯಗಳು! ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಕುಸ್ತಿಪಟುಗಳ ಕತೆಯೇ ಹೀಗಾದಾಗ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಕತೆ ಹೇಗಿರಬಹುದು? ಲೈಂಗಿಕ ಕಿರುಕುಳಗಳು ಸಾಮಾನ್ಯವೇ ಆಗಿರುವ ಸಮಾಜದಲ್ಲಿ ಎಷ್ಟು ಮಂದಿ ಸಾಮಾನ್ಯ ಹೆಣ್ಣುಮಕ್ಕಳು ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯುವುದು ಸಾಧ್ಯ?!
ಶ್ರೀನಿವಾಸ ಕಾರ್ಕಳ
ಲೇಖಕರು
ಇದನ್ನೂ ಓದಿ-ಕುಸ್ತಿಪಟುಗಳ ಮೇಲೆ ನಡೆದ ಅತ್ಯಾಚಾರ ದೇಶದ ಮೇಲಿನ ಅತ್ಯಾಚಾರವಲ್ಲವೇ?