Home ಅಂಕಣ ಜನಪ್ರಿಯ ಮಾಧ್ಯಮಗಳು ಮತ್ತು ಅವುಗಳ ಸ್ತ್ರೀ ಪರಿಕಲ್ಪನೆಯ ಅಪಸವ್ಯಗಳು ಮತ್ತು ಕುವೆಂಪು

ಜನಪ್ರಿಯ ಮಾಧ್ಯಮಗಳು ಮತ್ತು ಅವುಗಳ ಸ್ತ್ರೀ ಪರಿಕಲ್ಪನೆಯ ಅಪಸವ್ಯಗಳು ಮತ್ತು ಕುವೆಂಪು

0

ಕೆಲ ತಿಂಗಳುಗಳ ಹಿಂದೆ ನನಗೆ news channel ಒಂದರಿಂದ ಪ್ಯಾನೆಲ್ ಡಿಸ್ಕಷನ್ ಗೆ ಅಂತ ಒಂದು ಕರೆ ಬಂದಿತ್ತು.
ಡಿಸ್ಕಷನ್ ನ ವಿಷಯ ಏನಂದ್ರೆ ಇತ್ತೀಚೆಗೆ ಹೆಚ್ಚುತ್ತಿರುವ ಡೈವೋರ್ಸ್ ಪ್ರಕರಣಗಳು ಮತ್ತವಕ್ಕೆ ಕೊಡುತ್ತಿರುವ ಕಾರಣಗಳು.
1091 ಸಹಾಯವಾಣಿಗೆ peculiar ಆದ ಕೇಸ್ ಗಳು ಬರ್ತಾ ಇದ್ವಂತೆ. ಅದೇನಂದರೆ ಹೆಂಡತಿ ಕುಂಕುಮ, ತಾಳಿ, ಕಾಲುಂಗುರ ಹಾಕ್ತಾ ಇಲ್ಲ, ಕೆಲಸಕ್ಕೆ ಹೋಗ್ತಾ ಇದಾಳೆ, office ಹತ್ರ ಮನೆ ಮಾಡೋಕೆ force ಮಾಡ್ತಾ ಇದ್ದಾಳೆ ಇವೆ ಮುಂತಾದ ಕಾರಣಗಳಿಗೆ ಡೈವೋರ್ಸ್ ಗಳು, ದೌರ್ಜನ್ಯಗಳು ಹೆಚ್ಚಾಗಿದ್ದದ್ದು ಮತ್ತು ಇವೆಲ್ಲ ಕಾರ್ಪೊರೇಟ್ ಮತ್ತೆ ಇತರೆ highly educated ಮಂದಿ ಇಂದ ಆಗ್ತಾ ಇರೋದು, ಆ ಪ್ಯಾನೆಲ್ ಡಿಸ್ಕಷನ್ ನ ಅಜೆಂಡಾ ಆಗಿತ್ತು.

ಇತ್ತೀಚೆಗೆ ತುಂಬಾ ಚರ್ಚೆಗೊಳಗಾದ ಸಿನೆಮಾ ಒಂದರ ನಿರ್ದೇಶಕ ಕೆಲ ವರ್ಷಗಳ ಹಿಂದೆ ಕೊಟ್ಟಿದ್ದ ಸ್ಟೇಟ್ಮೆಂಟ್ ನ ತುಣುಕು ಎಲ್ಲ ಕಡೆ ಹರಿದಾಡುತ್ತಿತ್ತು.
ಅದರಲ್ಲಿ ಆತ ಪ್ರೀತಿಗೆ ವ್ಯಾಖ್ಯಾನ ಕೊಡ್ತಾ ಹೀಗೆ ಹೇಳಿದ್ದ “ಆಕೆಗೆ ಹೊಡೆಯದೆ, ಕೆಟ್ಟ ಮಾತುಗಳನ್ನು ಆಡದೆ, rough ಆಗಿ handle ಮಾಡದೆ ಇದ್ದರೆ ಅಲ್ಲಿ ಪ್ರೀತಿ ಎಲ್ಲಿರುತ್ತೆ” ಅಂತ.
ಇದು ಬರೀ ಆತನ ಒಬ್ಬನ ಅಭಿಪ್ರಾಯ ಅಲ್ಲ. ಆತ ಡೈರೆಕ್ಟ್ ಆಗಿ ಹೇಳಿದ್ದ ಅಷ್ಟೇ.
80-90 ರ ದಶಕಗಳಲ್ಲಿನ ಸಿನೆಮಾ ಗಳೆಲ್ಲ ಬರೀ ಹೆಂಗಸರನ್ನು ಪಳಗಿಸುವುದರಲ್ಲೆ ಕಳೆದು ಹೋಗಿತ್ತು.
ಶೇಕ್ಸ್ಪಿಯರ್ ನ taming of the shrew ನ ಬಗೆಗಿನ ಭಾರತೀಯ ಸಿನಿ ಮಂದಿಯ obsession ಎಷ್ಟರ ಮಟ್ಟಿಗೆ ಇದೇ ಅಂತಾ ಅಂದ್ರೆ touch deprived, sex deprived lust ಅನ್ನೇ platonic ಎಂಬಂತೆ ಬಿಂಬಿಸಿ ಅದನ್ನೇ ದಶಕಗಳಿಂದಲೂ ನಮಗೆ ಉಣಬಡಿಸುತ್ತ ಬಂದಿರೋದು.
ಪಾಪ್ಯುಲರ್ ಮೀಡಿಯಾ ಗಳು, ಸಾಹಿತ್ಯ ಗಳು ಇವೆಲ್ಲದರಲ್ಲು ನಾವು ನೋಡ್ತಾ ಬಂದಿದ್ದು ಇದನ್ನೇ..
“ಹೆಣ್ಣು ಗುಟ್ಟಾಗಿ ಬಲಾತ್ಕಾರವನ್ನು ಇಷ್ಟ ಪಡ್ತಾಳೆ ” ಅಂತ ಹೇಳಿದ್ದ ಬರಹಗಾರರೊಬ್ಬರಿಗೆ ಜ್ಞಾನಪೀಠ ಬಂದಿಲ್ಲ ಅಂತ ಪ್ರತಿ ವರ್ಷ ಕೊರಗುವ ಮಂದಿ ನಮ್ಮ ಮದ್ಯೆ ಇದ್ದಾರೆ ಅವರಲ್ಲಿ ಬಹುತೇಕರು ಹೆಣ್ಣು ಮಕ್ಕಳೇ ಅನ್ನೋದು ವಿಪರ್ಯಾಸ.

ಇಂತಹ ಸಮಯದಲ್ಲಿ ನನಗೆ ಕುವೆಂಪು ತುಂಬಾ ನೆನಪಾಗುತ್ತಾರೆ.

ನಾನು ಕುವೆಂಪು ಅವರ ಸಾಹಿತ್ಯದಲ್ಲಿನ ಸ್ತ್ರೀ ಸಂವೇದನೆಯನ್ನ ಇಲ್ಲಿ ತರೋಕೆ ಇಷ್ಟ ಪಡ್ತೀನಿ

ಹಾಗೆ ನೋಡಿದರೆ, ಕುವೆಂಪು ಅವರ ಬಹುತೇಕ ಸಮಕಾಲೀನ ಕವಿಗಳ ಸಾಹಿತ್ಯದಲ್ಲಿ ಗಂಡಸಿನ ಏಳಿಗೆಗಾಗಿ ದುಡಿಯುವ ಗೃಹಿಣಿಯಷ್ಟೇ ಮಾದರಿ ಹೆಣ್ಣಾಗಿ portray (ಚಿತ್ರಿತಳಾಗುತ್ತಿದ್ದಳು) ಆಗ್ತಿದ್ಳು.
ಆದರೆ ಈ stereotype (ಸಿದ್ಧ ಮಾದರಿಯನ್ನು) ಮುರಿದ ಕುವೆಂಪು ಜೀವಂತಿಕೆಯಿಂದ ಕೂಡಿದ, ಮನುಷ್ಯ ಸಹಜವಾದ ಎಲ್ಲಾ ಮಿತಿ, ದೌರ್ಬಲ್ಯಗಳಿದ್ದೂ ಗೌರವಕ್ಕೆ, ಮೆಚ್ಚುಗೆಗೆ, ಸಹಾನುಭೂತಿಗೆ ಪಾತ್ರವಾಗುವ ಸ್ತ್ರೀ ಪಾತ್ರಗಳನ್ನು ಸೃಷ್ಟಿಸಿದ್ರು.

ಉದಾಹರಣೆಗೆ: ಕಾನೂರು ಹೆಗ್ಗಡಿತಿಯ ಸುಬ್ಬಮ್ಮ,
ಮಲೆಗಳಲ್ಲಿ ಮದುಮಗಳು ಕಾವೇರಿ
ರಕ್ತಾಕ್ಷಿ: ಮೂಲದಲ್ಲಿ ಕಡೆಗಣಿಸಲ್ಪಟ್ಟ ಪಾತ್ರವನ್ನು ಕುವೆಂಪು ನಾಟಕದ ಮುಖ್ಯ ಪಾತ್ರವನ್ನಾಗಿಸುತ್ತಾರೆ.

ಕುವೆಂಪು ಅವರ ಸ್ತ್ರೀ ಸಂವೇದನೆಯ ಉತ್ತುಂಗ (peak) ಕಾಣಿಸೋದು ಅವರ ಮಹಾಕಾವ್ಯವಾದ ರಾಮಾಯಣ ದರ್ಶನಂನಲ್ಲಿ.
ಅಲ್ಲಿಯವರೆಗೆ ಕನ್ನಡದ ಮಹಾಕಾವ್ಯ ಪರಂಪರೆಯಲ್ಲಿ ಕರ್ಣ, ದುರ್ಯೋಧನರಂತಹ ಪ್ರತಿನಾಯಕರನ್ನು (ಗಂಡು ಪಾತ್ರಗಳನ್ನು) ಉದಾತ್ತೀಕರಿಸಿದ್ದನ್ನು ಪಂಪ, ರನ್ನರ ಕೃತಿಗಳಲ್ಲಿ ಕಾಣಬಹುದು.
ಕುವೆಂಪು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಹಲ್ಯೆ, ಊರ್ಮಿಳೆ, ಮಂಡೋದರಿ, ಮಂಥರೆ ಮೊದಲಾದ ಪಾತ್ರಗಳನ್ನು powerful ಆಗಿ ಚಿತ್ರಿಸುವ ಮೂಲಕ ಸ್ತ್ರೀ ಪಾತ್ರಗಳನ್ನು ಉದಾತ್ತೀಕರಿಸಿದ ಮೊದಲ ಮಹಾಕವಿಯಾಗಿ ಕಾಣಿಸಿಕೊಳ್ತಾರೆ.

ಇಲ್ಲಿ ಯಾರೂ ಅಮುಖ್ಯರಲ್ಲ ಅಂತ ಕುವೆಂಪು ಕೇವಲ ಒಂದು ಕವಿತೆಯಲ್ಲಿ ಮಾತ್ರ ಹೇಳಿಲ್ಲ, ತಮ್ಮ ಬದುಕು – ಬರಹದುದ್ದಕ್ಕೂ ಎಲ್ಲರಿಗೂ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು.
ಕುವೆಂಪು ಅವರ ಮಂಥರೆ ವಿಕಾರ ಮನಸ್ಸಿನ ಹೆಂಗಸಲ್ಲ, ಬದಲಿಗೆ ಮಮತೆಯ ಸುಳಿ, ರಾಮಾಯಣವನ್ನು ಕಡೆದ ಕಡೆಗೋಲು.
ಕುವೆಂಪು ಅವರ ಮಂಡೋದರಿ ರಾವಣನ ಅನೇಕ ಹೆಂಡಿರಲ್ಲಿ ಒಬ್ಬಳಲ್ಲ, ಸೀತೆಗೆ ಸರಿಸಾಟಿಯಾದ ವ್ಯಕ್ತಿತ್ವವುಳ್ಳವಳು. ಕುವೆಂಪು ರವರು ಮಂಡೋದರಿ ಮತ್ತು ಸೀತೆ ಇಬ್ಬರು ಭೇಟಿಯಾಗುವ ಸನ್ನಿವೇಶವನ್ನು ಸೃಷ್ಟಿಸಿದ್ದರು. ಅದರಲ್ಲಿ ಸೀತೆ ಮಂಡೋದರಿಯನ್ನ ಗೌರವದಿಂದ ಮಾತನಾಡಿಸಿದರೆ, ಮಂಡೋದರಿ ಸೀತೆಗೆ ಸಮಾಧಾನ ಮತ್ತೆ ಧೈರ್ಯ ತುಂಬುವ ಮಾತುಗಳನ್ನ ಆಡ್ತಾಳೆ. ಇದೇ ಅಲ್ವಾ sisterhood ಅಂತ ಅಂದ್ರೆ?

ಕುವೆಂಪು ಅವರ ಶೂರ್ಪಣಖಿಗೆ ಮಾತ್ಸರ್ಯದಿಂದ ಕುದಿಯುವ ಮನಸ್ಸಷ್ಟೇ ಇಲ್ಲ, ಪಶ್ಚಾತ್ತಾಪದಿಂದ ಬೇಯುವ ಹೃದಯದ ಚಂದ್ರನಖಿ ಆಕೆ.

ಕುವೆಂಪು ಅವ್ರು ಪೌರಾಣಿಕ ಕಥೆ ಗಳಲ್ಲಿನ ಸ್ತ್ರೀ ಪಾತ್ರಗಳಿಗೆ ತಮಗಿದ್ದ ಮಿತಿಗಳ ಮಧ್ಯೆಯೇ ಜೀವ ತುಂಬಿ ಸಂವೇದನಾಶೀಲವಾಗಿ ಚಿತ್ರಿಸಿದ್ದನ್ನ ನಾವು ಇಲ್ಲಿ ಗಮನಿಸಬೇಕು.
ಕವಿಗೆ ಇಲ್ಲಿ ತನ್ನ ಸೃಜನಶೀಲತೆಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ ಆದರೂ ಸ್ತ್ರೀ ಸಹಾನುಭೂತಿ ಪರವಾದ ತನ್ನ ಧೋರಣೆಯನ್ನು ಮೂಲಕಾವ್ಯದ ಪಾತ್ರಗಳಿಗೆ ಚೂರೂ ಕುಂದು ಬರದಂತೆ ಈ ಸ್ತ್ರೀ ಪಾತ್ರಗಳನ್ನ ಉದಾತ್ತೀಕರಿಸಿರುವುದನ್ನು ನಾವು ಇವ್ರ ದೌಪದಿಯ ಶ್ರೀಮುಡಿ, ಮಹಾಶ್ವೇತೆಯ ತಪಸ್ಸು ಸೀತಾ ಪರಿತ್ಯಾಗ ಮುಂತಾದ ವಿಮರ್ಶಾ ಪ್ರಬಂಧಗಳಲ್ಲಿ ನೋಡಬಹುದು.

ಸತಿ ಪತಿಯರಲ್ಲಿನ ಸಮಾನತೆಯ ಬಗ್ಗೆ ಕುವೆಂಪು ರವರ ಸಾಹಿತ್ಯದಲ್ಲಿ ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ.
ಮಂತ್ರ ಮಾಂಗಲ್ಯ ವಿವಾಹದ ಸಮಯದಲ್ಲಿ ತಗೊಳೋ ನಮ್ಮಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಇಬ್ಬರೂ ಸಮಾನರು ಅನ್ನೋ ಪ್ರತಿಜ್ಞೆ ಆಗಿನ ಕಾಲಘಟ್ಟಕ್ಕೆ ಅಷ್ಟೇ ಅಲ್ಲ ಈಗಿನ ಕಾಲಘಟ್ಟಕ್ಕೂ ಪ್ರಸ್ತುತ. ರಾಮಾಯಣ ದರ್ಶನಂ ಕೃತಿಯಲ್ಲಿ ರಾಮ ಸೀತೆಯರಿಬ್ಬರೂ ಒಟ್ಟಿಗೆ ಅಗ್ನಿಪರೀಕ್ಷೆ ತಗೊಳೋದು ಆಗಿನ ಕಾಲಕ್ಕೆ ಒಂದು ಕ್ರಾಂತಿ ಕಾರಿ ಬದಲಾವಣೆ. ಬಹುಶಃ ಕುವೆಂಪು ಅವ್ರು ಈಗ ಇದ್ದಿದ್ರೆ ಇಬ್ರೂ ಅಗ್ನಿ ಪರೀಕ್ಷೆ ತಗೊಳೋ ಅವಶ್ಯಕತೆ ಇಲ್ಲ ಅಂತ ಹೇಳ್ತಾ ಇದ್ರು.

ಜಗತ್ತಿನ ಅನೇಕ ಮಹಾನ್ ಕವಿಗಳು, ಸಂತರು, ಕ್ರಾಂತಿಕಾರಿಗಳು ಒಂದೋ ಹೆಂಡತಿಯನ್ನು ತ್ಯಜಿಸಿದವರು ಅಥವಾ ಹಿಂಸಿಸಿದವರು ಎನ್ನುವುದು ಸಂಕೀರ್ಣವಾದ ಐತಿಹಾಸಿಕ ಸತ್ಯ. ತಮ್ಮ ಬದುಕಿನ ಗುರಿಗಳ ಮಹತ್ತಿಕೆಯ ಮುಂದೆ ಲೌಕಿಕವಾದ ಪ್ರೇಮ ಅವರಿಗೆ ಕ್ಷುಲ್ಲಕವೆನ್ನಿಸಿರಬಹುದು.

ಆದರೆ ಹೀಗೆ monotonous ಆಗಿ ಯೋಚಿಸುವ ಹೊತ್ತಿಗೆ ಕುವೆಂಪು ನೆನಪಾಗುತ್ತಾರೆ: ಕಾವ್ಯದಂತೆಯೇ, ದರ್ಶನದಂತೆಯೇ, ದಾಂಪತ್ಯದ ಪ್ರೇಮವನ್ನೂ ಅಧ್ಯಾತ್ಮದ ಔನ್ನತ್ಯಕ್ಕೇರಿಸಿದ ಮಹಾಕವಿ! “ಲೋಕ ಜೀವನದಲ್ಲಿ ಸತಿ, ನಿಜದಲ್ಲಿ ಭಗವತಿ” ಎಂದು ತಮ್ಮ ಪತ್ನಿಯನ್ನು ಆರಾಧನಾ ಭಾವದೊಂದಿಗೆ ಪ್ರೀತಿಸಿದವರು. ಬರಹವೇ ಬೇರೆ ಬದುಕೇ ಬೇರೆ ಎಂಬಂತೆ extreme ಗಳ ನಡುವೆ ಬದುಕಿದ್ದವರ ನಡುವೆ, ಕುವೆಂಪುರೊಳಗಿನ ಮನುಷ್ಯ ಮತ್ತು ದಾರ್ಶನಿಕ ಅದ್ವೈತ ಭಾವವಾಗಿ ಏಕಶಿಲಾ ಮೂರ್ತಿಯಂತೆ ಭವ್ಯವಾಗಿಯೂ, ದಿವ್ಯವಾಗಿಯೂ ಗೋಚರಿಸುತ್ತದೆ. ಆದ್ದರಿಂದಲೇ ಎಷ್ಟೇ ಜನ ದಾರ್ಶನಿಕರು ಬಂದು ಹೋದರೂ, ಅವ್ರ ತತ್ತ್ವಗಳ ಪ್ರಯೋಗಕ್ಕೆ ಮುಂದಾಗುವಾಗ ಕುವೆಂಪುರ ಕವಿ ಚೈತನ್ಯ ಮಾತ್ರ ಆ ದಾರಿಯಲ್ಲಿ ಮುನ್ನಡೆಯುವ ಧೈರ್ಯ, ಭರವಸೆಗಳನ್ನು ಹುಟ್ಟಿಸುತ್ತದೆ.

ಇತ್ತೀಚಿನ ವಿದ್ಯಮಾನಗಳನ್ನ ನೋಡಿ, ಲಖ್ನೋ ಕೋರ್ಟ್ ಮನುಸ್ಮೃತಿಯನ್ನು ಉಲ್ಲೇಖ ಮಾಡಿ ಹೆಂಡತಿಗೆ ಜೀವನಾಂಶವನ್ನ ತಿರಸ್ಕರಿಸಿತು.
ಗೌಹಾಟಿ ಕೋರ್ಟ್ ಬಳೆ,ಕುಂಕುಮ, ತಾಳಿ ಹಾಕ್ದೆ ಇರೋ ಹೆಂಡತಿ ವಿಚ್ಛೇದನಕ್ಕೆ ಅರ್ಹಳು ಅಂತ ಕೊಟ್ಟಿದ್ದ ತೀರ್ಪು, ಇನ್ನೂ ಆಘಾತಕಾರಿಯಾಗಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಯ pregnency ಯ medical termination ಗೆ ಆ ಮಗುವಿನ ತಂದೆ ಸಲ್ಲಿಸಿದ್ದ ಮನವಿಗೆ ಗುಜರಾತ್ ಹೈ ಕೋರ್ಟ್ ನಲ್ಲಿ, ಹಿಂದೆಲ್ಲ 14 ವರ್ಷಕ್ಕೆ ಮದುವೆ ಆಗ್ತಾ ಇದ್ರು 17 ವಯಸ್ಸಿಗೆ ತಾಯಿ ಆಗ್ತಾ ಇದ್ರು ಅಂತ ಮನುಸ್ಮೃತಿ ಯ ರೆಫರೆನ್ಸ್ ಕೊಟ್ಟಿದ್ದು, ಹೀಗೆ ಸಮಕಾಲೀನ ಸ್ತ್ರೀವಾದಿ ಹೋರಾಟ ಎಷ್ಟೇ ಮುಂದುವರಿದಿದ್ದರೂ ನಮ್ಮ ನ್ಯಾಯಾಂಗ ವ್ಯವಸ್ಥೆ ಇನ್ನೂ ಮನುಸ್ಮೃತಿಯನ್ನು ಅಪ್ಪಿಕೊಂಡಿರುವ ಈ ಕಾಲದಲ್ಲಿ ಕುವೆಂಪು ರವರ ಬದುಕು ಮತ್ತು ಬರಹಗಳಲ್ಲಿ ತೋರಿಸಿದ್ದ ಸಂಸಾರದಲ್ಲಿ ಸಮಾನತೆ, ಸ್ತ್ರೀ ಸಂವೇದನೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
ಕುಟುಂಬ ಮಟ್ಟದಲ್ಲಿ ಮನುಸ್ತಿತಿಯನ್ನ ತೊಡೆದು ಹಾಕಿದ್ರೆ ಸಾಮಾಜಿಕ ಮಟ್ಟದಲ್ಲೂ ಮನುಸ್ತಿತಿಯನ್ನ ತೆಗೆದು ಹಾಕೋಕೆ ಸಾಧ್ಯ ಆಗೋದು.
ಯಾಕೆ ಅಂದ್ರೆ,

“A great society always starts with Home”

ಈ ವರ್ಷದ ಮಹಿಳಾ ದಿನದ ಥೀಮ್ #InspireInclusion ಅಂದರೆ ಒಳಗೊಳ್ಳುವಿಕೆಗೆ ಪ್ರೇರೇಪಿಸುವುದು. ಮತ್ತು ಈ ಒಳಗೊಳ್ಳುವಿಕೆಯಲ್ಲಿ ಪುರುಷರ ಪಾತ್ರವೂ ಇದೆ. ಕುವೆಂಪುರವರ ಯಾವ ಜನ್ಮದ ಮೈತ್ರಿ ಹಾಡಿನಲ್ಲಿ ಬರುವಂತೆ ಬಂಧುವಾಗಿ, ಅವಳ ಎದೆಗುದಿಗೆ ಆತ ಜೊತೆಗೆ ನಿಂತಾಗ, ಕೈ ಜೋಡಿಸಿದಾಗ ಆ ಸೊಗಸೇ ಬೇರೆ. ಒಬ್ಬರಿಗೊಬ್ಬರು ಪ್ರೇರೇಪಿಸುತ್ತ, ದನಿಯಾಗುತ್ತ ಸಮಸಮಾಜವನ್ನು ನಿರ್ಮಿಸುವ ಕಡೆ ನಮ್ಮ ಹೆಜ್ಜೆ ಇರಲಿ.

(ಕುವೆಂಪು ಕ್ರಾಂತಿ ಕಹಳೆ event ನಲ್ಲಿ ನಾನು ಹೇಳಿದ್ದ, ಹೇಳಲಾಗದೇ ಉಳಿದ ಒಂದಷ್ಟು ಮಾತುಗಳು)

– ಕಾವ್ಯಶ್ರೀ

You cannot copy content of this page

Exit mobile version