
ಉತ್ತರ ಪ್ರದೇಶ: ಪರೀಕ್ಷೆಯಲ್ಲಿ ತಪ್ಪು ಉತ್ತರಗಳನ್ನು ಬರೆದಿದ್ದಕ್ಕಾಗಿ ಶಿಕ್ಷಕರಿಂದ ಥಳಿಸಲ್ಪಟ್ಟ 10 ನೇ ತರಗತಿಯ ದಲಿತ ವಿದ್ಯಾರ್ಥಿ ಇಂದು ಬೆಳಿಗ್ಗೆ ಲಕ್ನೋದಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.
ಸೆ.7 ರಂದು ಉತ್ತರ ಪ್ರದೇಶದ ಔರೆಯಾ ಜಿಲ್ಲೆಯ ಆದರ್ಶ್ ಇಂಟರ್ ಕಾಲೇಜಿನಲ್ಲಿ 10 ನೇ ತರಗತಿ ವಿದ್ಯಾರ್ಥಿಯನ್ನು ಸಮಾಜ ವಿಜ್ಞಾನ ವಿಭಾಗದ ಶಿಕ್ಷಕಿ ಅಶ್ವಿನಿ ಸಿಂಗ್ ಮಾರಣಾಂತಿಕವಾಗಿ ಥಳಿಸಿದ ಪರಿಣಾಮ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಘಟನೆಯ ನಂತರ ಹಲ್ಲೆಗೊಳಗಾದ ವಿಧ್ಯಾರ್ಥಿಯ ಮನೆಗೆ ಸ್ಥಳೀಯ ದಲಿತ ನಾಯಕರು, ಭೀಮ್ ಆರ್ಮಿ ಸಂಘಟನೆ ಮುಖಂಡರು ಭೇಟಿ ನೀಡಿದ್ದರು. ಭಾರತದಲ್ಲಿ ಬಿಜೆಪಿ ಆಳ್ವಿಕೆಯ ನಂತರ ದಲಿತ ಸಮುದಾಯ ಇನ್ನಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು, ದಲಿತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚಾಗಿವೆ ಎಂದು ಮುಖಂಡರು ಆರೋಪಿಸಿದ್ದಾರೆ.
ವಿಧ್ಯಾರ್ಥಿಯ ಸಾವಿನ ನಂತರ ಬಿಎಸ್ಪಿ ಪಕ್ಷದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದು ಔರೈಯಾದಲ್ಲಿನ ಅಚ್ಚಲ್ಡಾದ ಆದರ್ಶ ಇಂಟರ್ ಕಾಲೇಜಿನಲ್ಲಿ ಓದುತ್ತಿದ್ದ 10 ನೇ ತರಗತಿಯ ದಲಿತ ವಿದ್ಯಾರ್ಥಿಯ ಸಾವು ತುಂಬಾ ಕಳವಳಕಾರಿಯಾಗಿದೆ, ಇದು ದಲಿತ ಸಮುದಾಯದ ವಿರುದ್ಧ ಹಿಂಸಾಚಾರ ಮತ್ತು ದೌರ್ಜನ್ಯಗಳು ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 7 ರಂದು ಮೃತರನ್ನು ಚಿಕಿತ್ಸೆಗಾಗಿ ಇಟಾವಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್ ವಿಧ್ಯಾರ್ಥಿ ಬದುಕುಳಿಯಲಿಲ್ಲ. ಸಂತ್ರಸ್ತ ಕುಟುಂಬದವರು ನೀಡಿದ ದೂರಿನ ಮೇರೆಗೆ ಅಚ್ಚಲ್ಡಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದ್ದಾರೆ. ಆರೋಪಿ ಶಿಕ್ಷಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಸಾವಿನ ಮಾಹಿತಿಯಿಂದ ಇಂಟರ್ ಕಾಲೇಜನ್ನು ಮುಚ್ಚಲಾಗಿದೆ.