Home ಬ್ರೇಕಿಂಗ್ ಸುದ್ದಿ ಬೆಳಗಾವಿಯಲ್ಲಿ ಫ್ರಿಡ್ಜ್ ಸ್ಫೋಟ ಚಿಕಿತ್ಸೆ ಫಲಿಸದೆ ತಂದೆ-ಮಗ ದುರಂತ ಅಂತ್ಯ

ಬೆಳಗಾವಿಯಲ್ಲಿ ಫ್ರಿಡ್ಜ್ ಸ್ಫೋಟ ಚಿಕಿತ್ಸೆ ಫಲಿಸದೆ ತಂದೆ-ಮಗ ದುರಂತ ಅಂತ್ಯ

0

ಬೆಳಗಾವಿ: ನಗರದಲ್ಲಿ ಗಣೇಶ ಚತುರ್ಥಿ ಹಬ್ಬದ (Belagavi) ಸಂಭ್ರಮದ ನಡುವೆಯೇ ಸಂಭವಿಸಿದ್ದ ಭೀಕರ ಫ್ರಿಡ್ಜ್ ಸ್ಫೋಟ (Fire Mishap) ಹಾಗೂ ಅಗ್ನಿ ಅವಘಡ ಪ್ರಕರಣದಲ್ಲಿ, ಸಾವು-ಬದುಕಿನ (Tragedy) ನಡುವೆ ಹೋರಾಡುತ್ತಿದ್ದ ತಂದೆ ಮತ್ತು ಮಗ ಇಬ್ಬರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಂದೇ ಕುಟುಂಬದ ಆರೂ ಜನರು ಈ ಕ್ರೂರ ದುರಂತಕ್ಕೆ ಬಲಿಯಾಗಿದ್ದು, ಇಡೀ ಕುಟುಂಬವೇ ಇಲ್ಲದಂತಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಗಜಾನನ ದಮೋನೆ (61) ಮತ್ತು ಅವರ ಪುತ್ರ ರೋಷನ್ ದಮೋನೆ (21) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದುರ್ದೈವಿಗಳಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಲಿಸದ ಪ್ರಾರ್ಥನೆ: ಆಸ್ಪತ್ರೆಯಲ್ಲಿ ಕೊನೆಗೊಂಡ ಹೋರಾಟ

ಸೆಪ್ಟೆಂಬರ್ 14ರ ಸೋಮವಾರ ರಾತ್ರಿ ನಗರದ ಚವ್ಹಾಟ ಗಲ್ಲಿಯಲ್ಲಿರುವ ಶೆಡ್‌ ಮಾದರಿಯ ಮನೆಯಲ್ಲಿ ಈ ದುರಂತ ಸಂಭವಿಸಿತ್ತು. ಘಟನೆ ನಡೆದಾಗ ಸ್ಥಳೀಯರು ತಕ್ಷಣವೇ ಧಾವಿಸಿ ಬಂದು ಬೆಂಕಿಯ ಕೆನ್ನಾಲೆಯಲ್ಲಿದ್ದ ಗಜಾನನ ಮತ್ತು ರೋಷನ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಇಬ್ಬರೂ ಜೀವ ಉಳಿಸಿಕೊಂಡು ಬರಲಿ ಎಂದು ನೆರೆಹೊರೆಯವರು ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿದ್ದರು. ಆದರೆ, ವೈದ್ಯರ ಸತತ ಪ್ರಯತ್ನ ಮತ್ತು ಸಾರ್ವಜನಿಕರ ಪ್ರಾರ್ಥನೆ ಫಲಿಸದೆ, ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ.

ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಕಾದಿತ್ತು ಕರಾಳ ರಾತ್ರಿ

ಗಣೇಶ ಚತುರ್ಥಿಯ ದಿನದಂದು ಕುಟುಂಬಸ್ಥರು ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ರಾತ್ರಿ ಕುಟುಂಬದವರೆಲ್ಲರೂ ಒಟ್ಟಾಗಿ ಊಟ ಮಾಡಿ ಸಂಭ್ರಮದಿಂದ ನಿದ್ರೆಗೆ ಜಾರಿದ್ದರು. ಆದರೆ, ಮಧ್ಯರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯಲ್ಲಿದ್ದ ಫ್ರಿಡ್ಜ್ ಏಕಾಏಕಿ ಸ್ಫೋಟಗೊಂಡಿತ್ತು. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿಕೊಂಡಿದ್ದರಿಂದ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಬಡ ಕುಟುಂಬಕ್ಕೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ.

ಘಟನಾ ಸ್ಥಳದಲ್ಲೇ ಶಾರದಾ ದಮೋನೆ, ಪ್ರಿಯಾ ದಮೋನೆ, ಗಂಗಾ ದಮೋನೆ ಹಾಗೂ ಭಾರತಿ ದಮೋನೆ ಉಸಿರುಗಟ್ಟಿ ಹಾಗೂ ಸುಟ್ಟು ಕರಕಲಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಕಿರುಚಾಟ ಕೇಳಿ ಓಡಿಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸುವಷ್ಟರಲ್ಲಿ ಬಹುತೇಕ ಹಾನಿಯಾಗಿತ್ತು. ಹಬ್ಬದ ನೆಪದಲ್ಲಿ ಖುಷಿಯಾಗಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದ್ದು, ಬೆಳಗಾವಿ ಜನತೆಯನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.

You cannot copy content of this page

Exit mobile version