ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಅವರ ಬಹು ನಿರೀಕ್ಷಿತ 5 ಗ್ಯಾರಂಟಿಗಳಿಗೆ ಚಾಲನೆ ನೀಡಿದ್ದಾರೆ. ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಅವರು 6ನೇ ಗ್ಯಾರಂಟಿಯನ್ನು ಜಾರಿಗೊಳಿಸಲು ಬಿರುಸಿನ ಸಿದ್ದತೆ ಮಾಡಿಕೊಂಡಿದ್ದಾರೆ.
ಹೌದು, ಕಳೆದ ಹಲವು ವರ್ಷಗಳಿಂದ ಸತ್ಯ-ಸುಳ್ಳುಗಳ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದ್ದು, ಸುಳ್ಳು ಸುದ್ದಿಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಮಾಜದಲ್ಲಿ ದ್ವೇಷ ಹರಡುವವರಿಗೆ ಕಾನೂನು ಮೂಲಕವೇ ಹೆಡೆಮುರಿ ಕಟ್ಟಲು IT-BT ಸಚಿವ ಪ್ರಿಯಾಂಕ್ ಖರ್ಗೆ ಮತ್ತವರ ತಂಡ ಸಿದ್ದತೆ ನಡೆಸುತ್ತಿದೆ.
ಸುಳ್ಳು ಸುದ್ದಿ ಪೋಸ್ಟ್ ಮಾಡುವವರು ಹಾಗೂ ಅದನ್ನು ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಗೃಹ ಇಲಾಖೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಎರಡೂ ಪ್ರಮುಖ ಇಲಾಖೆಗಳ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಅಧಿಕಾರಿಗಳು ಮತ್ತು ತಜ್ಞರ ಸಭೆ ನಡೆಸಿ ಎರಡು ಇಲಾಖೆಗಳ ಹೊಣೆಗಾರಿಕೆ ಕುರಿತು ಕಾರ್ಯತಂತ್ರ ರೂಪಿಸಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲೂ ಸಹ ಸುಳ್ಳು ಸುದ್ದಿಗಳು ಹೆಚ್ಚಾಗಿದ್ದು, ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯೂ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.
ಸರ್ಕಾರದ ವಿರುದ್ದ ನಕಲಿ ಪೋಸ್ಟ್ ಗಳ ಹಾವಳಿ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಸ್ಟ್ ನಿಂದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ನಕಲಿ ಪೋಸ್ಟ್ ಹಾವಳಿಯನ್ನ ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಸ್ ಚೆಕ್ ಘಟಕವನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.
ನಕಲಿ, ಸುಳ್ಳು ಸುದ್ದಿ ಹಾಗೂ ಸುಳ್ಳು ಪೋಸ್ಟ್ ಗಳ ವಿರುದ್ದ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಲಿದ್ದೇವೆ ಎಂದು ಸಚಿವ ಪ್ರಿಯಾಂಕ್ ಅವರೇ ಹೇಳಿಕೊಂಡಿದ್ದು ಇದು 6ನೇ ಗ್ಯಾರಂಟಿ ಅಂತಲೇ ಹೇಳಬಹುದು.
ಸಾರ್ವಜನಿಕರೂ ಕೂಡ ಸುಳ್ಳು ಸುದ್ದಿ ಕುರಿತು ದೂರು ನೀಡುವ ವ್ಯವಸ್ಥೆಯಲ್ಲಿ ಕಲ್ಪಿಸಲು ಪ್ರತ್ಯೇಕ ವೆಬ್ ಸೈವ್ ರೂಪಿಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.