ಬೆಂಗಳೂರು: ತಾನು ಪಕ್ಷ ತೊರೆಯಲಿದ್ದೇನೆ ಎನ್ನುವ ಊಹಾಪೋಹಗಳಿಗೆ ತೇಜಸ್ವಿನಿ ಅನಂತಕುಮಾರ್ ಸ್ಪಷ್ಟನೆ ನೀಡಿದ್ದು, ತಾನು ಪಕ್ಷದೊಡನೆ ಇದ್ದೇನೆ, ಸಿದ್ಧಾಂತದೊಡನೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ
ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಅವರು “ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ. ಇಂಗ್ಲಿಷಿನಲ್ಲಿ ಹೇಳಬಹುದಾದರೆ, ʼI am wedded to the party and ideology – no compromiseʼ” ಎಂದು ಹೇಳಿದ್ದಾರೆ.
ಪಕ್ಷದ ನಾಯಕರ ವರ್ತನೆಯ ಕುರಿತು ಬೇಸರಗೊಂಡಿರುವ ಅವರು ಜಗದೀಶ್ ಶೆಟ್ಟರ್ ಮೂಲಕ ಕಾಂಗ್ರೆಸ್ ಸೇರುತ್ತಾರೆನ್ನುವ ಗುಸುಗುಸು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ದಿವಂಗತ ಅನಂತಕುಮಾರ್ ಅವರ ಪತ್ನಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ಅವರು ತನ್ನ ಪತಿ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಲ್ಲಿ ತೇಜಸ್ವೀ ಸೂರ್ಯ ನಿಲ್ಲುವ ಮೂಲಕ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಮೊನ್ನೆಯಷ್ಟೇ ವಿ ಸೋಮಣ್ಣ ಕೂಡಾ ಇದೇ ಕ್ಷೇತ್ರದ ಟಿಕೆಟ್ ಬಯಸಿ ಟವಲ್ ಎಸೆದಿದ್ದರು.
ಹೀಗೆ ಟಿಕೆಟ್ ತಪ್ಪಿದ ದಿನದಿಂದಲೂ ತೇಜಸ್ವಿನಿ ಅನಂತಕುಮಾರ್ ಪಕ್ಷ ಬಿಡುತ್ತಾರೆ ಎನ್ನುವ ಸುದ್ದಿ ಆಗಾಗ ತೇಲಿ ಬರುತ್ತಲೇ ಇರುತ್ತದೆ.