ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದವರು ವಾಸಿಸುತ್ತಿದ್ದಾರೆ. ಈ ಸಮುದಾಯದವರು ಮುಟ್ಟು, ಹೆರಿಗೆಯಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ದಿನಗಟ್ಟಲೆ ಮನೆಯಿಂದ ಹೊರಗಿಡುವ ಮೌಢ್ಯಾಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಅನೇಕ ಕಾಡುಗೊಲ್ಲರ ಹಟ್ಟಿಗಳಲ್ಲಿ ಈ ಮೌಢ್ಯಾಚರಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಮುದಾಯದ ವಿದ್ಯಾವಂತ ಜನರು ಕಾರ್ಯಕ್ರಮಗಳನ್ನು ಮಾಡಿ ತಿಲಾಂಜಲಿ ಇಟ್ಟಿದ್ದರು.
ಆದರೂ ರಾಜ್ಯ ರಾಜಧಾನಿ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ಸಿಗೆ ತಾಕಿಕೊಂಡಿರುವ ನಾಗದೇವನಹಳ್ಳಿಯಲ್ಲಿ ಮೌಢ್ಯ ಆಚರಣೆ ಮುಂದುವರೆಸಿರೋ ಆಘಾತಕಾರಿ ಮಾಹಿತಿಯನ್ನು ಪತ್ರದಲ್ಲಿ ಸಚಿವರಿಗೆ ಬರೆದು, ಇದನ್ನು ತೊಡೆದು ಹಾಕುವಂತೆ ಅಜ್ಞಾತ ವ್ಯಕ್ತಿಯೊಬ್ಬರು ಸಚಿವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಾಗದೇವನಹಳ್ಳಿ ನಿವಾಸಿಯೊಬ್ಬರು ಬತ್ರ ಬರೆದಿದ್ದು, ʼನಾಗದೇವನಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಕಾಡುಗೊಲ್ಲ ಸಮುದಾಯದಲ್ಲಿ ಮುಟ್ಟಾದ ಮಹಿಳೆಯರು 3 ದಿನ ಮನೆಯಿಂದ ಹೊರಗೆ ಬೇರೆ ಕಡೆಯಿರುವುದು ಮತ್ತು ಮಗುವಾದರೇ 2 ತಿಂಗಳು ಮನೆಯಿಂದ ದೂರ ಗುಡಿಸಲು, ರೂಮಿನಲ್ಲಿರುವ ಪದ್ಧತಿಯನ್ನು ಆಚರಿಸುತ್ತಾ ಬಂದಿದ್ದಾರೆʼ ಎಂದಿದ್ದಾರೆ.

ಮುಟ್ಟಾದ ಮತ್ತು ಬಾಣಂತಿಯರಾದ ಮಹಿಳೆಯರು ಮನೆಯೊಳಗಿದ್ದರೆ ಅನಿಷ್ಟ, ಸೂತಕ ಎಂಬುದು ಅವರ ನಂಬಿಕೆಯಾಗಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ನಡೆಯುತ್ತಿದೆ. ಈ ಊರಿನ ಮುಖಂಡರು, ಈ ಅನಿಷ್ಟ ಪದ್ದತಿಯ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಪದ್ದತಿಯಿಂದಾಗಿ ಇಲ್ಲಿರುವ ಹೆಣ್ಣುಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾನ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಕ್ತ ಕ್ರಮಕ್ಕೆ ಸೂಚಿಸಬೇಕು. ಅಧಿಕಾರಿಗಳು ಆಗಮಿಸಿ ಇಲ್ಲಿರುವ ಗಂಡಸರಿಗೆ ಈ ಮೌಢ್ಯಾಚರಣೆಯನ್ನು ನಿಲ್ಲಿಸುವಂತೆ ತಿಳುವಳಿಕೆ ಹೇಳಿ, ಹೆಣ್ಣಮಕ್ಕಳಿಗೆ ನೆಮ್ಮದಿಯ ಜೀವನ ನಡೆಸಲು ಸಹಾಯ ಮಾಡುವಂತೆ ವಿನಂತಿಸಿದ್ದಾರೆ.
ನಾಗದೇವನಹಳ್ಳಿಯ ಕೆಲವೆಡೆ ಈ ಮಹಿಳೆಯರು ಮುಟ್ಟಾದ ಮೂರು ದಿನ ಸರಿಯಾಗಿ ಗಾಳಿ ಪಸರಿಸದ ಇಕ್ಕಟ್ಟಿನ ಮನೆ ಮೆಟ್ಟಿಲಿನಡಿಯ ಕೋಣೆಗಳಲ್ಲಿ ವಾಸಿಸಬೇಕಾಗುತ್ತದೆ. ಹೆರಿಗೆಯ ಸಂದರ್ಭದಲ್ಲಿ ಇನ್ನೂ ಹೆಚ್ಚು ಕಾಲ ವಾಸಿಸ ಬೇಕಾಗುತ್ತದೆ.
ಇದನ್ನೂ ನೋಡಿ: https://www.facebook.com/peepaltvkannada/videos/550523213108774