Home ಬೆಂಗಳೂರು ಬೆಂಗಳೂರು ಪೊಲೀಸ್ ಕಮೀಷನರ್‌ ಬಿ ದಯಾನಂದ್‌ ಅಮಾನತು: ಸರ್ಕಾರದ ವಿರುದ್ಧ ಹೆಚ್ಚುತ್ತಿದೆ ಆಕ್ರೋಶ

ಬೆಂಗಳೂರು ಪೊಲೀಸ್ ಕಮೀಷನರ್‌ ಬಿ ದಯಾನಂದ್‌ ಅಮಾನತು: ಸರ್ಕಾರದ ವಿರುದ್ಧ ಹೆಚ್ಚುತ್ತಿದೆ ಆಕ್ರೋಶ

0

ಬೆಂಗಳೂರು: RCB ತಂಡದ ವಿಕ್ಟರಿ ಪರೇಡ್‌ ಸಮಯದಲ್ಲಿ ಆದ ಕಾಲ್ತುಳಿಕ್ಕೆ ಸಂಬಂಧಿಸಿದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ ದಯಾನಂದ್‌ ಅವರ ಅಮಾನತು ಕೂಡಾ ಸೇರಿದೆ.

ಆದರ ಸರ್ಕಾರದ ಈ ಕ್ರಮ ಈಗ ಜನ ವಿರೋಧದ ಬಿಸಿಯನ್ನು ಎದುರಿಸುತ್ತಿದೆ. ಕನ್ನಡಿಗೆ ಅಧಿಕಾರಿಯಾದ ಬಿ ದಯಾನಂದ್‌ ಅವರು ಕಳೆದ ಎರಡು ವರ್ಷಗಳಿಂದ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದರು, ಅವರ ವಿರುದ್ಧ ಅಂತಹ ಆರೋಪಗಳೂ ಇರಲಿಲ್ಲ. ಇದೀಗ ಹನ್ನೊಂದು ಜನರ ಸಾವಿನ ವಿಷಯದಲ್ಲಿ ಸರ್ಕಾರದ ಇರುವ ವಿರುದ್ಧ ಜನರ ಸಿಟ್ಟನ್ನು ತಣಿಸುವ ಸಲುವಾಗಿ ಕಮೀಷನರ್‌ ಅವರನ್ನೂ ಸರ್ಕಾರ ಮನೆಗೆ ಕಳುಹಿಸಿದೆ. ಆದರೆ ಈ ಕ್ರಮ ಮೆಚ್ಚುಗೆ ಗಳಿಸುವ ಬದಲು ಇನ್ನಷ್ಟು ಆಕ್ರೋಶ ಕೆರಳಿಸಲು ಕಾರಣವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಖಾತೆದಾರರು ಹಲವು ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅವುಗಳಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸುವ ಪೋಸ್ಟುಗಳು ಇಲ್ಲದಿರುವುದು ಗಮನಾರ್ಹ.

ಸಾಧಾರಣವಾಗಿ IPS ಹಾಗೂ IAS ಅಧಿಕಾರಿ ವರ್ಗದಲ್ಲಿ ಉತ್ತರ ಭಾರತೀಯರೇ ಹೆಚ್ಚಿರುತ್ತಾರೆ. ಮತ್ತು ಇವರು ಸ್ಥಳೀಯ ರಾಜಕಾರಣಿಗಳಿಗೆ ಸೊಪ್ಪು ಹಾಕುವುದು ಕಡಿಮೆ. ಹೀಗಿರುವಾಗ ಕನ್ನಡಿಗ ಅಧಿಕಾರಿಯಾದ ಬಿ ದಯಾನಂದ ಅವರ ವಿರುದ್ಧ ಇಷ್ಟು ಕಠಿಣ ಕ್ರಮದ ಅಗತ್ಯವೇನಿತ್ತು? ಉತ್ತರ ಭಾರತದ ಅಧಿಕಾರಿಗಳ ವಿರುದ್ಧ ಸರ್ಕಾರ ಇಷ್ಟು ಮುಕ್ತವಾಗಿ ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಂಡು ಬರುತ್ತಿವೆ.

ಈ ಕುರಿತು ಪೋಸ್ಟ್‌ ಮಾಡಿರುವ ಪ್ರತಾಪ್‌ ಕಣಗಾಲ್‌ ಎನ್ನುವ X ಬಳಕೆದಾರ “ಬೆಂಗಳೂರು ಪೊಲೀಸ್ ಕಮಿಶನರ್ B ದಯಾನಂದ್ ಅವರೇನಾದ್ರೂ ಕನ್ನಡದವರಲ್ಲದೆ ಉತ್ತರ ಭಾರತದ IPS ಅಧಿಕಾರಿ ಆಗಿದ್ರೆ ಈ

ಸಿದ್ಧರಾಮಯ್ಯನವರ ಸರ್ಕಾರ ಅವರನ್ನ ಸಸ್ಪೆಂಡ್ ಮಾಡ್ತಿತ್ತ? ರಾಜಕಾರಣಿಗಳ ತಪ್ಪಿಗೆ ಅವ್ರನ್ನ ಬಲಿಪಶು ಮಾಡಿದ್ದಾರೆ, ಅವರ ಬೆನ್ನು ಹಿಂದೆ ನಿಲ್ಲೋಕೆ ಅವರಿಗೆ ಯಾವ ಲಾಭಿ ಇಲ್ಲಾ, IT ಸೆಲ್ ಇಲ್ಲ ಅದಕ್ಕೆ ಅವರಿಗೆ ಸಸ್ಪೆಂಡ್ ಭಾಗ್ಯ” ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಖ್ಯಾತ ವ್ಯಂಗ್ಯ ಚಿತ್ರಕಾರರಾದ ಸತೀಶ ಆಚಾರ್ಯ ಅವರೂ ಈ ಕುರಿತು ಪ್ರತಿಕ್ರಿಯಿಸಿದ್ದು “ದಯಾನಂದ್‌ ಸರ್‌ ಓರ್ವ ಪ್ರಾಮಾಣಿಕ ಮತ್ತು ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ ಅಧಿಕಾರಿ. ಅವರ ವಿರುದ್ಧ ಸರ್ಕಾರ ಕೈಗೊಂಡಿರುವ ನಿರ್ಧಾರ ನಿರಾಶೆ ಮೂಡಿಸಿದೆ” ಎಂದು ಹೇಳಿದ್ದಾರೆ.

“ಭಾರತದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿ ಮಾಡುವ ಈ ರಾಜಕೀಯ ಸಂಸ್ಕೃತಿ ಕೊನೆಗೊಳ್ಳಬೇಕು. ಈ ದೇಶದಲ್ಲಿ ರಾಜಕೀಯ ಜವಾಬ್ದಾರಿ ಸತ್ತಂತಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಐಪಿಎಸ್ ಒಬ್ಬ ಪ್ರಾಮಾಣಿಕ, ದಯಾಪರ ಮತ್ತು ಸಮರ್ಥ ಅಧಿಕಾರಿ. ಅವರನ್ನು ಅಮಾನತುಗೊಳಿಸುವುದಾದರೆ, ಅವರಿಗೆ ಆದೇಶಗಳನ್ನು ನೀಡುವ ಅಧಿಕಾರದ ಸ್ಥಾನದಲ್ಲಿರುವ ರಾಜಕಾರಣಿಗಳೂ ರಾಜೀನಾಮೆ ನೀಡಬೇಕು” ಎಂದು ಇನ್‌ ಸೈಟ್‌ ಎನ್ನುವ IAS ತರಬೇತಿ ಕೇಂದ್ರದ ಸ್ಥಾಪಕ ಹಾಗೂ ರಾಜಕಾರಣಿ ವಿನಯ್‌ ಕುಮಾರ್‌ ಜಿಬಿ ಹೇಳಿದ್ದಾರೆ.

ಇನ್ನು ಕನ್ನಡಪರ ಹೋರಾಟಗಾರ ಅರುಣ್‌ ಜಾವಗಲ್‌ ಕೂಡಾ ಈ ಕುರಿತು ಹೇಳಿಕೆ ನೀಡಿದ್ದು, “ಸಸ್ಪೆಂಡ್ ಆದ ಬೆಂಗಳೂರು ಪೋಲೀಸ್ ಕಮಿಶನರ್ ದಯಾನಂದ್ ರವರಿಗೆ ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ಪೋಲೀಸ್ ಇಲಾಕೆಯ ಮೇಲೆ ಒತ್ತಡ ಹಾಕಿದ ರಾಜಕಾರಣಿಗಳ ಹೆಸರನ್ನು ಬಹಿರಂಗ ಪಡಿಸಿ ಈ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ಹೊಸದೊಂದು ಬದಲಾವಣೆಗೆ ಕಾರಣರಾಗಿ” ಎಂದು ಕರೆ ನೀಡಿದ್ದಾರೆ.

ಒಟ್ಟಾರೆ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಹೊರಟ ಸರ್ಕಾರ ತನ್ನ ತಪ್ಪು ನಿರ್ಧಾರಗಳಿಂದ ತನ್ನ ಇಮೇಜನ್ನು ಇನ್ನಷ್ಟು ಕೆಡಿಸಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇತ್ತೀಚಿನ ಸೋಷಿಯಲ್‌ ಮೀಡಿಯಾ ಟ್ರೆಂಡಿಂಗ್‌ ಮೂಲಕ ಕಾಣುತ್ತಿದೆ.

You cannot copy content of this page

Exit mobile version