ಕೊಡಗು : ಕೊಡಗಿನ ಲೈನ್ ಮನೆ ವಾಸಿಗಳು ನಿವೇಶನ ಹಕ್ಕು ಪತ್ರಕ್ಕಾಗಿ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಗೊಂಡು ಸುಮಾರು ದಿನಗಳೇ ಆಗಿವೆ. ಪ್ರತಿಭಟನೆ ಶುರುವಾಗಿ ಇವತ್ತಿಗೆ 37 ದಿನಗಳು ಕಳೆದಿವೆ. ಮಾಯಾಮುಡಿ ಗ್ರಾಮ ಪಂಚಾಯಿತಿಯಲ್ಲಿ ಶುರುವಾದ ಈ ಸತ್ಯಾಗ್ರಹ ತಾಲ್ಲೂಕು ಪಂಚಾಯಿತಿಗಳಲ್ಲೂ ಶುರುವಾಗಿ ಮುಂದುವರೆಯುತ್ತಿದೆ.
ಅಷ್ಟು ದಿನಗಳಿಂದ ಅಲ್ಲಿನ ಯಾವೊಬ್ಬ ಶಾಸಕರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನೆನ್ನೆಯ ದಿನ ದಿನಾಂಕ : 05-09-2022 ರಂದು ಅಲ್ಲಿನ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಶಾಸಕರಾದ ಕೆ.ಜಿ ಬೋಪಯ್ಯ ರವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಕುರಿತು ಬುಡಕಟ್ಟು ಕಾರ್ಮಿಕರೊಂದಿಗೆ ಮಾತನಾಡಿದ ಅವರು. ನಿಮ್ಮ ಈ ಹೋರಾಟ ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ತಡವಾಗುತ್ತೆ. ನಮಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 2 ತಿಂಗಳ ಕಾಲಾವಕಾಶ ಬೇಕಾಗಿದೆ. ಈಗ ಸದ್ಯಕ್ಕೆ ಪ್ರತಿಭಟನೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಹೀಗಾಗಿ ಲೈನ್ ಮನೆ ವಾಸಿಗಳು ಸರ್ಕಾರದ ಮೇಲೆ ಇಟ್ಟಿದ್ದ ಕೊಂಚ ಭರವಸೆಯನ್ನೂ ಹುಸಿಯಾಗುವಂತೆ ಮಾಡಿದ್ದಾರೆ.
ಇಷ್ಟಾದರೂ ಹೋರಾಟ ನಿಲ್ಲಿಸದೆ ಡಿಸಿ ಕಚೇರಿಯ ಮುಂದೆಯೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಅಲ್ಲಿನ ಬುಡಕಟ್ಟು ಕಾರ್ಮಿಕರು ʼನಾವು ಇಲ್ಲಿನ ಮೂಲ ನಿವಾಸಿಗಳು ನಮಗೆ ನೀಡಿದ ಹಕ್ಕು ಪಡೆದುಕೊಳ್ಳುವುದಕ್ಕೊಸ್ಕರ ಹೋರಾಟ ಮಾಡುತ್ತಿದ್ದೇವೆʼ. ಒಂದು ಸ್ವಂತ ನೆಲೆಗೋಸ್ಕರ ಬೇಡಿಕೆ ಇಟ್ಟಿದ್ದರೂ ಅಲ್ಲಿನ ಶಾಸಕರು ನಮಗೆ ಇದುವರೆಗೂ ಯಾವೊಂದು ರೀತಿಯ ಮಾಹಿತಿಯೂ ಬಂದಿಲ್ಲ ನೀವು ಈ ಪ್ರತಿಭಟನೆ ಮಾಡಿ ಏನೂ ಪ್ರಯೋಜನವಿಲ್ಲ ಎಂಬಂತೆ ಹೇಳುತ್ತಿದ್ದಾರೆ. ಆದರೆ ಈಗಾಗಲೇ ತಾವಿದ್ದ ಲೈನ್ ಮನೆಗಳನ್ನು ಬಿಟ್ಟು ಬಂದುಬಿಟ್ಟಿದ್ದೇವೆ. ಬೀದಿಗಿಳಿದು ಹೋರಾಟಕ್ಕೆ ನಿಂತು ಬೀದಿ ಪಾಲಾಗಿದ್ದೇವೆ. ನಾವು ಈಗ ಎಲ್ಲಿಗೆ ಹೋಗುವುದು? ಎಂದು ಅಲ್ಲಿನ ಪ್ರತಿಭಟನಾಕಾರರು ಪೀಪಲ್ ಮೀಡಿಯಾದೊಂದಿಗೆ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.