ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಿರುವ ಶೇಕಡಾ 18 ರಿಂದ ಶೇಕಡಾ 24 ರ ವರೆಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಶಿಫಾರಸ್ಸು ನೀಡಿದ್ದ ನ್ಯಾ.ನಾಗಮೋಹನ್ದಾಸ್ ಸಮಿತಿಯ ಶಿಫಾರಸ್ಸನ್ನು ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂದು ಸುಗ್ರೀವಾಜ್ಞೆ (ಆಧ್ಯಾದೇಶ) ಹೊರಡಿಸಿದೆ.
ಇನ್ನು ಮುಂದೆ ರಾಜ್ಯದ ಪರಿಶಿಷ್ಟ ಜಾತಿಗಳಿಗೆ (SC) ಇದುವರೆಗಿದ್ದ ಶೇ.15 ಮೀಸಲಾತಿಯ ಬದಲಾಗಿ ಶೇ 17 ಹಾಗೂ ಪರಿಶಿಷ್ಟ ಪಂಗಡಗಳಿಗೆ (ST) ಇದುವರೆಗಿದ್ದ ಶೇ ರ ಬದಲಾಗಿ ಶೇ 7 ಮೀಸಲಾತಿ ಜಾರಿಯಾಗಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
ಇಂದು (23.10.2022) ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ (ಗೆಜೆಟ್) ಈ ಸಂಬಂಧ ವಿಶೇಷ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದನ್ನು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಆಧ್ಯಾದೇಶ 2022 ಎಂದು ಕರೆದಿದ್ದು ಇದಕ್ಕೆ ಅಕ್ಟೋಬರ್ 23ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದೆ.
ನ್ಯಾ.ನಾಗಮೋಹನದಾಸ್ ಆಯೋಗದ ವರದಿಯ ಅನುಷ್ಠಾನವನ್ನು ಅವಲೋಕಿಸಲು ನ್ಯಾ.ಸುಭಾಷ್ ಅಡಿ ಮತ್ತು ಇತರರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ನೇಮಿಸಲಾಗಿತ್ತು. ಇದು 07.10.2022ರಂದು ತನ್ನ ವರದಿ ಸಲ್ಲಿಸಿ ಅದೂ ಸಹ ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಅನುಮೋದಿಸಿತ್ತು.
ಇದೀಗ ಸುಗ್ರೀವಾಜ್ಞೆಯ ತರುವಾಯ ಅಧಿಸೂಚನೆಯನ್ನು ಕಾರ್ಯಗತಗೊಳಿಸುವ ಉದ್ದೇಶಗಳಿಗಾಗಿ ನಿಯಮಗಳನ್ನು ರಚಿಸಬೇಕಿರುತ್ತದೆ. ತರುವಾಯದಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿರುತ್ತದೆ.