ಬೆಂಗಳೂರು: ʼಸ್ಫೂರ್ತಿಧಾಮʼವನ್ನು ನಿರ್ವಹಿಸುತ್ತಿರುವ ʼಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ʼ ಆಯೋಜಿಸಿರುವ ʼಅಂಬೇಡ್ಕರ್ ಹಬ್ಬʼ, ʼ ಭೋಧಿವೃಕ್ಷʼ ಮತ್ತು ʼಭೋಧಿವರ್ಧನʼ ಪ್ರಶಸ್ತಿಗಾಗಿ ಸಾಧಕರನ್ನು ಗುರುತಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು, ಹೆಸರು ಶಿಫಾರಸು ಮಾಡಲು ಇಂದು ( ಮಾರ್ಚ್ 31,2023) ಕೊನೆಯ ದಿನವಾಗಿದೆ.
ಹಲವಾರು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ʼಅಂಬೇಡ್ಕರ್ ಹಬ್ಬʼವನ್ನಾಗಿ ಆಚರಿಸಿಕೊಂಡು ಬರುತ್ತಿರುವಂತಹ ʼಸ್ಪೂರ್ತಿಧಾಮʼ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುತ್ತಾ, ಗೌರವಿಸುವಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮುಂಬರುವ ಎಪ್ರಿಲ್ 14, 2023 ರಂದು ಒಂದು ʼಭೋಧಿವೃಕ್ಷ ಮತ್ತು ಐದು ʼಭೋಧಿವರ್ಧನʼ ಪ್ರಶಸ್ತಿಗಳನ್ನು ನೀಡಲಿದೆ.
ಹಲವಾರು ಕಾರ್ಯಗಳಿಗೆ ನಮ್ಮಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಸರ್ಕಾರಿ ಮತ್ತು ಅರೆಸರ್ಕಾರಿ ಹಾಗೂ ಪ್ರತಿಷ್ಠಿತ ಅಕಾಡೆಮಿಗಳು, ಸಂಘ-ಸಂಸ್ಥೆಗಳು ಕೊಡುವ ಅನೇಕ ಪ್ರಶಸ್ತಿಗಳಿವೆ. ಆದರೆ ʼಸ್ಫೂರ್ತಿಧಾಮʼ ಮತ್ತು ʼಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ʼ ಆರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಬದುಕನ್ನು ಗುಣಾತ್ಮಕವಾಗಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಗೌರವಿಸುವ ಹಿನ್ನಲೆಯಲ್ಲಿ ಈ ಪ್ರಶಸ್ತಿಗಳು ಮಹತ್ವದ್ದಾಗಿವೆ.
ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿಯುತ್ತಿರುವವರನ್ನು ಸಮಾಜದಲ್ಲಿ ಗುರುತಿಸುವ ಮತ್ತು ಗೌರವಿಸುವ ಸುವರ್ಣ ಅವಕಾಶವನ್ನು ನಿಮಗೆ ನೀಡಿದೆ. ಪ್ರಶಸ್ತಿಗಳಿಗೆ ಅರ್ಹರೆಂದು ತೋರುವ ವ್ಯಕ್ತಿಗಳು ನಿಮಗೆ ತಿಳಿದಿದ್ದರೆ ಅವರ ಬಗ್ಗೆ ಈ ಕೆಳಗೆ ನೀಡಿರುವ ಇ ಮೇಲ್ ಅಥವಾ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.
E-mail : spoorthidhama1992@gmail.com
Ph: +91 9108830438 | +91 9108830437