ಪತಿಯು ಕೇವಲ ಆರ್ಥಿಕವಾಗಿ ಆಧಿಪತ್ಯದ ಧೋರಣೆ ತೋರುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಇಂತಹ ಕಾರಣ ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತಿಯಿಂದ ದೂರವಿದ್ದ ಮಹಿಳೆಯೊಬ್ಬರು ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರ ಪೀಠವು ವಿಚಾರಣೆ ನಡೆಸಿತು. ಈ ವೇಳೆ ತೆಲಂಗಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ, ಪತಿಯ ವಿರುದ್ಧದ ಎಫ್ಐಆರ್ ಅನ್ನು ವಜಾಗೊಳಿಸಿದೆ.
ತಾನು ಕಳುಹಿಸಿದ ಹಣದ ಲೆಕ್ಕವನ್ನು ಪತಿ ಕೇಳುತ್ತಾನೆ ಎಂಬುದು ಪತ್ನಿಯ ಆರೋಪವಾಗಿತ್ತು. ಆದರೆ, ಲೆಕ್ಕ ಕೇಳುವುದರಿಂದ ಯಾವುದೇ ದೈಹಿಕ ಅಥವಾ ಮಾನಸಿಕ ಹಾನಿಯಾಗಿಲ್ಲದಿರುವಾಗ ಅದನ್ನು ಕ್ರೌರ್ಯ ಎನ್ನಲಾಗದು ಎಂದು ನ್ಯಾಯಾಲಯ ಹೇಳಿದೆ. ವೈವಾಹಿಕ ವಿವಾದಗಳ ವಿಚಾರಣೆಯಲ್ಲಿ ಕೋರ್ಟ್ಗಳು ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಪೀಠ ತಿಳಿಸಿದೆ.
ಭಾರತೀಯ ಸಮಾಜದಲ್ಲಿ ಪುರುಷರು ಸ್ತ್ರೀಯರ ಆರ್ಥಿಕ ವಿಷಯಗಳ ಮೇಲೆ ತಮ್ಮ ಪಾರುಪತ್ಯ ಇರಬೇಕೆಂದು ಬಯಸುವುದು ಸಾಮಾನ್ಯ ಪ್ರವೃತ್ತಿಯಾಗಿದೆ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
