ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗುತ್ತಿದ್ದು, ಪೋಷಕರಿಗೆ ಸಾಂಕ್ರಾಮಿಕ ಜ್ವರದ ಭೀತಿ ಎದುರಾಗಿದೆ. ಹೀಗಾಗಿ ಮಕ್ಕಳಿಗೆ ನೆಗಡಿ ಜ್ವರದ ರೀತಿಯ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದರೆ ಶಾಲೆಗೆ ಕಳಿಸುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮಕ್ಕಳಿಗೆ ಕಂಡುಬರುವ ಶೀತ, ನೆಗಡಿ, ಜ್ವರದಂತಹ ಯಾವುದೇ ಸಾಂಕ್ರಾಮಿಕಕ್ಕೆ ಪೋಷಕರು ತಕ್ಷಣವೇ ಎಚ್ಚೆತ್ತುಕೊಂಡು, ಶಾಲೆಗೆ ತಿಳಿಸಿ ರಜೆ ತೆಗೆದುಕೊಳ್ಳಬೇಕು. ಶಾಲೆಗಳಲ್ಲೂ ಸಹ ಶಿಕ್ಷಕರು ಯಾವುದೇ ಮಕ್ಕಳಿಗೆ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರಿಗೆ ತಿಳಿಸಿ, ಅಂತಹ ಮಕ್ಕಳನ್ನು ಮನೆಗೆ ಕಳಿಸಬೇಕು ಎಂದು ಹೇಳಿದ್ದಾರೆ.
ಸಧ್ಯ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಭೀತಿ ಎದುರಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಮಾಸ್ಕ್ ಧರಿಸುವ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿಲ್ಲ. ಗರ್ಭಿಣಿಯರು ಮಾಸ್ಕ್ ಬಳಕೆ ಮಾಡಬೇಕು. ಹಾಗೆಯೇ ನಮ್ಮ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಸಿಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದೇವೆ ಎಂದರು.