Home ವಿದೇಶ ಮೋಸದಿಂದ ಸ್ಥಳೀಯರ ಭೂಮಿ ವಶ: ನಿತ್ಯಾನಂದನ ಕೈಲಾಸದ 20 ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ

ಮೋಸದಿಂದ ಸ್ಥಳೀಯರ ಭೂಮಿ ವಶ: ನಿತ್ಯಾನಂದನ ಕೈಲಾಸದ 20 ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ

0

ಮಂಗಳವಾರ ಬೊಲಿವಿಯಾ,  ಸ್ಥಳೀಯ ಸಮುದಾಯಕ್ಕೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಆರೋಪದ ಮೇಲೆ ಆದ್ಯಾತ್ಮಗುರು ನಿತ್ಯಾನಂದ ಸ್ಥಾಪಿಸಿದ ಕಾಲ್ಪನಿಕ ದೇಶವಾದ ಕೈಲಾಸದ 20 ಸದಸ್ಯರನ್ನು ಗಡೀಪಾರು ಮಾಡಿದೆ ಎಂದು ಹೇಳಿದೆ.

“ಈ ಗುಂಪಿಗೆ ಸೇರಿದ ಜನರ ಕಡ್ಡಾಯ ನಿರ್ಗಮನವನ್ನು ಜಾರಿಗೆ ತರಲಾಗಿದೆ. ಅವರು ಇನ್ನು ಮುಂದೆ ನಮ್ಮ ರಾಷ್ಟ್ರದ ಪ್ರದೇಶದಲ್ಲಿರುವುದು ಸಾಧ್ಯವಿಲ್ಲ,” ಎಂದು ಬೊಲಿವಿಯಾದ ವಲಸೆ ನಿರ್ದೇಶಕಿ ಕ್ಯಾಥರೀನ್ ಕಾಲ್ಡೆರಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಅತ್ಯಾಚಾರ ಆರೋಪ ಹೊತ್ತಿರುವ ನಿತ್ಯಾನಂದ, ಈಕ್ವೆಡಾರ್ ಕರಾವಳಿಯಲ್ಲಿ ಒಂದು ದ್ವೀಪ ಎಂದು ಹೇಳಲಾದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ.

“ಈ ಪಂಥವು ನಮ್ಮ ದೇಶಕ್ಕೆ ಬಂದು, ನಮ್ಮ ಸ್ಥಳೀಯ ಜನಸಂಖ್ಯೆಯ ಉತ್ತಮ ನಂಬಿಕೆಯನ್ನು ಮತ್ತು ಅವರ ಹಕ್ಕುಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದೆ, ಅವರ ಸ್ಥಳೀಯರ ಭೂಮಿಯನ್ನು ಬಳಸಿಕೊಳ್ಳಲು ಮೋಸ ಮಾಡಲು ಪ್ರಯತ್ನಿಸುತ್ತಿದೆ,” ಎಂದು ಕ್ಯಾಲ್ಡೆರಾನ್ ಹೇಳಿದ್ದಾರೆ.

ಬೊಲಿವಿಯನ್ ಪತ್ರಿಕೆ ಎಲ್ ಡೆಬರ್ ಮಾರ್ಚ್ 16 ರಂದು ನಡೆಸಿದ ತನಿಖಾ ವರದಿಯ ಪ್ರಕಾರ, ಬೌರೆ, ಕಯುಬಾಬಾ ಮತ್ತು ಎಸ್ಸೆ ಎಜ್ಜಾ ಎಂಬ ಮೂರು ಸ್ಥಳೀಯ ಪಂಗಡಗಳು ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಸುಮಾರು 4.8 ಲಕ್ಷ ಹೆಕ್ಟೇರ್ ಸಾರ್ವಜನಿಕ ಭೂಮಿಗೆ ಕೈಲಾಸದೊಂದಿಗೆ ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಬಹಿರಂಗಪಡಿಸಿದ ನಂತರ ಈ ಗಡೀಪಾರು ಮಾಡಲಾಗಿದೆ.

ಒಪ್ಪಂದಗಳ ಪ್ರಕಾರ, “ಸಾವಿರ ವರ್ಷಗಳ ಕಾಲ” ಭೂಮಿಯ ಬಳಕೆಗೆ ಪ್ರತಿಯಾಗಿ ವಾರ್ಷಿಕ ಬಾಡಿಗೆಯನ್ನು ನೀಡಲು ತೀರ್ಮಾನವಾಗಿತ್ತು.

ಆರೋಪಗಳು ಬೆಳಕಿಗೆ ಬಂದ ನಂತರ, ಮತ್ತೊಂದು ಸುದ್ದಿವಾಹಿನಿ ಲಾ ರಿಪಬ್ಲಿಕಾ, ಬೊಲಿವಿಯಾದ ವಿದೇಶಾಂಗ ಸಚಿವಾಲಯವು ಕೈಲಾಸಕ್ಕೆ ಅಂತರರಾಷ್ಟ್ರೀಯ ಮನ್ನಣೆ ಇಲ್ಲ ಎಂದು ಹೇಳಿದ್ದನ್ನು ಉಲ್ಲೇಖಿಸಿತು.

ಸ್ಥಳೀಯ ಸಮುದಾಯಗಳು ತಮ್ಮ ಭೂಮಿಯನ್ನು ನಿರ್ವಹಿಸಬಹುದಾದರೂ, ಇತರ ದೇಶಗಳೊಂದಿಗಿನ ಸಂಬಂಧಗಳು ರಾಷ್ಟ್ರೀಯ ಸರ್ಕಾರದ ವಿಶೇಷ ಜವಾಬ್ದಾರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

“ಈ ರೀತಿಯ ಗುಪ್ತ ಒಪ್ಪಂದಗಳನ್ನು ಸರ್ಕಾರ ಎಂದಿಗೂ ಅನುಮೋದಿಸಿಲ್ಲ, ಅಥವಾ ಎಂದಿಗೂ ಅನುಮೋದಿಸುವುದಿಲ್ಲ,” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಭೂ ಸಚಿವ ಯಾಮಿಲ್ ಫ್ಲೋರ್ಸ್ ಹೇಳಿದ್ದನ್ನು ಲಾ ರಿಪಬ್ಲಿಕಾ ಉಲ್ಲೇಖಿಸಿದೆ.

ಸ್ಥಳೀಯ ನಾಯಕರು ಮತ್ತು ಕಾಲ್ಪನಿಕ ದೇಶದ ಪ್ರತಿನಿಧಿಗಳ ನಡುವೆ ಸಹಿ ಹಾಕಿದ ಒಪ್ಪಂದಗಳನ್ನು ಪರಿಶೀಲಿಸಲು ತನಿಖೆ ನಡೆಸಲಾಗುತ್ತಿದೆ, ಈ ಅಪರಾಧಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫ್ಲೋರ್ಸ್ ಹೇಳಿದರು.

ಮಂಗಳವಾರ, ಹೊರಹಾಕಲ್ಪಟ್ಟವರಲ್ಲಿ ಮೂವರನ್ನು ಎಕ್ಸಾಲ್ಟಾಸಿಯನ್ ಪುರಸಭೆಯಲ್ಲಿ ಪತ್ತೆ ಹಚ್ಚಿ, ಗಡೀಪಾರು ಮಾಡಲು ಸಾಂತಾ ಕ್ರೂಜ್‌ನಲ್ಲಿರುವ ವಿರು ವಿರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ ಎಂದು ಕಾಲ್ಡೆರಾನ್ ಹೇಳಿದರು.

ಉಳಿದ 17 ಜನರನ್ನು ಸಾಂತಾ ಕ್ರೂಜ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, ಅವರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ತಿಳಿಸಲಾಗಿದೆ ಎಂದು ಅವರು ಹೇಳಿದರು.

“ಎರಡೂ ನಗರಗಳಲ್ಲಿನ ವಿವಿಧ ಕಾರ್ಯಾಚರಣೆಗಳಲ್ಲಿ ಕಂಡುಬಂದ ಈ ಜನರು ಈಗ ನಮ್ಮ ಪ್ರದೇಶದಲ್ಲಿ ಇಲ್ಲ. ಅವರಿಗೆ ಕೊನೆಯ ಕಡ್ಡಾಯ ನಿರ್ಗಮನ ಆದೇಶಗಳನ್ನು ನೀಡಲಾಗಿದೆ, ಇದು ಅವರು ಬೊಲಿವಿಯಾಕ್ಕೆ ಮತ್ತೆ ಬರುವುದನ್ನು ತಡೆಯುತ್ತದೆ,” ಎಂದು ಕ್ಯಾಲ್ಡೆರಾನ್ ಹೇಳಿದರು.

ಅತ್ಯಾಚಾರ ಮತ್ತು ಮಕ್ಕಳನ್ನು ತನ್ನ ಆಶ್ರಮದಲ್ಲಿ ಅಕ್ರಮವಾಗಿ ಬಂಧಿಸಿಟ್ಟ ಆರೋಪದ ನಂತರ ನಿತ್ಯಾನಂದ ಭಾರತದಿಂದ ಪಲಾಯನ ಮಾಡಿದ್ದ. 2019 ರಲ್ಲಿ ಭಾರತವು ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತ್ತು ಮತ್ತು ಹೊಸದಕ್ಕಾಗಿ ಅವನು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ಮಕ್ಕಳನ್ನು ಅಪಹರಿಸಿ ತನ್ನ ಆಶ್ರಮಕ್ಕೆ ಹಣ ಸಂಗ್ರಹಿಸಲು ಬಳಸಿಕೊಂಡ ಆರೋಪ ಅವನ ಮೇಲಿದೆ.

ಡಿಸೆಂಬರ್ 2023 ರಲ್ಲಿ, ಪರಾಗ್ವೆಯ ಅಧಿಕಾರಿಯೊಬ್ಬರು ಕೈಲಾಸ ಜೊತೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದಾರೆಂದು ತಿಳಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು .

ಪರಾಗ್ವೆಯ ಕೃಷಿ ಸಚಿವಾಲಯದ ಮುಖ್ಯಸ್ಥ ಅರ್ನಾಲ್ಡೊ ಚಮೊರೊ ಅವರು ವರದಿಗಾರರೊಂದಿಗೆ ಮಾತನಾಡುತ್ತಾ, ದಕ್ಷಿಣ ಅಮೆರಿಕಾದ ದ್ವೀಪದಲ್ಲಿರುವ ಕೈಲಾಸ ದೇಶ ಎಂದು ಹೇಳಿಕೊಂಡ ಅಮೆರಿಕದ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳಿಂದ ಅವರು ಮೋಸ ಹೋಗಿದ್ದಾರೆ ಎಂದು ಹೇಳಿದರು.

ಜನವರಿ 2023 ರಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ನ್ಯೂವಾರ್ಕ್ (Newark ) ನಗರವನ್ನು ಸಹ ಕಾಲ್ಪನಿಕ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಮೋಸ ಮಾಡಲಾಗಿದೆ.

You cannot copy content of this page

Exit mobile version