ಬೆಂಗಳೂರು : ಡಿಜಿಟಲ್ ಅರೆಸ್ಟ್(Digital Arrest) ವಂಚನೆಗೆ ಒಳಗಾಗಿ ಬೆಂಗಳೂರಿನ (Bengaluru) ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.ಇಂದಿರಾನಗರದ ನಿವಾಸಿ, 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಅಪರಾಧಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಕಣ್ಗಾವಲಿನಲ್ಲಿರಿಸಿದ್ದರು. ಅಲ್ಲದೆ, ಹಣ ದೋಚಿ ನಂತರ ಹಠಾತ್ತನೆ ಸಂಪರ್ಕ ಕಡಿತಗೊಳಿಸಿದ್ದರು ಎಂದು ಹಿರಿಯ ಸೈಬರ್ ಅಪರಾಧ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.ಸೆಪ್ಟೆಂಬರ್ 15, 2024 ರಂದು, ಆಕೆಗೆ ಕೊರಿಯರ್ ಸೇವೆಯಾದ DHL ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿದರು. ಆಕೆಯ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್ಗಳು, ನಾಲ್ಕು ಪಾಸ್ಪೋರ್ಟ್ಗಳು ಮತ್ತು ನಿಷೇಧಿತ MDMA ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ DHL ಕೇಂದ್ರಕ್ಕೆ ಬಂದಿದೆ ಎಂದು ಹೇಳಲಾಯಿತು.
ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಆಕೆ ಹೇಳಿದಾಗ, ಆಕೆಯ ಫೋನ್ ಸಂಖ್ಯೆ ಪ್ಯಾಕೇಜ್ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದವರು ಹೇಳಿದ್ದಾರೆ. ಬಳಿಕ ಆಕೆಯ ಕರೆಯನ್ನು ಸಿಬಿಐ ಅಧಿಕಾರಿಯಂತೆ ನಟಿಸುವ ವ್ಯಕ್ತಿಗೆ ವರ್ಗಾಯಿಸಲಾಯಿತು. ಬಳಿಕ ಮಹಿಳೆಯಿಂದ ಎಲ್ಲಾ ಗುರುತುಗಳನ್ನು ಪಡೆದುಕೊಂಡ ಸೈಬರ್ ವಂಚಕರು ಆಕೆಯನ್ನು ದುರುಪಯೋಗಪಡಿಸಿಕೊಂಡರು. ಆಕೆಯ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ ಎಂದು ಹೆದರಿಸಿದ ವಂಚಕರು ಆಕೆಯ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ಅಥವಾ ಆಕೆಯ ಕುಟುಂಬದವರಿಗೆ ತಿಳಿಸಿದಂತೆ ಬೆದರಿಕೆ ಹಾಕಿದ್ದಾರೆ. ಈ ನಡುವೆ ಆಕೆಯ ಮಗನ ಮದುವೆ ವಿಚಾರ ತಿಳಿದಿದ್ದ, ಸೈಬರ್ ವಂಚಕರು ಅದನ್ನು ದಾಳವನ್ನಾಗಿ ಬಳಿಸಿಕೊಂಡರು. ಮಗನ ಮದುವೆ ಭಯದಿಂದ ಸೈಬರ್ ವಂಚಕರ ಬೇಡಿಕೆಗಳನ್ನು ಈಕೆ ಈಡೇರಿಸುತ್ತಾ ಬಂದಿದ್ದಾರೆ.ಅಲ್ಲದೆ ಮೊಬೈಲ್ ನ ಸ್ಕೈಪ್ ಕರೆ ಮೂಲಕ ಮಹಿಳೆಯನ್ನು ಹೋಮ್ ಅರೆಸ್ಟ್ ಕೂಡ ಮಾಡಿದ್ದಾರೆ. ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು “ಮೇಲ್ವಿಚಾರಣೆ” ಮಾಡಲು ನಿಯೋಜಿಸಿದರು.ಅದಾದ ನಂತರ ಕೆಲವು ದಿನಗಳ ಬಳಿಕ ಸ್ಕೈಪ್ ವಿಡಿಯೋ ಕರೆಯ ಮೂಲಕ ಸಂತ್ರಸ್ತೆಯನ್ನು ‘ಗೃಹಬಂಧನ’ಕ್ಕೆ ಒಳಪಡಿಸಲಾಯಿತು. ನಂತರ, ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ.
2024 ರ ಸೆಪ್ಟೆಂಬರ್ 23ರಂದು, ಆರ್ಬಿಐನ ಹಣಕಾಸು ಗುಪ್ತಚರ ಘಟಕ (ಎಫ್ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದರು.ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ ಫಿಕ್ಸೆಡ್ ಡಿಪಾಸಿಟ್ಗಳನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದಾಳೆ. 2025 ರ ಫೆಬ್ರವರಿ ಒಳಗೆ ಪರಿಶೀಲನೆ ಮಾಡಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂತ್ರಸ್ತೆಗೆ ನಕಲಿ ತನಿಖಾ ಅಧಿಕಾರಿಗಳು ಭರವಸೆ ನೀಡಿದ್ದರು. ಅಲ್ಲದೆ, ಸಂತ್ರಸ್ತೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು. ಆದರೆ, ಹಣವನ್ನು ವಾಪಸ್ ನೀಡಲು ವಂಚಕರು ಒಂದಲ್ಲ ಒಂದು ಅಡ್ಡಿ ಹೇಳುತ್ತಲೇ ಇದ್ದರು. ನಂತರ ಅನುಮಾನಗೊಂಡ ಸಂತ್ರಸ್ತೆ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14 ರಂದು ದೂರು ನೀಡಿದ್ದರು. ಅದರಂತೆ ಎಫ್ಐಆರ್ ದಾಖಲಿಸಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ
