ಕೋಲಾರ: ಇಲ್ಲಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದ ಸರಕಾರಿ ಶಾಲೆಯು ಶಿಥಿಲಗೊಂಡಿದ್ದು, ಶಾಲಾ ಮಕ್ಕಳು ಹೊಸ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಕಣ್ಣೀರಿಟ್ಟಿರುವ ಹಿನ್ನಲೆಯಲ್ಲಿ, ಕೂಡಲೇ ಹೊಸದೊಂದು ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ʼಪಂಚರತ್ನ ರಥಯಾತ್ರೆ ವೇಳೆ ಎದುರಾದ ಈ ಘಟನೆಯಿಂದ ನನಗೆ ಬಹಳ ನೋವಾಗಿದೆ. ಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಬಂಗವಾದಿ ಗ್ರಾಮದ ಸರಕಾರಿ ಶಾಲೆ ಮಕ್ಕಳು ಶಾಲಾ ಕಟ್ಟಡಕ್ಕಾಗಿ ಕಣ್ಣೀರಿಟ್ಟರು, ರಸ್ತೆಯಲ್ಲಿ ಅಡ್ಡಗಟ್ಟಿದರು. ನಂತರ ಹಠ ಬಿಡದೇ ನನ್ನನ್ನು ಆ ಶಿಥಿಲವಾಗಿರುವ ಶಾಲೆಗೆ ಕರೆದುಕೊಂಡು ಹೋಗಿ, ಅಲ್ಲಿನ ದುಸ್ಥಿತಿಯ ದರ್ಶನ ಮಾಡಿಸಿದರು. ಕಳೆದ ಎರಡುಮೂರು ವರ್ಷಗಳಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರುʼ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕಾರಣ ಸ್ಥಳದಿಂದಲೇ ದೂರವಾಣಿಯಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರನ್ನು ಸಂಪರ್ಕಿಸಿದ ಕುಮಾರಸ್ವಾಮಿಯವರು, ಶಾಲಾ ಕಟ್ಟಡದ ಸಮಸ್ಯೆಕುರಿತು ಮಾತನಾಡಿದೆ. ಇದಕ್ಕೆ ಸ್ಪಂದಿಸಿದ, ಬಿ.ಸಿ. ನಾಗೇಶ್ ಅವರು ಆದಷ್ಟು ಬೇಗ ಬಂಗವಾದಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.
ಅಲ್ಲದೆ, ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರೆ ಮಾಡಿ, ಕೂಡಲೇ ಬಂಗವಾದಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕಾಗಿ ಸೂಚನೆ ನೀಡಿದ್ದೇನೆ ಎಂದಿದ್ದಾರೆ.