ಪಾಟ್ನಾ: ವಿಧಾನಸಭಾ (Vidhana Sabha) ಚುನಾವಣೆ ಫಲಿತಾಂಶ ಎನ್ಡಿಎಗೆ (NDA) “ಅದ್ಭುತ ಜನಾದೇಶ”ವನ್ನು ದೃಢಪಡಿಸಿದೆ. ಈ ಮೂಲಕ ನಿತೀಶ್ ಕುಮಾರ್ (Nitish Kumar) ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ಖಚಿತಪಡಿಸಿದೆ ಎಂದು ಕೇಂದ್ರ ಸಚಿವ ಮತ್ತು ಹೆಚ್ಎಎಂ(ಎಸ್) ಪಕ್ಷದ ಸಂಸ್ಥಾಪಕ ಜಿತನ್ ರಾಮ್ ಮಾಂಝಿ (Jitan Ram Manjhi) ಹೇಳಿದರು.
ಬಿಹಾರದ ಗಯಾದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮಾಂಝಿ, ಎನ್ಡಿಎ 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆರಂಭದಿಂದಲೂ ವಿಶ್ವಾಸ ವ್ಯಕ್ತಪಡಿಸಿದ್ದೆ. ನಿತೀಶ್ ಕುಮಾರ್ ಮತ್ತೊಮ್ಮೆ ನಮ್ಮ ಮುಖ್ಯಮಂತ್ರಿಯಾಗಲಿದ್ದಾರೆ. ಬಿಹಾರದ ಜನರು ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಟ್ರೆಂಡ್ಗಳು ತೋರಿಸುತ್ತಿವೆ. ನಿತೀಶ್ ಕುಮಾರ್ ಮುಂದಿನ ಐದು ವರ್ಷಗಳ ಕಾಲ ಬಿಹಾರವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದರು.
“ಮಹಾಘಟಬಂಧನ್ 70-80 ಸ್ಥಾನಗಳಿಗೆ ಸೀಮಿತವಾಗಿರುತ್ತಾರೆ. ನಿತೀಶ್ ಕುಮಾರ್ ಹೈ ಬನೇಂಗೆ ಮುಖ್ಯಮಂತ್ರಿ” ಎಂದು ಮಾಂಝಿ ಸಂತಸ ವ್ಯಕ್ತಪಡಿಸಿದರು. ನಾವು ನಿತೀಶ್ ಕುಮಾರ್ ಅವರನ್ನು ಅಭಿನಂದಿಸುತ್ತೇವೆ. ಬಿಹಾರದ ಜನರು ನಿತೀಶ್ ಕುಮಾರ್ ಅವರನ್ನು ವಿಜಯಶಾಲಿಗಳನ್ನಾಗಿ ಮಾಡಿದ್ದಾರೆ. ನಾವು ಇಲ್ಲಿ ಹೋಳಿ, ದೀಪಾವಳಿ ಆಚರಿಸುತ್ತೇವೆ ಎಂದು ಹೇಳಿದರು.
ಈ ನಡುವೆ ಹಿರಿಯ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಅವರು, ಎನ್ಡಿಎ ಮುನ್ನಡೆಯನ್ನು ಬಿಹಾರದ ಅಭಿವೃದ್ಧಿಗೆ ಸಂದ ಗೆಲುವು ಎಂದು ಬಣ್ಣಿಸಿದ್ದಾರೆ. ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಹಾರದ ಜನರು ಎನ್ಡಿಎ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಬಾರಿ ಎಲ್ಲಾ ಎನ್ಡಿಎ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದ್ದರಿಂದ 2010 ಕ್ಕಿಂತ ಈ ಚುನಾವಣೆ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ ಎಂದು ತ್ಯಾಗಿ ತಿಳಿಸಿದರು.
