ಹೊಸದಿಲ್ಲಿ: ಗುಜರಾತ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಎರಡು ಹಂತಗಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ 37 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ.
ಈ ಹಿನ್ನಲೆಯಲ್ಲಿ, ಐವರು ಹಾಲಿ ಶಾಸಕರನ್ನು ಕೈಬಿಟ್ಟಿರುವ ಕಾಂಗ್ರೆಸ್, ಇತರ ಏಳು ಶಾಸಕರನ್ನು ಉಳಿಸಿಕೊಂಡಿದೆ. ಈ ಮೂಲಕ ಇತ್ತೀಚಿನ ಪಟ್ಟಿಯೊಂದಿಗೆ, ಕಾಂಗ್ರೆಸ್ ತಾನು ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಉಮ್ರೆತ್, ನರೋಡಾ ಮತ್ತು ದೇವಗಢ್ ಬಾರಿಯಾ ಎಂಬ ಮೂರು ಸ್ಥಾನಗಳನ್ನು ಪಕ್ಷವು ತಮ್ಮ ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಬಿಟ್ಟುಕೊಟ್ಟಿದೆ.
ಗುಜರಾತ್ನ ಎಲ್ಲಾ 182 ಕ್ಷೇತ್ರಗಳಿಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಪಕ್ಷದ ಹಾಲಿ ಶಾಸಕರಾದ ಭಾರತಜಿ ಠಾಕೂರ್ (ಬೆಚರಾಜಿ ಕ್ಷೇತ್ರ), ಜಶುಭಾಯಿ ಪಟೇಲ್ (ಬಯಾದ್), ರಾಜೇಶ್ ಗೋಹಿಲ್ (ಧಂಧುಕಾ), ನಿರಂಜನ್ ಪಟೇಲ್ (ಪೆಟ್ಲಾಡ್) ಮತ್ತು ವಜೆಸಿಂಗ್ ಪನಾಡಾ (ದಾಹೋಡ್) ಇವರುಗಳನ್ನು ಕಾಂಗ್ರೆಸ್ ಕೈಬಿಟ್ಟಿದ್ದು, ಪಾಲನ್ಪುರ್ (ಮಹೇಶ್ ಪಟೇಲ್), ದೇವದಾರ್ (ಶಿವ ಭೂರಿಯಾ), ವಿರಮ್ಗಮ್ (ಲಖಾ ಭರ್ವಾಡ್), ಥಾಸ್ರಾ (ಕಾಂತಿ ಪರ್ಮಾರ್), ಕಪದ್ವಂಜ್ (ಕಾಲಾಭಾಯಿ ದಭಿ), ಬಾಲಸಿನೋರ್ (ಅಜಿತ್ ಸಿಂಗ್ ಚೌಹಾಣ್) ಮತ್ತು ಪದ್ರಾ (ಜಶ್ಪಾಲ್ಸಿನ್ಹ ಪಧಿಯಾರ್) ಎಂಬ ಏಳು ಕ್ಷೇತ್ರಗಳಲ್ಲಿ ಶಾಸಕರನ್ನು ಉಳಿಸಿಕೊಂಡಿದೆ.
ಕಾಂಗ್ರೆಸ್ ತನ್ನ ಮಾಜಿ ಶಾಸಕ ಮಹೇಂದ್ರಸಿನ್ಹ ವಘೇಲಾ ಅವರಿಗೆ ಬಯಾದ್ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರ ಪುತ್ರ ವಘೇಲಾ ಅವರು 2012 ರಲ್ಲಿ ಬಯಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ನಂತರ ಅವರು 2017 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಆದರೆ ಹಿಂದಿನ ಯಾವ ಚುನಾವಣೆಗಳಲ್ಲಿ ಸ್ಪರ್ಧಿಸಲಿಲ್ಲ. ಹೀಗಾಗಿ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
ಪ್ರಸ್ತುತ ಬಿಜೆಪಿ ಪ್ರತಿನಿಧಿಸುತ್ತಿರುವ ಪಂಚಮಹಲ್ ಜಿಲ್ಲೆಯ ಕಲೋಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಂಚಮಹಲ್ ಮಾಜಿ ಸಂಸದ ಪ್ರಭಾತ್ಸಿನ್ಹ ಚೌಹಾಣ್ ಅವರಿಗೆ ಟಿಕೆಟ್ ನೀಡಿದೆ. ವಿಶೇಷವೆಂದರೆ, ಚೌಹಾಣ್ ಅವರ ಸೊಸೆ ಪ್ರಸ್ತುತ ಶಾಸಕರಾಗಿದ್ದಾರೆ. ಆದರೆ ಬಿಜೆಪಿ ಅವರನ್ನು ಮರುನಾಮಕರಣ ಮಾಡಿಲ್ಲ.