ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣಾ ಕಣ ಮತ್ತೆ ರಂಗೇರಿದ್ದು, ಬಿಜೆಪಿ ಮಂಗಳವಾರ ರಾತ್ರಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ದ.ಕ.ಜಿಲ್ಲೆಯಲ್ಲಿ ಹಾಲಿ ಐವರು ಶಾಸಕರಿಗೆ ಟಿಕೆಟ್ ಲಭ್ಯವಾಗಿದೆ. ಜೊತೆಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಮೂವರು ಹೊಸ ಮುಖಗಳಿಗೆ ಮಣೆ ಹಾಕಿದೆ.
ವಿಶೇಷವೆಂದರೆ ‘ಸೋಲಿಲ್ಲದ ಸರದಾರ’ನೆಂದೇ ಖ್ಯಾತರಾಗಿದ್ದ ಸುಳ್ಯ ಕ್ಷೇತ್ರದಲ್ಲಿ ಆರು ಬಾರಿ ಜಯಭೇರಿ ಬಾರಿಸಿದ್ದ ಹಾಲಿ ಸಚಿವ ಎಸ್.ಅಂಗಾರ ಈ ಬಾರಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿ ಪುತ್ತೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ಸಿಕ್ಕಿಲ್ಲ. ಸಂಜೀವ ಮಠಂದೂರು ಅವರು ಕಾರ್ಯಕರ್ತರ ಪರವಾಗಿಲ್ಲ ಎಂದು ಕೇಳಿ ಬರುವ ಆರೋಪವೇ ಅವರಿಗೆ ಟಿಕೆಟ್ ನಿರಾಕರಣೆಗೆ ಕಾರಣ ಎನ್ನಲಾಗುತ್ತಿದೆ. ಅಭಿವೃದ್ಧಿ ಶೂನ್ಯವೆಂಬ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಂದ ವಿರೋಧ ವ್ಯಕ್ತವಾಗಿದ್ದ ಕಾರಣ ಎಸ್.ಅಂಗಾರ ಅವರನ್ನು ನಿವೃತ್ತಿಗೊಳಿಸಲಾಗಿದೆ.
ಮಂಗಳೂರು ಉತ್ತರಕ್ಕೆ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್, ಮುಲ್ಕಿ – ಮೂಡುಬಿದಿರೆ ಕ್ಷೇತ್ರಕ್ಕೆ ಉಮಾನಾಥ ಕೋಟ್ಯಾನ್, ಬಂಟ್ವಾಳ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಹೀಗೆ ಈ ಐವರು ಹಾಲಿ ಶಾಸಕರಿಗೆ ಅವರ ಈ ಹಿಂದೆ ಇದ್ದ ಕ್ಷೇತ್ರದಲ್ಲಿಯೇ ಮತ್ತೊಮ್ಮೆ ಟಿಕೆಟ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖ ಸತೀಶ್ ಕುಂಪಲ ಅವರಿಗೆ ಟಿಕೆಟ್ ದೊರಕಿದೆ. ಕಳೆದ ಬಾರಿ ಸಂತೋಷ್ ರೈ ಬೋಳಿಯಾರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿದು ಸೋತಿದ್ದರು. ಈ ಬಾರಿ ಸಂತೋಷ್ ರೈ ಅವರ ಬದಲು ಬಿಜೆಪಿ ಸತೀಶ್ ಕುಂಪಲ ಅವರಿಗೆ ಮಣೆ ಹಾಕಿದೆ.
ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪರಿಗೆ ಟಿಕೆಟ್ ನೀಡಲಾಗಿದೆ. 65 ವಯಸ್ಸಿನ ಆಶಾ ತಿಮ್ಮಪ್ಪ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕುಂತೂರು ಗ್ರಾಮದ ನಿವಾಸಿ. ಈ ಹಿಂದೆ ದ.ಕ.ಜಿಲ್ಲಾ ಪಂಚಾಯತ್ ನ ಅಧ್ಯಕ್ಷೆಯಾಗಿದ್ದವರು. ಬಿಜೆಪಿಯ ಹಿರಿಯ ಕಾರ್ಯಕರ್ತೆಯಾಗಿರುವ ಇವರು ನೆಲ್ಯಾಡಿ ಹಾಗೂ ಬೆಳ್ಳಾರೆಯಿಂದ ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಇವರಿಗೆ ಟಿಕೆಟ್ ನೀಡಿದ್ದು ಕಾರ್ಯಕರ್ತರಿಗೆ ಅಸಮಾಧಾನವಿದೆ. ಪುತ್ತೂರಿನಲ್ಲಿ ಆರ್ ಎಸ್ ಎಸ್ ಸೂಚಿತ ಅಭ್ಯರ್ಥಿ ಕಿಶೋರ್ ಕುಮಾರ್ ಬೊಡ್ಯಾಡಿ ಅವರಿಗೆ ಜಾತಿ ಮೀರಿ ಟಿಕೆಟ್ ನೀಡಬೇಕೆಂಬ ಬೇಡಿಕೆ ಕಾರ್ಯಕರ್ತರಲ್ಲಿತ್ತು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಜಿಲ್ಲಾ ಕೋರ್ ಕಮಿಟಿ ಮುಂದೆ ಇಟ್ಟಿರುವ ಬೇಡಿಕೆಗೂ ಯಾವ ಮಾನ್ಯತೆಯೂ ದೊರಕಿಲ್ಲ. ಅಲ್ಲದೆ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಡಿಗಣಿಸಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಂಗಾರ ಬದಲಿಗೆ ಮಹಿಳಾ ಅಭ್ಯರ್ಥಿ ಭಾಗೀರಥಿ ಮುರುಳ್ಯರಿಗೆ ಟಿಕೆಟ್ ಭಾಗ್ಯ ಒಲಿದಿದೆ. ಮಾಜಿ ಜಿಪಂ ಸದಸ್ಯೆ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಹಿಂದೆ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ಇವರು ಗೌರವ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಹೈನುಗಾರಿಕೆ ಹಾಗೂ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕು ಪಂಚಾಯತ್ ಸದಸ್ಯೆಯಾಗಿದ್ದ ಭಾಗೀರಥಿ ಮುರುಳ್ಯ ಬಿಜೆಪಿ ಪಕ್ಷದಲ್ಲಿ ಹಲವಾರು ಜವಾಬ್ದಾರಿಯನ್ನು ನಿರ್ವಹಿಸಿದ್ದರು
ಇದನ್ನೂ ಓದಿ- ಕರಾವಳಿಯಲ್ಲಿ ನಾಯಕನಿಲ್ಲದೆ ಅತಂತ್ರವಾದ ಕಾಂಗ್ರೆಸ್