ರಾಜ್ಯದ 40,000 ದೇವಾಲಯಗಳು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ತಮಿಳುನಾಡು ಸರ್ಕಾರದ ಹಿಡಿತಕ್ಕೆ ತಗೆದುಕೊಂಡ ಬಗ್ಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಅಪಸ್ವರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿ ತಮಿಳುನಾಡು ಸರ್ಕಾರದ ಪ್ರತಿಕ್ರಿಯೆ ಕೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿಯವರ ಮನವಿಯನ್ನು ಸ್ವೀಕರಿಸಿದ ಸುಪ್ರೀಂಕೋರ್ಟ್ ಈ ಬಗ್ಗೆ ತಮಿಳುನಾಡು ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಇದರ ಜೊತೆಗೆ ಸುಬ್ರಮಣಿಯನ್ ಸ್ವಾಮಿಯವರು ತಮಿಳುನಾಡು ಸರ್ಕಾರಕ್ಕೆ 1959 ರ ಧಾರ್ಮಿಕ ದತ್ತಿ ಕಾಯ್ದೆಯ ಕೆಲವು ನಿಬಂಧನೆಗಳು ಮತ್ತು ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಸರ್ಕಾರವು ನಿರಂಕುಶವಾಗಿ ಮತ್ತು ಅಸಂವಿಧಾನಿಕವಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದೇವಾಲಯಗಳನ್ನು ನಿಯಂತ್ರಣಕ್ಕೆ ತಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ನ ನೋಟಿಸ್ ಇತ್ಯರ್ಥವಾಗುವ ವರೆಗೂ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಅರ್ಚಕರ, ಆಡಳಿತ ಮಂಡಳಿಯ ನೇಮಕ ಮಾಡದಂತೆ ಮತ್ತು ವಜಾ ಮಾಡದಂತೆಯೂ ಸಹ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ಇದೇ ರೀತಿಯ ಸಮಸ್ಯೆಗಳನ್ನು ಎತ್ತುವ ಕೆಲವು ರಿಟ್ ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ಇನ್ನೂ ಬಾಕಿ ಉಳಿದಿವೆ. ಅಂತಹ ಅರ್ಜಿಗಳಲ್ಲಿ ಇದೂ ಒಂದು. ಇವುಗಳಲ್ಲಿ ಒಂದನ್ನು ವಿಚಾರಣೆಗೆ ತಗೆದುಕೊಳ್ಳುವ ಅವಕಾಶವಿದೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು ಸುಬ್ರಮಣಿಯನ್ ಸ್ವಾಮಿಯವರಿಗೆ ತಿಳಿಸಿದ್ದಾರೆ.
ಸಧ್ಯ ದೇಶದೆಲ್ಲೆಡೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಹಾಗಾಗಿ ಇದಕ್ಕೆ ಮಧ್ಯಂತರ ತಡೆ ತರುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಮನವಿಯನ್ನು ಸ್ವೀಕರಿಸಿ ತಮಿಳುನಾಡು ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.