ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಅವರ ಮನೆಯಲ್ಲಿ ಇಂದು ಜಾರಿ ನಿರ್ದೇಶನಾಲಯ (ಇಡಿ) ಶೋಧ ನಡೆಸುತ್ತಿದೆ. ಅವರು ದೆಹಲಿಯ ಆರೋಗ್ಯ ಸಚಿವರಾಗಿದ್ದಾಗ ಆಸ್ಪತ್ರೆಗಳ ನಿರ್ಮಾಣದಲ್ಲಿ ಭಾರಿ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಆಸ್ಪತ್ರೆ ನಿರ್ಮಾಣ ಹಗರಣದ ಮೌಲ್ಯ ಸುಮಾರು 5,590 ಕೋಟಿ ಎಂದು ಅಂದಾಜಿಸಲಾಗಿದೆ.
2018-2019ರ ಅವಧಿಯಲ್ಲಿ ಆಮ್ ಆದ್ಮಿ ಸರ್ಕಾರ 5590 ಕೋಟಿ ವೆಚ್ಚದಲ್ಲಿ ಸುಮಾರು 24 ಆಸ್ಪತ್ರೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಐಸಿಯು ಆಸ್ಪತ್ರೆಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿತ್ತು. ಆದರೆ ಮೂರು ವರ್ಷಗಳ ನಂತರವೂ ಕಾಮಗಾರಿ ಪೂರ್ಣಗೊಂಡಿಲ್ಲ.
ಇಲ್ಲಿಯವರೆಗೆ 800 ಕೋಟಿ ಖರ್ಚು ಮಾಡಿದರೂ, ಕೇವಲ 50 ಪ್ರತಿಶತದಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಎಲ್ಎನ್ಜೆಪಿ ಆಸ್ಪತ್ರೆಯ ವೆಚ್ಚ 488 ಕೋಟಿಯಿಂದ 1135 ಕೋಟಿಗೆ ಏರಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಹಲವು ಸ್ಥಳಗಳಲ್ಲಿ ಯಾವುದೇ ಅನುಮತಿಯಿಲ್ಲದೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವ ಆರೋಪಗಳಿವೆ.
ಗುತ್ತಿಗೆದಾರರ ಪಾತ್ರವೂ ಅನುಮಾನಗಳನ್ನು ಹುಟ್ಟುಹಾಕಿದೆ. ಆಸ್ಪತ್ರೆ ಮಾಹಿತಿ ನಿರ್ವಹಣಾ ವ್ಯವಸ್ಥೆ (HIMS) 2016ರಿಂದ ಬಾಕಿ ಉಳಿದಿದೆ. ಈ ಪ್ರಕರಣದಲ್ಲಿ ಭಾರದ್ವಾಜ್ ಜೊತೆಗೆ ಆಪ್ ನಾಯಕ ಸತ್ಯೇಂದ್ರ ಜೈನ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ.