ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ತಮಿಳುನಾಡು ಸರ್ಕಾರದ ನಡುವಿನ ಬಹಿರಂಗ ಕದನ ಮತ್ತೊಮ್ಮೆ ಸದ್ದು ಮಾಡಿದ್ದು ಈಗ ಸರ್ಕಾರದ ನಡೆಯ ಬಗ್ಗೆ ರಾಜ್ಯಪಾಲ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ. ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಅಧಿವೇಶನದ ಭಾಷಣ ಓದದೇ ಆರ್ ಎನ್ ರವಿ ಹೊರ ನಡೆದಿದ್ದಾರೆ.
ಚಳಿಗಾಲ ಅಧಿವೇಶನದ ಮೊದಲ ದಿನದಂದು ತಮ್ಮ ಸಂಪ್ರಾದಾಯಕ ಭಾಷಣ ಓದದೆ ರಾಜ್ಯ ವಿಧಾನಸಭೆಯಿಂದ ಹೊರ ನಡೆದ ಘಟನೆ ಹೆಚ್ಚು ಸದ್ದಾಗಿದೆ.
ರಾಜ್ಯಪಾಲರು ಅಧಿವೇಶನಕ್ಕೆ ಪ್ರವೇಶ ಪಡೆದ ಬಳಿಕ ಮೊದಲು ತಮಿಳು ತಾಯಿ ವಾಳ್ತು(ನಾಡಗೀತೆ) ಗೀತೆಯನ್ನು ಹಾಡಲಾಯಿತು. ಆ ನಂತರ ರಾಜ್ಯಪಾಲರು ರಾಷ್ಟ್ರಗೀತೆ ಹಾಡಲು ಸ್ಪೀಕರ್ ಮತ್ತು ಸಿಎಂ ಸ್ಟಾಲಿನ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಮನವಿಯನ್ನು ಸ್ಟಾಲಿನ್ ನಿರಾಕರಿಸಿದ್ದಾರೆ, ಇದರಿಂದ ಬೇಸರಗೊಂಡ ರಾಜ್ಯಪಾಲರು ತಮ್ಮ ಸಂಪ್ರದಾಯಕ ಭಾಷಣ ಓದದೆ ಹೊರಬಂದಿದ್ದಾರೆ ಎಂದು ವರದಿಯಾಗಿದೆ.
ಚೈನ್ನೈ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಅಡಳಿತರೂಢ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಆಡಳಿತರೂಢ ಡಿಎಂಕೆ ನೇತೃತ್ವದ ಇಂಡಿಯಾ ಬ್ಲಾಕ್ನ ಸದಸ್ಯರಾದ ಕಾಂಗ್ರೆಸ್ ನಾಯಕರು ವಿವಿ ಕುಲಪತಿಯಾಗಿ ರಾಜ್ಯಪಾಲರು ಘಟನೆಗೆ ಕಾರಣವಾದ ಜವಾಬ್ದಾರಿ ಲೋಪವನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು. ಈ ಗದ್ದಲ ನಡುವೆ ರಾಜ್ಯಪಾಲರು ರಾಷ್ಟ್ರಗೀತೆಗೆ ಮನವಿ ಮಾಡಿದ್ದಾರೆ. ನಿರಾಕರಣೆ ಹಿನ್ನೆಲೆಯಲ್ಲಿ ರಾಜ್ಯಪಾಲ ರವಿ ಹೊರ ನಡೆದಿದ್ದಾರೆ.
ರಾಜ್ಯಪಾಲರ ಈ ನಡೆಯನ್ನು ಖಂಡಿಸಿದ ರಾಜ್ಯಧ್ಯಕ್ಷ ಸೆಲ್ವಪೆರುಂತಗೈ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದರು. ಈ ಎಲ್ಲಾ ಗದ್ದಲದ ನಡುವೆ ಎಐಡಿಎಂಕೆ ಸದಸ್ಯರನ್ನು ಹೊರ ಹಾಕುವಂತೆ ಮಾರ್ಷಲ್ಗಳಿಗೆ ಸ್ಪೀಕರ್ ಆದೇಶ ನೀಡಿದ್ದಾರೆ.