Home ರಾಜ್ಯ ಬೆಳಗಾವಿ ಕನ್ನಡಿಗರ ಹಿತ ಬಲಿಗೊಟ್ಟು ಕೇರಳದವರಿಗೆ ಮನೆ: ದೆಹಲಿ ಹೈಕಮಾಂಡ್ ಒತ್ತಡಕ್ಕೆ ಸಿಎಂ, ಡಿಸಿಎಂ ಶರಣು –...

ಕನ್ನಡಿಗರ ಹಿತ ಬಲಿಗೊಟ್ಟು ಕೇರಳದವರಿಗೆ ಮನೆ: ದೆಹಲಿ ಹೈಕಮಾಂಡ್ ಒತ್ತಡಕ್ಕೆ ಸಿಎಂ, ಡಿಸಿಎಂ ಶರಣು – ಬಿ.ವೈ. ವಿಜಯೇಂದ್ರ ಆರೋಪ

0

ಕನ್ನಡಿಗರಿಗೆ ಸೇರಬೇಕಾದ ಮನೆಗಳನ್ನು ಕೇರಳದಿಂದ ಬಂದಿರುವ ಅಕ್ರಮ ವಲಸಿಗರಿಗೆ ಹಂಚಲು ಸರ್ಕಾರ ಮುಂದಾಗಿದೆ, ಇದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿ ವೈ ವಿಜಯೇಂದ್ರ ಎಚ್ಚರಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವು ಕಾರ್ಯಾಚರಣೆಯ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೆರವು ಕಾರ್ಯಾಚರಣೆಯನ್ನು ಖಂಡಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ತಮ್ಮ ನಿಲುವನ್ನು ಬದಲಿಸಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು. “ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ತಮ್ಮ ಅಧಿಕಾರ ಮತ್ತು ಕುರ್ಚಿಯನ್ನು ಉಳಿಸಿಕೊಳ್ಳಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸೇರಿ ಕನ್ನಡಿಗರ ಹಿತಾಸಕ್ತಿಯನ್ನು ಬಲಿಗೊಡುತ್ತಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನೆರೆರಾಜ್ಯದ ನೈಸರ್ಗಿಕ ವಿಕೋಪಗಳಿಗೆ ಪರಿಹಾರ ನೀಡುವ ಮುಖ್ಯಮಂತ್ರಿಗಳು, ರಾಜ್ಯದ ಪ್ರವಾಹ ಪೀಡಿತರ ಪುನರ್ವಸತಿಯಲ್ಲಿ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.

ಜನೆವರಿ 5 ರಂದು ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದ ವಿಜಯೇಂದ್ರ, ಅಕ್ರಮ ವಲಸಿಗರಿಗೆ ಮನೆ ನೀಡುವ ಸರ್ಕಾರದ ಪ್ರಯತ್ನದ ಜೊತೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ ಮಾಫಿಯಾ ಮತ್ತು ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 5,000 ಕೋಟಿ ರೂಪಾಯಿಗಳ ಅನುದಾನದ ಬಗ್ಗೆಯೂ ಹೋರಾಟ ರೂಪಿಸುವುದಾಗಿ ಹೇಳಿದರು. ಈ ಹಗರಣದ ವಿರುದ್ಧ ಬಿಜೆಪಿ ಕಟ್ಟುನಿಟ್ಟಾದ ನಿಲುವು ತಳೆಯಲಿದೆ ಎಂದು ಅವರು ಪುನರುಚ್ಚರಿಸಿದರು.


You cannot copy content of this page

Exit mobile version