Home ರಾಜ್ಯ ಹಾಸನ ವಿದ್ಯಾವಂತರು ಮಧ್ಯೆ ಇರುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು – ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ...

ವಿದ್ಯಾವಂತರು ಮಧ್ಯೆ ಇರುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು – ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ

ಹಾಸನ: ವಿದ್ಯಾವಂತರು, ಶಿಕ್ಷಿತರ ಮಧ್ಯೆ ಇರುವ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಅವಕಾಶ ನಿಮಗೆ ಇದೆ ಎಂದು ಶಿಕ್ಷಣ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.


ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜನಮಿತ್ರ ಆಯೋಜಿಸಿರುವ ಎರಡು ದಿನಗಳ ಎಕ್ಸ್ಪೋಗೆ ಇಂದು ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.
ನಾನು ಯಾವುದೇ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ನನಗೆ ಅಕ್ಷರಜ್ಞಾನ ಇಲ್ಲ, 1972 ರ ದಶಕದಿಂದಲೂ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಕಿತ್ತಲೆಹಣ್ಣು ಮಾರುತ್ತಿರುವ ನನಗೆ ಅದೊಂದು ದಿನ ಇಂಗ್ಲಿಷ್ ಗೊತ್ತಿಲ್ಲದೆ ಆದ ಮುಜುಗರದಿಂದ ಶಾಲೆ ತೆರೆದು ನನ್ನೂರಿನ ಮಕ್ಕಳಿಗೆ ಅಕ್ಷರ ಕಲಿಸಬೇಕೆಂಬ ಸಂಕಲ್ಪ ಮಾಡಿದೆ. ನನ್ನ ಪ್ರಯತ್ನ, ಹಾಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ತಂದೆ ಮೊದಲಾದವರ ಸಹಕಾರದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ನಂತರ ಇದೀಗ ಕಾಲೇಜು ಶಿಕ್ಷಣ ಆರಂಭಿಸಬೇಕೆಂಬ ಆಸೆ ಇದೆ. ಈಗಿನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಇದ್ದು, ಸಾಧನೆ ಮಾಡಲು ಒಳ್ಳೆಯ ಅವಕಾಶವಿದ್ದು, ಅದನ್ನು ಮಾಡಿ ತೋರಿಸಿ ಎಂದು ಕಿವಿ ಮಾತು ಹೇಳಿದರು. ನಾನು ಎಂದೂ ಕುವೆಂಪು ವಿಶ್ವ ವಿದ್ಯಾನಿಲಯ ನೋಡಿಲ್ಲ, ಆದರೆ ವಿವಿ ಪಠ್ಯಗಳಲ್ಲಿ ನನ್ನ ವಿಚಾರ ಅಳವಡಿಸಿರುವುದು ನನಗೆ ಅತೀವ ಸಂತೋಷ ತಂದಿದೆ. ಸಮಾಜದಿಂದ ಪಡೆದಿರುವ ನಾನು ಪ್ರತಿಯಾಗಿ ಏನನ್ನು ಕೊಟ್ಟಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಬಡತನವನ್ನೂ ಮೀರಿಸಿ ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ.


ಏನೂ ಇಲ್ಲದ ನನ್ನಂಥ ಮನುಷ್ಯನಿಗೆ ಎಲ್ಲ ಮಾಧ್ಯಮಗಳು ಸಹಾಯ, ಸಹಕಾರ ನೀಡಿವೆ. ಉತ್ತಮ ವೇದಿಕೆ ಕಲ್ಪಿಸಿವೆ, ರಾಜ್ಯ,ಕೇಂದ್ರ ಸರ್ಕಾರಗಳೂ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ನೀಡಿರುವುದು ನಾನು ಮರೆಯಲಾಗದ ಕ್ಷಣ ಎಂದರು. 63 ವರ್ಷದ ಜನಮಿತ್ರ ಪತ್ರಿ ಇನ್ನೂ ಎತ್ತರಕ್ಕೆ ಬೆಳೆಯಲು ನನ್ನನ್ನು ಇಲ್ಲಿಗೆ ಆಹ್ವಾನಿಸಿ ಸುಂದರ ವೇದಿಕೆ ಕಲ್ಪಿಸಿದ್ದಕ್ಕೆ ಎಲ್ಲರಿಗೂ ನಾನು ಅಭಾರಿ ಎಂದರು.


ಸಂಸದ ಶ್ರೇಯಸ್ ಪಟೇಲ್ ಎಂ. ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮ, ಇಂಥ ಎಕ್ಸ್ಪೋಗಳನ್ನು ಬೆಂಗಳೂರು, ಮೈಸೂರು ಕಡೆ ನೋಡುತ್ತಿದ್ದೆವು. ಇದೀಗ ನಮ್ಮ ಹಾಸನದಲ್ಲೇ ಆಗಿರುವುದು ಹೆಮ್ಮೆಯ ವಿಚಾರ. ಇದನ್ನು ಆಯೋಜನೆ ಮಾಡಿರುವ ಜನಮಿತ್ರ ಬಳಗಕ್ಕೆ ಧನ್ಯವಾದ ಹೇಳಿದರು. ಬೇರೆ ಬೇರೆ ಕಡೆಗಳಿಂದಲೂ ಶಿಕ್ಷಣ ಸಂಸ್ಥೆಗಳು ಬಂದಿವೆ. ಇದರಿಂದ ಓದುವ ಮಕ್ಕಳಿಗೆ ಅನುಕೂಲ ಆಗಲಿದೆ. ಜನಮಿತ್ರ ಸುದ್ದಿ ಜೊತೆಗೆ ಸಮಾಜ ಸೇವೆಯನ್ನೂ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹಾಸನ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಂಪಾದಕ ಹೆಚ್.ಬಿ. ಮದನಗೌಡ, ನಮ್ಮ ಪ್ರಥಮ ಪ್ರಯತ್ನಕ್ಕೆ ಸಹಕಾರ ನೀಡಿದ ಸುಮಾರು 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಧನ್ಯವಾದ ಹೇಳಿದರು. ಕೃ.ನಾ.ಮೂರ್ತಿ ಅವರು ಹುಟ್ಟುಹಾಕಿದ ಪತ್ರಿಕೆಯನ್ನು 15 ವರ್ಷದಿಂದ ನಾನು ಮುನ್ನಡೆಸುತ್ತಿದ್ದು, ನವೀನ್ ಅವರು ನನ್ನ ಜೊತೆಯಾದ ನಂತರ ಹೊಸತನ, ಹೊಸ ಪ್ರಯತ್ನ ಸಾಧ್ಯವಾಗಿದೆ. ಮುಂದೆಯೂ ಪತ್ರಿಕೆ ಹೆಸರಿನಲ್ಲಿ ವಿಭಿನ್ನ ಕಾರ್ಯಕ್ರಮ ಮಾಡುವ ಆಲೋಚನೆ ಇದೆ ಎಂದರು.
ಹಾಸನ ಅನುದಾನರಹಿತ ಶಾಲೆಗಳ ಆಡಳಿತ ಸಂಘದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ಮಾತನಾಡಿ, ಮದನಗೌಡರು, ನವೀನ್ ಅವರು ಇವತ್ತು ಹಾಸನಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಇದು ನಿಲ್ಲೋದು ಬೇಡ, ಎಲ್ಲರೂ ಜೊತೆಯಾಗಿ ನಿಂತು ಮುಂದೆ ಇನ್ನೂ ಚೆನ್ನಾಗಿ ಮಾಡೋಣ, ಈ ಆಲೋಚನೆ ನಿಜಕ್ಕೂ ಉತ್ತಮ ಎಂದು ಪ್ರಶಂಸಿಸಿದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿ, ಜನಮಿತ್ರ ಪ್ರಾದೇಶಿಕ ಪತ್ರಿಕೆ ಮೊದಲ ಬಾರಿಗೆ ಆಯೋಜಿಸಿರುವ ಎಜುಕೇಶನ್ ಎಕ್ಸ್ ಪೋ ಯಶಸ್ವಿಯಾಗಲಿ, ಇದಕ್ಕಾಗಿ ಶ್ರಮಿಸಿರುವ ಮದನಗೌಡರು, ನವೀನ್ ಅವರಿಗೆ ಅಭಿನಂದನೆ ಹೇಳಿದರು.

ಎಲ್ಲರೂ ಸಾಧನೆ ಮಾಡಲು ಸಾಧ್ಯ ಆಗುವುದಿಲ್ಲ. ಮದನಗೌಡರು ಮುಂದೆ ನಿಂತು ಕೆಲಸ ಮಾಡಿದರೆ, ನವೀನ ಅವರು ಹಿಂದೆ ನಿಂತು ಸಾಕಷ್ಟು ಶ್ರಮ ಹಾಕಿದ್ದಾರೆ. ಕೇಂದ್ರ ಮಟ್ಟದ ಜಾಹೀರಾತು ಪಡೆಯುವ ಹಂತಕ್ಕೆ ಜನಮಿತ್ರ ಬೆಳೆದಿದೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯಲಿ ಎಂದು ಆಶಿಸಿದರು. ಇಂಥ ವಿಶೇಷ ಎಕ್ಸ್ಪೋ ಮದನಗೌಡರು, ನವೀನ್ ಅವರಂಥವರಿAದ ಮಾತ್ರ ಸಾಧ್ಯ ಎಂದ ಅವರು ಮುಂದೆ ಹೆಚ್ಚು ಹೆಚ್ಚು ನಡೆಯಲಿ ಎಂದರು. ಮದನಗೌಡರು ಪತ್ರಿಕೋದ್ಯಮ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 13 ರಾಷ್ಟçಗಳ ಏಷ್ಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಆರೇಳು ಭಾಷೆ ಬಲ್ಲವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.


ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ, ಇದು ನಿಜಕ್ಕೂ ವಿಭಿನ್ನ ಆಲೋಚನೆ, ಮುಂದೆಯೂ ನಡೆದು ಎಲ್ಲರೂ ಲಾಭ ಪಡೆಯುವಂತಾಗಲಿ ಎಂದು ಆಶಿಸಿದರು.
ಈ ವೇಳೆ ವಿದ್ಯಾಸೌಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಂಜೇಗೌಡ, ಜನಮಿತ್ರ ವ್ಯವಸ್ಥಾಪಕ ಸಂಪಾದಕ ಸಿ.ಆರ್.ನವೀನ್, ವಿಜಯಶಾಲೆ ಮುಖ್ಯಸ್ಥರಾದ ತಾರಾ ಸ್ವಾಮಿ, ಚೇತನ್‌ರಾಮ್ ಮೊದಲಾದವರಿದ್ದರು.

You cannot copy content of this page

Exit mobile version