ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಆಚರಣೆಯ ಇಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ತಮ್ಮ ತಲೆಗೆ ರಾಷ್ಟ್ರೀಯ ಧ್ವಜದ ಮಾದರಿಯ ಬಿಳಿ ಪೇಟವನ್ನು ಧರಿಸಿದ್ದರು. ಧ್ವಜಾರೋಹಣದ ನಂತರ ಭಾರತದ 75 ನೇ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರಿಗೆ ಮತ್ತು ಭಾರತವನ್ನು ಪ್ರೀತಿಸುವವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಮ್ಮ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿ ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಪರಕೀಯರ ಎದುರಿಸದ ಒಂದು ವರ್ಷವೂ ಇರಲಿಲ್ಲ. ಇಂದು ನಾವು ಅವರಿಗೆ ಗೌರವ ಸಲ್ಲಿಸುವಾಗ, ಭಾರತಕ್ಕಾಗಿ ಅವರು ಇಟ್ಟಿದ್ದ ದೂರದೃಷ್ಟಿ ಮತ್ತು ಅವರ ಕನಸುಗಳನ್ನು ನಾವು ನೆನಪಿಸಿಕೊಳ್ಳಬೇಕಾದದು ನಮ್ಮ ಕರ್ತವ್ಯ” ಎಂದು ಮಾತನಾಡಿದರು.
ಇದರ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಅವಿತರವಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್, ಸಾವರ್ಕರ್, ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಶ್ಯಾಮ ಪ್ರಸಾದ್ ಮುಖರ್ಜಿ, ಜಯಪ್ರಕಾಶ್ ನಾರಾಯಣ್, ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಸೇರಿದಂತೆ ಬ್ರಿಟಿಷರ ಆಳ್ವಿಕೆಯ ಬುನಾದಿ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ದೇಶ ಕೃತಜ್ಞತೆ ಸಲ್ಲಿಸುತ್ತದೆ” ಎಂದು ಮಾತನಾಡಿದ್ದಾರೆ.
ಹಾಗೆಯೇ ಎಂದಿನ ತಮ್ಮ ಶೈಲಿಯಲ್ಲಿ ಮಾತನ್ನು ಮುಂದುವರೆಸಿದ ಪ್ರಧಾನಿ “ಸ್ವಾತಂತ್ರ್ಯ ನಂತರದ ಈ 75 ವರ್ಷಗಳ ಪಯಣದಲ್ಲಿ, ಅನೇಕ ಭರವಸೆ, ಆಕಾಂಕ್ಷೆಗಳ ಏರಿಳಿತಗಳ ನಡುವೆ ನಾವು ಎಲ್ಲರ ಪ್ರಯತ್ನದಿಂದ ನಾವು ಇಲ್ಲಿಗೆ ತಲುಪಿದ್ದೇವೆ. 2014 ರಿಂದ ನಾಗರಿಕರು ನನಗೆ ಜವಾಬ್ದಾರಿಯನ್ನು ನೀಡಿದರು – ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿ ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶವನ್ನು ಪಡೆದಿದ್ದೇನೆ. ನಾವೆಲ್ಲರೂ ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಬಂದಿದೆ” ಎಂದು ಮಾತನಾಡಿದ್ದಾರೆ.