Home ಬ್ರೇಕಿಂಗ್ ಸುದ್ದಿ ಬಿಜೆಪಿ ಟಿಕೆಟ್ ಹಗರಣ : ‘ಇದು ಕೇವಲ 5 ಕೋಟಿಯಲ್ಲ, 185 ಕೋಟಿಯ ಹಗರಣ!’

ಬಿಜೆಪಿ ಟಿಕೆಟ್ ಹಗರಣ : ‘ಇದು ಕೇವಲ 5 ಕೋಟಿಯಲ್ಲ, 185 ಕೋಟಿಯ ಹಗರಣ!’

0

ಮೈಸೂರು : ವಿಧಾನಸಭಾ ಚುನಾವಣೆಯಲ್ಲಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದ ಬಗ್ಗೆ ರಾಜ್ಯದ ಜನ ತಲೆ ಕೆಡಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿನ್ನೆಲೆಯವರ ಟಿಕೆಟ್ ವಂಚನೆ ಪ್ರಕರಣ ಕೇವಲ 5 ಕೋಟಿ ಅಲ್ಲ, ಇದು 185 ಕೋಟಿಯ ಬಹುಕೋಟಿ ಹಗರಣ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಎಂ.ಲಕ್ಷ್ಮಣ್, ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಟಿಕೆಟ್ ಗಾಗಿ ವಂಚನೆ ಪ್ರಕರಣದಲ್ಲಿ ಹಲವಷ್ಟು ಮಂದಿ ಭಾಗಿಯಾಗಿದ್ದು ತನಿಖೆ ಚುರುಕುಗೊಂಡರೆ ಇನ್ನಷ್ಟು ಮಂದಿ ಸಂತ್ರಸ್ತರು ಸಿಗಲಿದ್ದಾರೆ ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಗುಂಪಿನ ಹಿಂದೆ ಇರುವವರು ಯಾರು? ಎಷ್ಟು ಹಣ ವಂಚಿಸಿದ್ದಾರೆ. ಎಷ್ಟು ಜನರಿಗೆ ವಂಚಿಸಿದ್ದಾರೆ ಎಂಬುದನ್ನು ಪೊಲೀಸರು ಇನ್ನೆರಡು ದಿನಗಳಲ್ಲಿ ತಿಳಿಸುತ್ತಾರೆ. ಈಗಷ್ಟೇ ಹಾಲಶ್ರೀ ಸ್ವಾಮಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಹಗರಣದಲ್ಲಿ ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದಿದ್ದಾರೆ.

ಅಂದಾಜು 23 ಜನರಿಗೆ ಟಿಕೆಟ್ ಕೊಡಿಸುವಂತೆ ಆಮಿಷ ಒಡ್ಡಲಾಗಿದೆ. ಅದರಲ್ಲಿ 17 ಜನರಿಂದ ಈಗಾಗಲೇ ಹಣ ವಸೂಲು ಮಾಡಿದ್ದಾರೆ. ಈ ಅವ್ಯವಹಾರದಲ್ಲಿ 40 ಕ್ಕೂ ಹೆಚ್ಚು ಜನರು ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇದು ಬರೋಬ್ಬರಿ 185 ಕೋಟಿಯ ವ್ಯವಹಾರ ಇಲ್ಲಿ ಆಗಿದೆ ಎಂದು ಆರೋಪಿಸಿದರು.

ಚೈತ್ರ ಕುಂದಾಪುರ ಗ್ಯಾಂಗ್ ಸೇರಿದಂತೆ 9 ಜನರ ತಂಡದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಮೋಸವೆಸಗಲಾಗಿದೆ. ಇವರೆಲ್ಲರೂ ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರು. ಮೋಸ ಹೋದವರು ಮತ್ತು ಮೋಸ ಮಾಡಿದರು ಎಲ್ಲರೂ ಬಿಜೆಪಿಯವರೇ ಆದ್ದರಿಂದ ಇದು ಹೆಚ್ಚು ಬೆಳಕಿಗೆ ಬರುತ್ತಿಲ್ಲ. ಸರಿಯಾದ ಜಾಡು ಹಿಡಿದು ಹೊರಟರೆ ಬಿಜೆಪಿ ಬಂಡವಾಳ ಹೊರ ಬರಲಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಗ್ಯಾಂಗ್ ಗೆ ಪಿಎಸ್ ಐ ಹಗರಣ ಸೇರಿದಂತೆ ಬಿಜೆಪಿ ಆಡಳಿತದಲ್ಲಿ ನಡೆದ ನಾಲ್ಕಕ್ಕೂ ಹೆಚ್ಚು ಹಗರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಚೈತ್ರಾ ಕುಂದಾಪುರ ಎಂಬ ಯುವತಿಗೆ ನೇರ ಸಂಪರ್ಕವಿದೆ. ಚುನಾವಣಾ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಯಾರ್ಯಾರ ಪರ ಪ್ರಚಾರದಲ್ಲಿ ತೊಡಗಿದ್ದಳೋ ಅವರನ್ನೆಲ್ಲಾ ವಿಚಾರಣೆಗೊಳಪಡಿ‌ಸಬೇಕು. ಅಷ್ಟೆ ಅಲ್ಲ ಪಿಎಸ್ ಐ ಹಗರಣದಲ್ಲಿ ಜೈಲಿನಲ್ಲಿರುವವರ ಕೆಲ ಸಂಪರ್ಕವೂ ಆಕೆಗಿದೆ. ಇದೊಂದು ಸಾಧಾರಣ ಹಗರಣ ಅಲ್ಲ ಎಂದು ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

You cannot copy content of this page

Exit mobile version