ಮೈಸೂರು: ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ನಗರದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ವಿವಿಧ ಜಿಲ್ಲೆಗಳಿಂದ ಆಗಮನಿಸಿದ ಕ್ರೀಡಾಪಟುಗಳಿಗೆ ವಸತಿ ವಿಚಾರದಲ್ಲಿ ಅವಮಾನವಾಗಿದೆ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.
ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಸಿದ ಕುಸ್ತಿ ಪಟುಗಳು ಸೆಪ್ಟೆಂಬರ್ 29 ಗುರುವಾರದಂದು ನಡೆಯಬೇಕಿದ್ದ ಕುಸ್ತಿ ಪಂದ್ಯಾವಳಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೈಸೂರಿಗೆ ಬಂದಿಳಿದ ನಂತರ ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶರ ಕಚೇರಿಗೆ ಭೇಟಿ ನೀಡಿದ ಕ್ರೀಡಾಪಟುಗಳು ವಸತಿ ವ್ಯವಸ್ಥೆ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿಗಳು ಮಾಹಿತಿ ನೀಡಲು ತಾತ್ಸಾರ ನಡೆಸಿದ್ದಾರೆ. ಈ ಕಾರಣ ರಾತ್ರಿ ಎಂಟು ಗಂಟೆಗಳ ಕಾಲ ವಸತಿ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು ಮೈದಾನದ ಕ್ರೀಡಾ ಕಚೇರಿ ಮುಂದೆ ಕುಳಿತುಕೊಂಡಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ದಸರಾ ಅನುದಾನದಲ್ಲೂ 40% ಕಮಿಷನ್ ಕರಾಮತ್ತು ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ! ಬಿಜೆಪಿ ಎಂಬ ಗಾಂಪರ ಗುಂಪಿನ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ಎಡವಟ್ಟುಗಳು, ವೈಫಲ್ಯಗಳು ಸಿಗುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ದೂರಿದೆ.
ದಸರಾ ಕವಿಗೋಷ್ಠಿಯ ಎಡವಟ್ಟಿನ ನಂತರ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ ಮಾಡಲಾಗಿದ್ದು, ಕನಿಷ್ಠ ವಸತಿ ನೀಡಲೂ ಯೋಗ್ಯತೆ ಇಲ್ಲವೇ ಈ ಸರ್ಕಾರಕ್ಕೆ? ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.