ಲೋಕಸಭಾ ಚುನಾವಣೆ ಕಾವೇರುತ್ತಿರುವಂತೆ ಪರಸ್ಪರ ಕೆಸರು ಎರಚಾಟವೂ ಮುಗಿಲು ಮುಟ್ಟಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳೂ ಹೆಚ್ಚಾಗಿವೆ.
ಇಷ್ಟು ದಿನ ಪಕ್ಷ ಪಕ್ಷಗಳ ನಡುವೆ, ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುತ್ತಿದ್ದ ಕೆಸರೆರಚಾಟ ಈಗ ರಾಜ್ಯ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿಗೂ ವ್ಯಾಪಿಸಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಕರ್ನಾಟಕ ಹಾಗೂ ಬ್ರಾಂಡ್ ಬೆಂಗಳೂರನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ.
ಬ್ರಾಂಡ್ ಬೆಂಗಳೂರು ಎನ್ನುವುದನ್ನು ಬಾಂಬ್ ಬೆಂಗಳೂರು ಎಂದೂ, ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿಯೆಂದೂ ಕರೆಯುವ ಮೂಲಕ ಬಿಜೆಪಿ ಹಾಗೂ ಮೋದಿ ಬೆಂಗಳೂರಿನ ಜನಪ್ರಿಯತೆಗೆ ಮಸಿ ಬಳಿಯುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ನೀರಿನ ಕೊರತೆಯನ್ನು ವಿಪರೀತ ಮಟ್ಟಕ್ಕೆ ಕೊಂಡೊಯ್ದು ಬಿಜೆಪಿ ನಗರದ ಖ್ಯಾತಿಗೆ ಮಸಿ ಬಳಿಯುತ್ತಿದೆ.
ಒಂದನೇ ಹಂತದ ಚುನಾವಣೆಯಲ್ಲಿ ಹೀನಾಯ ಸೋಲಿನ ಸುದ್ದಿ ಬಿಜೆಪಿ ಕಚೇರಿಯನ್ನು ತಲುಪುತ್ತಿದ್ದ ಹಾಗೆ ಮೋದಿ ತನ್ನ ಹಳೆಯ ಕೋಮುವಾದಿ ಅಸ್ತ್ರವನ್ನು ಹೊರತೆಗೆದಿದ್ದಾರೆ. ನಿನ್ನೆ ಮುಸ್ಲಿಮರ ವಿರುದ್ಧ ಮಾತನಾಡುತ್ತಾ ಕಾಂಗ್ರೆಸ್ ಹಿಂದೂಗಳ ಆಸ್ತಿಯನ್ನೆಲ್ಲ ಮುಸ್ಲಿಮರಿಗೆ ಕೊಡುತ್ತಾರೆ ಎಂದಿರುವುದು ಅವರನ್ನು ಕಾಡುತ್ತಿರುವ ಸೋಲಿನ ಹತಾಶೆಯ ಪ್ರತೀಕದಂತಿದೆ.
ಇಂದು ಪತ್ರಿಕೆಗೆಳ ಮುಖಪುಟಗಳಲ್ಲಿ ಕರ್ನಾಟಕವನ್ನು ಕ್ರೈಮ್, ನಕ್ಸಲಿಸಂ, ಮತ್ತು ಭಯೋತ್ಪಾದನೆಯ ಹಬ್ ಎನ್ನುವಂತೆ ಬಿಂಬಿಸಿ ಜಾಹೀರಾತು ನೀಡಿರುವ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದ ಇಮೇಜನ್ನು ಹಾಳು ಮಾಡುತ್ತಿದೆ.
ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡೂ ಗೆಲ್ಲಲಾಗದೆ ಪರದಾಡುತ್ತಿರುವ ಬಿಜೆಪಿಗೆ ಹುಬ್ಬಳ್ಳಿಯ ಕೊಲೆಯೊಂದು ಅಸ್ತ್ರದಂತೆ ಸಿಕ್ಕಿದ್ದು ಅದನ್ನು ತನಗೆ ಬೇಕಾದಂತೆಲ್ಲಸಾಧ್ಯವಿರುವಷ್ಟೂ ಬಳಸಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಅದು ಟಿಕ್ ಸ್ಟಾರ್, ಬಿಗ್ ಬಾಸ್ ವಿನ್ನರುಗಳನ್ನೂ ಬಳಸಿಕೊಳ್ಳುತ್ತಿದೆ.
ಒಟ್ಟಾರೆಯಾಗಿ ಕರ್ನಾಟಕದ ಪ್ರಜ್ಞಾವಂತ ಮತದಾರರು ಈ ಬಿಜೆಪಿಯವರ ಮೇಲಾಟಗಳಿಗೆ ಬುದ್ಧಿ ಕಲಿಸಲೆ ಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ.
– ಹಯವದನ ರಾವ್ ಕಾಸರಗೋಡು