Friday, June 20, 2025

ಸತ್ಯ | ನ್ಯಾಯ |ಧರ್ಮ

ಉಚಿತಗಳು | ಮಹಿಳೆಯರ ಬೆವರಿನಲ್ಲಿ ಬೆಳೆಯುವ ಆರ್ಥಿಕತೆಯಲ್ಲಿ ಅವರ ಹಕ್ಕಿನ ಪಾಲು

ಶ್ರಮಿಕರ ಬೆವರಿನಲ್ಲಿ, ಮಹಿಳೆಯರ ಬೆವರಿನಲ್ಲಿ ಬೆಳೆಯುತ್ತಿರುವ ಉಳ್ಳವರ ಪರವಾದ ಆರ್ಥಿಕ ಅಭಿವೃದ್ಧಿಯಲ್ಲಿ ಅವಳ ಪಾಲನ್ನು ಅವಳಿಗೆ ನೀಡುವುದು ಪ್ರಭುತ್ವದ ಒಂದು ಪ್ರಾಮಾಣಿಕ ಕರ್ತವ್ಯವಾಗಿದೆ. ಮತ್ತು ಅದನ್ನು ಪಡೆದುಕೊಂಡು ಘನತೆಯಿಂದ ಬದುಕುವುದು ಮಹಿಳೆಯರಾದ ನಮ್ಮ ಹಕ್ಕಾಗಿದೆ – ಕೆ ನೀಲಾ, ಹೋರಾಟಗಾರರು

ಕರ್ನಾಟಕ ಸರಕಾರವು ಕುಟುಂಬದ ಹಿರಿಯ ಮಹಿಳೆಯರಿಗೆ ಧನ ಸಹಾಯ, ಲಗ್ಜುರಿ ಮತ್ತು ಎಸಿ ಬಸ್ಸುಗಳನ್ನು ಹೊರತುಪಡಿಸಿ ಕೆಂಪು ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವುದು ಸಮಾಜದಲ್ಲಿ ನಾನಾ ಚರ್ಚೆ ಟೀಕೆಗಳಿಗೆ ಕಾರಣವಾಗಿದೆ. ಇದು ಹೊಸದಲ್ಲ. ರೈತರ ಸಾಲ ಮನ್ನಾ ಮಾಡಿದರೆ ರೈತರು ಮೈಗಳ್ಳರಾಗುತ್ತಾರೆ. ಬಿಟ್ಟಿ ಪಡೆಯುವ ಚಾಳಿ ಮುಂದುವರೆಯುತ್ತದೆ. ಅಕ್ಕಿ ಉಚಿತವಾಗಿ ಯಾಕೆ ಕೊಡಬೇಕು? ಹೀಗೆ ಮಾಡಿ ಮಾಡಿಯೇ ಕೂಲಿಕಾರರು ರೈತರು ಮಹಿಳೆಯರಿಗೆಲ್ಲ ಅಡ್ಡ ಹಾದಿ ಹಿಡಿಸಲಾಗುತ್ತಿದೆ. ಇದು ನಿಜವಾದ ಅಭಿವೃದ್ಧಿಗೆ ಮಾರಕ ಅಂತೆಲ್ಲ ವಾದ ಹರಿಯಬಿಡಲಾಗುತ್ತಿದೆ. ಈ ವಾದ ಮಾಡುವವರು ಯಾವತ್ತಾದರೂ ಅತಿ ಹೆಚ್ಚು ತೆರಿಗೆ ನಮ್ಮ ರಾಜ್ಯದಿಂದ ಹೋದರೂ ಕೇಂದ್ರ ಸರಕಾರವು ನಮ್ಮ ಪಾಲಿನ ತೆರಿಗೆ ಯಾಕೆ ಕೊಡುತ್ತಿಲ್ಲ? ಮಹಿಳೆಯರಷ್ಟು, ರೈತ ಕಾರ್ಮಿಕರಷ್ಟು ದುಡಿಯದಿದ್ದರೂ ಇಷ್ಟೊಂದು ಸೌಲಭ್ಯ ಉಳ್ಳವರಿಗೆ ಯಾಕಿದೆ? ಕಾರ್ಪೋರೆಟ್ ಗಳು ದೇಶದ ಸಂಪತ್ತನ್ನೆಲ್ಲ ಲೂಟಿ ಹೊಡೆದರೂ ಮತ್ತೆ ಅವರ ಸಾಲ ಮನ್ನಾ ಮಾಡಲಾಗುತ್ತಿದೆ ಯಾಕೆ? ಅಂತ ಯಾವತ್ತಾದರೂ ಪ್ರಶ್ನಿಸಿದ್ದಾರೆಯೇ? ಇಲ್ಲ. ಅಂದರೆ ಮಹಿಳೆಯರಿಗೆ ಮತ್ತು ಶ್ರಮಿಕರಿಗೆ ಸಿಗುವ ಅತ್ಯಂತ ಕನಿಷ್ಠ ಸೌಲಭ್ಯಗಳೂ ದೊರಕಬಾರದೆಂಬ ಅತಿ ಕ್ರೂರ ಭಾವನೆ ಇವರ ವಾದದಲ್ಲಿ ಅಡಗಿದೆ. ಈ ವಾದ ಹರಿಯಬಿಡುವವರೆ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅಕ್ಷರ ಕೊಡುವಲ್ಲಿ ಅನ್ನವೇಕೆ? ಬಿಸಿಯೂಟ ನಿಲ್ಲಿಸಿ. 1 ರೂ ಕೇಜಿ ಅಕ್ಕಿ ನಿಲ್ಲಿಸಿ.. ಇತ್ಯಾದಿ ಬೊಬ್ಬೆ ಹೊಡೆಯುವವರು.

ವಾದಗಳು ಹೀಗೆಲ್ಲ ಇರುತ್ತವೆ…

ನಾವೆಲ್ಲ ಚಿಕ್ಕವರಿದ್ದಾಗ ಕೆಲವು ಯುವತಿಯರು ಹೆಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಳ್ಳುತ್ತಿದ್ದರು. ಸಮಾಜದಲ್ಲಿ ಅತ್ಯಂತ ವಿಡಂಬನಾತ್ಮಕವಾಗಿ ಓತಪ್ರೋತ ಅಣಕಗಳು ವ್ಯಂಗ್ಯಗಳ ಹುಟ್ಟಿಸಿ ಹರಿಯಬಿಟ್ಟರು. ಇವರಿಗ್ಯಾಕೆ ಎಂಬ ವಾದಗಳು ಏನೆಲ್ಲ ರೂಪದಲ್ಲಿ ಅವತರಿಸುತ್ತಿವೆ ಎಂಬುದನ್ನು ನೋಡಬಹುದು. ದಲಿತ ಹುಡುಗ ಕೈಗೆ ಗಡಿಯಾರ ಯಾಕೆ ಕಟ್ಟಿದ? ಹೊಸ ಬಟ್ಟೆ ತೊಟ್ಟು ಇನ್‍ಶರ್ಟ್ ಯಾಕೆ ಮಾಡಿದ? ಅಸ್ಪೃಷ್ಯರು ಜೋಡಿ ಮದುವೆಯಲ್ಲಿ ಸಂಭ್ರಮದಿಂದ ಕುದುರೆ ಮೇಲೆ ಯಾಕೆ ಕೂಡಬೇಕು? ಹಿಂದಿನಂತೆ ಕತ್ತಲಲ್ಲಿಯೇ ಯಾರಿಗೂ ಗೊತ್ತಾಗದಂತೆ ಯಾಕೆ ಮದುವೆಯಾಗಬಾರದು? ಆ ಹೆಂಗಸಿಗೆಷ್ಟು ಸೊಕ್ಕು.. ತಲೆ ಎತ್ತಿ ಪ್ರಶ್ನಿಸುತ್ತಾಳೆ…  ಹೀಗೆ ಇನ್ನೂ ಬೆಳೆಸಬಹುದು; ಇವರ ವಾದದೊಳಗಿನ ಆಳ ಬಗೆಯಬಹುದು.

ಉದ್ಯೋಗ ಖಾತ್ರಿಯ ಕೆಲಸ ನಡೆದಾಗ ಈಗೀಗ ಕೆಲವರು ಸ್ವಲ್ಪ ದೊಡ್ಡ ದ್ವಿಚಕ್ರ ವಾಹನ (ಹೀರೋಹೊಂಡಾದಂತಹದ್ದು)  ತೆಗೆದುಕೊಂಡು ಬರುತ್ತಾರೆ.  ಊರೊಳಗಿನ ಉಳ್ಳವರು ವ್ಯಂಗ್ಯವಾಡುತ್ತಾರೆ. ‘ಅಬಾಬಾಬಾ ಗಾಡಿ ಮ್ಯಾಲ ಬಂದು ಅದೇನು ಮಣ್ಣಿನ ಕೆಲಸ ಮಾಡ್ತಿಯಪಾ.. ದುಡದ ಉಣ್ಣಾಂವ ನಿಂಗ್ಯಾಕ ಗಾಡಿ? ಒಟ್ಟನಾಗ ಸಂಘದೋರು ಸರಕಾರದೋರು ಸೇರಿ ದುಡ್ಯಾವ್ರಿಗಿ ಕುದರಿ ಏರಸ್ಯಾರ’  ಅಂದರೆ ಮಣ್ಣಿನ ಕೆಲಸ ಮಾಡುವವರು ಗಾಡಿ ಹತ್ತಬಾರದು. ಒಳ್ಳೆ ಧಿರಿಸು ಧರಿಸಬಾರದು. ಎಲ್ಲ ಸೌಲಭ್ಯಗಳಿಂದ ವಂಚಿತರಾಗಿ ಮಣ್ಣಿನ ಮಕ್ಕಳಾಗಿ ಕೈ ಮುಗಿದು ನಡು ಬಗ್ಗಿಸಿ ಇರಬೇಕೆಂಬುದು ಇವರ ವಾದ. ಮನೆಯ ಪುರುಷನ ಗಾಡಿಯ ಹಿಂದೆ ಕೂತು ಬುಟ್ಟಿ ಗುದ್ದಲಿ ಸಲಿಕೆ ಹಿಡಿದುಕೊಂಡು ಬರುವ ಮಹಿಳೆಯೇ ಒಂದು ಬುಲೆಟ್ ಓಡಿಸಿಕೊಂಡು ಬರುವಂತಾದರೆ ಗಾಡಿ ಓಡಿಸುವ ಪುರುಷ, ಸಮಾಜದ ಜನ ಎಲ್ಲರೂ ಸೇರಿಯೇ ಏನು ಅನ್ನಬಹುದು ಅಂತ ಕಲ್ಪಿಸಿಕೊಳ್ಳಿ. ಇಂತಹ ಸಂದರ್ಭದಲ್ಲಿ ಸರಕಾರವೇ ಉಚಿತ ಎನ್ನುವ ಶಬ್ದ ಕಿತ್ತು ಹಾಕಿ ಅವರ ದುಡಿಮೆಯ ಪಾಲು ಹಕ್ಕಾಗಿಸಿ ದೊರಕಿಸಬೇಕು.

ಮಹಿಳೆ ಬರಿಗೈ ಬಡಪಾಯಿ..

ಮಹಿಳೆ ಅಂದರೇನೇ ಅದು ದುಡಿಮೆಗೆ ಇರುವ ಇನ್ನೊಂದು ಹೆಸರು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾಲು ದೊಡ್ಡದಿದೆ. ಆದರೆ ಅವಳ ದುಡಿಮೆಗೆ ಆರ್ಥಿಕ ಮುಖ ಬೆಲೆಯು ತೀರ ಕಡಿಮೆ ಮತ್ತು ಮನೆಗೆಲಸಕ್ಕಂತೂ ಯಾವುದೇ ಆರ್ಥಿಕ ಬೆಲೆಯಿಲ್ಲ. ಮನೆಗೆಲಸ ಪೂರ್ತಿ ಬಿಟ್ಟಿಯಾಗಿಯೇ ಅವಳಿಂದ ಪಡೆಯಲಾಗುತ್ತಿದೆ. ಕೃಷಿ ಮತ್ತಿತರ ಕೆಲಸಗಳಿಗೆ ಪುರುಷರಿಗಿಂತಲೂ ಅತ್ಯಂತ ಕಡಿಮೆ ಕೂಲಿ ಕೊಡಲಾಗುತ್ತಿದೆ. ಆದರೆ ಶ್ರಮದಲ್ಲಿ ಅವಳ ಪಾಲು ಅಧಿಕವಾಗಿದೆ. ಕೃಷಿಯಲ್ಲಿ ಶೇ.80% ರಷ್ಟು ಕೆಲಸಗಳನ್ನು ಅವಳೇ ನಿರ್ವಹಿಸುತ್ತಾಳೆ. ಕಟ್ಟಡ ನಿರ್ಮಾಣದಲ್ಲಿ ಅವಳ ಶ್ರಮ ಅಧಿಕ. ಆದರೆ ಗೋಡೆ ಕಟ್ಟುವುದಕ್ಕೆ, ಮತ್ತಿತರ ತಾಂತ್ರಿಕ ಕೆಲಸಗಳಿಗೆ ಹೆಚ್ಚು ಕೂಲಿ ಇದೆ. ವಸ್ತುಗಳ ಉತ್ಪಾದನೆ ಮಾಡುವ ಕಾರ್ಖಾನೆಗಳಲ್ಲಿ ಅಥವಾ ಅವಳು ಕೆಲಸ ಮಾಡುವ ಯಾವುದೇ ವಿಭಾಗಗಳಲ್ಲಿ ಮಾಡುವಾಗ ಮನೆಯ ಕೆಲಸ ಮತ್ತು ಮನೆಜನರಿಗೆ ಸಂಬಂಧ ಪಟ್ಟ ಜವಾಬ್ದಾರಿ ನಿರ್ವಹಿಸಿಯೇ ಹೋಗುವಳು. ಮಹಿಳೆಯು ಮೂರು ಪಟ್ಟು ದುಡಿಮೆ ಮಾಡುವಳು. ಮನೆಗೆಲಸ, ಮನೆಯ ಹೊರಗಿನ ಕೆಲಸ ಮತ್ತು ಪ್ರಜನನ ಪ್ರಕ್ರಿಯೆ.. ಹೀಗೆ ಮೂರು ಪಟ್ಟು ದುಡಿಮೆಯು ಸಮಾಜ ಮತ್ತು ಕುಟುಂಬ ಅವಳಿಂದ ಪಡೆಯುತ್ತದೆ. ಆದರೆ ಅವಳಿಗೆ ಆರ್ಥಿಕ ಸಮಾನತೆಯ ಮತ್ತು ಹಕ್ಕಿನ ಪ್ರಶ್ನೆ ಬಂದಾಗ ಕುಟುಂಬವೂ, ಸಮಾಜವೂ ನಿರಾಕರಿಸುತ್ತದೆ. ಆಸ್ತಿಯಲ್ಲಿ ಕಾನೂನಾತ್ಮಕವಾಗಿ ಹಕ್ಕಿದ್ದರೂ ಎರಡೂ ಕುಟುಂಬ(ಗಂಡನ ಮನೆ ಮತ್ತು ತವರ ಮನೆ)ಗಳಿಂದಲೂ ತಿರಸ್ಕಾರ ಎದುರಿಸಬೇಕು. ಹಕ್ಕಿನಿಂದ ಹೋರಾಡಿ ಪಡೆದರೆ ಸಂಬಂಧಗಳು ಶಿಥಿಲಗೊಳ್ಳುತ್ತವೆ ಅಥವಾ ದೂರವಾಗುತ್ತವೆ. ಎಷ್ಟೋ ಸಾರಿ ಸೇಡು ಉಂಟಾಗಿ ಅವಳ ಬದುಕನ್ನೇ ಅಲ್ಲೋಲಕಲ್ಲೋಲ ಗೊಳಿಸುತ್ತವೆ. ಒಂಟಿ ಮಹಿಳೆ, ಆರ್ಥಿಕವಾಗಿ ಹಿಂದುಳಿದ ಮಹಿಳೆ ಮತ್ತು ಆರ್ಥಿಕ ಸಬಲವಾಗಿರುವ ಕುಟುಂಬದ ಸದಸ್ಯೆಯೂ ಸಹ ಆರ್ಥಿಕ ಸ್ವಾತಂತ್ರ್ಯದಿಂದ ವಂಚಿತಳಾದ ಮಹಿಳೆ ಇವರೆಲ್ಲರೂ ಮೂರು ಪಟ್ಟು ದುಡಿಮೆಯನ್ನು ಧಾರೆಯೆರೆದೂ ಬರಿಗೈಯ ಬಡಪಾಯಿಯಾಗಿಯೇ ಇರುವವರು!

ಬಿಟ್ಟಿಯಾಗಿ ಬಳಕೆಯಾಗುವ ಅವಳ ಶ್ರಮ..

ಕುಟುಂಬ ಸಮಾಜ ಮತ್ತು ಪ್ರಭುತ್ವವು ಮಹಿಳೆಯನ್ನು ಫ್ಲೆಕ್ಸಿಬಲ್ ಲೇಬರ್ ಆಗಿಯೇ ಪರಿಗಣಿಸಿದೆ. ಮಾತ್ರವಲ್ಲ ಬಲವಾಗಿ ನಂಬಿದೆ. ಮತ್ತು ಹಾಗೆಯೇ ನಡೆಸಿಕೊಳ್ಳುತ್ತಿದೆ. ಅವು ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಸಿದ್ಧವಿಲ್ಲ. ಕುಟುಂಬದ ವ್ಯಾಪ್ತಿಯ ಕೆಲಸವು ಈಗಲೂ ಮಹಿಳೆಯ ಹೊಣೆಯಾಗಿಯೇ ಇದೆ. ಮನೆಯ ಆರ್ಥಿಕ ಹೊರೆಯನ್ನು ತಗ್ಗಿಸಲೆಂದೇ ಮನೆ ಹೊರಗೆ ಹೋಗಿ ದುಡಿಯಬೇಕು. ಸಣ್ಣ ಪ್ರಮಾಣದಲ್ಲಿ ಮಾತ್ರ ಇರುವ ಸರಕಾರಿ ಉದ್ಯೋಗಸ್ಥ ಮಹಿಳೆಯು ಸಮಾನ ವೇತನ ಪಡೆಯುತ್ತಾಳೆ. ಆದರೆ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಇರುವ ಮಹಿಳೆಯು ಅತ್ಯಂತ ಕಡಿಮೆ ಕೂಲಿಗೆ ತನ್ನ ಶ್ರಮವನ್ನು ಮಾರುತ್ತಾಳೆ. ಹಾಗೆ ಮಾರಿದ ಮೇಲೆ ಬಂದ ಆರ್ಥಿಕ ಆದಾಯದಲ್ಲಿ ಅವಳ ಪಾಲೆಷ್ಟು? ಇಡೀ ಹಣವನ್ನು ಕುಟುಂಬದ ನಿರ್ವಹಣೆಗೆ ಬಳಸುತ್ತಾಳೆ. ಅಂದರೆ ಇಲ್ಲೂ ಅವಳ ಶ್ರಮ ಬಿಟ್ಟಿಯಾಗಿಯೇ ಬಳಕೆಯಾಗುವುದು. ಅವಳ ಶ್ರಮದಿಂದ ಆಗುವ ಅಭಿವೃದ್ಧಿಯನ್ನು ಪರಿಗಣಿಸುವ ಮಾನದಂಡ ಯಾವುದು? ರಾಷ್ಟ್ರೀಯ ಸಂಪತ್ತು ನಿರ್ಮಾಣ ಮಾಡುವ, ತನ್ಮೂಲಕ ಗ್ರಾಮೀಣಾಭಿವೃದ್ಧಿಯ ಗುರಿ ಹೊಂದಿದ ಉದ್ಯೋಗ ಖಾತ್ರಿ ಕಾಯ್ದೆಯು ಜಲ ಮತ್ತು ಕೃಷಿ ಸಂಬಂಧಿ ಕಾರ್ಯ ಯೋಜನೆ ಕೈಗೆತ್ತಿಕೊಳ್ಳುತ್ತದೆ. ಇದರಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ತೊಡಗುವವರು ಮಹಿಳಾ ಸಮುದಾಯವೇ. ಇವರ ಶ್ರಮದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದ ಕೃಷಿ ಹೈನುಗಾರಿಕೆ ಅಭಿವೃದ್ಧಿಯಾಗಿದೆ. ಜನ ಜಾನುವಾರುಗಳಿಗೆ ನೀರು ಸಿಕ್ಕಿದೆ. ಅಂತಿಮವಾಗಿ ಗ್ರಾಮೀಣ ಜನತೆಯ ತಲಾ ಆದಾಯದಲ್ಲಿ ಹೆಚ್ಚಳವಾಗಿದೆ. ಗುಳೆ ಹೋಗುವುದು ತಪ್ಪಿ ಕುಟುಂಬದಲ್ಲಿ ನೆಮ್ಮದಿ ಹೆಚ್ಚಿದೆ. ಇದನ್ನು ಜಗತ್ತಿಗೆ ತೋರಿಸಬೇಕಾದವರು ಯಾರು? ಸರಕಾರ ಮಾಡುತ್ತದೆಯೇ? ಇಲ್ಲ. ಕುಟುಂಬ ಪರಿಗಣಿಸುತ್ತದೆಯೇ? ಇಲ್ಲ. ಸಮಾಜದ ಬಹುತೇಕ ಪ್ರಾಜ್ಞರ ಆದ್ಯತೆಯೇ ಬೇರೆ.

ಬಿಟ್ಟಿ ದುಡಿಮೆ…

ಹೀಗೆಯೇ, ಈಗ ಸರಕಾರದ ವ್ಯಾಪ್ತಿಗೆ ಬರೋಣ. ಸರಕಾರ ಬಹುತೇಕ ಯೋಜನೆಗಳ ಜಾರಿ ಹೊಣೆಯು ಮಹಿಳೆಯರ ಹೆಗಲ ಮೇಲಿದೆ. ಅಂಗನವಾಡಿ, ಆಶಾ, ಬಿಸಿಯೂಟ, ಕೌಶಲ್ಯಾಭಿವೃದ್ಧಿ ನೌಕರರು, ಸಂಜೀವಿನಿ ನೌಕರರು, ಬೇರೆ ಬೇರೆ ಇಲಾಖೆಗಳಲ್ಲಿನ ಹೊರಗುತ್ತಿಗೆ ಕೆಲಸಗಾರ ಮಹಿಳೆಯರು, ಸಾಕ್ಷರತಾ ಸಂಯೋಜಕರು… ಹೀಗೆ ಈ ಪಟ್ಟಿ ಬೆಳೆಯುತ್ತದೆ. ಇವರೆಲ್ಲರಿಗೂ ಗೌರವ ಧನ ಕೊಟ್ಟು ಅತ್ಯಂತ ಕಡಿಮೆ ಕೂಲಿಗೆ ದುಪ್ಪಟ್ಟು, ಮುಪ್ಪಟ್ಟು ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ. ಕೆಲಸದ ಭದ್ರತೆ ಇಲ್ಲ, ಕೆಲಸದ ಖಾಯಮ್ಮಾತಿ ಮರಿಚಿಕೆಯಾಗಿದೆ. ಇದ್ದೊಂದು ಸಣ್ಣ ಆದಾಯದ ಎಳೆ ಹಿಡಿದುಕೊಂಡು ಅಸಹಾಯಕರಾಗಿ ದುಡಿಯುವ ಒತ್ತಡಕ್ಕೆ ಅವರೆಲ್ಲ ಒಳಗಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದೀಚೆಗೆ ಈ ಸ್ಕೀಂ ವರ್ಕರ್ಸ್ ಆರೋಗ್ಯ ಎಷ್ಟು ಹದಗೆಟ್ಟಿದೆ ಎಂಬುದನ್ನು ತಪಾಸಣೆಯ ಮೂಲಕ ಅರಿಯಬಹುದು.

ಇನ್ನು ಮಾಲ್ ಗಳಲ್ಲಿ, ಕಾರ್ಖಾನೆಗಳಲ್ಲಿ, ಟೈಲರ್ ಗಳಾಗಿ, ಹೋಟೆಲ್‌ ಗಳಲ್ಲಿ, ಮನೆಗೆಲಸದವರಾಗಿ, ಕಸಗುಡಿಸುವವರಾಗಿ ಮತ್ತಿತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಭಾಗಿದಾರಿಕೆಯ ಕಾರಣವಾಗಿ ಉತ್ಪನ್ನಗಳಲ್ಲಿ ಹೆಚ್ಚಳ ಕಾಣುತ್ತೇವೆ. ಆದರೆ ಇದೇ ಸಂದರ್ಭದಲ್ಲಿ ಬರುವ ಆದಾಯ ಮತ್ತು ಅದರಲ್ಲಿ ಅವಳ ಪಾಲುದಾರಿಕೆಯ ಬಗ್ಗೆ ಅಧ್ಯಯನ ಮಾಡಲು ಹೊರಟರೆ ಇಲ್ಲಿಯೂ ಅಕ್ಷರಶ: ಅವಳದ್ದು ಬಿಟ್ಟಿ ದುಡಿಮೆ ಎಂದೇ ಪರಿಗಣಿಸಬೇಕಾಗುತ್ತದೆ.

ಶ್ರಮ ಪಡಲು ಮಾತ್ರ ಇರುವವರು.. ಸುಖ ಪಡಲು ಅಲ್ಲ.

ಈ ಒಟ್ಟು ಮಹಿಳೆಯರಲ್ಲಿ ದಲಿತ ಮಹಿಳೆ, ದೇವದಾಸಿ ಮಹಿಳೆ, ಮುಸ್ಲಿಂ ಮಹಿಳೆ, ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರ್ಮಿಕ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಬದುಕುಗಳು ಸಮಾಜದಿಂದ ತಿರಸ್ಕರಿಸಲ್ಪಟ್ಟವುಗಳೇ ಆಗಿವೆ. ಅವರು ಯಾವುದೇ ಹಕ್ಕಿಗೆ ಗೌರವಕ್ಕೆ, ಆರ್ಥಿಕ ಸಮಾನತೆಯ ಪಾಲುದಾರಿಕೆಗೆ ಯೋಗ್ಯರಲ್ಲ ಎಂಬುದೇ ಆಗಿದೆ. ಇದರ ಮುಂದುವರೆದ ಭಾಗವಾಗಿಯೇ ಸರಕಾರದಿಂದ ಕೊಡುವ ಸೌಲಭ್ಯಗಳು ಇವರಿಗ್ಯಾಕೆ ಎಂಬ ವಾದ ಮುಂದುವರೆದಿದೆ. ಅಂದರೆ ಶ್ರಮಿಕ ವರ್ಗದ ಜನರು ಶ್ರಮ ಪಡಲು ಮಾತ್ರ ಇರುವವರು, ಸುಖ ಪಡಲು ಅಲ್ಲ. ಸುಖವಂತೂ ದೂರದ ಮಾತು. ಅನುಕೂಲಗಳೂ ಒದಗಬಾರದು ಎಂದರ್ಥ.

 ಟ್ಯಾಕ್ಸ್ ಕಟ್ಟಬೇಕು.. ಸವಲತ್ತು ಪಡೆಯಬಾರದು!

ದೊಡ್ಡ ದೊಡ್ಡ ಕಾರ್ಪೋರೆಟ್ ಗಳ ಸಾಲ ಮನ್ನಾ ಮಾಡಿದರೆ ಅದು ವಿಷಯವೇ ಅಲ್ಲ. ಯಾರೂ ಚರ್ಚಿಸಬಾರದು. ಆದರೆ ಅವರ ಸಾಲ ಮನ್ನಾದ ಸಾಸಿವೆಯಷ್ಟು ಪ್ರಮಾಣದ ಸವಲತ್ತುಗಳು ದುಡಿಯುವ ಜನರಿಗೆ ದೊರಕಿದರೆ ಮಾಧ್ಯಮಗಳು, ಸಮಾಜ ಎಲ್ಲರೂ ಮುಗಿ ಬೀಳುವರು. ಹಾಗೆ ನೋಡಿದರೆ ಸರಕಾರಕ್ಕೆ ಪೂರ್ಣ ತೆರಿಗೆ ಮತ್ತು ಸಾಲ ಕಟ್ಟುವವರು ಈ ಶ್ರಮಿಕರೆ. ಅದರಲ್ಲಿಯೂ ಮಹಿಳೆಯರು. ಸ್ತ್ರೀ ಶಕ್ತಿ ಸಂಘ, ಸ್ವ ಸಹಾಯ ಸಂಘದ ಕತೆ ಕೇಳಬಹುದು. ಪುರುಷರು ಪಡೆದ ಸಾಲ ಕೊಡುವುದಿಲ್ಲ. ಮಹಿಳೆಯರು ಅತ್ಯಂತ ಶಿಸ್ತುಬದ್ಧವಾಗಿ ಸಾಲ ಕಟ್ಟುವರು. ಶ್ರಮಿಕರು ಖರೀದಿಸುವ ಪ್ರತಿ ವಸ್ತುವಿಗೂ ಟ್ಯಾಕ್ಸ್ ಕಟ್ಟುವರು. ದೇಶದ 85% ಕ್ಕೂ ಹೆಚ್ಚು ಜನರಿರುವ ಇವರು ದುಡಿಮೆ ಮಾಡಬೇಕು, ಟ್ಯಾಕ್ಸ್ ಕಟ್ಟಬೇಕು. ಆದರೆ ಸವಲತ್ತು ಪಡೆಯಬಾರದು. ಇದು ಸಮಾಜದ ಶ್ರಮಿಕ ವಿರೋಧಿ ಧೋರಣೆಯಾಗಿದೆ.

ಉಚಿತ ಅಲ್ಲ.. ಅದು ಹಕ್ಕು

ಗೆಲ್ಲಲೇಬೇಕಾದ ಒತ್ತಡಗಳ ಹಿನ್ನೆಲೆಯಲ್ಲಿ ಬಂಡವಾಳಶಾಹಿ ಪಕ್ಷವಾದ ಕಾಂಗ್ರೆಸ್ ಅನೇಕ ಗ್ಯಾರಂಟಿಗಳನ್ನು ಘೋಷಿಸಿದೆ. ಅವುಗಳಲ್ಲಿ ಮಹಿಳೆಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮತ್ತು ಮನೆಯ ಹಿರಿಯ ಮಹಿಳೆಗೆ ಗೌರವಧನ. ನನ್ನ ಪ್ರಕಾರ ಉಚಿತ ಎಂಬ ಶಬ್ದವೇ ತಪ್ಪು. ಉಳಿದವರಿಗಿಂತಲೂ ಹೆಚ್ಚು ಶ್ರಮ ಪಡುವವರಿಗೆ ಕೊಡುವ ಸೌಲಭ್ಯಗಳು. ಹಾಗೆ ನೋಡಿದರೆ ಇನ್ನೂ ಹೆಚ್ಚಿನ ಸೌಲಭ್ಯಗಳು ಪಡೆಯುವುದು ಶ್ರಮಿಕರ ಹಕ್ಕಾಗಿದೆ. ಹಾಗೆಯೇ ಸಮಾಜದಲ್ಲಿಯೂ ಕುಟುಂಬದಲ್ಲಿಯೂ ಮತ್ತು ಸರಕಾರಿ ಕ್ಷೇತ್ರದಲ್ಲಿಯೂ ತನ್ನ ಶ್ರಮವನ್ನೆಲ್ಲ ಬಸಿಬಸಿದು ದೇಶದ ಅಭಿವೃದ್ಧಿಗೆ ಕಾರಣವಾಗುತ್ತಿರುವ ಮಹಿಳೆಗೆ ಕೊಡುತ್ತಿರುವುದು ಉಚಿತ ಧನಸಹಾಯ, ಉಚಿತ ಬಸ್ ಪ್ರಯಾಣವಲ್ಲ. ಇವುಗಳು ಅವಳಿಗೆ ದೊರಕಲೇಬೇಕಾದದ್ದು. ಅವಳಿಗೆ ಇವುಗಳ ಮೇಲೆ ಹಕ್ಕಿದೆ. ಜೀವನ ಪೂರ್ತಿ ಮನೆಗೆ ದುಡಿದು ಕೈಯಲ್ಲಿ ನಯಾ ಪೈಸೆ ಇಲ್ಲ ಮತ್ತು ಇದ್ದ ಆಸ್ತಿಯ ಮೇಲೆ ಹಕ್ಕಿಲ್ಲ ಅಂದರೆ ಏನರ್ಥ?

ಆದ್ದರಿಂದ ದುಡಿಮೆಗೆ ಇನ್ನೊಂದು ಅನ್ವರ್ಥಕ ಹೆಸರೇ ಮಹಿಳೆ-ಸ್ತ್ರೀ. ಹೀಗಿದ್ದಾಗ ಅವಳು ಘನತೆಯಿಂದ ಆರ್ಥಿಕ ಸಮಾನತೆಯಿಂದ ಬದುಕುವ ಹಕ್ಕು ಹೊಂದಿದ್ದಾಳೆ. ಕೆಂಪು ಬಸ್ಸು ಮಾತ್ರವಲ್ಲ ಎಸಿ ಮತ್ತು ಲಗ್ಜುರಿ ಬಸ್ ಗಳಲ್ಲಿಯೂ ಟಿಕೇಟು ರಹಿತವಾಗಿ ಅವಳಿಗೆ ಪ್ರಯಾಣ ಹಕ್ಕು ದೊರಕಬೇಕು.

ಇದು ಎಲ್ಲಿಯವರೆಗೆ?

ಇದು ಎಲ್ಲಿಯವರೆಗೆ?ಎಂದು ಕೆಲವರು ಬೇಕೆಂದಲೇ ಕಿಚಾಯಿಸುತ್ತಾರೆ. ಜನತೆಯ ತಲಾ ಆದಾಯ ಹೆಚ್ಚಳವಾಗಿ ಇವರು ಮುಗಿಲಿಗೆ ಮುಟ್ಟಿಸಿದ ಬೆಲೆಗಳನ್ನೂ ತಲುಪಿ ನಂತರವೂ ನೆಮ್ಮದಿಯಿಂದ ಆರ್ಥಿಕ ಕೊರತೆಯಿಲ್ಲದೆ ಬದುಕುವಷ್ಟು ಖಾತ್ರಿ ಆದಾಯ ಅವಳಿಗೆ ದಕ್ಕಲಿ. ಎಲ್ಲರಿಗೂ ಸಮಾನತೆಯ ತಂಪಾದ ಗಾಳಿಯು ದೊರೆತರೆ ಮೇಲು ಕೀಳು ಪ್ರಶ್ನೆ ಎಲ್ಲಿಯದು? ಅಲ್ಲಿಯವರೆಗೆ ಶ್ರಮಿಕರ ಬೆವರಿನಲ್ಲಿ, ಮಹಿಳೆಯರ ಬೆವರಿನಲ್ಲಿ ಬೆಳೆಯುತ್ತಿರುವ ಉಳ್ಳವರ ಪರವಾದ ಆರ್ಥಿಕ ಅಭಿವೃದ್ಧಿಯಲ್ಲಿ ಅವಳ ಪಾಲು ದಕ್ಕಿಸುವುದು ಒಂದು ಪ್ರಾಮಾಣಿಕ ಪ್ರಭುತ್ವದ ಕರ್ತವ್ಯವಾಗಿದೆ. ಮತ್ತು ಅದನ್ನು ಪಡೆದುಕೊಂಡು ಘನತೆಯಿಂದ ಬದುಕುವುದು ನಮ್ಮ ಹಕ್ಕಾಗಿದೆ.

ಕೆ ನೀಲಾ

ಸ್ತ್ರೀಪರ ಹಾಗೂ ಬಡ ಜನರಪರ ಹೋರಾಟದ ಧ್ವನಿಯಾಗಿ, ಬರಹಗಾರ್ತಿಯಾಗಿ ನೀಲಾ ಖ್ಯಾತರಾಗಿದ್ದಾರೆ.

ಇದನ್ನೂ ಓದಿ-ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page