ಕರ್ನಾಟಕ ರಾಜ್ಯದ ತಲಾ ಆದಾಯ ಈಗ 2 ಲಕ್ಷ ರೂಪಾಯಿ ದಾಟಿದೆ. ಲೋಕಸಭೆಯಲ್ಲಿ ಹಣಕಾಸು ಸಚಿವಾಲಯ ಮಂಡಿಸಿದ ಅಂಕಿಅಂಶಗಳಿಂದ ಕರ್ನಾಟಕದ ತಲಾ ಆದಾಯ ನಿಖರವಾಗಿ 2,04,605 ರೂಪಾಯಿಗೆ ತಲುಪಿದೆ. ಇದು ಭಾರತದಲ್ಲಿಯೇ ಅತಿ ಹೆಚ್ಚಿನ ತಲಾ ಆದಾಯ ಎಂಬ ಅಂಶವನ್ನು ಎತ್ತಿ ಹಿಡಿದಿದೆ.
ಈ ಗಮನಾರ್ಹ ಸಾಧನೆಗೆ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಕಾರಣ ಎಂದು ಸಾಮಾಜಿಕ ಜಾಲತಾಣ X ಮೂಲಕ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದರು. ಆದರೆ, ಕೇಂದ್ರ ಹಣಕಾಸು ಸಚಿವಾಲಯದ ದತ್ತಾಂಶವೇ ಈಗ ಅವರ ಪ್ರತಿಪಾದನೆಯ ಪೊಳ್ಳುತನವನ್ನು ಬಹಿರಂಗಪಡಿಸಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಗ್ಯಾರಂಟಿಗಳ ಮೂಲಕ ವಾರ್ಷಿಕವಾಗಿ 53,000 ಕೋಟಿ ರೂ. ಮೊತ್ತದ ಸೌಲಭ್ಯವನ್ನು ನಾಗರಿಕರಿಗೆ ನೀಡಲಾಗುತ್ತಿದ್ದು, ಇದೊಂದು ರಾಷ್ಟ್ರೀಯ ಮಾನದಂಡವಾಗಿ ಹೊರಹೊಮ್ಮಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
2024-25ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು, 2 ಲಕ್ಷ ರೂ.ಗಳ ಮಿತಿಯನ್ನು ದಾಟಿರುವುದು ಮಂಗಳವಾರ ಬೆಳಕಿಗೆ ಬಂದಿದೆ. ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ.