ಹೊಸದೆಹಲಿ: ಕೇಂದ್ರವು ಮಂಗಳವಾರ ರಾಜ್ಯಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ಮಸೂದೆ-2023 ಕರಡನ್ನು ಮಂಡಿಸಿತು.
ಈ ಮಸೂದೆಯನ್ನು ಸುಪ್ರೀಂ ಕೋರ್ಟ್ ತೀರ್ಪಿನಂತೆ ತರಲಾಗಿದೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ. ”1991ರ ಕಾಯಿದೆಯಲ್ಲಿ ಸಿಇಸಿ ಮತ್ತು ಇಸಿ ನೇಮಕಕ್ಕೆ ನಿಬಂಧನೆಗಳು ಇದ್ದಿರಲಿಲ್ಲ.”
ನಾವು ಅವುಗಳನ್ನು ಇತ್ತೀಚಿನ ಮಸೂದೆಯಲ್ಲಿ ಸೇರಿಸಿದ್ದೇವೆ. ಇದುವರೆಗೆ ಸಿಇಸಿ ಮತ್ತು ಇಸಿ ನೇಮಕಾತಿಯನ್ನು ಸರಕಾರವೇ ಮಾಡುತ್ತಿತ್ತು. ಇನ್ನು ಮುಂದೆ ಅವರ ನೇಮಕಾತಿಯನ್ನು ವಿಶೇಷ ಸಮಿತಿ ನೋಡಿಕೊಳ್ಳಲಿದೆ. ಅವರ ಸಂಬಳ ಇತ್ಯಾದಿಗಳನ್ನು ಮಸೂದೆಯಲ್ಲಿ ಸೇರಿಸಿದ್ದೇವೆ. ಸಿಇಸಿ ಮತ್ತು ಇಸಿಗೆ ಕಾನೂನು ರಕ್ಷಣೆ ಒದಗಿಸಿದ್ದೇವೆ ಎಂದು ವಿವರಿಸಿದರು.
ಸಂವಿಧಾನದ ಆಶಯದ ಉಲ್ಲಂಘನೆ
ಮಸೂದೆಯ ನಿಬಂಧನೆಗಳು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಹಾಳು ಮಾಡುತ್ತವೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸಿವೆ. ಪ್ರಧಾನ ಮಂತ್ರಿ ಮತ್ತು ಅವರ ನಾಮನಿರ್ದೇಶಿತ ಸದಸ್ಯರು ಸಿಇಸಿ ಮತ್ತು ಇಸಿಯನ್ನು ನೇಮಿಸುವುದು ಚುನಾವಣಾ ಆಯೋಗದ ನಾಮಮಾತ್ರ ಬದಲಾವಣೆಯಾಗಿದೆ ಎಂದು ರಣದೀಪ್ ಸುರ್ಜೆವಾಲಾ (ಕಾಂಗ್ರೆಸ್) ಹೇಳಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಏಕೆ ಸೇರಿಸಿಕೊಂಡಿಲ್ಲ ಎಂದು ಎಎಪಿ ಸದಸ್ಯ ರಾಘವ್ ಚಡ್ಡಾ ಪ್ರಶ್ನಿಸಿದರು. ಕೇಂದ್ರವು ಸಿಇಸಿ ಮತ್ತು ಇಸಿಯ ಸ್ಥಾನಮಾನವನ್ನು ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟಕ್ಕೆ ಇಳಿಸಿದೆ ಎಂದು ಜವಾಹರ್ ಸರ್ಕಾರ್ (ಟಿಎಂಸಿ) ಆಕ್ರೋಶ ವ್ಯಕ್ತಪಡಿಸಿದರು. ಬಿಜೆಡಿ ಮತ್ತು ಡಿಎಂಕೆ ಸದಸ್ಯರು ಮಸೂದೆಯನ್ನು ವಿರೋಧಿಸಿದರು. ಸದನವು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತು.