ಬೆಂಗಳೂರು : ಪೌರಕಾರ್ಮಿಕರಿಗಾಗಿ ಬಿಬಿಎಂಪಿಯಿಂದ ಒಟ್ಟು ರೂ.730 ಕೋಟಿ ಹಣ ನಾವು ಮೀಸಲಿಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿಯ ಬಿಬಿಎಂಪಿ ಬಜೆಟ್ ಅಲ್ಲಿ ಪೌರಕಾರ್ಮಿಕರ ವೇತನ ಪಾವತಿಗೆ ರೂ.500 ಕೋಟಿ ಘೋಷಣೆ ಮಾಡಲಾಗಿದೆ. ರೂ. 107 ಕೋಟಿ ಹಣವನ್ನು ಪಿಂಚಣಿಗೆ ಮೀಸಲಿಡಲಾಗಿದೆ. ಮೃತಪಟ್ಟವರ ಹೆಸರಿನಲ್ಲಿ ರೂ.10 ಲಕ್ಷ ಹಣ ಮೀಸಲಿಟ್ಟು ರೂ. 6 ಸಾವಿರ ಪಿಂಚಣಿ ನೀಡುವ ಯೋಜನೆ ತರಲಾಗಿದೆ.ಶೂ, ಕೈಗವಸು ಸೇರಿದಂತೆ ಇತರೇ ಸಲಕರಣೆಗಳ ವಿತರಣೆಗೆ ರೂ.5 ಕೋಟಿ, ಸಮವಸ್ತ್ರಕ್ಕೆ ರೂ.6 ಕೋಟಿ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ ರೂ. 6 ಕೋಟಿ, ಆರೋಗ್ಯಕ್ಕೆ ರೂ.4 ಕೋಟಿ, ಒಂಟಿ ಮನೆಗೆ ಪ್ರತ್ಯೇಕವಾಗಿ ರೂ.30 ಕೋಟಿ, ಕೌಶಲ್ಯ ಅಭಿವೃದ್ದಿಗೆ ರೂ.5 ಕೋಟಿ, ಟ್ಯಾಕ್ಸಿ, ಆಟೋ ಚಾಲಕರಿಗೆ ರೂ. 10 ಕೋಟಿ ಒಟ್ಟು ನಿಮ್ಮ ಕಲ್ಯಾಣಕ್ಕೆ ರೂ. 64 ಕೋಟಿ ಮೀಸಲಿಡಲಾಗಿದೆ ಎಂದರು.
ಪೌರಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್ ಸರ್ಕಾರದ ಸಂಕಲ್ಪ. ಪೌರಕಾರ್ಮಿಕರು ನಮ್ಮ ಹಾಗೂ ದೇಶದ ಶಕ್ತಿ, ಕಾಂಗ್ರೆಸ್ ಸರ್ಕಾರ ನಿಮ್ಮ ಶಕ್ತಿ ಎಂಬುದನ್ನು ಮರೆಯಬಾರದು. ನಿಮ್ಮ ಕೆಲಸ ಖಾಯಂ ಆದ ತಕ್ಷಣ ನಿಮಗೆ ಬರುವ ಸಂಬಳ 50 ಸಾವಿರ ಮುಟ್ಟುತ್ತದೆ ಎಂದ ಡಿಕೆಶಿ ಭರವಸೆ ನೀಡಿದರು.2013 ರ ಸರ್ಕಾರದ ಅವಧಿಯಲ್ಲಿ ನಿಮ್ಮ ಪರವಾಗಿ ಅನೇಕ ಕೆಲಸಗಳನ್ನು ಮಾಡಿದ್ದೇವೆ. 1 ಸಾವಿರ ಪೌರ ಕಾರ್ಮಿಕರನ್ನು ವಿದೇಶಿ ಪ್ರವಾಸಕ್ಕೆ ಕಳಿಸಿಕೊಡಲಾಗಿತ್ತು. 2017ರಲ್ಲಿ 10 ಸಾವಿರ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. 7.50 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು ಎಂದು ಇದೇ ವೇಳೆ ಡಿಸಿಎಂ ಉಲ್ಲೇಖಿಸಿದರು.