ಅಸ್ಸಾಮಿನ ಸಾಮಾಜಿಕ ಸುಧಾರಕಿ, ಲೇಖಕಿ, ಶಿಕ್ಷಕಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಚಂದ್ರಪ್ರಭಾ ಸೈಕಿಯಾನಿಯವರು 1926 ರಲ್ಲಿ ಅಖಿಲ ಅಸ್ಸಾಂ ಪ್ರಾದೇಶಿಕ ಮಹಿಳಾ ಸಮಿತಿಯನ್ನು ಸ್ಥಾಪಿಸಿದರು. ಈಕೆ ಮಹಿಳಾ ಮತ್ತು ಬಾಲಕಿಯರ ಶಿಕ್ಷಣದ ಉತ್ಸಾಹಿ ಬೆಂಬಲಿಗರಾಗಿದ್ದರು. 1918 ರಲ್ಲಿ, ಅಸ್ಸಾಮ್/ಆಕ್ಸೋಮ್ ಛಾತ್ರ (ಅಸ್ಸಾಂ ವಿದ್ಯಾರ್ಥಿಗಳು) ಸನ್ಮಿಲನ ಎನ್ನುವ ಕಾರ್ಯಕ್ರಮದಲ್ಲಿ, ಅಫೀಮು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ್ದರು ಮತ್ತು ಅದನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಈಕೆ ಜಾತಿ ತಾರತಮ್ಯದ ವಿರುದ್ಧವಾಗಿದ್ದರು ಮತ್ತು ಶ್ರೀಮಂತ ಶಂಕರದೇವರ (15-16 ನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ) ಬೋಧನೆಗಳ ಮೂಲಕ ಜಾತಿ ತಾರತಮ್ಯವನ್ನು ವಿರೋಧಿಸುತ್ತಿದ್ದರು.
ಚಂದ್ರಪ್ರಭಾ ಸೈಕಿಯಾನಿ ಅವರು ಧಾರ್ಮಿಕ ಸ್ಥಳಗಳು ಮತ್ತು ಆಚರಣೆಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಆಗ್ರಹಿಸಿದರು. ಈಕೆ ಅಸಹಕಾರ ಚಳವಳಿಯ ಭಾಗಿವಹಿಸಿದ್ದರು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿ ತೊಡಗಿದ್ದರು. ಅಸ್ಸಾಂ ರಾಜ್ಯದಲ್ಲಿ ಎರಡನೇಯ ಪ್ರಭಾವಿ ಮಹಿಳಾ ಕಾದಂಬರಿಗಾರ್ತಿ ಎಂಬ ಹೆಗ್ಗಳಿಕೆ ಈಕೆಯದ್ದು. ತಮ್ಮ ಕಾದಂಬರಿ ಪ್ರಿರಿವಿತಾದಲ್ಲಿ ತಮ್ಮ ಸ್ವಂತ ಜೀವನವನ್ನು ವಿವರಿಸುವ ಮೂಲಕ ಅಸ್ಸಾಮಿ ಸಮಾಜದ ಮಹಿಳೆಯರ ಸ್ಥಾನವನ್ನು ಜನರ ಗಮನಕ್ಕೆ ತಂದರು. ಈಕೆ, ಏಳು ವರ್ಷಗಳ ಕಾಲ, ಅಭಿಜೈತ್ರಿ ಎನ್ನುವ (ಅಖಿಲ ಅಸ್ಸಾಂ ಪ್ರಾದೇಶಿಕ ಮಹಿಳಾ ಸಮಿತಿಯ ಮುಖವಾಣಿ) ಪತ್ರಿಕೆಯ ಸಂಪಾದಕರಾಗಿದ್ದರು. ಚಂದ್ರಪ್ರಭಾರವರಿಗೆ 1972 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈಕೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅನೇಕ ಯುವಕರನ್ನು ಪ್ರೇರೇಪಿಸಿದರು.