ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕಡಿಮೆ ರಕ್ತದೊತ್ತಡಕ್ಕೆ (Low Blood pressure) ಸಿಲುಕಿ ಹೃದಯಾಘಾತಕ್ಕೆ ತುತ್ತಾದ ಆಘಾತಕಾರಿ ದುರಂತವೊಂದು ರಾಜ್ಯದಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಸಿರಿವಾರ ಪಟ್ಟಣದಲ್ಲಿನ ಖಾಸಗಿ ಶಾಲೆಯೊಂದರಲ್ಲಿ 14 ವರ್ಷದ ತರುಣ್ ಮೃತ ಬಾಲಕ ಎಂದು ತಿಳಿದು ಬಂದಿದೆ.
ಎಂದಿನಂತೆ ಶಾಲೆಗೆ ತೆರಳಿದ್ದಂತ ತರುಣ್, ವ್ಯಾಸಂಗ ಸಮಯದಲ್ಲಿ ಏಕಾಏಕಿ ಶಾಲೆಯಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಆತನನ್ನು ಸಿರಿವಾರ ಪಟ್ಟಣದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.
ಪ್ರಾಥಮಿಕ ಚಿಕಿತ್ಸೆಯ ಬಳಿಕ, ತೀವ್ರ ಅಸ್ವಸ್ಥಗೊಂಡಿದ್ದಂತ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಸಿರಿವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಸಲ್ಲದ ವಯಸ್ಸಿನಲ್ಲೂ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈವರೆಗೆ ವಯಸ್ಕರು, ವಯೋವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ರಕ್ತದೊತ್ತಡ, ಈಗ ಮಕ್ಕಳಲ್ಲೂ ಶುರುವಾಗಿರುವ ಬಗ್ಗೆ ಹೆಚ್ಚಿನ ಚರ್ಚೆ ಶುರುವಾಗಿದೆ.