Home ಜನ-ಗಣ-ಮನ ಧರ್ಮ- ಸಂಸ್ಕೃತಿ ದೇವರು-ಭ್ರಮೆ ಮತ್ತು ವಾಸ್ತವ

ದೇವರು-ಭ್ರಮೆ ಮತ್ತು ವಾಸ್ತವ

0

ಪ್ರತಿ ನಿತ್ಯ ಕಣ್ಣ ಮುಂದೆ ನಡೆಯುವ ಅನಾಚಾರಗಳು, ಕಗ್ಗೊಲೆಗಳು, ಸಣ್ಣ ಮಕ್ಕಳ ದಾರುಣ ಮೃತ್ಯುಗಳು, ಹಸಿವೆ, ಯುದ್ಧ, ದ್ವೇಷ, ವಂಚನೆಗಳು, ನೆರೆ, ಬರ, ಪ್ರಕೃತಿ ವಿಕೋಪಗಳು, ಅದರಲ್ಲಿ ನಲುಗುವ ಮಕ್ಕಳು, ಮಹಿಳೆ, ವೃದ್ಧರು, ಪ್ರಾಣಿ ಪಕ್ಷಿಗಳು ಇವನ್ನೆಲ್ಲ ನೋಡಿದಾಗ ಮೂರ್ತಿರಾಯರ ಮಾತು “ನಿಜಕ್ಕೂ ಈ ಸರ್ವ ಶಕ್ತ ಎಂಬ ದೇವರು ಇದ್ದಿದ್ದರೆ..” ಎಂಬ ಮಾತು ತಟ್ಟನೆ ನೆನಪಾಗುತ್ತದೆ – ಶಂಕರ್ ಸೂರ್ನಳ್ಳಿ.

ಇತ್ತೀಚೆಗೆ ದೇವರು ಮತ್ತು ದೇವರ ಅಸ್ತಿತ್ವದ ಕುರಿತಂತೆ ದೇಶದಾದ್ಯಂತ ಬಹಳಷ್ಟು ಚರ್ಚೆಗಳು ನಡೆದವು. ಕಾರಣ ಭಾರತ ಸಾಧಿಸಿದ ಯಶಸ್ವಿ ಚಂದ್ರಯಾನ ಪ್ರಯೋಗ ಮತ್ತು ಆಬಳಿಕ ವಿಜ್ಞಾನಿಗಳೆನಿಸಿಕೊಂಡವರು ದೇವಾಲಯಗಳಿಗೆ (ಬಹುಷ ಹರಕೆ ಪೂರೈಸಿಕೊಳ್ಳಲು) ತಮ್ಮ ಪಾದಂಗೈದದ್ದು. ವಿಜ್ಞಾನಿಗಳಿಗೆ ಸಂಬಂಧಿಸಿದ ಇಂತಹ ನಡೆಗಳು ಸಾಕಷ್ಟು ಟೀಕೆಗೆ ಗುರಿಯಾದದ್ದರ ಜೊತೆಗೆ  ವಿಜ್ಞಾನಿಗಳು ಮಾಡಿದ್ದರಲ್ಲಿ ತಪ್ಪೇನಿದೆ, ಅವರು ಸರಿಯಾದದ್ದೇ ಮಾಡಿದ್ದಾರೆ ಎಂದು  ಸಮರ್ಥಿಸುವವರ ವಾದವೂ ಕೂಡ ಅಷ್ಟೇ ಪ್ರಬಲವಾಗಿತ್ತು.

ದೇವರ ಅಸ್ತಿತ್ವದ ಬಗೆಗಿನ ಗೊಂದಲಗಳಿಗೆ ಒಂದು ಸ್ಪಷ್ಟ ಎಂಬುದಾದಂತಹ ಉತ್ತರ ಈವರೆಗೂ ದೊರೆತಿಲ್ಲ. ಬಹುಷ ಮನುಷ್ಯನ ನಾಗರೀಕತೆಗೂ ಮುನ್ನ ಮೊದಲು ಆತ  ಕಾಡುವಾಸಿಯಾಗಿದ್ದಾಗಲೂ ಕೂಡ ಈಗಿನಂತಲ್ಲದಿದ್ದರೂ ಒಂದು ಅತೀತ ಶಕ್ತಿ ಇದ್ದಿರಬಹುದೆಂಬಂತಹ ಕಲ್ಪನೆಯನ್ನು ಆತ ಕಟ್ಟಿಕೊಂಡಿದ್ದ. ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ತನ್ನದೇ ಮಿತಿಗಳಲ್ಲಿ ಯೋಚಿಸುತ್ತಿದ್ದ ಅಂದಿನ ಮನುಷ್ಯರು ಯಾವುದೋ ಕ್ರಮಬದ್ಧವಾದ ನಿಯಮದಡಿಯಲ್ಲಿ ನಡೆಯುವಂತಿದ್ದ ಹಗಲು ರಾತ್ರಿಗಳು, ಸೂರ್ಯ ಸಂಜೆ ಕಣ್ಮರೆಯಾಗಿ ಮರುದಿವಸ ಮತ್ತೆ ಪ್ರತ್ಯಕ್ಷವಾಗೋ ಪ್ರಕ್ರಿಯೆ, ಮಳೆ ಬಿಸಿಲುಗಳು, ಆಗಾಗ ಎದುರಾಗುವ ಪ್ರಕೃತಿ ವಿಕೋಪಗಳು, ಬಿರುಗಾಳಿ, ಗುಡುಗು ಸಿಡಿಲು, ತಮ್ಮ ಆಹಾರಕ್ಕಾಗಿ ಒದಗುವ ಹಣ್ಣು ಹಂಪಲು, ಗಡ್ಡೆ ಗೆಣಸು, ಮರ ಗಿಡಗಳು, ತಮ್ಮ ಸುತ್ತ ಮುತ್ತಲು ಘಟಿಸುವ ಹುಟ್ಟು ಸಾವು ಇವುಗಳನ್ನೆಲ್ಲ ನೋಡಿ ಈ ಚಮತ್ಕಾರಗಳ ಹಿಂದೆ ಯಾವುದೋ ಒಂದು ಶಕ್ತಿ ಅಡಗಿರಬಹುದಾದ ಕಲ್ಪನೆಯನ್ನು ಆತ ತನ್ನದೇ ಮಿತಿಯಲ್ಲಿ ಕಟ್ಟಿಕೊಂಡಿರುವ ಸಾಧ್ಯತೆ ಇದೆ. ಹೆದರುವುದೋ, ಶರಣಾಗುವುದೋ ಇಲ್ಲ ತಾನೇ ಕಂಡುಕೊಂಡಂತಹ ಪ್ರಾಣಿ ಯಾ ನರಬಲಿಯಂತಹ ಆಚರಣೆಗಳ ರೂಪದಲ್ಲಿ ದೈವ ಸಂತೃಪ್ತೀಕರಣದ ಪ್ರಕ್ರಿಯೆಗಳ ಮೂಲಕ ಅತೀತ ಶಕ್ತಿಯ ಎದುರು ತನ್ನ  ಓಲೈಕೆ ಅಥವಾ ಶರಣಾಗತಿಯನ್ನ ತೋರ್ಪಡಿಸಲು ಸುರು ಮಾಡಿದ್ದ. ಇದೇ ಕೋಟ್ಯಂತರ ಜೀವ ಪ್ರಭೇಧಗಳಲ್ಲಿ ಮನುಷ್ಯನೊಬ್ಬನೇ ಕಟ್ಟಿಕೊಂಡಂತಹ ದೇವರು ಎಂಬ ಕಲ್ಪನೆಯ ಮೂಲ.

ದೇವರು ಮಾನವನನ್ನು ಸೃಷ್ಟಿಸಿದನೋ ಅಥವ ಮಾನವನೇ ದೇವರನ್ನು ಸೃಷ್ಟಿಸಿದನೋ ಎಂಬುದೊಂದು ಒಗಟಿನ ಪ್ರಶ್ನೆಯಾಗೇ ಉಳಿದಿದೆ. ಒಂದು ವೇಳೆ ವಿಕಾಸವಾದದಂತೆ ಮಾನವನ ಬದಲು ಅಥವಾ ಮಾನವನಂತೆ ಡೈನೋಸಾರ್ ಗಳೋ, ಆನೆಯೋ, ಹುಲಿಯೋ, ಪಾರಿವಾಳವೋ, ಮಾನವನಂತೆ ಬುದ್ಧಿಮತ್ತೆ, ಮಾತುಗಾರಿಕೆ, ಯೋಚನೆ, ಸಶಕ್ತ ಕಾರ್ಯಕ್ಷಮತೆ, ಮುಂತಾದವುಗಳನ್ನು ಪಡೆದಿದ್ದರೆ ಅವುಗಳೂ ಕೂಡ ಅವುಗಳದ್ದೇ ರೀತಿಯ ದೇವರು ದೈವಗಳ ಕಲ್ಪನೆಯನ್ನು ಖಂಡಿತಾ ಹೊಂದಿರುತ್ತಿದ್ದವು. ವಿಶೇಷವೆಂದರೆ ನಾವುಗಳು ನಮ್ಮ ದೇವರುಗಳನ್ನು ಯಥಾವತ್ ನಮ್ಮ ಅಥವಾ ನಮ್ಮದೇ ರೂಪವನ್ನು ಇನ್ನಷ್ಟು ’ಸುಧಾರಿತ’ ಬಗೆಯಲ್ಲಿ (ಮನುಷ್ಯನಿಗೆ ಎರಡು ಕೈ ಇದ್ದರೆ ದೇವರಿಗೆ ನಾಲ್ಕು ಕೈ ಇತ್ಯಾದಿ) ಕಲ್ಪಿಸಿಕೊಂಡಿದ್ದರೆ ಮೇಲ್ಕಂಡ ಪ್ರಾಣಿಗಳೂ ಕೂಡ ನಮ್ಮ ಕಲ್ಪನೆಯ ದೇವರನ್ನೇ ಹೊಂದಿರಬೇಕೆಂದೇನಿಲ್ಲ. ಅಂದರೆ, ಹುಲಿ ಸಮೂಹದಲ್ಲಿ ಹುಲಿಯ ರೂಪದ್ದೇ ದೇವರು ಇದ್ದರೆ ಪಾರಿವಾಳದ್ದು ಪಾರಿವಾಳದ ರೂಪದ ದೇವರು. ಯಾಕೆಂದರೆ, ಇಂತಹ ಅತೀತ ಶಕ್ತಿಗಳನ್ನು ತಮ್ಮದೇ ಪರಿಮಿತಿಯಲ್ಲಿ ನಾವು ಕಲ್ಪಿಸಿಕೊಳ್ಳುವ ಬಗೆಯೇ ಹಾಗಿರುತ್ತದೆ.

ಶ್ರಿಯುತ ಕೋಟ ಶಿವರಾಮ ಕಾರಂತರಲ್ಲಿ ಅವರ ಆಸ್ತಿಕ ನಾಸ್ತಿಕತೆಯ ನಂಬುಗೆ ಬಗ್ಗೆ ಕೇಳಿದಾಗ ಅವರು ನಾನೊಬ್ಬ ’ಅನಾಸ್ತಿಕ” ಅಂದರಂತೆ. ಇಂತಹ ಆಸ್ತಿಕತೆ – ನಾಸ್ತಿಕತೆಯ ಜಟಾಪಟಿ ಇಂದು ನಿನ್ನೆಯದ್ದಲ್ಲ. ಹಾಗು ಯಾವುದೋ ಒಂದು ದೇಶ- ಪ್ರದೇಶಕ್ಕಷ್ಟೇ ಇದು ಸೀಮಿತವಾದ್ದದ್ದೂ ಕೂಡ ಅಲ್ಲ. ದೇವರ ಅಸ್ತಿತ್ವವನ್ನು ನಂಬಿ ಪ್ರತಿಯೊಂದೂ (ಕರ್ತೃ, ಕರ್ಮ, ಕ್ರಿಯೆ) ಕೂಡ ಅವನದೇ ಲೀಲೆ ಎನ್ನುವ ಆಸ್ತಿಕರು ಮತ್ತು ಕೋಟ್ಯಂತರ ವರ್ಷಗಳ ಸಹಜ ಪ್ರಾಕೃತಿಕ ಬದಲಾವಣೆಯ ಪ್ರತಿಫಲವೇ ಈ ಮರಗಿಡಗಳು ಮತ್ತು ನಮ್ಮನ್ನೂ ಸೇರಿಕೊಂಡಂತೆ ಈ ಎಲ್ಲಾ ಜೀವ ಜಾಲಗಳು. ಭೂಗ್ರಹದ ಪೂರಕ ವಾತಾವರಣವೇ ಇಂತಹ ಒಂದು ವಿಸ್ಮಯ ಘಟಿಸಲು ಕಾರಣವೇ ವಿನಹ ಅತೀತ ಶಕ್ತಿಯ ಕಲ್ಪನೆಯೇ ಅರ್ಥವಿಲ್ಲದ್ದು ಎಂದು ನಾಸ್ತಿಕರೆನಿಸಿಕೊಂಡವರು ವಾದಿಸುತ್ತಾರೆ.

ಸುಲಭದಲ್ಲಿ ಅರ್ಥೈಸಲು ಆಗದಂತಹ ಕೆಲವಾರು ಪವಾಡದ ಕಥೆಗಳು, ದೇವರನ್ನು ಖುದ್ದು ನೋಡಿದಂತಹ ಭಕ್ತವರೇಣ್ಯರುಗಳ ದೃಷ್ಟಾಂತಗಳು, ದೇವರಿಗೆ ಹರಕೆ ಕಟ್ಟಿಕೊಂಡು ಪರಿಹಾರವೇ ಕಾಣದಂತಿದ್ದ ರೋಗ, ಮನೆ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಂತಹ ʼಹರಕೆವಂತʼ ಭಕ್ತರ ಅನುಭವದ ಕಥೆಗಳು ಆಯಾಯ ದೇವರ ಮಹಿಮೆಯನ್ನು ಸಾರುವ ದೇಗುಲಗಳ ಸ್ಥಳಪುರಾಣಗಳು ದೇವರನ್ನು ಕೊಂಡಾಡುವ ಪುರಾಣ ಕಥೆಗಳಂತವುಗಳು ಆಸ್ತಿಕರನ್ನು ಪ್ರಭಾವಿಸಿದರೆ, ಮನುಷ್ಯ ಅಂದ್ರೆ ಏನಿದೆ? ಕೇವಲ C, H, O (ಇಂಗಾಲ, ಜಲಜನಕ ಮತ್ತು ಆಮ್ಲಜನಕ) ತಾನೇ ? ಕೋಟ್ಯಂತರ ವರ್ಷಗಳ ಹಿಂದೆ ಏಕಾಣು ಜೀವಿಗಳ  ಸೃಷ್ಟಿಗೆ ಇದೇ C H O ಗಳೇ ಕಾರಣ ಅಲ್ಲವೇ? ಲಕ್ಷಾಂತರ ವರ್ಷಗಳ ಹಿಂದೆ ಕಾಡು ಮೇಡಲ್ಲಿ  ಬಟ್ಟೆ ಇಲ್ಲದೇ ಅಡ್ಡಾಡುತ್ತಿದ್ದ  ಮಾನವ ಇಂದಿನ ಪರಿಸ್ಥಿತಿ ತಲುಪಲು ತೆಗೆದುಕೊಂಡ ಕಾಲಾವಧಿ ಒಂದೆರಡು ದಿನದ್ದಲ್ಲ. ಈ ಬದಲಾವಣೆಗೆ ಲಕ್ಷಾಂತರ ವರ್ಷಗಳ ದೀರ್ಘ ಕಾಲೀನ ಪ್ರಕ್ರಿಯೆಯೇ ನಡೆದಿದೆ. ಚಲನಚಿತ್ರ, ಯಕ್ಷಗಾನಗಳಲ್ಲಿ ದೇವರು ಬಡವ ಭಕ್ತನೆದುರು ಪ್ರತ್ಯಕ್ಷನಾಗಿ ಕೈಯ್ಯನ್ನೆತ್ತಿ ಒಂದೇ ಒಂದು ಕ್ಷಣದಲ್ಲಿ ಮನೆ, ಐಶ್ವರ್ಯ ಅವನೆದುರು ಸೃಷ್ಟಿಸಿಕೊಡುವಂತಹ ಸಿನೆಮಾ ಕಥೆ ಇದಲ್ಲವಲ್ಲ. ಪ್ರತಿಯೊಂದು ಪ್ರಕ್ರಿಯೆಗೂ ಅದರದ್ದೇ ಆದ ಸಮಯಾವಕಾಶ ಹಾಗು ಪೂರಕ ವಾತಾವರಣಗಳೆಲ್ಲವೂ ಬೇಕು. ಅದರಂತೆ ಬೇರೆ ಯಾವ ಆಕಾಶಕಾಯ ಗ್ರಹಗಳಲ್ಲೂ ಇಲ್ಲದ ಜೀವಜಾಲಗಳ ಸೃಷ್ಟಿಯ ಪ್ರಕ್ರಿಯೆ ಭೂಮಿಯಲ್ಲಿ ಘಟಿಸಿದೆ.  ಇದೊಂದು ಆಕಸ್ಮಿಕವಾಗಿ ಘಟಿಸಿ ಮುಂದುವರೆದಂತಹ ಸಹಜ ಪ್ರಕ್ರಿಯೆಯೇ ಹೊರತು ಇದರಲ್ಲಿ ಅತಿರಂಜಿತತೆ ಭಾವನಾತ್ಮಕತೆಯು ಬೇಕಿಲ್ಲ ಎನ್ನುತ್ತಾರೆ ನಾಸ್ತಿಕತೆಯ ಲೇಬಲ್ ಅಂಟಿಸಿಕೊಂಡಂತ ವಾಸ್ತವವಾದಿಗಳು.

ಕೆಲವೊಮ್ಮೆ ಈ ಆಸ್ತಿಕ ನಾಸ್ತಿಕ ಜಟಾಪಟಿ ಅತಿರೇಕಕ್ಕೆ ಹೋಗಿ ಈ ಸಂಬಂಧ ದೊಂಬಿ ಗಲಾಟೆ ಸಾವು ನೋವುಗಳಿಗೆ ಕಾರಣವಾದಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ಇವೇ ವಿಷಯಕ್ಕೆ ಹಿಂಸೆ ದೌರ್ಜನ್ಯಗಳು ನಡೆಯುವಾಗ “ಸಾಕ್ ಸುಮ್ನಿರಪ್ಪಾ.. ನಾನೇ ದೇವ್ರು ಸ್ವತಃ ನಿಮ್ಮೆದುರು ಬಂದಿದ್ದೀನಿ.. ನನ್ನ ಸಂಬಂಧವಾಗಿ ಮಾಡುವ ಈ ಸಾವು ನೋವಿನ ಜಗಳ ನಿಲ್ಲಿಸಿ” ಎಂದು ಯಾವತ್ತೂ ಕೂಡ ದೇವರು ಪ್ರತ್ಯಕ್ಷನಾಗಿ ಹೇಳಿ ಹೋದ ಉದಾಹರಣೆ ಎಲ್ಲೂ ಇಲ್ಲ. ಬಹುಷ ಆತ ತನ್ನ ಹೆಸರಲ್ಲಿ ಈ ಮನುಷ್ಯರು ಆಡುವ ನಾಟಕದ ತಮಾಷೆಗಳನ್ನು ಮೇಲೆ ಕೂತು ನೋಡ್ತಿದ್ದಿರಬೇಕು. ಧರ್ಮರಾಯನ ಪಟ್ಟಾಭಿಷೇಕಕ್ಕೆ ಬಂದು ಕುರುಕ್ಷೇತ್ರ ಯುದ್ಧದಲ್ಲಿ ನಡೆದ ಲಕ್ಷಾಂತರ ಜನರ ಆನೆ ಕುದುರೆಗಳ ಮಾರಣ ಹೋಮವನ್ನು ಪ್ರಶ್ನಿಸಿದ್ದ ನಾಸ್ತಿಕ (ಚಾರ್ವಾಕ)ನನ್ನು ಅಲ್ಲಿನ ಬ್ರಾಹ್ಮಣರೇ ಸೇರಿ ಹೊಡೆದು ಕೊಲ್ಲುತ್ತಾರೆ. ಒಟ್ಟಾರೆ, ಸತ್ಯ ಹೇಳುವುದೂ ಕೂಡ ತಪ್ಪು ಈ ಸಮಾಜದಲ್ಲಿ.

ಚಂದ್ರಯಾನದ ಕುರಿತಂತೆ ನಡೆದ ಪೂಜೆ ಪುನಸ್ಕಾರಗಳ ಬಗ್ಗೆ ಎದ್ದ ತಕರಾರುಗಳ ಕುರಿತು ಹೇಳುವುದಾದಲ್ಲಿ ವಾಸ್ತವದಲ್ಲಿ ಈ ಪೂಜೆ ಪುನಸ್ಕಾರಗಳು ಅವರವರ ವೈಯುಕ್ತಿಕ ನೆಲೆಯಲ್ಲಿ ನಡೆದಿದ್ದರೆ ಅದನ್ನು ಖಂಡಿತಾ ತಪ್ಪೆನ್ನಲಾಗದು. ಆದರೆ, ಒಂದು ಸಂಸ್ಥೆಯ ಹೆಸರಿನಲ್ಲಿ ಅದನ್ನು ಪ್ರತಿನಿಧಿಸಿಕೊಂಡು ಇಂತಹ ಆಚರಣೆಗಳು ಬಂದಾಗ ಸಮಾಜದಲ್ಲಿ ಅದು ಒಟ್ಟು ಕೊಡುವಂತಹ ಸಂದೇಶಗಳು ಬೇರೆಯದೇ ತೆರನಾಗಿರುತ್ತವೆ-ಅದೂ ವಿಶೇಷವಾಗಿ, ಯಾವುದೇ ಒಂದು ನಂಬಿಕೆಗಷ್ಟೇ ಸೀಮಿತವಾಗಿರದೇ ಜಾತ್ಯತೀತ ತತ್ವವನ್ನು ಅನುಸರಿಸುತ್ತಿರುವ ಈ ಭಾರತದಂತಹ ದೇಶದಲ್ಲಿ. ಯಾಕೆಂದರೆ, ಈಗಾಗಲೇ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಆಟಾಟೋಪಗಳು ಈ ನಾಡಿನಲ್ಲಿ ಸಾಕೆನಿಸುವಷ್ಟಿವೆ.

ಬಾಲ್ಯದಿಂದಲೂ ಕೇಳಿದಂತಹ ಒಂದು ಪ್ರಸಿದ್ಧ ಭಕ್ತಿ ಗೀತೆಯಿದೆ “ನೋಡು ನೋಡು ಕಣ್ಣಾರೆ ನಿಂತಿಹಳು ನಗುನಗುತ ಚಾಮುಂಡಿ ನಿಂತಿಹಳು…” ಎಂದು. ಅದರಲ್ಲೊಂದು ಸಾಲು ಹೀಗಿದೆ ’ನಂಬಿರುವ ಭಕ್ತರ ರಕ್ಷೆಗಾಗಿ ನಂಬದಿಹ ದುಷ್ಟರ ಶಿಕ್ಷೆಗಾಗಿ” ಅಂತ. ನಂಬಿರುವ ಭಕ್ತರು ಓಕೆ ಆದ್ರೆ ನಂಬದಿರುವವರು ದುಷ್ಟರು ಅಂದರೆ ಅದು ಯಾವ ಲಾಜಿಕ್ಕೋ.. ಅಂದಹಾಗೆ, ಕಪ್ಪಗಿದ್ದವರೆಲ್ಲ ಕಳ್ಳರು (ಕಳ್ಳರ ಹಾಗಿದ್ದಾನೆ ನೋಡು ಅನ್ನೋ ಹಾಗೆ) ಮಾಸಲು ಸೀರೆಯವಳೆ  ಹೂಸಿದ್ದು ಅನ್ನೋ ರೆಡಿಮೇಡ್ ಮಾತುಗಳ ತರಹ ಇದೂ ಕೂಡ ಒಂದು ಸಾಮಾನ್ಯ ಪ್ರತೀತಿಯ ನಂಬಿಕೆ. ನಾನೊಮ್ಮೆ ಖಾಸಗಿ ಬಸ್ಸಲ್ಲಿ ಹೋಗುವಾಗ ಪ್ರಾಯದ ವ್ಯಕ್ತಿಯೊಬ್ಬರು ಎದುರಿನ ಬದಿ ಸೀಟಲ್ಲಿ ಕುಳಿತಿದ್ದ ಪರಿಚಯದ ಕಂಡಕ್ಟರನಲ್ಲಿ ಪಟ್ಟಾಂಗ ಹೊಡೆಯಲು ಖಾಲಿಯಿದ್ದ ಲೇಡಿಸ್ ಸೀಟಲ್ಲಿ ಆಚೆ ಸೀಟಿಂದ ಬಂದು ಕುಳಿತಿದ್ದರು. ಅದನ್ನು ನೋಡಿದ ಪಕ್ಕದ ಸೀಟಿನ ಮಹಿಳೆಯೊಬ್ಬರು ಈತ ಬೇಕೆಂದೇ ಈಚೆ ಕುಳಿತಿದ್ದಾನೆಂದು ತಿಳಿದು ಬೈದು ಅವರನ್ನ ಆಚೆ ಹೋಗುವಂತೆ ಮಾಡಿದಳು. ವಿಷಯ ಅದಲ್ಲ. ಯಾವುದೋ ಪುಸ್ತಕ ಓದುತ್ತಾ ಕುಳಿತಿದ್ದ ಆಕೆ ತಾನೊಬ್ಬ ಪರಮ ಪವಿತ್ರಾತ್ಮಳು ಎನ್ನುವುದನ್ನು ನಂತರ ಅಲ್ಲಿನವರಲ್ಲಿ ಹೇಳಿಕೊಂಡಂತಹ ರೀತಿ ಮಾತ್ರ ತಮಾಷೆಯಾಗಿತ್ತು. ಕೈಯ್ಯಲ್ಲಿದ್ದ ಪುಸ್ತಕ ತೋರಿಸುತ್ತಾ ಇದೇನು ಗೊತ್ತಾ ಲಲಿತ ಸಹಸ್ರನಾಮ ನಾನು ಓದುತ್ತಿರುವುದು ಅಂದರು. ವಾಸ್ತವದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಆಸ್ತಿಕತೆಯಾಗಲೀ ಆತನ ನಾಸ್ತಿಕತೆಯಾಗಲೀ ಆತನ ವ್ಯಕ್ತಿತ್ವವನ್ನು ಅಳೆಯುವ ಮಾನದಂಡ ಆಗಲು ಖಂಡಿತಾ ಸಾಧ್ಯವಿಲ್ಲ. ಮನೆಯಿಡೀ ದೇವರ ಫೋಟೋ ಲಗತ್ತಿಸಿಕೊಂಡು ತಪ್ಪದೆ ದೇವಾಲಯಗಳಿಗೆಲ್ಲ  ಭೇಟಿ ನೀಡುವಾತ ವೈಯುಕ್ತಿಕವಾಗಿ ಕ್ರೂರತನದಿಂದ ವರ್ತಿಸಬಹುದು. ಅದೇ ರೀತಿ, ಪರೋಪಕಾರಿ ಗುಣದ ದೇವರನ್ನೇ ನಂಬದ ನಾಸ್ತಿಕ ಮಹಾಶಯರುಗಳು ಒಳ್ಳೆಯ ಮನಸಿನವರಾಗಿರುವುದು ನಮ್ಮ ಸುತ್ತ ಮುತ್ತಲೇ ಸಾಕಷ್ಟು ಕಾಣಸಿಗುತ್ತಾರೆ.

30-40 ವರ್ಷಗಳ ಹಿಂದಿನ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಸುಣ್ಣದ ಕುಡಿಕೆ ಎನ್ನುವ ಚಿತ್ರಕಥೆ ಬಂದಿತ್ತು. ಕಳ್ಳನೊಬ್ಬ ಬೌದ್ಧ ಸನ್ಯಾಸಿಗಳ ಮಠದೊಳಗೆ ಬಂದು ಸೇರಿಕೊಳ್ಳುತ್ತಾನೆ. ಹುಟ್ಟು ಗುಣ ಬಿಡದ ಆತ ಅಲ್ಲಿಯೂ ತನ್ನ ಕಳ್ಳತನವನ್ನ ಮುಂದುವರೆಸುತ್ತಾನೆ ಎಲ್ಲರೂ ಅದನ್ನ ಗಮನಿಸಿಯೂ ಕೂಡ  ಬುದ್ಧನ ತತ್ವಾನುಸಾರ ಸುಮ್ಮನಿರುತ್ತಾರೆ. ಆದರೆ, ಅಲ್ಲಿ ಬರುವ ಭಕ್ತರು, ಪ್ರವಚನಗಳು ಇವನ್ನೆಲ್ಲ ಕೇಳಿ ಆ ಕಳ್ಳ ನಿಧಾನವಾಗಿ ಮನಪರಿವರ್ತನೆಗೊಂಡು ಅಲ್ಲಿನ ಗುರುವಿನಲ್ಲಿ ತನ್ನ ಹಿಂದಿನ ಪಾಪಗಳನ್ನು ಮನ್ನಿಸಿ ಬುದ್ಧನೆಡೆಗೆ ಹೋಗುವ ಮಾರ್ಗವನ್ನು ಕರುಣಿಸಿ ಎಂದು ಬೇಡಿಕೊಳ್ಳುತ್ತಾನೆ. ಈತನ ಕಳ್ಳ ಬುದ್ಧಿ ಗೊತ್ತಿದ್ದ ಆ ಗುರುವು ಅದೇನು ಕಷ್ಟದ ಮಾತಲ್ಲ. ಓ ಅಲ್ಲಿ ಮೇಲೆ ಹೋಗಿ ಬುದ್ಧನ ಹೆಸರು ಹಿಡಿದು ಜಿಗಿದರೆ ಸ್ವಯಂ ಬುದ್ಧನೇ ಬಂದು ನಿನ್ನನ್ನು ಚಿನ್ನದ ಬಲೆಯಿಂದ ಕಾಪಾಡಿ ಕೊಂಡೊಯ್ಯುತ್ತಾನೆ ಎಂದು ಕಪಟದ ಮಾತಾಡಿ ಕಳ್ಳನನ್ನು ಕಳುಹಿಸುತ್ತಾನೆ. ಇದನ್ನು ಸತ್ಯವೆಂದೇ ನಂಬಿದ ಕಳ್ಳ ಆ ಗುರು ಹೇಳಿದಂತೆಯೇ ಬುದ್ಧನ ಹೆಸರಿಡಿದು ಮೇಲಿನಿಂದ ಜಿಗಿಯುತ್ತಾನೆ. ಆದರೆ ಕಳ್ಳನಿಗೆ ಏನೂ ಆಗದೇ ಸ್ವಯಂ ಭಗವಾನ್ ಬುದ್ಧನೇ ಚಿನ್ನದ ಬಲೆ ಹಿಡಿದು ಮಾಜಿ ಕಳ್ಳನನ್ನು ಕಾಪಾಡಿ ಕೊಂಡೊಯ್ಯುತ್ತಾನೆ. ಇದನ್ನು ಕಂಡ ಮಹಾ ಗುರು ಆ ಕಳ್ಳ ಖದೀಮನನ್ನು ಸ್ವಯಂ ಬುದ್ಧನೇ ಚಿನ್ನದ ಬಲೆಯಲ್ಲಿ ಕೊಂಡೊಯ್ದನೆಂದರೆ ಬೌದ್ಧ ಧರ್ಮಕ್ಕಾಗಿಯೇ ಬದುಕು ಸವೆಸಿ ಎಲ್ಲ ಸಂಸ್ಕಾರವನ್ನ ಚಾಚೂ ತಪ್ಪದೆ ಪಾಲಿಸುತ್ತಿರುವ ನನ್ನನ್ನು ಬುದ್ಧ ಇದಕ್ಕೂ ಹೆಚ್ಚಿನ ವೈಭೋಗದಿಂದ ಕೊಂಡೊಯ್ಯುವುದು ಶತಸಿದ್ಧ ಎಂದು ಆತನೂ ಎಲ್ಲ ಶಿಷ್ಯಂದಿರೆದುರಿಗೆ ಅದೇ ಸ್ಥಳದಿಂದ ಜಿಗಿದು ಕೆಳಗೆ ಬಿದ್ದು ತಲೆಯೊಡೆದು ಸಾಯುತ್ತಾನೆ (ಅವನ ಒಡೆದ ತಲೆಯೇ ನಂತರ ಸುಣ್ಣದ ಕುಡಿಕೆಯಾಯಿತೆಂದು ಚೀನಾ ಮೂಲದ ಈ ಕಥೆ ಇರುವ ನೆನಪು)

ಇದೊಂದು ಕಾಲ್ಪನಿಕ ಕಥೆಯಷ್ಟೆ. ಆದರೆ, ಬಾಹ್ಯ ಆಚರಣೆ, ವೇಷ ಭೂಷಣಗಳು ಮತ್ತು ಪರಿಶುದ್ಧ ನಂಬಿಕೆ ಇಲ್ಲಿ ಯಾವುದು ಮುಖ್ಯ ಎಂಬುದನ್ನ ಈ ಕಥೆ ತೋರಿಸುತ್ತದೆ. ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ಮಂತ್ರ ಪುಷ್ಪಗಳ ಪೂಜೆಗಿಂತ ಆಚಾರದಲ್ಲೇ ಇರದ ಬೇಡನ ಮಾಂಸಾಭಿಷೇಕಕ್ಕೆ ಶಿವನೊಲಿದ ಬೇಡರ ಕಣ್ಣಪ್ಪನ ಕಥೆಯೂ ಮೇಲಿನ ರೀತಿಯದ್ದೇ ಆಗಿದೆ. ಆಸ್ತಿಕನೇ ನಂಬುವಂತೆ ಎಲ್ಲವೂ ದೇವರ ಸೃಷ್ಟಿ, ಹುಲ್ಲು ಕಡ್ಡಿಯ ಅಲುಗಾಟವೂ ಕೂಡ ದೇವನ ನಿರ್ಣಯದಂತೆಯೇ ನಡೆಯುವುದು (ತೇನ ವಿನಾ ತೃಣವಪಿ ನ ಚಲತಿ) ಹೌದಾದರೆ ಎಲ್ಲರಂತೆ ಎಪ್ಪತ್ತು ಎಂಭತ್ತು ವರ್ಷ ಗಡದ್ದಾಗಿ ಬದುಕುವ ಜಗದ ನಾಸ್ತಿಕರುಗಳ ಎಲ್ಲಾ ಕ್ರಿಯಾ ಕರ್ಮಗಳನ್ನೂ ಕೂಡ ಈ ದೇವರ ನಿಯಂತ್ರಣದಿಂದ ಹೊರಗಿಡಲಾಗದು ತಾನೇ ? ತೇನ ವಿನಾ ಸಿದ್ಧಾಂತದಂತೆ ಖಂಡಿತಾ ಸಾಧ್ಯವಿಲ್ಲ. ಅಂದರೆ, ನಾಸ್ತಿಕರ ದೈವ ವಿಮರ್ಶೆಯೂ ಕೂಡ ದೇವರದ್ದೇ ಕೆಲಸ ಅಂತಾಯಿತು. ಸದಾ ದೇವ ಕೈಂಕರ್ಯದಲ್ಲೇ ಮುಳುಗಿರುವ ಆಸ್ತಿಕ ಒಳ್ಳೆಯವನು ದೇವರ ಅಸ್ತಿತ್ವವನ್ನು ನಿರಾಕರಿಸುವ ನಾಸ್ತಿಕ ಕೆಟ್ಟವನು ಎಂಬ ವಾದವೇ ಅರ್ಥವಿಲ್ಲದ್ದು. ಇಲ್ಲಿ ವ್ಯಕ್ತಿಯ ವ್ಯಕ್ತಿತ್ವ ಹಾಗು ಆತ ಹೊಂದಿರುವ ಸದಾಶಯಗಳು ಮುಖ್ಯವೇ ಹೊರತು ಆತನ ಆಸ್ತಿಕ -ನಾಸ್ತಿಕತೆಯ ನಂಬುಗೆಯಲ್ಲ. ಯಾಕೆಂದರೆ ಈ ನಂಬುಗೆಗಳನ್ನು ಆತ ಬೆಳೆದು ಬಂದಂತಹ ಪರಿಸರ ಹಾಗು ಆತ ಅನುಭಸಿದ ನೋವು ನಲಿವುಗಳೇ ಆತನಲ್ಲಿ ನಿರ್ಧರಿಸಿರುತ್ತವೆಯೇ ಹೊರತು ಯಾವುದೇ ದೇವದಿಂಡರುಗಳಿಂದಲ್ಲ.

ನನ್ನ ಪ್ರಕಾರ ನಾವು ಏನನ್ನು ಧರ್ಮ, ಧಾರ್ಮಿಕ ಭಾವ ಎನ್ನುತ್ತೇವೆಯೋ ಆ ರೀತಿಯ ಅತ್ಯಂತ ಧಾರ್ಮಿಕ ವ್ಯಕ್ತಿಗಳಲ್ಲೊಬ್ಬರು ಡಾ. ಎ ಎನ್ ಮೂರ್ತಿರಾಯರು. ಶತಾಯುಷಿಯಾಗಿ ತುಂಬು ಜೀವನ ನಡೆಸಿದ ಅವರು ನಾಸ್ತಿಕವಾದದ ಕುರಿತಂತೆ ಒಲವುಳ್ಳವರಲ್ಲದೇ “ದೇವರು” ರೀತಿಯ ಅನೇಕ ವೈಚಾರಿಕ ಕೃತಿಗಳನ್ನು ಬರೆದಂತವರು. ತಮ್ಮ ಬಹು ಚರ್ಚಿತ ದೇವರು ಕೃತಿಯಲ್ಲಿ ಅವರು ಒಂದು ಮಾತನ್ನು ಹೇಳುತ್ತಾರೆ.  “ನನಗೀ ದೇವರ ಬಗ್ಗೆ ಅಪನಂಬಿಕೆಯಾಗಲಿ ದ್ವೇಷ ಭಾವವಾಗಲಿ ಖಂಡಿತಾ ಇಲ್ಲ. ಬದಲಿಗೆ, ನಾವು ಕಲ್ಪಿಸಿಕೊಂಡಂತಹ ಈ ದೇವರು ಜಗತ್ತಿನಲ್ಲಿ ನಿಜಕ್ಕೂ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು  ಆದರೆ ಹಾಗಿಲ್ಲವಲ್ಲ ಎಂಬ ವಿಷಾದವಿದೆ” ಎನ್ನುತ್ತಾರೆ. ಹೌದು, ನಿಜವಾದ ಭಾವ ಜೀವಿಗೆ ಈ ರೀತಿ ಅನ್ನಿಸುವುದು ಸಹಜ. ಪ್ರತಿ ನಿತ್ಯ ಕಣ್ಣ ಮುಂದೆ ನಡೆಯುವ ಅನಾಚಾರಗಳು, ಕಗ್ಗೊಲೆಗಳು, ಸಣ್ಣ ಮಕ್ಕಳ ದಾರುಣ ಮೃತ್ಯುಗಳು, ಹಸಿವೆ, ಯುದ್ಧ, ದ್ವೇಷ, ವಂಚನೆಗಳು, ನೆರೆ, ಬರ, ಪ್ರಕೃತಿ ವಿಕೋಪಗಳು, ಅದರಲ್ಲಿ ನಲುಗುವ ಮಕ್ಕಳು, ಮಹಿಳೆ, ವೃದ್ಧರು, ಪ್ರಾಣಿ ಪಕ್ಷಿಗಳು ಇವನ್ನೆಲ್ಲ ನೋಡಿದಾಗ ಮೂರ್ತಿರಾಯರ ಮಾತು “ನಿಜಕ್ಕೂ ಈ ಸರ್ವ ಶಕ್ತ ಎಂಬ ದೇವರು ಇದ್ದಿದ್ದರೆ..” ಎಂಬ ಮಾತು ತಟ್ಟನೆ ನೆನಪಾಗುತ್ತದೆ.

ಅಂದಹಾಗೆ, ಈ ಆಸ್ತಿಕರುಗಳು ಆರೋಪಿಸುವಂತೆ ನಾಸ್ತಿಕರುಗಳಿಗೆ ದೇವರ ಮೇಲೆ ಕೋಪ ಇರುವುದಾದರೂ ಯಾತಕ್ಕೆ ? ಆತ ಏನು ಇವರಲ್ಲಿ ಸಾಲ ಮಾಡಿ ತಪ್ಪಿಸಿಕೊಂಡಿದ್ದಾನೆಯೇ? ವಿಷಯ ಅದಲ್ಲ. ಈ ದೇವರು ಇದ್ದಾನೋ ಇಲ್ಲವೋ (ವಾಸ್ತವದಲ್ಲಿ ಪೂರ್ತಿ ನಾಸ್ತಿಕ ಪೂರ್ತಿ ಆಸ್ತಿಕ ಅನ್ನೋದೇ ಇಲ್ಲವಂತೆ. ಆಸ್ತಿಕ ಎನಿಸಿಕೊಂಡವನಲ್ಲೂ ನಾಸ್ತಿಕತೆಯ ಜಿಜ್ಞಾಸೆ ಖಂಡಿತಾ ಯಾವತ್ತಾದರೂ ಕಾಡದೇ ಇರದು. ಅದೇ ರೀತಿ, ನಾಸ್ತಿಕನಲ್ಲೂ ಕೂಡ ಅತೀತದ ನಂಬಿಕೆಯ ಆಸ್ತಿಕತೆ ಇರುವುದುಂಟು. ಇಂತವರೇ ಕದ್ದು ಮುಚ್ಚಿ ಯಾವುದೋ ನೆಪ ಹೇಳಿ ಪೂಜೆ ಮಾಡುತ್ತಾರೆ) ಆದರೆ, ದೇವರ ಹೆಸರಲ್ಲಿ ಕೆಲವೆಡೆ ನಡೆಯುತ್ತಿರುವ ಅನಾಚಾರ, ಅನ್ಯಾಯ, ಅತ್ಯಾಚಾರ, ವಂಚನೆ ಇತ್ಯಾದಿಗಳನ್ನ ಮುಕ್ತವಾಗಿ (ದೇವರ ಭಯ ಬಿಟ್ಟು) ನೋಡಿದರಷ್ಟೆ ಸಾಕು ನಿಮ್ಮ ನಾಸ್ತಿಕತೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ದೇವರಿಗೆ ಬಂದ ಹರಕೆ ಆಭರಣಗಳನ್ನ, ಹುಂಡಿ ಹಣವನ್ನ ಎಗರಿಸಿದವರಿದ್ದಾರೆ. ದೇವರ ಹೆಸರಲ್ಲಿ, ದೇವಕ್ಷೇತ್ರದ ವ್ಯಾಪ್ತಿಯಲ್ಲೇ ಭೀಕರ ಅತ್ಯಾಚಾರಗಳು ನಡೆದ ಉದಾಹರಣೆಗಳಿವೆ. ಯಾವ ಲೋಕದ ಅರಿವಿರದ ಹತ್ತೆನ್ನೆರಡು ವಯಸ್ಸಿನ ಕೆಳಜಾತಿಯ ಹೆಣ್ಣು ಮಕ್ಕಳನ್ನು ದೇವರ ಹೆಸರಲ್ಲಿ ಬಸವಿಯರನ್ನಾಗಿ ಮಾಡುವಂತಹ ದೊಡ್ಡ ಸಂಪ್ರದಾಯವೇ ಇದೆ. ಮಡಿ ಮೈಲಿಗೆಗಳ ಹುಟ್ಟಿನ ಮೂಲವೇ ಈ ದೇಗುಲಗಳು. ಮಡೆಸ್ನಾನ ಎಡೆಸ್ನಾನ, ಪಂಕ್ತಿ ಭೇಧಗಳು, ಅಷ್ಟೇ ಯಾಕೆ, ಮೂರ್ನಾಲ್ಕು ದಶಕಗಳ ಹಿಂದೆ ದಲಿತರು ಹಾಗೂ ಹಲವು ಓಬಿಸಿ ಸಮುದಾಯಗಳಿಗೆ ದೇಗುಲಕ್ಕೆ ಪ್ರವೇಶವೇ ಇದ್ದಿರಲಿಲ್ಲ. ದೇಶದ ಅಭಿವೃದ್ಧಿಗೆ ದೊಡ್ಡ ತೊಡಕಾಗಿರುವ ಮೌಢ್ಯ, ಜಾತೀಯತೆಯಂತವುಗಳಿಗೆ ನೀರು ಗೊಬ್ಬರ ಹಾಕಿ ಪೋಷಣೆ ಒದಗಿಸಿದ ಜಾಗವೂ ಕೂಡ ಇವೇ ಸನ್ನಿಧಾನಗಳು ಎನ್ನುವುದನ್ನ ಮರೆಯಲಾಗದು. ಇಲ್ಲಿ ದೇವರು ಒಂದು ನೆಪ ಮಾತ್ರಕ್ಕಷ್ಟೆ. ನಂಬಿಕೆಗಳ ಹೆಸರಲ್ಲಿ ದರ್ಬಾರು ಮಾತ್ರ ಬೇರೆಯವರದ್ದು.  ಪ್ರಭುತ್ವವನ್ನೇ ಮುಷ್ಟಿಯ ಹಿಡಿತದಲ್ಲಿಟ್ಟುಕೊಂಡು ಮೆರೆದ ಸಮುದಾಯದ ಬಂಡವಾಳವೇ ಈ ಧರ್ಮ ಮತ್ತು ದೇವರುಗಳು ಎನ್ನುವುದು ಐತಿಹಾಸಿಕ ಸತ್ಯ. ಕೆಲ ಪ್ರಖರ ನಾಸ್ತಿಕವಾದಿಗಳು ಬ್ರಾಹ್ಮಣ್ಯದ ಈ ಸಾಮಾಜಿಕ ಶೋಷಣೆಯ ಮೇಲಿನ ಅಸಹನೆಯನ್ನು ದೇವರ ಲೇವಡಿ ಅಥವಾ ಪೌರಾಣಿಕ ಹುಳುಕುಗಳನ್ನು ಎತ್ತಿ ಆಡುವುದರ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆಯೇ ವಿನ: ಅವರ ಪ್ರಕಾರ ಯಾವತ್ತೂ ಇಲ್ಲದೇ ಇರುವ ದೇವರ ಮೇಲಿನ ದ್ವೇಷದಿಂದಂತೂ ಖಂಡಿತಾ ಅಲ್ಲ. ಯಾಕೆಂದರೆ, ಅದರಿಂದ ಅವರಿಗೆ ಹೆಂಡತಿ ಮಕ್ಕಳಂತಹ ಮನೆಯ ಸದಸ್ಯರನ್ನೂ ಸೇರಿಸಿ ನಿಮಗ್ಯಾಕೆ ಅಧಿಕ ಪ್ರಸಂಗ? ಎಂಬ ಬೈಗಳು ಬಿಟ್ಟರೆ ಸಿಗುವಂತಾದ್ದು ಬೇರೇನೂ ಇಲ್ಲ.

ಮನೋ ವೈಜ್ಞಾನಿಕವಾಗಿ ಯೋಚಿಸಿದಲ್ಲಿ ಮಾನವನ ಬದುಕಿನಲ್ಲಿ ಈ ದೇವರ ನಂಬಿಕೆ ಎನ್ನುವುದು ಉಪಯುಕ್ತ ವಿಚಾರವೇ ಹೌದು. ದೇವರನ್ನು ನಂಬುವಾತ ಎಲ್ಲರ ಬದುಕಿನಲ್ಲಿ ಬರುವಂತಹ ಸಾಮಾನ್ಯ ಸಮಸ್ಯೆಗಳನ್ನು ದೇವರ ಮೇಲೆ ಹಾಕಿ ಆತ ಕಾಪಾಡುತ್ತಾನೆಂಬ ಭರವಸೆಯಿಂದ ಅರ್ಧ ಒತ್ತಡವನ್ನು ಕಡಿಮೆ ಮಾಡಿಕೊಂಡರೆ ನಂಬದಿರುವವನಿಗೆ ಈ ಭಾಗ್ಯವೂ ಕೂಡ ಇರದು. ಪಾದರಕ್ಷೆ ಹಾಕಿಕೊಂಡು ಕಲ್ಲು ದಾರಿಯಲ್ಲಿ ನಡಿಯುವುದಕ್ಕೂ ಬರಿಗಾಲಲ್ಲಿ ಅಲ್ಲಿ ನಡೆಯುವುದಕ್ಕೂ ವ್ಯತ್ಯಾಸವಿದೆ.  ಪಾದರಕ್ಷೆಯಿದೆ ಎಂದು ಅದರ ಮೇಲೆ ಎಲ್ಲ ಬಾರ ಹಾಕಿ ಬಿಂದಾಸ್ ಆಗಿ ನಡೆಯುವಂತೆ ಬರಿಗಾಲಲ್ಲಿದ್ದವ ಅಲ್ಲಿ ನಡೆಯಲಾರ. ಬದುಕಿನ ಮೌಲ್ಯ ವರ್ಧನೆಗೆ ಈ ದೇವ ನಂಬಿಕೆ ಒಳ್ಳೆಯದೇ. ಆದರೆ ಈ ನಂಬಿಕೆಗಳೇ ಬದುಕಾಗಬಾರದು ತಾನೇ ? ಎಲ್ಲವಕ್ಕೂ ಪೂಜೆ, ಎಲ್ಲವಕ್ಕೂ ಹೋಮ, ವಾಸ್ತು, ಜೋತಿಷ ಎಂದು ಹೋಗುವಾತ ಯಾವತ್ತೂ ಉದ್ಧಾರವಾಗಲಾರ.  ಕುಡಿತ ಜೂಜು ಸಿಗರೇಟು ಚಟಗಳಿಂದ ಒಬ್ಬನನ್ನು ಹೊರತರಬಹುದು ಆದರೆ, ಮೌಢ್ಯಗಳ ಚಕ್ರವ್ಯೂಹದಲ್ಲಿ ಸಿಲುಕಿದಾತನನ್ನು ಹಾಗು ಆತನನ್ನು ನಂಬಿ ಬದುಕುವವರನ್ನ ಆ ’ದೇವರೇ” ಬಂದು ಕಾಪಾಡಬೇಕಷ್ಟೆ.

ಶಂಕರ್ ಸೂರ್ನಳ್ಳಿ

You cannot copy content of this page

Exit mobile version