Home ಅಂಕಣ ‘ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ’: ಎಂದೂ ಹೇಳದ ಹಾಸ್ಯಕ್ಕಾಗಿ, ಇಂದೂ ಮುಗಿಯದ ಹೋರಾಟ.

‘ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ’: ಎಂದೂ ಹೇಳದ ಹಾಸ್ಯಕ್ಕಾಗಿ, ಇಂದೂ ಮುಗಿಯದ ಹೋರಾಟ.

0

“ಅವರು ಒಂದು ಕಾಲದಲ್ಲಿ ಪೂರ್ಣಾವಧಿ ಹಾಸ್ಯನಟರಾಗಿದ್ದರು; 2021 ರ ಆರಂಭದಲ್ಲಿ ಅವರ ವೃತ್ತಿಜೀವನ ಹಳಿತಪ್ಪಿದ ನಂತರ, ಯಾದವ್ ಈಗ ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ..” ಸುಳ್ಳು ಆರೋಪದಡಿ ಕಾನೂನು ಹೋರಾಟ ನಡೆಸುತ್ತಿರುವವರ ಕುರಿತಾದ ವರದಿ. ಹುನೇಜಾ ಖಾನ್ ಅವರ The WIRE ವಿಶೇಷ ಬರಹದ ಅನುವಾದ

ಭೋಪಾಲ್: ಮಾರ್ಚ್ 16ರ ಮುಂಜಾನೆ, ಒಬ್ಬ ಹಾಸ್ಯಗಾರ ತನ್ನ ಟೆರೇಸ್‌ನಲ್ಲಿ ಟೈರ್ ಸುಡುವ ಸದ್ದು ಕೇಳಿ ಎಚ್ಚರಗೊಳ್ಳುತ್ತಾರೆ. ಪಿತಾಂಪುರ್‌ನಲ್ಲಿರುವ ಆ ವ್ಯಕ್ತಿಯ ಮನೆಯ ಮೇಲೆ ನೆರೆಹೊರೆಯವರು ದಾಳಿ ನಡೆಸಲು ಪ್ರಯತ್ನಿಸುತ್ತಿದ್ದ ಘಟನೆಯ ಭಾಗವಾಗಿತ್ತು ಆ ಉರಿಯುತ್ತಿದ್ದ ಟೈರ್‌.

ಸ್ಥಳೀಯ ರಾಜಕಾರಣಿಯೊಬ್ಬರೊಂದಿಗೆ ನಂಟು ಹೊಂದಿದ್ದ ಆ ಗುಂಪನ್ನು ತಡೆಯಲು ಪ್ರಯತ್ನಿಸಿದಾಗ ಅದು ಹಿಂಸಾತ್ಮಕ ಗಲಾಟೆಯಾಗಿ ಬದಲಾಗುತ್ತದೆ. ಈ ಜಗಳದ ನಡುವೆ ಮಧ್ಯಪ್ರವೇಶಿಸಿದ ಆತನ ಸಹೋದರನ ಮೇಲೆಯೂ ಹಲ್ಲೆಯಾಗುತ್ತದೆ.

ರಕ್ಷಣೆಗಾಗಿ ಮತ್ತು ದಾಳಿಕೋರರ ಮೇಲೆ ಎಫ್‌ಐಆರ್ ದಾಖಲಿಸಲೆಂದು ಆತ ಪೊಲೀಸ್ ಠಾಣೆಗೆ ಧಾವಿಸುತ್ತಾರೆ. ಆದರೆ ಮಫ್ತಿಯಲ್ಲಿದ್ದ ಅಧಿಕಾರಿಯೊಬ್ಬರು ತನ್ನನ್ನು ಹಿಂದಕ್ಕೆ ಕಳುಹಿಸಿದರು ಎಂದು ಆ ಹಾಸ್ಯಗಾರ ಹೇಳುತ್ತಾರೆ.

ಹಾಗೆ ಮನೆಗೆ ಹಿಂತಿರುಗಿದಾಗ, ಕನಿಷ್ಠ 50 ಜನರ ಗುಂಪೊಂದು ತನ್ನ ಮನೆಯ ಹೊರಗಡೆ ಜಮಾಯಿಸಿತ್ತು. ಅಲ್ಲಿ ಯಾವ ಪೊಲೀಸರನ್ನೂ ಕಾಣಿಸದ ಕಾರಣ, ತನ್ನ ಸುರಕ್ಷತೆಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಮಾಡುತ್ತಾರೆ.

ಕೊನೆಗೂ ಎರಡು ಗಂಟೆಗಳ ನಂತರ ಪೊಲೀಸರು ಬರುತ್ತಾರೆ. ಆದರೆ ಅಷ್ಟು ತಡವಾಗಿ ಬಂದ ಪೊಲೀಸರು, ಆತ ತನ್ನ ಕ್ಯಾಮೆರಾವನ್ನು ಆಫ್ ಮಾಡಿದರೆ ಮಾತ್ರ ದೂರು ದಾಖಲಿಸಲು ಸಾಧ್ಯವೆಂದು ಹೇಳುತ್ತಾರೆ.

ಇದು ನಳಿನ್ ಯಾದವ್ ಎಂಬ ಹಾಸ್ಯಗಾರನೊಬ್ಬನ ಕಥೆ. ಆತ ಒಂದು ಕಾಲದಲ್ಲಿ ಪೂರ್ಣಕಾಲಿಕ ಹಾಸ್ಯನಟನಾಗಿದ್ದರು. ಸದ್ಯ ತನ್ನ ವೃತ್ತಿಜೀವನ ಪೂರ್ಣವಾಗಿ ಹಳಿತಪ್ಪಿದ ನಂತರ, ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರ ಇನ್ನೊಂದು ಕಥೆ ಇದೆ. ಮುನಾವರ್ ಫಾರೂಕಿ ಜೊತೆಗೆ 57 ದಿನಗಳನ್ನು ಜೈಲಿನಲ್ಲಿ ಕಳೆದ ಕಥೆ. ಅದೂ ಕೂಡ ತಾನು ಎಂದೂ ಹೇಳದ ಒಂದು ಜೋಕಿಗಾಗಿ.

ದಿ ವೈರ್ ಜೊತೆಗಿನ ಸಂಭಾಷಣೆಯಲ್ಲಿ ಯಾದವ್ ಹೀಗೆ ಹೇಳುತ್ತಾರೆ: “ನನ್ನ ಮನೆಯ ಸುತ್ತಮುತ್ತಲಿನ ಜನರು ಮಾಜಿ ಬಿಜೆಪಿ ಕೌನ್ಸಿಲರ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಆತ ನಿರಂತರವಾಗಿ ಪಕ್ಷಾಂತರ ಮಾಡುತ್ತಿರುವ ಒಬ್ಬ ವ್ಯಕ್ತಿ. ಈಗ ಆತ ಅಧಿಕಾರ ಕಳೆದುಕೊಂಡಿರುವ ಕಾರಣ ಸದ್ಯ ಯಾವ ಪಕ್ಷದಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಆತನ ಸುಮಾರು 30 ರಿಂದ 40 ಹಿಂಬಾಲಕರು ಅಲ್ಲೇ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ ಮತ್ತು ನನ್ನ ಮನೆಯನ್ನು ಹೊರತುಪಡಿಸಿ ಇಲ್ಲಿರುವ ಇತರ ಎಲ್ಲಾ ಮನೆಗಳು ಅವರ ನಿಯಂತ್ರಣದಲ್ಲಿವೆ.”

“ನನ್ನ ತಾಯಿ ನಿಧನರಾದಾಗ, ಆತ ನನ್ನ ಮನೆಯನ್ನು ಕಡಿಮೆ ಬೆಲೆಗೆ ಖರೀದಿಸಲು ಪ್ರಯತ್ನಿಸಿದ್ದ. ಅವರ ಕಾರ್ಯ ವಿಧಾನ ಎಷ್ಟು ಸರಳವಾಗಿದೆ ನೋಡಿ. ಮೊದಲು ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಾರೆ. ಕೊನೆಗೆ ಸಾಲಗಾರರ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತಾರೆ. ನಾನು ನನ್ನ ಮನೆಯನ್ನು ಮಾರಾಟ ಮಾಡಲು ನಿರಾಕರಿಸಿದೆ.”

ಆತಂಕದ ಜೀವನ: ಕಿರುಕುಳ ಮತ್ತು ಪ್ರತ್ಯೇಕತೆ
ಯಾದವ್ ಮಾರ್ಚ್ 16ರಂದು ಬೆಳಿಗ್ಗೆ 6:30ರ ಸುಮಾರಿಗೆ ತನ್ನ ಟೆರೇಸ್‌ಗೆ ಹೋದಾಗ ಬೈಕಿನ ಟೈರ್ ಒಂದು ಉರಿಯುತ್ತಿರುವುದನ್ನು ಗಮನಿಸುತ್ತಾರೆ. ತಮ್ಮ ನೆರೆಮನೆಯ ವಿಜಯ್ ಚೋಪ್ಡೆ ಅವರ ಬಳಿ ವಿಚಾರಿಸಿದಾಗ, ಆತ ಮತ್ತು ಆತನ ಬಾಡಿಗೆದಾರ ತನ್ನನ್ನು ನಿಂದಿಸಲು ಆರಂಭಿಸಿದರು ಎಂದು ಯಾದವ್ ಅವರ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ನಲ್ಲಿ ಹೇಳಲಾಗಿದೆ.

ಯಾದವ್ ಇದನ್ನು ಪ್ರತಿಭಟಿಸಿದಾಗ, ಯಾದವ್ ಮತ್ತು ಆತನ ಸಹೋದರನ ಮೇಲೆ ಹಲ್ಲೆ ನಡೆಸಿದ್ದರು. ಅವರ ಬಾಗಿಲು ಒದ್ದು, ಪೊಲೀಸರ ಬಳಿ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಡಯಲ್ 100 ಪೊಲೀಸರು ಮತ್ತು ಪಿತಾಂಪುರ್ ಠಾಣೆಯ ಪೊಲೀಸರು ತಮ್ಮ ಹೆಗಲಿಂದ ಈ ಪ್ರಕರಣವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು ಎಂದು ಕೂಡ ಆರೋಪಿಸಲಾಗಿದೆ.

‘ಚಲ್, ತುಜೆ ದಿಕ್ಕತ್ ಹೈ, ತೇರಿ ರಿಪೋರ್ಟ್ ಲಿಖೇಂಗೆ’ (‘ಸರಿ, ನಿಮಗೆ ಸಮಸ್ಯೆ ಇದೆ, ನಾವು ನಿಮ್ಮ ವರದಿಯನ್ನು ಬರೆಯುತ್ತೇವೆ’) ಎಂದು ಕೂಗುತ್ತಾ ಮತ್ತು ಅನುಚಿತವಾಗಿ ವರ್ತಿಸುತ್ತಾ ಪೊಲೀಸರು ಬಂದರು ಎಂದು ಯಾದವ್ ಆರೋಪಿಸುತ್ತಾರೆ. ಕೊನೆಗೆ ಪೊಲೀಸರು ವರದಿ ಬರೆಯಲು ಪ್ರಾರಂಭಿಸುತ್ತಾರೆ. ಆದರೆ ಅದನ್ನು ಸಣ್ಣ ಜಗಳಗಳವೆಂದೂ ನಿಂದನೆಯೆಂದೂ ಬರೆಯುತ್ತಾರೆ. ನಾನು ಅವರಿಗೆ ಹೇಳಿದೆ, ‘ನನ್ನ ಮನೆಗೆ ಬೆಂಕಿ ಹಚ್ಚಲಾಗಿದೆ. ನೀವು ಹೊರಗೆ 30 ರಿಂದ 40 ಜನರು ಸೇರಿರುವುದನ್ನು ನೋಡಿದ್ದೀರಿ.’ 40 ರಿಂದ 50 ಜನರು ಪೊಲೀಸ್ ಠಾಣೆಯಲ್ಲೂ ಜಮಾಯಿಸಿದ್ದರು. ಪೊಲೀಸರ ಮೇಲೆ ಒತ್ತಡ ಹೇರುವಂತೆ ನಾನು ನನ್ನ ವಕೀಲ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದೆ. ಕೊನೆಗೆ ಪೊಲೀಸರು ನನ್ನ ಎಫ್‌ಐಆರ್ ದಾಖಲಿಸಿದರು. ಆದರೆ ನನ್ನಿಂದಾದಷ್ಟು ಸಂಗತಿಗಳನ್ನು ಸೇರಿಸಿದರೂ ಅದು ದುರ್ಬಲವಾಗಿತ್ತು.

ಇದು ಮೊದಲ ದಾಳಿಯೇನಲ್ಲ. ಕಳೆದ ವರ್ಷ ದೀಪಾವಳಿಯಂದು, ಬಾಡಿಗೆಗೆ ನೀಡಿದ್ದ ಟೆರೇಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಯಾದವ್ ಮೊದಲಿಗೆ ಅದನ್ನು ಪಟಾಕಿ ಎಂದು ಭಾವಿಸಿದ್ದರು.

ಒಂದು ತಿಂಗಳೊಳಗೆ ಮತ್ತೊಮ್ಮೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಸಲ ನೆರೆಹೊರೆಯವರಿಗೆ ತನ್ನ ಬಾಡಿಗೆದಾರರು ಯಾವುದೋ ಸುಡುವ ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದಾರೆ, ಹಾಗಾಗಿ ಎಚ್ಚರದಿಂದಿರಿ ಎಂದು ಹೇಳುತ್ತಾರೆ.

ಆದರೆ ಮೂರನೇ ಬಾರಿ ಯಾವ ಸಂಶಯವೂ ಇರಲಿಲ್ಲ. ದಾಳಿಕೋರರು ತನ್ನ ಮನೆಯ ಹಿಂಭಾಗದ ಗೋಡೆಯಲ್ಲಿ ರಂಧ್ರ ಕೊರೆದಿದ್ದರು. ಅದೊಂದು ಉದ್ದೇಶಪೂರ್ವಕ ಕೆಲಸವಾಗಿತ್ತು. ಯಾದವ್ ಅವರನ್ನು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತದೆ.

“ಪೊಲೀಸರು ಸಹ ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವರು ಈಗಲೂ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಅಥವಾ ಅವರು ಸಾಮಾನ್ಯವಾಗಿ ಮುಸ್ಲಿಮರ ಮೇಲೆ ಏನೆಲ್ಲ ಕೆಟ್ಟ ಪದಗಳನ್ನು ಬಳಸುತ್ತಾರೋ ಅವೆಲ್ಲವನ್ನು ನನ್ನ ಮೇಲೆಯೂ ಬಳಸುತ್ತಾರೆ. ಅವರು ನನ್ನನ್ನು ಗೌರವಿಸುವುದಿಲ್ಲ. ಅವರು ದಣಿದವರಂತೆ ವರ್ತಿಸುತ್ತಾ ‘ಇದೆಲ್ಲವನ್ನು ಬಿಟ್ಟು ಯಾಕೆ ಸುಮ್ಮನೆ ಇರಬಾರದು?’ ಎಂದು ಕೇಳುತ್ತಾರೆ,” ಎಂದು ಯಾದವ್‌ ಆರೋಪಿಸುತ್ತಾರೆ.

ಯಾದವ್ ಅವರ ಮನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವವರ ವಿರುದ್ಧ ಈಗಾಗಲೇ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಆ ದಾಳಿಕೋರರನ್ನು ಇಂದದಿಗೂ ಬಂಧಿಸಲಾಗಿಲ್ಲ. ಬದಲಾಗಿ, ಯಾದವ್‌ ಅವರ ಮೇಲಯೇ ಪ್ರತಿ-ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ. ಪೊಲೀಸರು “ಜಗಳ” ಮತ್ತು “ಅಪಾಯವನ್ನುಂಟುಮಾಡಿದ್ದಕ್ಕಾಗಿ” ಯಾದವ್‌ ಅವರಿಗೇ ನೋಟಿಸ್‌ಗಳನ್ನು ನೀಡುತ್ತಾರೆ.

2021ರಲ್ಲಿ ಅವರ 57 ದಿನಗಳ ಜೈಲು ಶಿಕ್ಷೆ ಮುಗಿದ ಒಂದು ತಿಂಗಳ ನಂತರ, ಮತ್ತೆ ಅವರಿಗೆ ಕಿರುಕುಳ ನೀಡಿ ಮುಂಬೈ ಮತ್ತು ದೆಹಲಿಯಂತಹ ಹೊಸ ನಗರಗಳಿಗೆ ಅವರು ತನ್ನ ವೃತ್ತಿ ಬದುಕು ಕಟ್ಟಿಕೊಳ್ಳಲು ಅಲೆಯುವಂತೆ ಮಾಡುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಕಿರಿಯ ಸಹೋದರನ ಮೇಲೆ ಹಲ್ಲೆ ನಡೆಸಿ ತಿಂಗಳುಗಟ್ಟಲೆ ಹಾಸಿಗೆ ಹಿಡಿಯುವಂತೆ ಮಾಡಿದ್ದರು.

2023ರಲ್ಲಿ ಹೊಸ ವರ್ಷದ ಸಂಜೆ, ಯಾದವ್ ಪ್ರದರ್ಶನ ನೀಡುತ್ತಿದ್ದಾಗ ಮತ್ತೆ ದಾಳಿ ಮಾಡಲಾಗುತ್ತದೆ. ಒಂದು ಗುಂಪು ಜನರು ವೇದಿಕೆಗೆ ನುಗ್ಗಿ “ಭಾರತ್ ಮಾತಾ ಕಿ ಜೈ” ಮತ್ತು “ಕಾಮೆಡಿಯನ್ ಭಾರತ್ ಛೋಡೋ” ಎಂದು ಘೋಷಣೆಗಳನ್ನು ಕೂಗುತ್ತಾರೆ.

ಒಬ್ಬ ಮುಸ್ಲಿಂ ಹಾಸ್ಯಗಾರನ ಬೆಂಬಲಕ್ಕೆ ನಿಂತ ಕಾರಣಕ್ಕೆ ಜೈಲಿನಿಂದ ಬಿಡುಗಡೆಯಾದ ಮೂರು ವರ್ಷಗಳ ನಂತರವೂ ಆತ ಬೆಲೆ ತೆರಬೇಕಾಗಿತ್ತು.

ಯಾದವ್ ಮತ್ತು ಸಹೋದರನ ಮೇಲೂ ಹಲ್ಲೆ ನಡೆಯುತ್ತದೆ. ಒಂದು ಗುಂಪು ಜನರು ಅವರನ್ನು ಹೊಡೆದು, ನಿಂದಿಸಿ, ಮತ್ತೊಮ್ಮೆ ಅವರಿಗೆ “ದೇಶದ್ರೋಹಿ” ಎಂಬ ಹಣೆಪಟ್ಟಿ ಕಟ್ಟುತ್ತದೆ. ಆಗಲೇ ಅವರು ತಮ್ಮ ಮೊದಲ ಎಫ್‌ಐಆರ್ ದಾಖಲಿಸುವುದು.

“ನಮಗೆ ಯಾರೂ ಇಲ್ಲ ಎಂದು ಅವರಿಗೆ ಗೊತ್ತು. ಅವರು ನನ್ನ ಜೈಲುವಾಸವನ್ನು ನನ್ನ ವಿರುದ್ಧ ಬಳಸುತ್ತಾರೆ. ಪ್ರತ್ಯೇಕಿಸುವುದರಿಂದ ಅವರಿಗೆ ನನ್ನನ್ನು ಗುರಿಯಾಗಿಸಲು ಸುಲಭವಾಗುತ್ತದೆ. ಹಾಸ್ಯಗಾರನ ಮನೆ ಉರುಳಿದರೆ ಆಕ್ರೋಶ ಹುಟ್ಟುವುದಿಲ್ಲ. ಆದರೆ ಒಬ್ಬ ಅನಾಥನನ್ನು ಮನೆಯಿಂದ ಹೊರಹಾಕಿದರೆ ಆಕ್ರೋಶ ಹುಟ್ಟುತ್ತದೆ.”

ಎಂದೂ ಸಿಡಿಸದ ಒಂದು ಹಾಸ್ಯ ಚಟಾಕಿ
ಯಾದವ್ ಜನವರಿ 1, 2021ರಂದು ಇಂದೋರ್‌ನ ಮನ್ರೋ ಕೆಫೆಯಲ್ಲಿ ತಮ್ಮ ಐದು ನಿಮಿಷಗಳ ಸೆಟ್ ಅನ್ನು ಪೂರ್ಣಗೊಳಿಸುತ್ತಿದ್ದರು. ಆಗ ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್‌ ಸಿಂಗ್ ಅವರ ಪುತ್ರ ಮತ್ತು ಹಿಂದ್ ರಕ್ಷಕ್‌ ಸಂಘಟನೆಯ ಸಂಚಾಲಕ ಏಕಲವ್ಯ ಸಿಂಗ್‌ ಗೌರ್‌ ನೇತೃತ್ವದ ಗುಂಪೊಂದು ವೇದಿಕೆಗೆ ನುಗ್ಗಿ ಇನ್ನೂ ಕಾರ್ಯಕ್ರಮ ಆರಂಭಿಸಿರದಿದ್ದ ಫಾರೂಖಿಯವರ ಮೇಲೆ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

ಇಂದೋರ್ ಪೊಲೀಸರು ವೇದಿಕೆಯಲ್ಲಿದ್ದ ಇಬ್ಬರು ಹಾಸ್ಯಗಾರರಾದ ಯಾದವ್ ಮತ್ತು ಫಾರೂಕಿ ಅವರನ್ನು ಬಂಧಿಸುತ್ತಾರೆ. ಜೊತೆಗೆ ಇತರ ಮೂವರನ್ನೂ. ಮರುದಿನ, ಪೊಲೀಸರು ಮೊದಲ ಎಫ್‌ಐಆರ್‌ನಲ್ಲಿ ಹೆಸರಿಸದ ಫಾರೂಕಿಯ ಸ್ನೇಹಿತ ಸದಾಕತ್ ಖಾನ್‌ರನ್ನು ಕೂಡ ಬಂಧಿಸುತ್ತಾರೆ.

ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಮತ್ತು ಸಾಂಕ್ರಾಮಿಕ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಆರು ಜನರ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ (295-ಎ, 298, 269, 188 ಮತ್ತು 34) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ಯಾದವ್‌ ಆ ಬಂಧನ ನಡೆದ ದಿನವೇ ಫಾರೂಕಿಯನ್ನು ಭೇಟಿಯಾಗಿದ್ದರು. “ನಾವು ಆರು ಮಂದಿ ಜೈಲು ಸೇರಿದೆವು. ಆದರೆ ಉಳಿದವರಿಗೆ ಕೆಲಸವಿತ್ತು. ಹಾಗಾಗಿ ಅದು ಅವರ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಮುನಾವರ್ ಮತ್ತು ನಾನು ಮಾತ್ರ ಹಾಸ್ಯಗಾರರು. ಮುನಾವರ್‌ ಅಂದು ಅಲ್ಲಿದ್ದ ಕಾರಣ ಅದೆಲ್ಲ ಸಂಭವಿಸಿತು. ಒಬ್ಬ ಪ್ರಖ್ಯಾತ ವ್ಯಕ್ತಿ ಇಂತಹದರಿಂದ ಮತ್ತೆ ಚೇತರಿಸಿಕೊಳ್ಳಬಹುದು. ಆದರೆ ಕೇವಲ 10,000 ರಿಂದ 20,000 ರೂ. ಗಳಿಸುವ ವ್ಯಕ್ತಿಯೊಬ್ಬ ಒಮ್ಮೆ ಶೂನ್ಯಕ್ಕಿಳಿದರೆ ಮತ್ತೆ ಪ್ರಾರಂಭಿಸುವುದು ಬಹಳ ಕಷ್ಟ. ಅದೊಂದು ಹೋರಾಟ.”

ಬದುಕು ಮರುಕಟ್ಟುವ ಹೋರಾಟ
ಫಾರೂಕಿ 37 ದಿನಗಳನ್ನು ಜೈಲಿನಲ್ಲಿ ಕಳೆದರೆ, ಯಾದವ್ 57 ದಿನಗಳನ್ನು ಕಳೆಯುತ್ತಾರೆ. ತಾನು ನಂಬಿದ ಕಲೆ ಮತ್ತು ಕಲಾವಿದರ ಪರವಾಗಿ ನಿಂತಿದ್ದಕ್ಕಾಗಿ ಈ ಶಿಕ್ಷೆಯನ್ನು ಅನುಭವಿಸಿದ್ದರು.

ಯಾದವ್‌ ಈಗಲೂ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಇಂದೋರ್ ಪೊಲೀಸರು ಪ್ರಕರಣದಲ್ಲಿ ಆರೋಪಪಟ್ಟಿಯನ್ನು ಮಾತ್ರ ಇದುವರೆಗೆ ಸಲ್ಲಿಸಿಲ್ಲ.

ಇತರರು ಮತ್ತೆ ತಮ್ಮ ಬದುಕಿಗೆ ಮರಳಿರಬಹುದು. ಆದರೆ ಯಾದವ್ ಮಾತ್ರ ಈ ಘಟನೆಯಿಂದಾಗಿ ಬಹುತೇಕ ಎಲ್ಲವನ್ನೂ ಕಳೆದುಕೊಂಡರು. ಜೈಲಿನಲ್ಲಿ ಕಳೆದ ದಿನಗಳು ಅವರ ಬದುಕನ್ನು ತಲೆಕೆಳಗಾಗಿಸಿತ್ತು.

“ನಾನು ಇಂದೋರ್‌ನಲ್ಲಿ ಸ್ಟ್ಯಾಂಡ್ಅಪ್ ಕಾಮೆಡಿಯನ್ನು ಪ್ರಾರಂಭಿಸಿದ ಮೊದಲಿಗ. ಓಪನ್ ಮೈಕ್‌ಗಳನ್ನು ಆಯೋಜಿಸುತ್ತಿದ್ದೆ. ಭಾರತದ ಉನ್ನತ ಹಾಸ್ಯಗಾರರೊಂದಿಗೆ ಪ್ರದರ್ಶನ ನೀಡುತ್ತಿದ್ದೆ. 2021ರ ಮೊದಲು, ನಾನು ಚೆನ್ನಾಗಿ ಸಂಪಾದಿಸುತ್ತಿದ್ದೆ. ಏನಿಲ್ಲವೆಂದರೂ ತಿಂಗಳಿಗೆ 25,000 ರೂಪಾಯಿ ಲಭಿಸುತ್ತಿತ್ತು. ಮತ್ತು ನನ್ನದೇ ಆದ ಒಂದು ಸ್ವಂತ ಕಾಮೆಡಿ ಕ್ಲಬ್ ತೆರೆಯಲು ಯೋಜಿಸಿದ್ದೆ.”

“ದುರದೃಷ್ಟವಶಾತ್, ಜೈಲು ಎಲ್ಲವನ್ನೂ ಹಾಳುಮಾಡಿತು. ಯಾವ ವೇದಿಕೆಗಳು ನನ್ನನ್ನು ಬಳಿಗೆ ಬಿಟ್ಟುಕೊಳ್ಳಲಿಲ್ಲ. ಸಂಘಟಕರು ಕೈ ಬಿಟ್ಟಿದ್ದರು. ನಾನು ದೆಹಲಿ ಮತ್ತು ಮುಂಬೈನಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವಾಗ, ನನಗೆ ಸಿಕ್ಕಿದ್ದು ಕಷ್ಟ ಮಾತ್ರ. ಅಂದಿನಿಂದ, ನಾನು ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೇನೆ. ದಿನಕ್ಕೆ 200 ರೂ.ಗೆ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ಕೊನೆಗೆ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ಸೇರಿಕೊಂಡೆ. ನನ್ನ ಜೈಲು ಶಿಕ್ಷೆಯ ಬಗ್ಗೆ ತಿಳಿದಾಗ ಆ ಕೆಲಸವನ್ನು ಕಳೆದುಕೊಂಡೆ.”

“ನನ್ನ ತಮ್ಮ ಕಾಲೇಜು ಬಿಡಬೇಕಾಯಿತು. ಈಗ, ನಾನು ಬದುಕಿಗಾಗಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಾ ಇಂದೋರ್‌ನಲ್ಲಿ ಕಾಲ ಕಳೆಯುತ್ತಿದ್ದೇನೆ. ಅಂದು ಆ ಘಟನೆ ನಡೆದಿರದಿರುತ್ತಿದ್ದರೆ, ಇಂದು ನನಗೆ ನನ್ನದೇ ಆದ ಕಾಮೆಡಿ ರೂಂ ಇರುತ್ತಿತ್ತು” ಎಂದು ಯಾದವ್ ಹೇಳುತ್ತಾರೆ.

ಯಾದವ್ ತನ್ನ ದುರಾದೃಷ್ಟವನ್ನು ಹಳಿಯುವಂತೆ ಒಂದು ವ್ಯಂಗ್ಯ ಭರಿತ ನಗು ಬೀರುತ್ತಾ ಹೇಳಿದರು: “ಗೆಳೆಯಾ, ನಾನು ಏನೂ ಮಾಡಿಲ್ಲ. ಒಮ್ಮೆ ಕೂಡ ರಾಜಕೀಯ ಕಾಮೆಡಿ ಮಾಡಿಲ್ಲ.” ಜೈಲಿಗೆ ಹೋಗುವ ಮೊದಲು ನನ್ನ ಯಾವುದೇ ವೀಡಿಯೊಗಳು ವೈರಲ್ ಆಗಿರಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ವೀಡಿಯೊಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೆ. ನಾನು ನನ್ನ ಕನಸುಗಳನ್ನು ಸಾಧಿಸುವ ಹಾದಿಯಲ್ಲಿದ್ದೆ. ಈಗ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ.”

ಯಾದವ್‌ ಜೈಲಿನಿಂದ ಬಿಡುಗಡೆಗೊಂಡು ಹಿಂದಿರುಗಿದಾಗ ಸುತ್ತಲ ಸಮಾಜ ಅವರನ್ನೊಬ್ಬ ಮಹಾಪರಾಧಿ ಎಂಬಂತೆ ಪರಿಗಣಿಸಿತು – ಯಾವುದೋ ಯುಎಪಿಎ ಅಪರಾಧಿಯಂತೆ. ಅವರ ಮುಖವು ಅದಾಗಲೇ ಟಿವಿಯ ಮೂಲಕ ಜಗದಗಲ ವ್ಯಾಪಿಸಿತ್ತು. ಮಾಧ್ಯಮ ವರದಿಗಳು ಅವರ ಮೇಲಿನ ಆರೋಪಗಳಿಗೆ ವೇಗವರ್ಧಕಗಳಾದವು. ಫಾರೂಕಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ “ಹಿಂದೂ ವಿರೋಧಿ” ಎಂದು ಬ್ರಾಂಡ್ ಮಾಡಲಾಯಿತು.

ಈಗ, ಯಾರಿಂದಲೂ ಗುರುತಿಸಲ್ಪಡದೆ ಬೀದಿಗಳಲ್ಲಿ ನಡೆದಾಡುತ್ತಾರೆ. ಆದರೆ ತನ್ನ ವಿರುದ್ಧ ಅಪ್ರಚಾರ ಮಾಡಿದವರು ಮತ್ತು ಕಿರುಕುಳ ನೀಡುತ್ತಿದ್ದವರು ಈಗ ಗಮನವನ್ನು ಮತ್ತೆ ಬದಲಾಯಿಸಿದ್ದಾರೆ. ಯಾದವ್‌ ಅವರ ಜೈಲು ಶಿಕ್ಷೆಯನ್ನು ಮುಂದಿಟ್ಟುಕೊಂಡು ಅವರ ಮನೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಹೋರಾಟ ಈಗಲೂ ಮುಂದುವರೆದಿದೆ.

ಭಾರತದಲ್ಲಿ ಸ್ಟ್ಯಾಂಡ್ಅಪ್ ಕಾಮೆಡಿಯು ಮೈನ್‌ ಫೀಲ್ಡ್‌ ಮೇಲಿನ ನಡಿಗೆಯಾಗಿ ಬದಲಾಗಿದೆ ಎಂದು ಯಾದವ್ ಹೇಳುತ್ತಾರೆ. ಈ ವರ್ಷ ಅವರು ಐದು ನಿಮಿಷಗಳ ಸೆಟ್‌ನೊಂದಿಗೆ ಮತ್ತೆ ವೇದಿಕೆ ಹತ್ತುವ ಪ್ರಯತ್ನ ನಡೆಸಿದರು. ಆದರೆ ಒಂದು ಜೋಕ್ ಕೆಲವರನ್ನು ಮತ್ತೆ ಕೆರಳಿಸಿತು ಎಂದು ಅವರು ಹೇಳುತ್ತಾರೆ.

ಇಂದೋರ್‌ನಲ್ಲಿ ಅವರು ಮುಕ್ತವಾಗಿ ಪ್ರದರ್ಶನ ನೀಡುವುದು ಈಗ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

“ಇಂದೋರ್ ಆಕ್ರೋಶಕ್ಕಾಗಿ ಬೇಟೆಯಾಡುವ ಊರಾಗಿ ಬದಲಾಗಿದೆ. ಎಲ್ಲರೂ ‘ಸಂಕೇತಗಳಿಗೆ’ ಅಂಟಿಕೊಳ್ಳುತ್ತಿದ್ದಾರೆ. ಇಲ್ಲಿ ಕೇಸರಿ ಬಣ್ಣದ ನ್ಯಾಪ್‌ಕಿನ್‌ಗಳು ಕೂಡ ಪ್ರತಿಭಟನೆಗಳಿಗೆ ಕಾರಣವಾಗುತ್ತವೆ. ಬಿಜೆಪಿ ಅವರನ್ನು [ನ್ಯಾಪ್‌ಕಿನ್‌ಗಳ ಬಣ್ಣವನ್ನು ಪ್ರತಿಭಟಿಸಿದವರನ್ನು] ಕಳುಹಿಸಿದೆಯೇ? ಬಹುಶಃ ಇರಲಿಕ್ಕಿಲ್ಲ. ಆದರೆ ಇಲ್ಲಿನ ವಾತಾವರಣವು ಅವರನ್ನು ಹಾಗೆ ಮಾಡುವಂತೆ ಪ್ರೇರೇಪಿಸುತ್ತದೆ. ಹಲ್ಲೆಕೋರರು ಮತ್ತು ಅಪರಾಧಿಗಳು ಮುಕ್ತವಾಗಿ ಓಡಾಡುವುದನ್ನು ಸಂಭ್ರಮಿಸುವಾಗ, ಜನರು ತಾವಾಗಿ ಅಂತಹ ಕೃತ್ಯಗಳಲ್ಲಿ ಶಕ್ತಿಯನ್ನು ಕಾಣುತ್ತಾರೆ.”

ಈ ವರದಿಗಾರ ಸೆಕ್ಟರ್ 1 ಪಿತಾಂಪುರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಕಳೆದ ವಾರ ಯಾದವ್ ಅವರ ಮನೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಇತ್ತೀಚಿನ ಯಾವುದೇ ಮಾಹಿತಿಯನ್ನು ನೀಡಲು ಅಸಿಸ್ಟಂಟ್ ಸಬ್ಇನ್‌ಸ್ಪೆಕ್ಟರ್ ಅಜಯ್ ಭಡೋರಿಯಾ ನಿರಾಕರಿಸಿದರು.

You cannot copy content of this page

Exit mobile version