ಮಳೆಗಾಲ ಶುರುವಾಯಿತು ದೂಧ್ ಸಾಗರ್ ಫಾಲ್ಸ್ ನೋಡೋಕೆ ಅಂತ ಹೊರಟಿದ್ದೀರ? ಹಾಗಿದ್ರೆ ಇದನ್ನ ಓದಿ. ಎಚ್ಚರಿಕೆಯಿಲ್ಲದೆ ಹಳಿಯ ಮೇಲೆ ನಡೆದುಕೊಂಡು ಹೋದರೆ ರೈಲ್ವೇ ಪೊಲೀಸರು ಬಸ್ಕಿ ಹೊಡೆಸುವುದು ಗ್ಯಾರಂಟಿ.
ವೀಕೆಂಡ್ ಮೋಜಿಗಾಗಿ ಭಾನುವಾರ ದೂಧ್ ಸಾಗರ್ ನೋಡಲು ಹೋಗಿದ್ದ ಹಲವರಿಗೆ ಇದೇ ಪರಿಸ್ಥಿತಿ ಎದುರಾಗಿದೆ.
ಗೋವಾ ಮತ್ತು ಕರ್ನಾಟಕ ಅಂತರರಾಜ್ಯ ಗಡಿಯಲ್ಲಿರುವ ಈ ಜಲಪಾತವನ್ನು ನೋಡಲು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗಬೇಕು. ಆದರೆ ಹಾಗೆ ಹಳಿಗಳ ಮೇಲೆ ನಡೆಯುವುದನ್ನು ನಿಷೇಧಿಸಲಾಗಿದೆ.
ಹೀಗೆ ಹಳಿಗಳ ಮೂಲಕ ನಡೆದು ಹೋಗಿ ಜಲಪಾತವನ್ನು ತಲುಪಲು ಬಯಸಿದ್ದ ನೂರಾರು ಜನರನ್ನು ಪೊಲೀಸರು ನಿನ್ನೆ ಹಿಂದಕ್ಕೆ ಕಳುಹಿಸಿದ್ದಾರೆ.
ಹೀಗೆ ಹಳಿ ಮೇಲೆ ನಡೆದುಕೊಂಡು ಬಂದ ಜನರಿಂದ ಪೊಲೀಸರು ಬಸ್ಕಿ ಹೊಡೆಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಳೆಯ ದೃಷ್ಟಿಯಿಂದ ಗೋವಾ ಅರಣ್ಯ ಇಲಾಖೆ ಜಲಪಾತಕ್ಕೆ ಹೋಗಲು ನಿರ್ಬಂಧಗಳನ್ನು ವಿಧಿಸಿದೆ.
ಅದರೆ ಗೋವಾ ರಾಜ್ಯದ ಕಡೆಯಿಂದ ಜನರು ಕುಲೆಮ್ ರೈಲ್ವೇ ನಿಲ್ದಾಣದಲ್ಲಿಳಿದು ಜಲಪಾತದ ಕಡೆಗೆ ಬರುತ್ತಿದ್ದಾರೆ
ಕರ್ನಾಟಕದ ಕಡೆಯಿಂದ ಬರುವವರು ಸಾಮಾನ್ಯವಾಗಿ ಜೋಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ರೈಲ್ವೆ ಹಳಿಗಳ ಉದ್ದಕ್ಕೂ ಚಾರಣ ಮಾಡುತ್ತಾರೆ. ಆದರೆ ಅದನ್ನು ನಿಷೇಧಿಸಲಾಗಿದೆ. ಈಗ ರೈಲ್ವೆ ಪೊಲೀಸರು ಮತ್ತು ಗೋವಾ ಅರಣ್ಯ ಇಲಾಖೆಯ ಸಿಬ್ಬಂದಿ ನಿರ್ಬಂಧವನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಿದ್ದಾರೆ.