ವಾಷಿಂಗ್ಟನ್: ಪ್ರಸ್ತುತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಎಂದಿನಂತೆ ರಾಹುಲ್ ಅಲ್ಲಿಯೂ ಸಾರ್ವಜನಿಕ ಚರ್ಚೆಗೆ ತೆರೆದುಕೊಂಡಿದ್ದಾರೆ. ಅಂತೆಯೇ ಬಿಜೆಪಿ ಹಾಗೂ ಅದರ ಮಡಿಲುಗುನ್ನಿ ಮಾಧ್ಯಮಗಳು ರಾಹುಲ್ ಅಲ್ಲಿ ಆಡಿದ ಮಾತುಗಳನ್ನು ತಮ್ಮಿಂದ ಸಾಧ್ಯವಿರುವಷ್ಟು ತಿರುಚುತ್ತಿವೆ.
ಸಂವಾದವೊಂದರಲ್ಲಿ ರಾಹುಲ್ ಗಾಂಧಿಯವರಿಗೆ ಒಬ್ಬರು ನೀವು ಮೀಸಲಾತಿಯನ್ನು ಯಾವಾಗ ಕೊನೆಗೊಳಿಸುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ “ಭಾರತದಲ್ಲಿ ಯಾವತ್ತು ಸಮಾನತೆ ಬರುತ್ತದೆ ಅಂದು ಮೀಸಲಾತಿ ತೆಗೆಯುವ ಕುರಿತು ಯೋಚಿಸುತ್ತೇವೆ” ಎಂದಿದ್ದಾರೆ.
ಇದನ್ನು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಭಾರತದಲ್ಲಿ ಸಮಾನತೆಯೆನ್ನುವುದು ಕನಸಿನ ಮಾತು, ಹಾಗೆಯೇ ಮೀಸಲಾತಿ ತೆಗೆದುಹಾಕುವುದು ಕೂಡಾ ಕನಸಿನ ಮಾತು. ದೇಶದಲ್ಲಿ ದಿನದಿಂದ ದಿನಕ್ಕೆ ಮೇಲ್ಜಾತಿಯೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಜನರು ಸೃಷ್ಟಿಸುತ್ತಿರುವ ಜಾತಿ ಶ್ರೇಷ್ಟತೆಯ ಅಮಲನ್ನು ಗಮನಿಸಿದರೆ ಈ ದೇಶದಲ್ಲಿ ಸಮಾನತೆಯೆನ್ನುವುದು ಎಂದಿಗೂ ಕನಸು ಎನ್ನುವುದು ಎಂತವರಿಗೂ ಅರ್ಥವಾಗುತ್ತದೆ.
ಆದರೆ ರಾಹುಲ್ ವಿದೇಶಕ್ಕೆ ಹೋದ ಕೂಡಲೇ ಅಲರ್ಟ್ ಆಗುವ ಬಿಜೆಪಿ ಹಾಗೂ ಅದರ ಮಡಿಲುಗುನ್ನಿ ಮಾಧ್ಯಮಗಳು ಈ ಬಾರಿಯೂ ತಮ್ಮ ಬುದ್ಧಿಯನ್ನು ತೋರಿಸಿವೆ.
ಎಂದಿನಂತೆ ಮೊದಲಿಗೆ ರಾಹುಲ್ ಹೇಳಿಕೆಯನ್ನು ತಿರುಚಿ ಸುದ್ದಿಗಳನ್ನು ಪ್ರಸಾರ ಮಾಡಲಾಯಿತು. ಅವುಗಳಲ್ಲಿ ಕಾಂಗ್ರೆಸ್ ಪಕ್ಷವೇ ಮೀಸಲಾತಿ ಕೊನೆಗೊಳಿಸಲಿದೆ, ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ ರಾಹುಲ್ ಮೊದಲಾಗಿ ಸುದ್ದಿ ತಲೆಬರಹಗಳನ್ನು ನೀಡಲಾಯಿತು.
ನಂತರ ಎನ್ಡಿಎ ಭಾಗವಾಗಿರುವ ಚಿರಾಗ್ ಪಾಸ್ವಾನ್, ಹಲವು ಬಿಜೆಪಿ ನಾಯಕರು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ರಾಹುಲ್ ಗಾಂಧಿ ಕುರಿತು ತಮ್ಮದೇ ಆದ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಆದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲದ ಕಾರಣ ಬಿಜೆಪಿಯ ಈ ತಂತ್ರ ಅಷ್ಟಾಗಿ ಫಲಿಸಿಲ್ಲ. ಈ ಕುರಿತು ಇಂಡಿಯಾ ಅಲಯನ್ಸ್ ಯಾವ ಪ್ರತಿಕ್ರಿಯೆಯನ್ನೂ ನೀಡದಿರುವುದು ಈ ಪ್ರಯತ್ನಗಳೆಲ್ಲ ಬಿಜೆಪಿಯ ಎಕೋ ಚೇಂಬರ್ ಒಳಗೆ ಪ್ರತಿಧ್ವನಿಸಿ ಮೌನವಾಗಿರುವ ಸಾಧ್ಯತೆಗಳೇ ಹೆಚ್ಚು ಕಾಣುತ್ತಿದೆ.