ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಬಿಜೆಪಿ ಪಕ್ಷದಲ್ಲೇ ಈಗ ಅಸಮಾಧಾನದ ಗಾಳಿ ಬೀಸಿದೆ. ಸ್ವತಃ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಹೈಕಮಾಂಡ್ ವಿರುದ್ಧ ತಿರುಗಿ ನಿಂತಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿ ನೇಮಕದ ವಿರುದ್ಧ ಭಾರತೀಯ ಜನತಾ ಪಕ್ಷದ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮಧ್ಯಪ್ರದೇಶದ ನಾಲ್ಕು ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು, ‘ತಾನು ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿದ್ದೇನೆ, ನಾಲ್ಕು ಅವಧಿಯಲ್ಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಆದರೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನೂ ಹೈಕಮಾಂಡ್ ಪರಿಗಣಿಸದೇ ಇರುವುದು ಬೇಸರ ತಂದಿದೆ ಎಂದು ಆಪ್ತ ವಲಯದಲ್ಲಿ ಅಸಮಾಧಾನ ಹೊರಹಾಕಿದ್ದರು. ಈಗ ಬಹಿರಂಗವಾಗಿ ಪಕ್ಷದ ನಿರ್ಧಾರದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೊಸ ಸರ್ಕಾರ ರಚನೆಯಲ್ಲಿ ನಿಮ್ಮ ಅಭಿಪ್ರಾಯ ಪರಿಗಣಿಸಿದ್ದಾರೆಯೇ, ಮುಖ್ಯಮಂತ್ರಿಯಾಗಿದ್ದ ತಮಗೆ ಮುಂದಿನ ಅವಧಿಯಲ್ಲಿ ಮಹತ್ತರ ಜವಾಬ್ದಾರಿಗಳು ಏನಾದರೂ ಸಿಗಲಿವೆಯೇ, ನಿಮಗಾಗಿ ನೀವು ಏನನ್ನಾದರೂ ಹೈಕಮಾಂಡ್ ಮುಂದೆ ಕೇಳಿದ್ದೀರಾ ಎನ್ನುವ ಪ್ರಶ್ನೆಗೆ ʻನಾನು ಸಾಯುತ್ತೇನೇ ಹೊರತು ದೆಹಲಿಗೆ ಹೋಗಲ್ಲʼ ಎಂದು ಹೇಳಿದರು.
“ನಾನು ಹೋಗಿ ನನಗಾಗಿ ಏನಾದರೂ ಕೇಳುವುದಕ್ಕಿಂತ ಸಾಯುತ್ತೇನೆ... ಅದಕ್ಕಾಗಿಯೇ ನಾನು ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದೆ” ಎಂದು ನಿರ್ಗಮಿತ ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.