Home ರಾಜ್ಯ ಮೈಸೂರು ಮೂರು ತಿಂಗಳಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ: ಯತ್ನಾಳ್ ಭವಿಷ್ಯ

ಮೂರು ತಿಂಗಳಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ: ಯತ್ನಾಳ್ ಭವಿಷ್ಯ

0

ಮೈಸೂರು, ಸೆ.12: ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಿನ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ವಿಸರ್ಜನೆ ಮತ್ತು ಇತರ ಸಂದರ್ಭಗಳಲ್ಲಿ ಮಸೀದಿಗಳಿಂದ ಕಲ್ಲು ತೂರಾಟ, ಹಲವೆಡೆ ಪಾಕಿಸ್ತಾನದ ಧ್ವಜಾರೋಹಣ, ಪಾಕ್ ಪರ ಘೋಷಣೆಗಳು ಸೇರಿದಂತೆ ಅನೇಕ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಿಂದೂ ವಿರೋಧಿ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ 2028ರ ಮೊದಲೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದ ವಿರುದ್ಧ ಪ್ರತಿಭಟನೆಗಳು ನಡೆದಾಗ, ಬಿಜೆಪಿ ನಾಯಕರ ಎದುರು ಕಾರ್ಯಕರ್ತರು ಯತ್ನಾಳ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದ್ದರು. ಅದರಂತೆ ನಾನು ಅಲ್ಲಿಗೆ ಹೋಗಿದ್ದೆ. ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಭ್ರಷ್ಟ ಸರ್ಕಾರ ತೊಲಗಬೇಕು, ಹೊಂದಾಣಿಕೆಯ ರಾಜಕಾರಣ ಕೊನೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

“ಅಕ್ರಮ ಮಸೀದಿಗಳನ್ನು ನೆಲಸಮಗೊಳಿಸಿ”

ಗಣೇಶ ವಿಸರ್ಜನಾ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲು ಆಶ್ರಯ ನೀಡಿರುವ ಅಕ್ರಮ ಮಸೀದಿಗಳನ್ನು ನೆಲಸಮಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಯತ್ನಾಳ್ ತಿಳಿಸಿದರು. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಇದೇ ಧೋರಣೆ ಮುಂದುವರೆದರೆ, ರಾಜ್ಯದಲ್ಲಿ ನೇಪಾಳದ ಮಾದರಿಯಲ್ಲಿ ಕ್ರಾಂತಿಯಾಗುತ್ತದೆ. ರಾಜ್ಯದಲ್ಲಿ ಮಸೀದಿಗಳನ್ನು ಪರಿಶೀಲನೆಗೊಳಪಡಿಸಬೇಕು. ಕಲ್ಲು ತೂರಾಟಕ್ಕೆ ಮುಂಚಿತವಾಗಿಯೇ ಮಸೀದಿಗಳಲ್ಲಿ ಕಲ್ಲುಗಳನ್ನು ಸಂಗ್ರಹಿಸಲಾಗಿದೆ. ಇದಕ್ಕೆ ಅವಕಾಶ ನೀಡಿದ ಬಗ್ಗೆ ತನಿಖೆಯಾಗಿ, ಮಸೀದಿಗಳನ್ನು ತಪಾಸಣೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

“ಹಿಂದೂ ವಿರೋಧಿ ಸರ್ಕಾರ”

ಕಾಂಗ್ರೆಸ್ ಸರ್ಕಾರ ತಮಗೆ ಮುಸ್ಲಿಮರು ಮಾತ್ರ ಮತ ಹಾಕಿದ್ದಾರೆ ಎಂಬಂತೆ ವರ್ತಿಸುತ್ತಿದೆ. ಇದು ಹಿಂದೂ ವಿರೋಧಿ ನಿಲುವುಗಳನ್ನು ಪಾಲಿಸುತ್ತಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ಸಿದ್ದರಾಮಯ್ಯ ಅವರಿಗೆ ಚಾಮುಂಡಿ ದೇವಿಯ ಶಾಪ ತಟ್ಟಲಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ

“ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಾವಿರಾರು ಕೋಟಿ ಲೂಟಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿಗಮಗಳ ಹಣವನ್ನು ದೋಚಲಾಗಿದೆ. ಭ್ರಷ್ಟ ಸರ್ಕಾರದ ಜೊತೆ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧವೂ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳಿವೆ. ಹೀಗಾಗಿ ಭ್ರಷ್ಟರೆಲ್ಲಾ ಸೇರಿ ಲೂಟಿ ಹೊಡೆಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ನಮ್ಮ ತಂಡದ ಸರ್ಕಾರ ರಚನೆಯಾಗಲಿದೆ. ಭ್ರಷ್ಟಾಚಾರ ರಹಿತವಾದ ಸರ್ಕಾರ ನೀಡುತ್ತೇವೆ. ಹಿಂದುತ್ವದ ರಕ್ಷಣೆ ಮತ್ತು ಅಭಿವೃದ್ಧಿ ಪರ ಆಡಳಿತ ನಡೆಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಉಚ್ಛಾಟನೆಯ ಹಿಂದಿನ ಕಥೆ

“ಪೂಜ್ಯ ತಂದೆ ಮತ್ತು ಮಗ (ಯಡಿಯೂರಪ್ಪ ಮತ್ತು ವಿಜಯೇಂದ್ರ) ಹೊರತುಪಡಿಸಿ ಉಳಿದ ಎಲ್ಲಾ ಬಿಜೆಪಿ ನಾಯಕರೂ ನನ್ನ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ ಅವರು ಅಮಿತ್ ಶಾ ಅವರ ಮುಂದೆ ಕುಳಿತು, ‘ಯತ್ನಾಳರನ್ನು ಉಚ್ಛಾಟನೆ ಮಾಡದೇ ಇದ್ದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆ’ ಎಂದು ಬ್ಲಾಕ್‌ಮೇಲ್ ಮಾಡಿದ್ದರು. ಅದಕ್ಕಾಗಿ ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಈ ಕ್ರಮ ತೆಗೆದುಕೊಂಡಿದ್ದು ತಪ್ಪಾಗಿದೆ ಎಂದು ಖುದ್ದು ಅಮಿತ್ ಶಾ ಅವರೇ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ,” ಎಂದು ಅವರು ಹೇಳಿದರು.

“ಪ್ರಧಾನ ಮಂತ್ರಿಯವರು ಭ್ರಷ್ಟಾಚಾರ ರಹಿತ ಮತ್ತು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಈ ಎರಡೂ ಇವೆ. ಮುಂದಿನ ದಿನಗಳಲ್ಲಿ ಇದು ಸರಿ ಹೋಗದೇ ಇದ್ದರೆ 2028ರ ವೇಳೆಗೆ ಹೊಸ ಪಕ್ಷ ಸ್ಥಾಪಿಸಿ, ಚುನಾವಣೆ ಎದುರಿಸುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ” ಎಂದು ಯತ್ನಾಳ್ ತಿಳಿಸಿದರು.

You cannot copy content of this page

Exit mobile version