ಸ್ಕಿಲ್ ಹಗರಣದ ಆರೋಪದ ಮೇಲೆ ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ. ತಡರಾತ್ರಿ ಸಿಐಡಿ ಪೊಲೀಸರು ಆಂದ್ರಪ್ರದೇಶದ ನಂದ್ಯಾಲದಲ್ಲಿ ಬಂಧಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಮೇಲೆ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ 371 ಕೋಟಿ ರೂ. ಅಕ್ರಮ ಎಸಗಿದ ಆರೋಪ ಬಂದಿದ್ದು, ಹಗರಣ ಸಂಬಂಧ ಈವರೆಗೆ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಬಂಧಿಸಲಾಗಿದೆ.
ಚಂದ್ರಬಾಬು ನಾಯ್ಡು ಅವರ ವಿರುದ್ಧ 58 ಕೋಟಿ ಯೋಜನೆಯ ವೆಚ್ಚವನ್ನು 371 ಕೋಟಿ ರೂ.ಗೆ ಹೆಚ್ಚಿಸಿದ ಆರೋಪ ಕೇಳಿ ಬಂದಿತ್ತು. ಕೋರ್ಟ್ ಉತ್ತರಿಸದ ಕಾರಣ ಹಾಗೂ ವಿವಿಧ ಆರೋಪದ ಮೇಲೆ ಹೈಕೋರ್ಟ್ ಸೂಚನೆ ಮೇರೆಗೆ ಐಪಿಸಿ ಸೆಕ್ಷನ್ 166, 167, 481, 420, 465, 468, 471, 409, 201, r/w 109, 34 ಮತ್ತು 37ರ ಅಡಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ.
ಚಂದ್ರಬಾಬು ನಾಯ್ಡು ಬಂಧನಕ್ಕೆ ಪೊಲೀಸರು ಬಂದ ಸಂದರ್ಭದಲ್ಲಿ ಪೊಲೀಸರಿಗೇ ಧಿಕ್ಕಾರ ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಅರೆಸ್ಟ್ ವಾರೆಂಟ್ ಬೇಕು, ಎಫ್ಐಆರ್ ಆಗಿಲ್ಲ, ನಮ್ಮ ಹಕ್ಕು ಕಸಿಯುವ ಕೆಲಸ ಆಗ್ತಿದೆ, ಮುಖ್ಯಮಂತ್ರಿ ಜಗನ್ ಗೆ ಧಿಕ್ಕಾರ ಎಂದೆಲ್ಲಾ ಕೂಗಿ ಹೈಡ್ರಾಮ ಮಾಡಿದ್ದಾರೆ ಎನ್ನಲಾಗಿದೆ.