ಅವರು ಗೌರಿಯನ್ನು ಇಲ್ಲವಾಗಿಸಿ ನಾಳೆಗೆ (ಸೆ.೫) ಐದು ವರ್ಷಗಳು. ಆದರೆ ಗೌರಿ ಸಾಯಲಿಲ್ಲ. ಸಂವೇದನಾಶೀಲರೆಲ್ಲರ ಮನದಲ್ಲಿ ಅವರು ಶಾಶ್ವತವಾಗಿದ್ದಾರೆ. ಧೈರ್ಯ, ಸಾಹಸ, ಪ್ರಾಮಾಣಿಕತೆ, ಪರೋಪಕಾರ, ಸಮಾಜಪರ ಚಿಂತನೆ, ಸ್ತ್ರೀವಾದಿ ಚಿಂತನೆ, ನೊಂದವರ ಬಗ್ಗೆ ಅಪಾರ ಕಾಳಜಿ, ಪ್ರಜಾತಾಂತ್ರಿಕ ತತ್ವಗಳಲ್ಲಿ ನಂಬಿಕೆ, ತಾಯಿ ಮನಸು ಇತ್ಯಾದಿ ಒಂದೆಡೆ ಸೇರಿದ ಅಸಾಧಾರಣ ಮಾದರಿಯ ಆಕೆಯ ನೆನಪೇ ಒಂದು ಸ್ಫೂರ್ತಿ. ಶ್ರೀನಿವಾಸ ಕಾರ್ಕಳ ಅವರು ಹತ್ತಿರದಿಂದ ಕಂಡು ಹರಟಿದ ಗೌರಿಯನ್ನು ಪೀಪಲ್ ಮೀಡಿಯಾದ ʼಗೌರಿ ನೆನಪಿಗಾಗಿʼ ಆಪ್ತವಾಗಿ ಕಟ್ಟಿ ಕೊಟ್ಟಿದ್ದಾರೆ.
‘ಗೌರಿ, ನಿನ್ನೆಯ ನಿಮ್ಮ ಫೇಸ್ ಬುಕ್ ಪೋಸ್ಟ್ ನೋಡಿದಿರಾ?’
ಇನ್ ಬಾಕ್ಸ್ ನಲ್ಲಿ ಕೇಳಿದೆ.
‘ಅಯ್ಯೋ, ನಾನು ಪೋಸ್ಟ್ ಹಾಕಿದ ಮೇಲೆ ಆ ಕಡೆ ತಿರುಗಿ ನೋಡೋದು ಕಡಿಮೆ. ಇರ್ಲಿ, ಏನಾಯಿತು?’
ಯಾವ ಉದ್ವೇಗವೂ ಇಲ್ಲದೆ ಮರು ಪ್ರಶ್ನಿಸಿದಳು ಗೌರಿ.
‘ಅವನ್ಯಾವನೋ ಒಬ್ಬ, ನೀವು ಸತ್ರೆ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸ್ತೀನಿ ಅಂತ ಬರೆದಿದ್ದಾನೆ, ನೋಡಿ’ ಅಂದೆ.
‘ಹೌದಾ?’ ಎಂದು ಗಹ ಗಹಿಸಿ ನಗುವ ಇಮೋಜಿ ಹಾಕಿದಳು.
ಮಾರನೇ ದಿನ ನೋಡುತ್ತೇನೆ, ಗೌರಿ ಒಂದು ಪ್ರತ್ಯೇಕ ಪೋಸ್ಟ್ ಹಾಕಿ ಅದರಲ್ಲಿ ಆ ಯುವಕನನ್ನು ಉದ್ದೇಶಿಸಿ, ‘ನೋಡು, ನಾನು ಸತ್ರೆ ನೀನು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸುತ್ತೇನೆ ಅಂದಿದ್ದಿ. ನಿನ್ನ ಮೇಲೆ ನನಗೆ ಯಾವ ಸಿಟ್ಟೂ ಇಲ್ಲ. ನೀನು ನನಗೆ ಮಗನಿದ್ದಂತೆ. ನೀನು ಒಳ್ಳೆಯವನು. ದಾರಿ ತಪ್ಪಿದ್ದಿ ಅಷ್ಟೇ. ಅಂದ ಹಾಗೆ, ನಾನು ಸತ್ತಾಗ ಪಟಾಕಿ ಸಿಡಿಸಲು, ಸಿಹಿ ಹಂಚಲು ನೀನು ಹಣಕ್ಕೇನು ಮಾಡುತ್ತಿ? ನಿನ್ನ ಕಿಸೆಯಿಂದ ಖರ್ಚು ಮಾಡುವುದು ಬೇಡ. ನಿನ್ನ ವಿಳಾಸ ತಿಳಿಸು. ನಾನೇ ಅದಕ್ಕೆ ಅಗತ್ಯವಿರುವಷ್ಟು ಹಣ ಕಳಿಸುತ್ತೇನೆ, ಭಯಪಡಬೇಡ…’ ಎಂದು ಬರೆದಳು. ಅದಕ್ಕೆ ಗೌರಿಯ ಅಭಿಮಾನಿಗಳು ಅಲ್ಲಿ ನಾನಾ ರೀತಿಯ ಕಮೆಂಟ್ ಬರೆದು, ಆ ಯುವಕನನ್ನು ತರಾಟೆಗೆ ತೆಗೆದುಕೊಂಡರು ಅದು ಬೇರೆ ವಿಚಾರ. ಆದರೆ ಗೌರಿ ಅತನ ಬಗ್ಗೆ ಬೆದರಿಕೆಯ, ನಿಂದನೆಯ ಒಂದೇ ಒಂದು ಸಾಲು ಬರೆಯಲಿಲ್ಲ.

ಬದಲಾಯಿಸುವ ವಿಶ್ವಾಸ
ಈ ಬಗ್ಗೆ ಮತ್ತೆ ನಾವು ಇನ್ ಬಾಕ್ಸ್ ನಲ್ಲಿ ಚರ್ಚಿಸಿದೆವು. ‘ನೀವು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳಬೇಕಿತ್ತು, ಅಷ್ಟು ಸಮಾಧಾನದಿಂದ ಬರೆಯುವ ಅಗತ್ಯವಿರಲಿಲ್ಲ, ತಾವು ಇಷ್ಟಪಡದವರ ಸಾವನ್ನು ಬಯಸುವ, ಸಾವನ್ನು ಸಂಭ್ರಮಿಸುವ ಇಂತಹ ಅನೇಕ ಹುಡುಗರು ಇದ್ದಾರೆ. ಇವರನ್ನು ಸುಮ್ಮನೆ ಬಿಡಬಾರದು’ ಎಂದು ನಾನು ಹೇಳಿದೆ. ಆದರೆ ಗೌರಿ ನನ್ನ ಮಾತನ್ನು ಒಪ್ಪಲಿಲ್ಲ. ನನ್ನ ಆಲೋಚನಾ ವೈಖರಿಯನ್ನು ಬದಲಾಯಿಸಲು ನಯವಾಗಿ ಯತ್ನಿಸುತ್ತ, ‘ಹಾಗಲ್ಲ, ಶ್ರೀನಿವಾಸ್, ಇವರೆಲ್ಲ ಒಳ್ಳೆಯ ಹುಡುಗರು. ಸಹವಾಸ ದೋಷದಿಂದ ದಾರಿ ತಪ್ಪಿದ್ದಾರೆ ಅಷ್ಟೇ. ಅವರ ಮೇಲೆ ಮಾತಿನ ದಾಳಿ ಮಾಡಿದರೆ, ಅವರೊಡನೆ ಕೆಟ್ಟದಾಗಿ ನಡೆದುಕೊಂಡರೆ, ಅವರು ಆ ಕಡೆಗೆ ಹೋಗಿ ಅಲ್ಲಿ ಪರ್ಮನೆಂಟ್ ಆಗಿ ಬಿದ್ದು ಬಿಡುತ್ತಾರೆ. ಅವರೊಡನೆ ಸಮಾಧಾನದಿಂದ ಮಾತನಾಡಬೇಕು. ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಅವರನ್ನು ನಮ್ಮತ್ತ ಒಲಿಸಿಕೊಳ್ಳಬೇಕು. ನೋಡಿ ನನ್ನ ಫೇಸ್ ಬುಕ್ ನಲ್ಲಿ ಇಂಥ ಅನೇಕ ಹುಡುಗರು ಇದ್ದಾರೆ. ನಾನು ಏನೇ ಬರೆಯಲಿ ವಿಚಾರಕ್ಕೆ ಪ್ರತಿಕ್ರಿಯಿಸುವುದನ್ನು ಬಿಟ್ಟು ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತ್ತಾರೆ. ಎಷ್ಟು ಕೆಟ್ಟದಾಗಿ ಬರೆಯುತ್ತಾರೆ ಎಂದರೆ ನನಗೆ ಒಮ್ಮೊಮ್ಮೆ ಬೇಸರವಾಗುವುದಿದೆ. ಅವರನ್ನೆಲ್ಲ ಬ್ಲಾಕ್ ಮಾಡಿಬಿಡಿ, ಯಾಕೆ ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇಟ್ಟುಕೊಂಡಿದ್ದೀರಾ? ಎಂದು ಅನೇಕರು ಸಲಹೆ ನೀಡುವುದೂ ಇದೆ. ಆದರೆ ನಾನು ಅವರನ್ನು ಬ್ಲಾಕ್ ಮಾಡಲಾರೆ. ಅವರು ಏನೇ ಹೇಳಲಿ ನಾನು ಅವರೊಡನೆ ಸಮಾಧಾನದಿಂದಲೇ ಚರ್ಚಿಸುತ್ತೇನೆ. ಸಂವಾದ ನಡೆಸುತ್ತೇನೆ. ಒಂದಲ್ಲ ಒಂದು ದಿನ ಅವರು ಬದಲಾಗುವುದು ಖಂಡಿತ. ಅವರನ್ನೆಲ್ಲ ಬ್ಲಾಕ್ ಮಾಡಿದರೆ ಮತ್ತೆ ನಾವು ನಾವೇ ಮಾತಾಡಿಕೊಳ್ಳಬೇಕು. ಆಗ ಅದು ಇಕೋ ಚೇಂಬರ್ ಆಗಿಬಿಡುತ್ತದೆ. ಅದರಿಂದ ಯಾವ ಉಪಯೋಗವೂ ಇಲ್ಲ. ಅದು ನನಗೆ ಇಷ್ಟವಿಲ್ಲ’ ಎಂದು ಗೌರಿ ಹೇಳಿದಳು.
ಪ್ರಜಾತಾಂತ್ರಿಕ ಸಂವಾದದಲ್ಲಿ ಅಪಾರ ವಿಶ್ವಾಸ
ಇದು ಗೌರಿ. ಈ ಒಂದೇ ಒಂದು ಘಟನೆ ಆಕೆಯ ಇಡಿಯ ವ್ಯಕ್ತಿತ್ವದ ಒಂದು ಝಲಕ್ ಒದಗಿಸುತ್ತದೆ. ಆಕೆಗೆ ಪ್ರಜಾತಾಂತ್ರಿಕ ವಾಗ್ವಾದದಲ್ಲಿ, ಸಂವಾದದಲ್ಲಿ ಅಪಾರ ನಂಬಿಕೆ. ಸೈದ್ಧಾಂತಿಕ ವಿರೋಧಗಳಿದ್ದವೇ ಹೊರತು, ಯಾರೊಂದಿಗೂ ಆಕೆಗೆ ವೈಯಕ್ತಿಕ ದ್ವೇಷವಿರಲಿಲ್ಲ. ಆಕೆಯ ಫೇಸ್ ಬುಕ್ ಪೋಸ್ಟ್ ನಲ್ಲಿ ಚಕ್ರತೀರ್ಥ, ಮಾವಿನಕಾಡು ಮೊದಲಾದ ಉಗ್ರ ಬಲಪಂಥೀಯರೊಡನೆಯೂ ಆಕೆ ಸಂವಾದ ನಡೆಸುತ್ತಿದ್ದಳು. ಅವರಾದರೋ ಆಕೆಯನ್ನು ಅತ್ಯಂತ ಹೀನವಾಗಿ ನಿಂದಿಸುತ್ತಿದ್ದರು, ಕೆಣಕುತ್ತಿದ್ದರು. ಗೌರಿ ಕೆಲವರನ್ನು ತನ್ನ ಮಗನಿದ್ದಂತೆ ಎಂದು ಹೇಳುತ್ತಿದ್ದ ಬಗ್ಗೆ ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸಿ ಕುಹಕದ ಮಾತು ಆಡುತ್ತಿದ್ದರು. ಆದರೆ ಗೌರಿ ಎಂದೂ ಸಹನೆ ಕಳೆದುಕೊಳ್ಳುತ್ತಿರಲಿಲ್ಲ, ಸಭ್ಯತೆಯ ಗೆರೆ ದಾಟುತ್ತಿರಲಿಲ್ಲ. ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಮತ್ತು ಗೌರವದಿಂದಲೇ ಉತ್ತರ ನೀಡುತ್ತಿದ್ದಳು. ಅವರನ್ನು ಬದಲಾಯಿಸಲು ನಿರಂತರ ಯತ್ನಿಸುತ್ತಿದ್ದಳು.
ವ್ಯಕ್ತಿ ನಿಂದನೆಗೆ ಅವಕಾಶ ಇಲ್ಲ
ನಮ್ಮ ಹುಡುಗರು ಬಿಸಿ ರಕ್ತದ ಆವೇಶದ ಭರದಲ್ಲಿ ವಿರೋಧಿಗಳ ವೈಯಕ್ತಿಕ ನಿಂದನೆಗಿಳಿದರೆ ಆಕೆ ಮಧ್ಯಪ್ರವೇಶಿಸಿ, ‘ಅದನ್ನು ಮಾಡಕೂಡದು, ನಮ್ಮ ವಿರೋಧ ಏನಿದ್ದರೂ ಅದು ವಿಚಾರದ ಬಗ್ಗೆ ಮಾತ್ರ, ವ್ಯಕ್ತಿಯ ಬಗ್ಗೆ ಅಲ್ಲ‘ ಎನ್ನುತ್ತಿದ್ದಳು. ಗೌರಿ ಗಮನಿಸುತ್ತಿದ್ದಾಳೆ ಎಂಬ ಕಾರಣಕ್ಕೇ ಫೇಸ್ ಬುಕ್ ನಲ್ಲಿ ಬರೆಯುವಾಗ ನಾವು ಅನೇಕರು ಎಚ್ಚರದಿಂದಿರುತ್ತಿದ್ದೆವು. ಮಿಸೋಜಿನಿಸ್ಟಿಕ್, ಸೆಕ್ಸಿಸ್ಟ್ ಟಿಪ್ಪಣಿಗಳನ್ನು ಮಾಡಲು ಭಯಪಡುತ್ತಿದ್ದೆವು.
ಯಾಕ್ರೋ ಹಂಗಂತೀರಾ?…
ರಾಜ್ಯದ ನಾನಾ ಊರುಗಳಲ್ಲಿ ಆಕೆಯ ಮೇಲೆ ಕೇಸು ದಾಖಲಿಸಿದ್ದರು. ಈ ಕಾರಣಕ್ಕಾಗಿ ವರ್ಷವಿಡೀ ಆಕೆ ಊರೂರು ಅಲೆಯಬೇಕಾಗುತ್ತಿತ್ತು. ಅವನ್ನೆಲ್ಲ ಒಂದೆಡೆಗೆ, ಅಂದರೆ ಬೆಂಗಳೂರಿಗೆ ವರ್ಗಾಯಿಸುವಂತೆ ಆಕೆ ಕೋರ್ಟ್ ನ ಮೊರೆ ಹೋಗಬಹುದಿತ್ತು. ನಾವು ಅನೇಕರು ಈ ಸಲಹೆಯನ್ನೇ ಕೊಟ್ಟಿದ್ದೆವು ಕೂಡಾ. ಆದರೆ ಆಕೆ ಕೇಳುತ್ತಿರಲಿಲ್ಲ. ‘ಯಾಕ್ರೋ ಹಂಗಂತೀರಾ? ಈ ಕಾರಣಕ್ಕಾದರೂ ನಾವು ನಿಮ್ಮ ಊರಿಗೆ ಬರಬಹುದು, ನಿಮ್ಮನ್ನೆಲ್ಲ ಮಾತಾಡಿಸಬಹುದು ಅಲ್ವಾ?’ ಎಂದು ಹೇಳಿ ಜೋರಾಗಿ ನಗುತ್ತಿದ್ದಳು.
ಅಸಾಧಾರಣ ಧೈರ್ಯ
ಗೌರಿಯ ಹೃದಯ, ಆತ್ಮಸಾಕ್ಷಿ ಸ್ವಚ್ಛವಿತ್ತು. ಆಕೆ ಎಲ್ಲೂ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡವಳಲ್ಲ. ರಾಜಕಾರಣಿಗಳೊಂದಿಗಿನ ಸಂಪರ್ಕವನ್ನು ತನ್ನ ಲಾಭಕ್ಕೆ ಬಳಸಿಕೊಂಡವಳಲ್ಲ. ಪ್ರಶಸ್ತಿ, ಸ್ಥಾನಮಾನದ ಹಿಂದೆ ಹೋದವಳಲ್ಲ. ಯಾರ ಹಂಗಿನಲ್ಲೂ ಇದ್ದವಳಲ್ಲ. ಇದೇ ಅಕೆಗೆ ಅಸಾಧಾರಣವಾದ ಒಂದು ಧೈರ್ಯವನ್ನು ನೀಡಿತ್ತು ಅನಿಸುತ್ತದೆ. ಅದು ಒಂದು ತೆರನ ಗಾಂಧಿಯ ಧೈರ್ಯ.
ದಕ್ಷಿಣ ಕನ್ನಡದ ಒಂದು ಕೋರ್ಟ್ ಗೆ ಕೇಸಿನ ಸಂಬಂಧ ಆಕೆ ಹಾಜರಾದಾಗ ತನ್ನ ಎದುರಾಳಿಗಳ ಬಳಿಗೇ ಹೋಗಿ ಅವರನ್ನು ದಿಟ್ಟವಾಗಿ ಮಾತನಾಡಿಸಿದ್ದಳು. ಅವರಿಗೆ ಸತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಳು. ಆಕೆಯ ಈ ಧೈರ್ಯ ಮಾತ್ರ ನಿಜಕ್ಕೂ ಒಂದು ಬೆರಗು. ಈ ಧೈರ್ಯದ ಕಾರಣಕ್ಕಾಗಿಯೇ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನೇರವಾಗಿ ಎದುರಿಸಲು ಯಾರಿಗೂ ಧೈರ್ಯವಿರುತ್ತಿರಲಿಲ್ಲ.
ಜೀವ ಭಯ ಆಕೆಯ ಪದಕೋಶದಲ್ಲಿಯೇ ಇರಲಿಲ್ಲ
ಆಕೆಯ ಇಂತಹ ದಿಟ್ಟತನದ ನಡೆಗಳಂತೂ ನಮ್ಮಲ್ಲಿ ದಿಗಿಲು ಹುಟ್ಟಿಸುತ್ತಿತ್ತು. ಯಾಕೆಂದರೆ, ನಮಗೆ ಆಕೆ ಎಂತಹ ಅಪಾಯದಲ್ಲಿದ್ದಾಳೆ ಎಂಬ ಸ್ಪಷ್ಟ ಅರಿವಿತ್ತು. ಆದರೆ ಆಕೆ ತನ್ನ ಬಗ್ಗೆ ಯಾವತ್ತೂ ಯೋಚಿಸಿದವಳಲ್ಲ. ಅಕೆಯನ್ನು ಕೊಲ್ಲಲು ಸರಿ ಸುಮಾರು ಒಂದು ವರ್ಷ ಪ್ಲಾನ್ ನಡೆದಿತ್ತು. ಆ ಎಲ್ಲ ದಿನಗಳಲ್ಲಿಯೂ ಆಕೆ ಏಕಾಂಗಿಯಾಗಿ ಬೆಂಗಳೂರು ಮಂಗಳೂರು ನಡುವೆ ಸಂಚರಿಸುತ್ತಿದ್ದಳು. ರಾತ್ರಿಯ ಹೊತ್ತು ಮಂಗಳೂರು ತಲಪುತ್ತಿದ್ದ ಗೌರಿ, ಅಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ರಸ್ತೆ ಬಳಿ ನಿಂತು ನಮಗೆ ಫೋನ್ ಮಾಡಿ, ‘ನಾನು ಇಲ್ಲಿ ನಿಂತಿದ್ದೇನೆ, ನಿಮ್ಮ ಮನೆಗೆ ಹೇಗೆ ಬರಬೇಕು?’ ಎಂದು ಕೇಳುತ್ತಿದ್ದಳು.
ಆಕೆಯ ಒಳ್ಳೆಯತನಗಳ ಬಗ್ಗೆ ಬರೆದರೆ ಪುಟಗಟ್ಟಲೆ ಬರೆಯಬಹುದು, ಗಂಟೆ ಗಟ್ಟಲೆ ಮಾತನಾಡಬಹುದು. ಧೈರ್ಯ, ಸಾಹಸ, ಪ್ರಾಮಾಣಿಕತೆ, ಪರೋಪಕಾರ, ಸಮಾಜಪರ ಚಿಂತನೆ, ಸ್ತ್ರೀವಾದಿ ಚಿಂತನೆ, ನೊಂದವರ ಬಗ್ಗೆ ಅಪಾರ ಕಾಳಜಿ, ಪ್ರಜಾತಾಂತ್ರಿಕ ತತ್ವಗಳಲ್ಲಿ ನಂಬಿಕೆ, ಎಲ್ಲರನ್ನೂ ತನ್ನ ಮಕ್ಕಳಂತೆ ನೋಡಿಕೊಳ್ಳುವ ತಾಯಿ ಮನಸು ಇತ್ಯಾದಿ ಒಂದೆಡೆ ಸೇರಿದ ಅಸಾಧಾರಣ ಮಾದರಿಯಾಗಿದ್ದಳು ಗೌರಿ. ಆಕೆಯ ನೆನಪೇ ಒಂದು ಸ್ಫೂರ್ತಿ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಶ್ರೀನಿವಾಸ ಕಾರ್ಕಳ
ಚಿಂತಕರು