ಹಾಸನ: ಅಸ್ಸಾಂ, ಬಿಹಾರಿ, ಒರಿಸ್ಸಾ ಕಡೆಯಿಂದ ಬರುತ್ತಿರುವ ಕಾರ್ಮಿಕರಿಗೆ ಕೆಲಸ ಕೊಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡಿಸಿ, ಎಸ್ಪಿ, ಸಿಇಓ ಇವರು ಸಭೆ ಮಾಡಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಹಾಸನ ಜಿಲ್ಲೆಗೆ ಸಂಬಂಧಿಸಿದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮೊದಲು ಇಲಾಖೆ ಅಧಿಕಾರಿಗಳಿಂದ ತಮ್ಮ ಇಲಾಖೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಪ್ಲಾಂಟೇಶನ್ ಮಾಲಿಕರೊಂದಿಗೆ ಚರ್ಚೆ ನಡೆಸಿ ಆಸಕ್ತಿ ಇರುವ ನರೇಗಾ ಕಾರ್ಮಿಕರನ್ನು ಪ್ಲಾಂಟೇಶನ್ ಕೆಲಸ ಮಾಡಲು ಬಳಸಿಕೊಳ್ಳಬಹುದಾಗಿದೆ ಈ ನಿಟ್ಟಿನಲ್ಲಿ ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊರ ರಾಜ್ಯದ ಕಾರ್ಮಿಕರ ಅಗತ್ಯವಿರುವುದಿಲ್ಲ ಜೊತೆಗೆ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರಕುತ್ತದೆ ಎಂದು ತಿಳಿಸಿದರು. ಬಾಲ ಕಾರ್ಮಿಕರ ಬಗ್ಗೆ ಎಲ್ಲಾ ಅಧಿಕಾರಗಳು ಕೂಡ ತಪಾಸಣೆ ನಡೆಸಿ ತಪ್ಪಿಕಸ್ತ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಡಿಸಿ, ಎಸ್ಪಿ, ಸಿಇಓ ಇವರು ಮೊದಲು ಆಕ್ಟೀವ್ ಆಗಿ ಕೆಲಸ ಮಾಡಬೇಕು. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾಟಚಾರಕ್ಕೆ ಸಭೆ ಆಗಬಾರದು. ಎಂಜಿಓ ಗಳ ಕರೆಯಿಸಿಕೊಂಡು ಪ್ರತಿ ತಿಂಗಳು ಮೀಟಿಂಗ್ ಮಾಡಬೇಕು, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುವ ಕೆಲಸ ಆಗಬೇಕು ಎಂದು ಕಾರ್ಮಿಕ ಸಚಿವರು ಸೂಚನೆ ನೀಡಿದರು. ನರೇಗ ಕಾರ್ಮಿಕರು ಎಷ್ಟು ಇದ್ದಾರೆ? ಅಸ್ಸಾಂ, ಬಿಹಾರಿ, ಒರಿಸ್ಸಾ ಕಡೆಯಿಂದ ಬರುತ್ತಿರುವರಿಗೆ ಕೆಲಸ ಕೊಡುವದನ್ನು ನಿಯಂತ್ರಿಸಲು ಇಲ್ಲಿನ ಕಾರ್ಮಿಕರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾದರೇ ಕೆಲಸ ಸಿಗುತ್ತದೆ ಎಂದು ಸಲಹೆ ನೀಡಿದರು.
ಈ ಬಗ್ಗೆ ಎಸ್ಪಿ, ಡಿಸಿಯವರು ಸಭೆ ಮಾಡಬೇಕು. ಹೊರಗಿನಿಂದ ಬರುವ ಜನರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಲೇಬರ್ ಆಫೀಸರನ್ನು ನಾನು ಇವತ್ತೆ ಮೊದಲು ನೋಡುತ್ತಿರುವುದು, ಯಾವ ಸಭೆಯಲ್ಲೂ ನೋಡಿರುವುದಿಲ್ಲ. ಅಧಿಕಾರಿ ಯಮುನ ಅವರನ್ನು ಸಭೆಯಲ್ಲಿ ನೋಡಿದ್ದು, ಆದರೇ ನಿಮ್ಮನ್ನು ನೋಡಿರುವುದಿಲ್ಲ ಎಂದರು.
ಕಾರ್ಮಿಕ ಅಧಿಕಾರಿ ಮಾತನಾಡಿ, ಇ-ಶ್ರಮ್ ಪೋರ್ಟಲ್ನಲ್ಲಿ ೨,೮೮,೭೫೧ ಅಸಂಘಟಿತ ವಲಯದ ಕಾರ್ಮಿಕರು ಹಾಗೂ. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ೪೩.೦೬೦ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿಯಾಗಿರುತ್ತಾರೆ. ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಭಿಯಾನದಡಿ ೨೦೨೩-೨೪ನೇ ಹಾಗೂ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೨೯೭೯ ತಪಾಸಣೆಗಳು ಹಾಗೂ ಹಠಾತ್ ದಾಳಿಗಳನ್ನು ಕೈಗೊಂಡಿದ್ದು, ಒಟ್ಟು ೧೮ ಬಾಲಕಾರ್ಮಿಕರು ಹಾಗೂ ೨೮ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸತಿಗೊಳಿಸಲಾಗಿರುತ್ತದೆ. ತಪ್ಪಿತಸ್ಥ ಮಾಲೀಕರಿಂದ ರೂ.೨,೨೦,೦೦೦ ರೂಗಳ ಕಾರ್ಪಸ್ ಮೊತ್ತವನ್ನು ವಸೂಲಿ ಮಾಡಲಾಗಿರುತ್ತದೆ. ತಪ್ಪಿತಸ್ಥ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇನ್ನು ಜಿಲ್ಲಾ ಪಂಚಾಯತ್ ಸಭೆಗೆ ತಮ್ಮ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಎಂ. ಪಟೇಲ್, ನಿಗಮ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಗೈರು ಆಗಿದ್ದರು. ಆದರೇ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಪಿ. ಸ್ವರೂಪ್ ಉಪಸ್ಥಿತರಿದ್ದರು. ಇವರ ಜೊತೆ ಸರಕಾರದ ಸಹ ಕಾರ್ಯದರ್ಶಿ ಪ್ರಸಾದ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಎಸ್ಪಿ ಮೊಹಮ್ಮದ್ ಸುಜೀತಾ, ಜಿಪಂ ಸಿಇಓ ಬಿ.ಆರ್. ಪೂರ್ಣಿಮಾ ಇತರರು ಉಪಸ್ಥಿತರಿದ್ದರು.