ಇದೇ ಫೆಬ್ರವರಿ 11ನೇ ತಾರೀಕು, ನಮ್ಮ ಕನ್ನಡ ನೆಲದ ಕಥೆ, ಜನರ ಕಥೆಯಾಗಿರುವ ‘ದಕ್ಲಕಥಾ ದೇವಿಕಾವ್ಯ’ ಕೇರಳದಲ್ಲಿ ನಡೆಯುವ ಪ್ರತಿಷ್ಠಿತ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ(ITFOk). ಕೆ ಬಿ ಸಿದ್ದಯ್ಯರವರ ಗಲ್ಲೆಬಾನಿ, ಅವರ ಇತರ ಖಂಡಕಾವ್ಯ ಮತ್ತು ಕಥನಗಳಿಂದ ಆಯ್ದು ಬರಹವನ್ನು ಆಧರಿಸಿ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದವರು ಯುವ ನಿರ್ದೇಶಕ ಲಕ್ಷ್ಮಣ್ ಕೆ ಪಿ. ಕೇರಳದ ತ್ರಿಶೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ 10 ಅಂತಾರಾಷ್ಟ್ರೀಯ ನಾಟಕಗಳು, 14 ಭಾರತದ ವಿವಿಧ ರಾಜ್ಯಗಳಿಂದ ಆಯ್ಕೆಗೊಂಡಿರುವ ನಾಟಕಗಳ ಜೊತೆ ನಮ್ಮ ಕರ್ನಾಟಕದಿಂದ ಆಯ್ಕೆಗೊಂಡಿರುವ ಏಕೈಕ ನಾಟಕ ಈ ‘ದಕ್ಲಕಥಾ ದೇವಿಕಾವ್ಯ’.
ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ, ನಿರಾಕಾರದಿಂದ ಒಂದು ಆಕಾರವನ್ನು ಸೃಷ್ಟಿಸಿದ ನಿರ್ದೇಶಕರ ಸೃಜನಶೀಲತೆ ಬಹಳ ಮೆಚ್ಚುವಂತದ್ದು.

ಮೇಲು ಕೀಳು ಕೇವಲ ಜನರನ್ನು. ಒಂದು ಜನಾಂಗವನ್ನು ಮಾತ್ರ ದೂರವಿಟ್ಟಿಲ್ಲ. ಅವರ ಆಚರಣೆ, ಬದುಕು, ಕಥೆ ಹಾಗೂ ಅವರ ಸಂಗೀತ ಪರಿಕರಗಳನ್ನು ದೂರವಿಟ್ಟಿದೆ. ಇಂತಹ ನೆಲ ಮೂಲದ ತಮಟೆ, ಅರೆ ವಾದ್ಯಗಳನ್ನು ರಂಗದ ಮೇಲೆ ತಂದು ಸೂಕ್ಷ್ಮಾತಿಸೂಕ್ಷ್ಮ ನಾದಲಯದೊಂದಿಗೆ ಮನುಷ್ಯನ ವಿಕಾರಗಳನ್ನು, ನೋವು-ಹಸಿವನ್ನು, ಮಣ್ಣು ಹೆಣ್ಣನ್ನು, ಮುಟ್ಟು-ಹುಟ್ಟನ್ನು ಕೆದಕುವ ಪರಿ ಎಲ್ಲೋ ನಮ್ಮನ್ನೇ ಅಣಕಿಸುವಂತಿತ್ತು. ಶಿಷ್ಟ ಜಗತ್ತಿನ ಸಾತ್ವಿಕರ ನಡುವೆ ಹಸಿವೆಂಬ ಮಹಾಮಾರಿ ನಮ್ಮೆಲ್ಲರನ್ನು ಆವರಿಸಿಕೊಳ್ಳುವ, ನಾನು, ನನ್ನದು ಎನ್ನುವ ಅಹಂಗೆ ಕೆಣಕುವಂತಿದೆ.
ಇಡೀ ನಾಟಕವನ್ನು ಪದದಲ್ಲಿ ಕಟ್ಟಲು ಕಷ್ಟ. ನೋಡಿಯೇ ಅನುಭವಿಸಬೇಕು. ಕನ್ನಡ ನುಡಿಯನ್ನ ಗಡಿಗಳಾಚೆ ಪಸರಿಸುತ್ತಿರುವ ಈ ತಂಡಕ್ಕೆ ಅಭಿನಂದನೆಗಳು. ಇನ್ನೂ ಹಲವು ರಾಷ್ಟ್ರೀಯ- ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗಿಯಾಗುವ ಅವಕಾಶಗಳು ಸಿಗುವಂತಾಗಲಿ.
Photo courtesy- Aravind Kudla
ಮನೋಜ್ ಕುಮಾರ್
ರಂಗ ನಟ